ಬೆಂಗಳೂರು: ನಮ್ಮದೇ ಗಾಡಿ ಫುಲ್ ಇದೆ. ಜೆಡಿಎಸ್ ನ 18 ಶಾಸಕರನ್ನು ಕರೆತಂದು ನಾವೇನು ಮಾಡೋಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಓವರ್ ಲೋಡೆಡ್ ಇದ್ದರೂ ನಮ್ಮದು ಕಾಂಗ್ರೆಸ್ ಪಕ್ಷವೇ. ಇಲ್ಲಿಯೇ ಅಧ್ಯಕ್ಷ ಆಗಬೇಕು. ಇಲ್ಲಿಯೇ ಸಿಎಂ ಆಗಬೇಕು. ಸದ್ಯಕ್ಕೆ ವೇಯ್ಟಿಂಗ್ ಲಿಸ್ಟ್ನಲ್ಲಿ ಇದ್ದೇವೆ, ಇಲ್ಲಿಯೇ ಕಾಯುತ್ತೇವೆ ಎಂದರು.
ಇಲ್ಲಿಯೇ ಕಾಂಗ್ರೆಸ್ ಪಕ್ಷದಲ್ಲಿಯೇ ಕಾಯುತ್ಥೇನೆ. ಯಾರಾದರೂ ಮೆಜೆಸ್ಟಿಕ್ ಜಾಮ್ ನಲ್ಲಿ ಸಿಲುಕಿಕೊಂಡು ಬರುವುದು ತಡವಾದರೆ ನಮಗೆ ಅವಕಾಶ ಸಿಗಬಹುದು. ಎಲ್ಲರೂ ಆರ್ ಎ ಸಿ ಟಿಕೆಟ್ ಇಟ್ಟುಕೊಂಡೇ ಕಾಯುತ್ತಿರುತ್ತಾರೆ. ಇಲ್ಲಿ ಶಿಂಧೆ, ಅಜಿತ್ ಪವಾರ್ ಯಾರೂ ಇಲ್ಲ. ಆ ಸಾಮರ್ಥ್ಯ ಇಲ್ಲಿ ಯಾರಿಗೂ ಇಲ್ಲ ಎಂದರು.
ಸಹಕಾರ ಸಚಿವ ಕೆ. ಎನ್. ರಾಜಣ್ಣ ಹನಿಟ್ರ್ಯಾಪ್ ಕೇಸ್ ಬೇರೆ. ರಾಜೇಂದ್ರ ಅವರ ಪ್ರಕರಣವೇ ಬೇರೆ. ಎರಡೂ ಒಂದಕ್ಕೊಂದು ಸಂಬಂಧ ಇಲ್ಲ. ಅವರಿಗೆ ಯಾರೋ ಕರೆ ಮಾಡಿ ಬೆದರಿಕೆ ಹಾಕಿದ್ದರು ಎನ್ನುವುದು ಎರಡು ತಿಂಗಳ ಹಿಂದಿನದ್ದು. ಹನಿ ಟ್ರ್ಯಾಪ್ಗೂ ಇದಕ್ಕೂ ಸಂಬಂಧ ಇಲ್ಲ ಎಂದರು.
ಅಧಿವೇಶನ ಮುಗಿದ ಬಳಿಕ ನಾನು ರಾಜಣ್ಣ ಅವರನ್ನು ಭೇಟಿ ಮಾಡಿಲ್ಲ. ರಾಜಣ್ಣ ಸಿಕ್ಕಿದ ಮೇಲೆ ಯಾಕೆ ತಣ್ಣಗಾದರು ಎಂಬ ಬಗ್ಗೆ ಚರ್ಚೆ ಮಾಡುತ್ತೇನೆ. ಎಲ್ಲದಕ್ಕೂ ಇತಿಶ್ರೀ ಹಾಡಬೇಕು. ಇಲ್ಲದಿದ್ದರೆ ಹೋದಲ್ಲಿ ಬಂದಲ್ಲಿ ಮತ್ತೆ ಹನಿಟ್ರ್ಯಾಪ್ ವಿಷಯವೇ ಚರ್ಚೆ ಆಗುತ್ತದೆ ಎಂದರು.
ಸರ್ಕಾರದ ವಿರುದ್ಧ ಗುತ್ತಿಗೆದಾರರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಹಂತಹಂತವಾಗಿ ಬಿಲ್ ಕ್ಲಿಯರ್ ಮಾಡುತ್ತಿದ್ದೇವೆ. ನಮ್ಮ ಇಲಾಖೆಯದ್ದು ಯಾವುದೂ ಪೆಂಡಿಂಗ್ ಇಲ್ಲ. ನಾವು ಎಲ್ಲವನ್ನೂ ಕೊಟ್ಟಿದ್ದೇವೆ ಎಂದರು. ದಲಿತ ಸಮಾವೇಶ ಆಯೋಜಿಸುವ ಬಗ್ಗೆ ಮಾತನಾಡಿದ ಅವರು, ರಣ ದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬರಲಿದ್ದಾರೆ. ಆಗ ಅವರ ಜೊತೆ ಚರ್ಚೆ ಮಾಡುತ್ತೇವೆ. ವರಿಷ್ಠರ ಜೊತೆ ಸಮಾವೇಶ ಕುರಿತು ಮಾತನಾಡಿಲ್ಲ ಎಂದು ಉತ್ತರಿಸಿದರು.