ಲೋಕಸಭೆ ಉಪಸಭಾಪತಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಪತ್ರ

Most read

ನವದೆಹಲಿ: ಲೋಕಸಭೆಯ ಉಪ ಸಭಾಪತಿ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸುವಂತೆ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಮೊದಲ ಲೋಕಸಭೆಯಿಂದ ಹದಿನಾರನೇ ಲೋಕಸಭೆಯವರೆಗೆ, ಪ್ರತಿ ಸದನದಲೂ ಉಪಸಭಾಪತಿ ಇದ್ದರು. ಜತೆಗೆ ಉಪಸಭಾಪತಿ ಸ್ಥಾನವನ್ನು ವಿರೋಧ ಪಕ್ಷಗಳಿಗೆ ಬಿಟ್ಟು ಕೊಡುವುದು ಸಂಪ್ರದಾಯವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಈ ಸ್ಥಾನವು ಸತತ ಎರಡು ಲೋಕಸಭಾ ಅವಧಿಯಿಂದ ಖಾಲಿ ಉಳಿದಿದೆ. 17ನೇ ಲೋಕಸಭೆಯ ಅವಧಿಯಲ್ಲಿ ಉಪಸಭಾಪತಿಯನ್ನು ಆಯ್ಕೆ ಮಾಡಲಿಲ್ಲ, ಪ್ರಸ್ತುತ 18ನೇ ಲೋಕಸಭೆಯಲ್ಲೂ ಆಯ್ಕೆ ಮಾಡಲಾಗಿಲ್ಲ ಎಂದಿದ್ದಾರೆ.

ಇಂತಹ ಅನಪೇಕ್ಷಿತ ಬೆಳವಣಿಗೆ ದೇಶದ ಪ್ರಜಾಪ್ರಭುತ್ವ ರಾಜಕೀಯಕ್ಕೆ ಒಳ್ಳೆಯ ಲಕ್ಷಣವಲ್ಲ ಮತ್ತು ಸಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ. ಆದ್ದರಿಂದ ಕೂಡಲೇ ಉಪಸಭಾಪತಿ ಸ್ಥಾನದ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸುವಂತೆ ಒತ್ತಾಯಿಸಿದ್ದಾರೆ.

ಲೋಕಸಭಾ ಉಪಸಭಾಪತಿ ಸ್ಥಾನವನ್ನು ವಿಪಕ್ಷಕ್ಕೆ ಬಿಟ್ಟು ಕೊಡುವುದು ಸಂಪ್ರದಾಯವಿದೆ. ಸಂವಿಧಾನದ ಆರ್ಟಿಕಲ್ 95ರ ಸೆಕ್ಷನ್ 1ರ ಪ್ರಕಾರ ಸ್ಪೀಕರ್ ಅವರ ಹುದ್ದೆ ಖಾಲಿಯಾದಾಗ ಉಪಸಭಾಪತಿ ಅವರು ಸ್ಪೀಕರ್ ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಸದನದ ಅಧ್ಯಕ್ಷತೆ ವಹಿಸುತ್ತಿರುವಾಗ ಅವರು ಸ್ಪೀಕರ್ ಗಿರುವ ಎಲ್ಲ ಅಧಿಕಾರವನ್ನು ಹೊಂದಿರುತ್ತಾರೆ. ಆರ್ಟಿಕಲ್ 93ರ ಪ್ರಕಾರ ಸ್ಪೀಕರ್ ಮತ್ತು ಉಪಸಭಾಪತಿ – ಇಬ್ಬರನ್ನು ಸಂಸತ್ತಿನಲ್ಲಿ ಆದಷ್ಟು ಶೀಘ್ರವೇ ನೇಮಿಸಬೇಕು ಎಂದು ಹೇಳಲಾಗಿದೆ. 2004ರಿಂದ 2009ರವರೆಗಿನ ಯುಪಿಎ- 1 ಸರಕಾರ ಮತ್ತು 2009ರಿಂದ 2014ರವರೆಗಿನ ಯುಪಿಎ- 2  ಅವಧಿಯಲ್ಲಿ ವಿಪಕ್ಷಗಳಿಗೆ ಉಪಸಭಾಪತಿಯ ಹುದ್ದೆಯನ್ನು ಬಿಟ್ಟುಕೊಡಲಾಗಿತ್ತು.

More articles

Latest article