ಬೆಂಗಳೂರು: ಮೇ ತಿಂಗಳಲ್ಲಿ ಎಡಬಿಡದೆ ಸುರಿದು ಅವಾಂತರ ಸೃಷ್ಟಿಸಿದ್ದ ಮುಂಗಾರು ಮಳೆ ಬಿಡುವು ನೀಡಿತ್ತು. ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳು ನಿರಾಳವಾಗಿದ್ದವು. ಮುಂಗಾರು ಮಳೆ ಮತ್ತೆ ಜೂನ್ 8 ರಿಂದ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರ್ನಾಟಕದ 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಕೃಷ್ಣಾ ನದಿ ತೀರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಸಂಭವವಿದೆ. ಜೂನ್ 9 ರವರೆಗೆ ರಾಜ್ಯಾದ್ಯಂತ ಅತಿ ಸಾಧಾರಣ ಮಳೆಯಾಗಲಿದೆ. ಜೂ. 10 ರಿಂದ 12ರವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.