ನಾಳೆ ಮುನಿರತ್ನನ ಇನ್ನೆರಡು ಆಡಿಯೋ ಬಿಡುಗಡೆ: ಚೆಲುವರಾಜ್ ಸ್ಫೋಟಕ ಹೇಳಿಕೆ

Most read

ಬೆಂಗಳೂರು: ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಸಂಬಂಧಿಸಿದ ಇನ್ನೂ ಎರಡು ಆಡಿಯೋಗಳನ್ನು ನಾಳೆ ಬಿಡುಗಡೆ ಮಾಡುತ್ತೇನೆ ಎಂದು ಗುತ್ತಿಗೆದಾರ ಚೆಲುವರಾಜ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

35 ಲಕ್ಷ ಲಂಚದ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಲ್ಲದೆ, ರೇಣುಕಾಸ್ವಾಮಿಯನ್ನು ಕೊಂದ ಹಾಗೆ ಕೊಲ್ಲುವುದಾಗಿ ಚೆಲುವರಾಜ್ ಅವರನ್ನು ಶಾಸಕ ಮುನಿರತ್ನ ಬೆದರಿಸಿದ್ದರು. ಅಲ್ಲದೆ ಒಕ್ಕಲಿಗ ಮತ್ತು ದಲಿತ ಸಮುದಾಯದ ಕುರಿತು ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಕೂಡ ವೈರಲ್ ಆಗಿತ್ತು.

ವೈಯಾಲಿಕಾವಲ್ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಶಾಸಕ ಮುನಿರತ್ನನನ್ನು ಕೋಲಾರದ ಮುಳಬಾಗಲಿನಲ್ಲಿ ಬಂಧಿಸಿದ್ದರು. ಆಂಧ್ರಪ್ರದೇಶಕ್ಕೆ ತೆರಳಿ ತಲೆಮರೆಸಿಕೊಳ್ಳಲು ಯತ್ನಿಸಿದ್ದ ಮುನಿರತ್ನ ಮತ್ತು ಸಹಚರರು ಚೆಕ್ ಪೋಸ್ಟ್ ಬಳಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದರು.

ಇದೀಗ ಮುನಿರತ್ನಗೆ ಸೇರಿದ ಇನ್ನೂ ಎರಡು ಆಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಗುತ್ತಿಗೆದಾರ ಚೆಲುವರಾಜ್ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಡುಗಡೆಯಾಗಲಿರುವ ಆಡಿಯೋಗಳು ಮುನಿರತ್ನ ನಡೆಸುತ್ತಿರುವ ಕಮಿಷನ್ ದಂಧೆಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.

More articles

Latest article