ಲಕ್ಷ್ಮೀ ಹೆಬ್ಬಾಳ್ಕರ್ ಘನತೆಯ ರಾಜಕಾರಣ ಮಾಡಲಿ : ಮಂಗಲಾ ಅಂಗಡಿ

Most read

ಬೆಳಗಾವಿ: ‘ಶೆಟ್ಟರ್ ಬೀಗರ ಟಿಕೆಟ್ ಕಿತ್ತುಕೊಂಡಿದ್ದಾರೆ’ ಎಂದು ಚುನಾವಣಾ ಭಾಷಣದಲ್ಲಿ ಲೇವಡಿ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗುಡುಗಿರುವ ಮಾಜಿ ಸಂಸದೆ ಮಂಗಲಾ ಅಂಗಡಿ ಅವರು, “ಜಿಲ್ಲೆಯ ಹಿರಿಯ ನಾಯಕರನ್ನು ಬದಿಗೊತ್ತಿ ಎರಡನೇ ಬಾರಿ ಶಾಸಕಿಯಾದೊಡನೆ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ವೈಯಕ್ತಿಕ ದಾಳಿ ಬಿಟ್ಟು ಘನತೆಯ ರಾಜಕಾರಣ ಮಾಡಲಿ” ಎಂದು ತಿಳಿಹೇಳಿದ್ದಾರೆ.

ಇದುವರೆಗೆ ಲಕ್ಷ್ಮೀ ಅವರ ಬಗ್ಗೆ ನಾನು ಯಾವುದೇ ಆರೋಪಗಳನ್ನೂ ಮಾಡಿಲ್ಲ. ಜಗದೀಶ ಶೆಟ್ಟರ ಅವರ ಬಗ್ಗೆ ಕೀಳಾಗಿ ಮಾತನಾಡಿರುವ ಲಕ್ಷ್ಮೀ ನಮ್ಮ ಕುಟುಂಬದ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿದ್ದಾರೆ. ಅವರ ಇಂತಹ ಕ್ಷುಲ್ಲಕ ಹೇಳಿಕೆಗಳಿಗೆ ಪ್ರಜ್ಞಾವಂತ ಪ್ರಜೆಯಾಗಿ ನಾನು ಉತ್ತರಿಸಲಾರೆ ಎಂದು ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

“ಜಿಲ್ಲೆಯ ಹಿರಿಯ ರಾಜಕಾರಣಿಗಳಾದ ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ ಅವರಿಂದ ಸಚಿವ ಸ್ಥಾನ ಕಿತ್ತುಕೊಂಡವರು ನೀವು. ಈ ವಿಷಯವನ್ನು ಇದುವರಗೆ ನಾನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಜಿಲ್ಲೆಯ ಜನರಿಗೆ ಈ ವಿಷಯ ಚನ್ನಾಗಿ ಗೊತ್ತಿದೆ. ಆದ್ದರಿಂದ  ಇನ್ನುಮುಂದಾದರೂ ಲಕ್ಷ್ಮೀ ಅವರು ವೈಯಕ್ತಿಕ ವಿಚಾರ ಬಿಟ್ಟು ಸಮಷ್ಟಿ ಪ್ರಜ್ಞೆಯಿಂದ ರಾಜಕೀಯ ಮಾಡುವುದನ್ನು ರೂಢಿಸಿಕೊಂಡರೆ ಉತ್ತಮ”.

ಈ ಬಾರಿ ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿದ ತಕ್ಷಣ ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತಳಾಗಿ ಸಂತೋಷದಿಂದ ಅದನ್ನು ಒಪ್ಪಿಕೊಂಡೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಜನರ ಮನಸಿನಲ್ಲಿ ಸಂಶಯ ಹುಟ್ಟಿಸುವ ಕ್ಷುಲ್ಲಕ ಹೇಳಿಕೆ ಕೊಡುವ ಬದಲು ಸಚಿವ ಸ್ಥಾನಕ್ಕೆ ಗೌರವ ತರುವ ಮಾತು ಆಡಬೇಕು ಎಂದು ಮಂಗಲಾ ಅಂಗಡಿ ಸಚಿವೆಗೆ ಪಾಠ ಮಾಡಿದ್ದಾರೆ.

ಪಕ್ಷ ಮೊದಲು, ಕುಟುಂಬ ನಂತರ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ನಮ್ಮ ಕುಟುಂಬ ಯಾವತ್ತೂ ಬಿಜೆಪಿ ಸಿದ್ಧಾಂತ ನಂಬಿ ರಾಜಕೀ ಯ ಮಾಡಿದೆ. ಸುರೇಶ ಅಂಗಡಿ ಅವರು ಸಹ ಬದುಕಿನುದ್ದಕ್ಕೂ ಬಿಜೆಪಿ ತತ್ವದಂತೆ ಬದುಕಿದ ಧೀಮಂತ ರಾಜಕಾರಣಿ ಆಗಿದ್ದರು. ಅವರ ನಂತರ ಪಕ್ಷ ನನಗೆ ಅವಕಾಶ ಕೊಟ್ಟಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ ಎಂದಿದ್ದಾರೆ.

More articles

Latest article