Wednesday, October 16, 2024

ಸಾಹಿತ್ಯ ಜಾತ್ರೆಗೆ ಸಾಹಿತ್ಯೇತರ ರಾಜಕಾರಣದ ಲಗ್ಗೆ

Most read

ಇತ್ತೀಚಿನ ಅಧಿಕೃತ ವರದಿಗಳ ಅನುಸಾರ ಮಂಡ್ಯ ಜಿಲ್ಲೆಯ ಲಿಂಗಾನುಪಾತ 1000:875 ರಷ್ಟಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮಂಡ್ಯ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇವೆರಡನ್ನೂ ಮೀರಿಸುವ ಆಘಾತ ಎಂದರೆ ಸಾವಿರಾರು ಹೆಣ್ಣು ಭ್ರೂಣ ಹತ್ಯೆಗಳು ಸಂಭವಿಸುತ್ತಿರುವುದು. ಈ ಹಿನ್ನೆಲೆಯಲ್ಲಿ ನೋಡಿದಾಗ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಥೀಮ್‌ ʼಮಹಿಳೆ ʼ ಆಗಬೇಕಿದೆ. ಸಮ್ಮೇಳನಾಧ್ಯಕ್ಷರು ಮಹಿಳೆಯೇ ಆಗಬೇಕಿದೆ -ನಾ ದಿವಾಕರ, ಚಿಂತಕರು.

ಮಹಾರಾಷ್ಟ್ರದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಯಾವುದೇ ರಾಜಕೀಯ ವ್ಯಕ್ತಿ ಅಥವಾ ಅಧಿಕಾರಶಾಹಿಯ ಪ್ರತಿನಿಧಿಗಳಿಗೆ ವೇದಿಕೆ ಇರುವುದಿಲ್ಲ. ಈ ಪರಂಪರೆಯನ್ನು ಇಂದಿಗೂ ಕಾಪಾಡಿಕೊಂಡು ಬರಲಾಗಿದೆ. ಈ ಪರಂಪರೆಯ ಹಿಂದಿನ ಔದಾತ್ಯವನ್ನು ಕನ್ನಡ ಸಾಹಿತ್ಯ ಲೋಕ ಇನ್ನಾದರೂ ಗಮನಿಸಬೇಕಿದೆ. ಸಾಹಿತ್ಯ ಸಮ್ಮೇಳನ ಎನ್ನುವುದು ಈ ಸೃಜನಶೀಲ ಸಾಹಿತ್ಯಕ ಅಭಿವ್ಯಕ್ತಿಯನ್ನು ವಿಶಾಲ ಸಮಾಜದ ನಡುವೆ ಇಟ್ಟು ನೋಡುವ ಒಂದು ಪ್ರಯತ್ನ. ಮೂಲತಃ ಸಾಹಿತ್ಯ ಎನ್ನುವುದು ಸುತ್ತಲಿನ ಸಮಾಜದ ಸ್ಥಿತ್ಯಂತರಗಳನ್ನು, ಜನಜೀವನ ಮತ್ತು ಆಗುಹೋಗುಗಳನ್ನು ಗಮನಿಸುತ್ತಲೇ ಬೆಳೆಯುವ ಒಂದು ಅಕ್ಷರ ಲೋಕದ ಪ್ರಯತ್ನ. ಈ ಸಾಹಿತ್ಯ ಪ್ರಕಾರಗಳಲ್ಲೇ ನಮ್ಮ ಸಮಾಜ ಎದುರಿಸುವ ಸಾಮಾಜಿಕ-ಸಾಂಸ್ಕೃತಿಕ ಸಿಕ್ಕುಗಳು ಮತ್ತು ಸವಾಲುಗಳೂ ಅಭಿವ್ಯಕ್ತಗೊಳ್ಳುತ್ತವೆ.

ಈ ವಿಚಾರ ಧಾರೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅವುಗಳೊಳಗಿನ ಸಮಾಜಮುಖಿ ಚಿಂತನೆಗಳನ್ನು ಮುಖಾಮುಖಿಯಾಗಿಸಿ, ವಿಮರ್ಶೆಗೊಳಪಡಿಸುವ ಒಂದು ದೊಡ್ಡ ಜವಾಬ್ದಾರಿ ಸಾಹಿತ್ಯಪರಿಷತ್ತಿನಂತಹ ಸಂಸ್ಥೆಗಳ ಮೇಲಿರುತ್ತದೆ. ಕಸಾಪ ಹೀಗೆ ಮಾಡುತ್ತಿಲ್ಲ ಎನ್ನುವುದು ಬೇರೆ ವಿಚಾರ. ಆದರೆ ಕಾಲಕಾಲಕ್ಕೆ ನಡೆಯುವ ಸಾಹಿತ್ಯ ಸಮ್ಮೇಳನಗಳು ಈ ವಿಮರ್ಶಾತ್ಮಕ ಹಿನ್ನೋಟ ಮತ್ತು ದೂರಗಾಮಿ ಮುನ್ನೋಟಕ್ಕೆ ವೇದಿಕೆಯಾಗಿ ನಡೆಯಬೇಕಾಗುತ್ತದೆ.  ಹಾಗಾಗಿಯೇ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವಾಗ ಅನುಸರಿಸಬೇಕಾದ ಮಾನದಂಡಗಳು ಗಂಭೀರ ಚರ್ಚೆಗೊಳಗಾಗಬೇಕಿದೆ. ಈಗ ಸಾಹಿತ್ಯ ವಲಯದಲ್ಲಿ ಉದ್ಭವಿಸಿರುವ ಚರ್ಚೆ “ಸಾಹಿತ್ಯೇತರ ವ್ಯಕ್ತಿಗಳನ್ನು” ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವಿಚಾರ ಅನಗತ್ಯವಾದದ್ದು. ʼಸಾಹಿತ್ಯೇತರʼ ಎಂಬ ವಿಂಗಡಣೆ ಬಹುಶಃ ಸಮಾಜದ ಇತರ ಕ್ಷೇತ್ರಗಳ ಬಗ್ಗೆ ಗಮನಸೆಳೆಯುತ್ತವೆ. ಔದ್ಯೋಗಿಕ, ಔದ್ಯಮಿಕ, ಕಾರ್ಪೋರೇಟ್‌, ಸಾಫ್ಟ್‌ವೇರ್‌, ಚಿತ್ರರಂಗ, ಕ್ರೀಡೆ, ಸಮಾಜ ಸೇವೆ ಹೀಗೆ ವಿಸ್ತರಿಸಿಕೊಳ್ಳುತ್ತಾ ಕೊನೆಗೆ ಇದು ಬಂದು ತಲುಪುವುದು ʼರಾಜಕೀಯʼ ಎಂಬ ಕೇಂದ್ರ ಸ್ಥಾನಕ್ಕೆ. ಇದರ ಪರಿಣಾಮ ಮತ್ತದೇ ಶಿಫಾರಸು, ಮೇಲಿನವರಿಂದ ಒತ್ತಡ, ʼ ನಮ್ಮವರಿಗೊಂದು ಅವಕಾಶ ʼ ಎಂಬ ಆಗ್ರಹ ಲಾಬಿಕೋರತನ ಇತ್ಯಾದಿ.

ಈ ಕ್ಷೇತ್ರಗಳಲ್ಲಿ ಕನ್ನಡ ನಾಡು ನುಡಿಯ ಸೇವೆ ಸಲ್ಲಿಸಿರುವವರು ಇಲ್ಲವೆಂದೇನಲ್ಲ. ಆದರೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ವಹಿಸುವವರಿಗೆ ಸಾಹಿತ್ಯ ಕೃಷಿಯ ಅನುಭವ ಇರಬೇಕು, ಅಷ್ಟೇ ಅಲ್ಲದೆ ಸಾಹಿತ್ಯಕ ಸೃಜನಶೀಲ ಕಣ್ಣೋಟದಿಂದ ಇಡೀ ಸಮಾಜವನ್ನು ಒಳಹೊಕ್ಕು ನೋಡುವ ಹಾಗೂ ಅದರೊಳಗಿನ ತಲ್ಲಣ, ತುಮುಲ, ತೊಳಲಾಟಗಳನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು. ಸಾಹಿತ್ಯ ಕೃಷಿಯಿಂದ ಹೊರತಾದ ವ್ಯಕ್ತಿಗಳಲ್ಲಿ ಇಂತಹ ಸಂವೇದನೆ ಇರಬಹುದಾದರೂ, ಅದನ್ನು ಕನ್ನಡ ಸಾಹಿತ್ಯದ ಒಳನೋಟದೊಂದಿಗೆ ನೋಡುವ ವ್ಯವಧಾನ ಇರುವುದು ಅನುಮಾನ. ಹಾಗಾಗಿಯೇ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಸಾಹಿತ್ಯೇತರ ವ್ಯಕ್ತಿಗಳು ಅನಪೇಕ್ಷಿತವಾಗುತ್ತಾರೆ.

ಇಲ್ಲಿ ಮತ್ತೊಂದು ಸೂಕ್ಷ್ಮವನ್ನೂ ನಾವು ಗಂಭೀರವಾಗಿ ಪರಾಮರ್ಶಿಸಬೇಕಿದೆ. 110 ವರ್ಷಗಳ ದೀರ್ಘ ಇತಿಹಾಸದಲ್ಲಿ ಕಸಾಪ ಒಮ್ಮೆಯೂ ಮಹಿಳಾ ಅಧ್ಯಕ್ಷರನ್ನು ಹೊಂದಿಲ್ಲದಿರುವುದು ಸಾಹಿತ್ಯ ವಲಯದಲ್ಲಿ ಬೇರೂರಿರುವ ಗಂಡಾಳ್ವಿಕೆಯ ಸಂಕೇತವಾಗಿ ಕಾಣುತ್ತದೆ. ಅದಿರಲಿ, ಈ ಕೊರತೆಯ ಜೊತೆಗೇ ಎದ್ದುಕಾಣುವ ಮತ್ತೊಂದು ಅಂಶ ಎಂದರೆ ಕಾಲಕಾಲಕ್ಕೆ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ. ಕಳೆದ 110 ವರ್ಷಗಳಲ್ಲಿ 86 ಅಖಿಲ ಭಾರತ ಸಮ್ಮೇಳನಗಳು ನಡೆದಿವೆ. ಇವುಗಳಲ್ಲಿ  ಮಹಿಳಾ ಸಾಹಿತಿಗೆ ಸಿಕ್ಕಿರುವ ಸ್ಥಾನವನ್ನು ಗಮನಿಸಿದಾಗ, ಸಾಹಿತ್ಯ ಪರಿಷತ್ತು ಇಂದಿಗೂ ಗಂಡಾಳ್ವಿಕೆಯ ನೆರಳಲ್ಲೇ ಸಾಗುತ್ತಿರುವುದು ಹೆಚ್ಚು ಸ್ಪಷ್ಟವಾಗುತ್ತದೆ. ಸಮ್ಮೇಳನಾಧ್ಯಕ್ಷರಾಗಿ ಮೊದಲಬಾರಿ ಮಹಿಳೆ ಆಯ್ಕೆಯಾಗಲು 60 ವರ್ಷಗಳೇ ಬೇಕಾದವು (1974 ಜಯದೇವಿತಾಯಿ ಲಿಗಾಡೆ). ಆನಂತರ ಮಹಿಳಾ ಸಾಹಿತಿಗಳಿಗೆ 26 ವರ್ಷಗಳ ಕಡ್ಡಾಯ ರಜೆ ನೀಡಲಾಯಿತು. ಕನ್ನಡ ಸಾಹಿತ್ಯದ ಉತ್ಕರ್ಷದ ಕಾಲಘಟ್ಟ ಎನ್ನಬಹುದಾದ 1975-2000ರ ಅವಧಿಯಲ್ಲಿ ಮಹಿಳಾ ಸಾಹಿತಿಗಳು ಪ್ರಕಟಿಸಿದ ಅಕ್ಷರ ಭಂಡಾರ, ಕನ್ನಡ ಸಾಹಿತ್ಯ ಪರಂಪರೆಗೆ ಹೆಮ್ಮೆ ತರುವಂತಹುದು. ಆದರೂ ಈ ಅವಧಿಯಲ್ಲಿ ಕಸಾಪದ ಕಣ್ಣಿಗೆ ಒಬ್ಬ ಮಹಿಳಾ ಸಾಹಿತಿಯೂ ಕಾಣಲಿಲ್ಲ. ಸಮಾನತೆಯ ಘೋಷಣೆ ಸಮಾಜದ ಎಲ್ಲ ಸ್ತರಗಳನ್ನೂ ಆವರಿಸಿದ್ದ ಕಾಲಘಟ್ಟದಲ್ಲಿ ಹೀಗೇಕಾಯಿತು ? ಇದು ಆತ್ಮವಿಮರ್ಶೆಗೆ ಪ್ರೇರೇಪಿಸುವ ಪ್ರಶ್ನೆ.

ತದನಂತರ ಹೊಸ ಶತಮಾನದಲ್ಲ,  2000ದ ನಂತರ  ನಡೆದಿರುವ 19 ಸಮ್ಮೇಳನಗಳಲ್ಲಿ ಕೇವಲ ಮೂರು ಬಾರಿ ಮಹಿಳಾ ಸಾಹಿತಿಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. (2000 ಶಾಂತಾದೇವಿ ಮಾಳವಾಡ, 2003 ಕಮಲಾ ಹಂಪನಾ, 2010 ಗೀತಾ ನಾಗಭೂಷಣ). ಇದರರ್ಥ ಕನ್ನಡ ಸಾಹಿತ್ಯ ಲೋಕದಲ್ಲಿ ಸಮ್ಮೇಳನಾಧ್ಯಕ್ಷರಾಗುವ ಅರ್ಹತೆ ಇರುವ ಮಹಿಳಾ ಸಾಹಿತಿಗಳು ಇಲ್ಲವೆಂದೇನಲ್ಲ. ಸಾಮಾಜಿಕ ಪಿತೃಪ್ರಧಾನತೆ, ರಾಜಕೀಯ ಪುರುಷಾಧಿಪತ್ಯ, ಸಾಂಸ್ಕೃತಿಕ ಗಂಡಾಳ್ವಿಕೆ ಇವುಗಳನ್ನು ದಿಟ್ಟವಾಗಿ ಎದುರಿಸುತ್ತಲೇ, ಪುರುಷ ಸಮಾಜದ ವಿಕೃತಿಗಳಿಗೆ ಬಲಿಯಾದ ಸಹಸ್ರಾರು ಮಹಿಳೆಯರಿಗೆ ದನಿಯಾಗುವಂತಹ ಸಾಹಿತ್ಯ ಈ ಅವಧಿಯಲ್ಲಿ ಮಹಿಳಾ ಸಾಹಿತಿಗಳಿಂದಲೇ ವಿಪುಲವಾಗಿ ಹರಿದುಬಂದಿದೆ. ಆದರೂ ಸಮ್ಮೇಳನಾಧ್ಯಕ್ಷರ ಸ್ಥಾನದಿಂದ ಮಹಿಳೆ ವಂಚಿತಳಾಗಿದ್ದಾಳೆ. ಕಾರಣ ಸ್ಪಷ್ಟ,  ಆ ಗೌರವಯುತ ಸ್ಥಾನಕ್ಕೆ ಮಹಿಳೆಯನ್ನು ಕೂರಿಸುವ ವಿಶಾಲ ಚಿಂತನೆ-ಸೂಕ್ಷ್ಮತೆ ಕನ್ನಡ ಸಾಹಿತ್ಯ ಲೋಕಕ್ಕೆ ಅಥವಾ ಅದನ್ನು ನಿರ್ದೇಶಿಸುವ ಸಾಂಸ್ಥಿಕ ಗಂಡಾಳ್ವಿಕೆಗೆ ಇರಲಿಲ್ಲ/ಈಗಲೂ ಇಲ್ಲ.

ಸಾಮಾಜಿಕ ನ್ಯಾಯ, ಸಮಾನತೆ ಇತ್ಯಾದಿ

ಸಾಮಾಜಿಕ ನ್ಯಾಯದ ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಇತ್ತೀಚೆಗೆ ಸಾಂಸ್ಕೃತಿಕ ವಲಯದ ಸಂಸ್ಥೆಗಳಿಗೆ ಮಾಡಿರುವ ನೇಮಕ ಪ್ರಕ್ರಿಯೆಯಲ್ಲೇ ಈ ತಾರತಮ್ಯವನ್ನು ಕಂಡಿದ್ದೇವೆ.  ಮಹಿಳಾ ದೌರ್ಜನ್ಯಗಳು ನಿತ್ಯ ಸುದ್ದಿಗಳಾಗಿರುವ ಹೊತ್ತಿನಲ್ಲಿ ರಾಜ್ಯ ಮಹಿಳಾ ಆಯೋಗಕ್ಕೆ ಸದಸ್ಯರನ್ನು ನೇಮಿಸುವ ಕನಿಷ್ಠ ವಿವೇಕವನ್ನೂ ಸರ್ಕಾರ ಕಳೆದುಕೊಂಡಿದೆ. ಇದರ ವಿಸ್ತೃತ ರೂಪವನ್ನೇ ನಾವು ಕಸಾಪ ಮತ್ತು ಅದು ನಡೆಸುವ ಸಾಹಿತ್ಯ ಸಮ್ಮೇಳನಗಳಿಗೂ ಅನ್ವಯಿಸಬಹುದು. ಈ ಸೂಕ್ಷ್ಮತೆ ಇರುವುದೇ ಆದಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೆಯ ಸಾಹಿತ್ಯ ಸಮ್ಮೇಳನದ ಮುಖ್ಯ ವಿಷಯ ಅಥವಾ ಥೀಮ್‌ ಮಹಿಳೆಯೇ ಆಗಬೇಕಿದೆ. ಮಂಡ್ಯ ಈಗ ಸಕ್ಕರೆ-ಕನ್ನಂಬಾಡಿಗಿಂತಲೂ ಹೆಚ್ಚಾಗಿ ವಿಶ್ವಮಾನ್ಯವಾಗಿರುವುದು ಹೆಣ್ಣು ಭ್ರೂಣ ಹತ್ಯೆಗಳಿಗಾಗಿ ಮತ್ತು ಕುಸಿಯುತ್ತಿರುವ ಲಿಂಗಾನುಪಾತಕ್ಕಾಗಿ.

ಇತ್ತೀಚಿನ ಅಧಿಕೃತ ವರದಿಗಳ ಅನುಸಾರ ಮಂಡ್ಯ ಜಿಲ್ಲೆಯ ಲಿಂಗಾನುಪಾತ 1000:875 ರಷ್ಟಿದೆ ಅಂದರೆ ಒಂದು ಸಾವಿರ ಗಂಡುಮಕ್ಕಳಿಗೆ 875 ಹೆಣ್ಣುಮಕ್ಕಳಿದ್ದಾರೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಮಂಡ್ಯ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಇವೆರಡನ್ನೂ ಮೀರಿಸುವ ಆಘಾತ ಎಂದರೆ ಸಾವಿರಾರು ಹೆಣ್ಣು ಭ್ರೂಣ ಹತ್ಯೆಗಳು ಸಂಭವಿಸುತ್ತಿರುವುದು. ಈ ಹಿನ್ನೆಲೆಯಲ್ಲಿ ನೋಡಿದಾಗ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಥೀಮ್‌ ʼಮಹಿಳೆ ʼ ಆಗಬೇಕಿದೆ. ಸಮ್ಮೇಳನಾಧ್ಯಕ್ಷರು ಮಹಿಳೆಯೇ ಆಗಬೇಕಿದೆ. ಒಂದು ಶತಮಾನ ಕಳೆದರೂ ಮಹಿಳಾ ಪ್ರಾತಿನಿಧ್ಯ ಒಂದು ಸಹಜ ಪ್ರಕ್ರಿಯೆಯಾಗದೆ, ಆಗ್ರಹವಾಗಿಯೇ ಕೇಳಿಬರುತ್ತಿರುವುದು ನಾಚಿಕೆಗೇಡಿನ ವಿಚಾರವಲ್ಲವೇ ? ಪಿತೃಪ್ರಧಾನತೆ, ಸಾಂಸ್ಕೃತಿಕ ಲೋಕದ ಸಾಂಸ್ಥಿಕ ಗಂಡಾಳ್ವಿಕೆ, ಅಧಿಕಾರ ರಾಜಕಾರಣದ ಪುರುಷಾಧಿಪತ್ಯ ಮತ್ತು ಮರೆಯಾಗುತ್ತಲೇ ಇರುವ ಲಿಂಗ ಸೂಕ್ಷ್ಮತೆ – ಈ ತಲ್ಲಣಗಳ ದೃಷ್ಟಿಯಿಂದ ಮಂಡ್ಯದಲ್ಲಿ ನಡೆಯುವ 87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡುವುದು ನಮ್ಮ ಆದ್ಯತೆಯಾಗಬೇಕಿದೆ. ಸಾಹಿತ್ಯೇತರ ವ್ಯಕ್ತಿ-ಸಂಸ್ಥೆ-ಸಂಘಟನೆಗಳನ್ನು ಹೊರಗಿಟ್ಟು, ಸಾಹಿತ್ಯ ಲೋಕದಿಂದಲೇ ಮಹಿಳಾ ಸಾಹಿತಿಯನ್ನು ಆಯ್ಕೆ ಮಾಡಬೇಕಿದೆ. ಈ ಸ್ಥಾನವನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಮಹಿಳಾ ಸಾಹಿತಿಗಳು ನಮ್ಮ ನಡುವೆ ಹೇರಳವಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ತೆರೆದ ಕಣ್ಣು, ಮುಕ್ತ ಮನಸ್ಸಿನಿಂದ ನೋಡಬೇಕಷ್ಟೇ.

ನಾ. ದಿವಾಕರ

ಚಿಂತಕರು

ಇದನ್ನೂ ಓದಿ- ಕೋಮು ಸೌಹಾರ್ದತೆಗೆ ಧಕ್ಕೆ; ನ್ಯಾಯಾಲಯದ ತೀರ್ಪು ಹೀಗೇಕೆ?

More articles

Latest article