ನವದೆಹಲಿ: ಉದ್ಯಮಿ ಗೌತಮ್ ಅದಾನಿ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಚ್ಚಿಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಆರೋಪಿಸಿದ್ದಾರೆ.
ಅದಾನಿ ಅವರ ಸಂಪತ್ತು ಕುರಿತು ದೇಶದಲ್ಲಿ ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಉತ್ತರಿಸುವುದಿಲ್ಲ. ಆದರೆ ವಿದೇಶಿ ನೆಲದಲ್ಲಿ ನಿಂತು ‘ವೈಯಕ್ತಿಕ ವಿಚಾರ’ ಎನ್ನುತ್ತಾರೆ ಎಂದು ಆಪಾದಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ರಾಹುಲ್, ನೀವು ದೇಶದಲ್ಲಿ (ಭಾರತದಲ್ಲಿ) ಪ್ರಶ್ನೆಗಳನ್ನು ಕೇಳಿದರೆ, ಮೌನ ವಹಿಸುತ್ತೀರಿ. ಆದರೆ, ವಿದೇಶದಲ್ಲಿ ಕೇಳಿದರೆ, ವೈಯಕ್ತಿಕ ವಿಚಾರ ಎನ್ನುತ್ತೀರಿ. ಈ ರೀತಿ ಮೋದಿ ಅವರು ಅಮೆರಿಕದಲ್ಲಿಯೂ ಅದಾನಿ ಅವರ ಭ್ರಷ್ಟಾಚಾರವನ್ನು ಮುಚ್ಚಿಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದೇ ರೀತಿ ‘ಮಿತ್ರರ ಜೇಬು ತುಂಬಿಸುವುದೇ ಮೋದಿ ಅವರಿಗೆ ‘ರಾಷ್ಟ್ರ ನಿರ್ಮಾಣ’ ಕಾರ್ಯವಾಗಿರುವಾಗ, ಲಂಚ ಪಡೆದು ದೇಶದ ಸಂಪತ್ತನ್ನು ಲೂಟಿ ಮಾಡುವುದು ‘ವೈಯಕ್ತಿಕ ವಿಚಾರ’ ಆಗುವುದು ಸಹಜ ಎಂದು ಕಿಡಿಕಾರಿದ್ದಾರೆ.
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಶ್ವೇತಭವನದಲ್ಲಿ ಟ್ರಂಪ್ ಅವರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಗುರುವಾರ ಮಾತುಕತೆ ನಡೆಸಿದ್ದಾರೆ.