ತುಮಕೂರು ಕ್ಷೇತ್ರದಲ್ಲಿ ಮುದ್ದಹನುಮೇಗೌಡರಿಗೆ ಗೆಲ್ಲುವ ವಿಶ್ವಾಸ

Most read

ತುಮಕೂರು: ಕಳೆದ ಒಂದು ತಿಂಗಳಿಂದ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಕಳೆದ ಬಾರಿಯಂತೆ ಜನರನ್ನು ಭೇಟಿ ಮಾಡ್ತಿದ್ದೇನೆ. ಅವರ ನಿರೀಕ್ಷೆಗಳನ್ನು ನೇರವಾಗಿ ಸಂಪರ್ಕಿಸಿ ತಿಳಿದುಕೊಳ್ಳುತ್ತಿದ್ದೇನೆ. ಪರಮೇಶ್ವರ್, ರಾಜಣ್ಣ ಸೇರಿದಂತೆ ನಾಯಕರ ಜೊತೆ ಸೇರಿ ಕಾರ್ಯಕರ್ತರ ಸಭೆ ಮಾಡಿದ್ದೇವೆ. ಉತ್ತಮ ಸ್ಪಂದನೆ ಸಿಗುತ್ತಿದೆ. ಈ ಬಾರಿ ನನ್ನ ಗೆಲುವು ಖಚಿತ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಂದ ಬಿ ಫಾರಂ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐದು ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ. ಅದು ಜನರ ಮನಸ್ಸಲ್ಲಿ ಇದೆ. ನಿರಂತರವಾಗಿ ಜನರ ಸಂಪರ್ಕದಲ್ಲಿದ್ದೇನೆ. ನೂರಕ್ಕೆ ನೂರರಷ್ಟು ವಿಶ್ವಾಸ ಇದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಕಾರ್ಯಕ್ರಮಗಳೆಲ್ಲವೂ ನೆರವಿಗೆ ಬರುತ್ತಿವೆ. ಎದುರು ಇರುವ ಅಭ್ಯರ್ಥಿಯನ್ನಯ ನಾನು ನೋಡಲ್ಲ. ನನ್ನ ಮೇಲೆ ನನಗೆ ವಿಶ್ವಾಸ ಇದೆ. ದೇವೇಗೌಡರ ಹೇಳಿಕೆ ಬಗ್ಗೆ ಕಾಮೆಂಟ್ ಮಾಡಲ್ಲ. ಜಯಚಂದ್ರ ಸೇರಿದಂತೆ ಎಲ್ಲರನ್ನ ಒಗ್ಗಟ್ಟಿನಿಂದ ಬೆಂಬಲ ಸೂಚಿಸಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಭಿನ್ನಮತ ಇಲ್ಲ. ಅತ್ಯಂತ ಹೆಚ್ಚು ಬಹುಮತದೊಂದಿಗೆ ಗೆಲ್ಲುತ್ತೇನೆ ಎಂದು ಅವರು ಹೇಳಿದರು.

ತುಮಕೂರಿನಲ್ಲಿ ಕಾಂಗ್ರೆಸ್ ನವರು ಸೋಲಿಸಿದರು ಎಂಬ ದೇವೇಗೌಡರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ಮಾಜಿ‌ ಪ್ರಧಾನಿಗಳು, ಹಿರಿಯರು. ನಾನೊಬ್ಬ ಅಭ್ಯರ್ಥಿಯಾಗಿ ಅವರ ಬಗ್ಗೆ ಮಾತಾಡಲ್ಲ. ಅವರ ಬಗ್ಗೆ ತುಂಬ ಗೌರವವಿದೆ ಎಂದು ಜಾಣತನದ ಉತ್ತರ ನೀಡಿದರು.

More articles

Latest article