ಪೊಲೀಸ್ ಕಸ್ಟಡಿಯಲ್ಲಿದ್ದ ಪವಿತ್ರಾಗೌಡ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Most read

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ-1 ಆರೋಪಿಯಾಗಿ ಪೊಲೀಸ್ ಕಸ್ಟಡಿಯಲ್ಲಿರುವ ನಟಿ ಪವಿತ್ರ ಗೌಡ ಅವರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟ ದರ್ಶನ್ ಮತ್ತು ಇತರ ಆರೋಪಿಗಳೊಂದಿಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿರುವ ಪವಿತ್ರ ಗೌಡ ಅವರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಠಾಣೆಗೆ ವೈದ್ಯರನ್ನು ಕರೆಯಿಸಲಾಗಿತ್ತು. ವೈದ್ಯರ ಸೂಚನೆ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ಕಸ್ಟಡಿಯಲ್ಲಿರುವ ಪವಿತ್ರ ಗೌಡ ಅವರನ್ನು ಪ್ರತಿದಿನ ಸಂಜೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಟ್ಟುಬಂದು, ಬೆಳಿಗ್ಗೆ ವಾಪಾಸ್ ಕರೆತರಲಾಗುತ್ತಿದೆ. ಬೆಳಿಗ್ಗೆಯಿಂದ ಪೊಲೀಸರ ವಿಚಾರಣೆಯ ಜೊತೆಜೊತೆಗೆ ಹಲವು ಸ್ಥಳಗಳ ಮಹಜರ್ ಗೆ ಪವಿತ್ರ ಗೌಡ ಅವರನ್ನು ಉಳಿದ ಆರೋಪಿಗಳೊಂದಿಗೆ ಕರೆದೊಯ್ಯಲಾಗುತ್ತಿದೆ.

ಪವಿತ್ರ ಗೌಡ ಅವರನ್ನು ಮಹಜರ್ ಗೆ ಕರೆದೊಯ್ದ ಸಂದರ್ಭದ ಚಿತ್ರಗಳನ್ನು ಕೆಲವು ಮಾಧ್ಯಮಗಳು ಪದೇಪದೇ ಪ್ರಸಾರ ಮಾಡಿ ಅವರಿಗೆ ಯಾವುದೇ ಪಶ್ಚಾತ್ತಾಪವೂ ಇಲ್ಲ, ಪೊಲೀಸ್ ಕಸ್ಟಡಿಯಲ್ಲೂ ನಗುನಗುತ್ತ ಇದ್ದಾರೆ ಎಂದು ಸುದ್ದಿಗಳನ್ನು ಪ್ರಸಾರ ಮಾಡಿದ್ದವು. ತಮ್ಮ ವಿರುದ್ಧ ನಡೆಯುತ್ತಿರುವ ಮಾಧ್ಯಮ ಟ್ರಯಲ್ ನಿಂದಾಗಿ ಅವರು ಆಘಾತಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

More articles

Latest article