ಭಾಷೆ ಮತ್ತು ಅದರ ತಂದೆ ತಾಯಿಗಳು

Most read

ದೊಡ್ಡ ದೊಡ್ಡ ಭಾಷೆಗಳೆಂದೆಣಿಸಿಕೊಳ್ಳುವ ಅನೇಕ ಭಾಷೆಗಳಿಗೆ ಇಂದಿಗೂ ಕೂಡ ಸ್ವಂತದ್ದೆ ಎನ್ನುವ ಲಿಪಿಗಳಿಲ್ಲ. ಯೂರೋಪಿನ ಫ್ರೆಂಚ್, ಸ್ಪ್ಯಾನಿಷರು, ಬಳಸುವಂತೆ ಇಂಗ್ಲೀಷರದ್ದೂ ಕೂಡ ಎರವಲು ರೋಮನ್ ಲಿಪಿಯೇ ಹೊರತು ಅದು ಇಂಗ್ಲಿಷ್ ಲಿಪಿಯಲ್ಲ. ಅದೇ ರೀತಿ ಗ್ರೇಟ್  ದೊಡ್ಡಮ್ಮ ಸಂಸ್ಕೃತವೂ ಕೂಡ ದೇವನಾಗರಿ ಲಿಪಿಯ ಎರವಲಿನ ಹಂಗಲ್ಲೇ ಇದೆ – ಶಂಕರ್ ಸೂರ್ನಳ್ಳಿ.

ಕಮಲ ಹಾಸನ್ ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟರಲ್ಲೊಬ್ಬರು. ಕೆ ಬಾಲಚಂದರ್, ಕೆ ವಿಶ್ವನಾಥ್, ಬಾಲುಮಹೇಂದ್ರ, ಮಣಿರತ್ನಮ್, ಸಿಂಗೀತಮ್ ಶ್ರೀನಿವಾಸ್ ರಾವ್ ರಂತವರ ನಿರ್ದೇಶನದಡಿಯಲ್ಲಿ ಬಂದಂತಹ ಅವರ ಹಳೆಯ ಸಿನಿಮಾಗಳಿಗೆ ಯಾವತ್ತೂ ಮುಪ್ಪೆನ್ನುವುದಿಲ್ಲ. ಮರೋ ಚರಿತ್ರ (ಏಕ್ ದೂಜೆ ಕೇಲಿಯೆ), ಮೂನ್ರಾಮ್ ಪಿರ್ರೈ (ಸದ್ಮಾ), ನಾಯಗನ್, ಪುಷ್ಪಕ ವಿಮಾನ, ಸಾಗರಸಂಗಮಂ, ಸ್ವಾತಿ ಮುತ್ಯಂ ಒಂದಕ್ಕೊಂದು ಸಾಟಿ ಎನಿಸುವಂತಹ ಚಿತ್ರಗಳವು. ತನ್ನ ಐದನೇ ವರ್ಷದ ಪ್ರಾಯದಲ್ಲೇ ಬಣ್ಣ ಹಚ್ಚಿದ ಕಮಲ್ ’ಕಳತ್ತೂರ್ ಕಣ್ಣಮ್ಮ” ಚಿತ್ರಕ್ಕಾಗಿ ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನೂ ಪಡೆದಿದ್ದರು. ಅವರಿಗೆ ಬಂದಂತಹ ಪ್ರಶಸ್ತಿಗಳು ಭಾರತೀಯ ಚಲನಚಿತ್ರರಂಗದಲ್ಲಿ ಇಂದಿಗೂ ಒಂದು ದಾಖಲೆಯೇ. ಅವರು ಅಭಿನಯಿಸಿದ ನಾಯಗನ್ ಚಿತ್ರವೂ ಸೇರಿ ಒಟ್ಟು ಅವರ ಐದು ಚಿತ್ರಗಳು ಆಸ್ಕರ್ ಗೆ ನಾಮನಿರ್ದೇಶನಗೊಂಡಿವೆ. ಆದರೀಗ ಚಲನಚಿತ್ರ ನಟ ನಿರ್ದೇಶಕ, ನಿರ್ಮಾಪಕ ಕಮಲ್ ಹಾಸನ್ ಈಗ ಕೇವಲ ನಟರಾಗಿಯಷ್ಟೇ ಉಳಿಯದೇ ರಾಜಕಾರಣಿಯೂ ಆಗಿದ್ದಾರೆ.  ಅವರದ್ದೇ ಆದ ರಾಜಕೀಯ ಪಕ್ಷವೂ ಕೂಡ ಇದೆ.

ಕಮಲ್‌ ಹಾಸನ್

ಇತ್ತೀಚೆಗೆ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ವಿವಾದಕ್ಕೀಡಾಗಿ ಚರ್ಚೆಗೊಳಗಾದ ಅವರ ಕನ್ನಡ ಕುರಿತ ವಿವಾದಾತ್ಮಕ ಹೇಳಿಕೆ ಅವರ ಹೊಸ ಸಿನಿಮಾ ಪ್ರಚಾರ ಮತ್ತು ಬಿಡುಗಡೆಯ ಹಿನ್ನೆಲೆಯಿಂದ ಬಂದಿದ್ದರೂ ಕೂಡ ಈ ವಿವಾದ ಮತ್ತು ಆ ನಂತರ ನಡೆದ ಬೆಳವಣಿಗೆ, ಕಮಲ್ ರ ಹಟಮಾರಿತನ ಇವನ್ನೆಲ್ಲ ಅವರ ರಾಜಕಾರಣದ ಹಿನ್ನೆಲೆಯಿಂದಲೂ ಸಹ ನೋಡಬೇಕಾಗುತ್ತದೆ. ಅದೇರೀತಿ, ಕಮಲ್ ಹಾಸನ್ನರ ಬಗ್ಗೆ ಕಿಡಿಕಾರುವ ಅನೇಕರಿಗೆ ಇದ್ದಿರುವುದು ಅವರಾಡಿದಂತ ಕನ್ನಡ ಕುರಿತ ಮಾತಿನ ಮೇಲಿನ ಸಿಟ್ಟಲ್ಲ ಅವರ ಎಡಪಂಥೀಯ ನಿಲುವುಗಳ ಕುರಿತಂತೆ. ಕಮಲ್ ಅನೇಕರ ವಿರೋಧ ಕಟ್ಟಿಕೊಂಡಿದ್ದರು. ಇಂತದ್ದೇ ಮಾತನ್ನಾಡಿದ ಭೈರಪ್ಪನವರ ವಿರುದ್ಧ ಯಾವ ದೂರೂ ಯಾವ ಪ್ರತಿಭಟನೆಯೂ ನಡೆದಂತಿಲ್ಲ. ತಮಿಳಿಗ ಕಮಲ್ ಹಾಸನ್ ತಮಿಳಿನ ಪರವಹಿಸಿ ಮಾತನಾಡಿದ್ದಕ್ಕೊಂದು ಅರ್ಥವಿದ್ದರೆ ಕನ್ನಡಿಗ ಮತ್ತು ಕನ್ನಡದಿಂದಲೇ ಕೀರ್ತಿ ಪಡೆದ ಭೈರಪ್ಪನವರ ವಿರುದ್ಧ ಕನ್ನಡದ್ರೋಹದ ಹೆಸರಲ್ಲಿ ಇದಕ್ಕೂ ಹೆಚ್ಚು ಪ್ರತಿಭಟನೆಗಳಾಗಬೇಕಿತ್ತು ಯಾಕಿಲ್ಲ?

ಅಗಾಧ ಪ್ರತಿಭೆಯ ದೇಶಾದ್ಯಂತ ಅಪಾರ ಅಭಿಮಾನಿವರ್ಗವನ್ನು ಹೊಂದಿರುವ ಅಪ್ಪಟ ತಮಿಳಿಗ ಕಮಲ್ ಹಾಸನ್ ರಿಗೆ ವಿವಾದ ಹೊಸತೇನಲ್ಲ. ಅವರ ನಿರ್ಮಾಣದ ದಶಾವತಾರಮ್, ವಿಶ್ವರೂಪಮ್, ಹೇರಾಮ್ ನಂತಹ ಚಿತ್ರಗಳು ಸಿನಿಮಾ ಹೆಸರಲ್ಲಿ ಕೆಲ ವಿವಾದವನ್ನು ಹುಟ್ಟುಹಾಕಿದ್ದರೆ ಅವರ ವೈಯುಕ್ತಿಕ ಬದುಕೂ ಸಹ ಸಾಕಷ್ಟು ಏರುಪೇರುಗಳಿಂದ ಕೂಡಿತ್ತು. ಎರಡು ಮದುವೆಗಳಾಗಿ ಮೂರನೆಯ ಲಿವಿಂಗ್ ಟುಗೆದರ್ ನ ನಟಿಯೂ ಸಹ ಕೆಲ ವರ್ಷದ ಹಿಂದೆ ಅವರ ಮೇಲೆ ಆಪಾದನೆಗಳನ್ನು ಹೊರಿಸಿ ಹೊರಬಂದಿದ್ದರು. ಕಮಲ್ ಇಂತಹ ವೈರುಧ್ಯಗಳನ್ನು ನೋಡಿ ಎದುರಿಸಿ ಬೆಳೆದಂತವರು. ಇದೀಗ ಭಾಷೆಯ ಹೆಸರಲ್ಲಿ ಎದುರಾದ ಪ್ರತಿರೋಧದಿಂದ ತನ್ನ ಸಿನಿಮಾಕ್ಕೆ ಹೊಡೆತ ಬೀಳುವುದು ಗೊತ್ತಿದ್ದೂ ಸಹ ಕೇವಲ ಒಂದು ಕ್ಷಮೆಯಿಂದ ತಣ್ಣಗಾಗಬಹುದಾದ ವಿಷಯವನ್ನು ಬಿಟ್ಟುಕೊಡದೇ  ಒರಟನಂತೆ ನಿಂತಿರುವುದಕ್ಕೆ  ಅವರದ್ದೇ ಆದ ಕಾರಣಗಳಿವೆ.

ಕಮಲ್‌ ಮತ್ತು ಶಿವರಾಜ್‌ ಕುಮಾರ್

ತಮ್ಮ ಥಗ್ಸ್ ಲೈಫ್ ಸಿನಿಮಾ ಕುರಿತ ಸಮಾರಂಭದಲ್ಲಿ ಕನ್ನಡದ ನಟ ಶಿವರಾಜ್ ಕುಮಾರರ ಎದುರು ಅವರನ್ನುದ್ದೇಶಿಸಿಯೇ ಆಡಿದಂತಹ ಅವರ ಮಾತಿನ ಹಿಂದೆ ವಸ್ತುನಿಷ್ಠವಾಗಿ ನೋಡಿದರೆ ಅದರಲ್ಲಿ ಯಾವುದೇ ದುರುದ್ದೇಶವಿದ್ದಿರಲಿಲ್ಲ. ಡಾ. ಶಿವರಾಜ್ ಕುಮಾರ್ ರವರು ಕನ್ನಡದ ಅಸ್ಮಿತೆ ಮೇರು ನಟ ಡಾ. ರಾಜಕುಮಾರ್ ರವರ ಪುತ್ರ. ಇತ್ತೀಚೆಗೆ ತಮಿಳುನಾಡು ಮತ್ತು ದೇಶಾದ್ಯಂತ ಭರ್ಜರಿ ಯಶಸ್ಸು ಕಂಡ ರಜನಿಕಾಂತ್ ರವರ ಜೈಲರ್ ಚಲನಚಿತ್ರದಲ್ಲಿಯೂ ಶಿವರಾಜ್ ಕುಮಾರ್ ರವರು ಮುಖ್ಯಪಾತ್ರವೊಂದರಲ್ಲಿ ನಟಿಸಿ ಜನಮೆಚ್ಚುಗೆಯನ್ನು ಗಳಿಸಿದ್ದರು. ಜೈಲರ್ ಕುರಿತಾದ ಸಮಾರಂಭದಲ್ಲಿ ಭಾಗವಹಿಸಿ ಸ್ಪಷ್ಟ ತಮಿಳಿನಲ್ಲಿಯೇ ಅಭಿಮಾನಿಗಳನ್ನುದ್ದೇಶಿಸಿ ಶಿವಣ್ಣ ಮಾತಾಡಿದ್ದರು. ಕಾರಣ ಅವರು ಹುಟ್ಟಿ ಬೆಳೆದಿದ್ದು ಬಾಲ್ಯದ ಶಿಕ್ಷಣವೆಲ್ಲ ಹಿಂದಿನ ಮದ್ರಾಸಿನಲ್ಲೇ ಆಗಿದ್ದರಿಂದ (ಆವತ್ತಿನ ಚಲನಚಿತ್ರ ಉದ್ಯಮವು ಬಹುತೇಕ ಮದ್ರಾಸ್ ಸ್ಟುಡಿಯೋಗಳನ್ನೇ ಅವಲಂಬಿಸಿತ್ತು. ಹಿಂದಿನ ಚಲನ ಚಿತ್ರಗಳನ್ನು ನೋಡಿದರೆ ಎಲ್ಲಾ ವಿವರಗಳ ಜೊತೆಗೆ ಈ ಮದ್ರಾಸ್ ಸ್ಟುಡಿಯೋಗಳ ಹೆಸರು ಚಿತ್ರದ ಆರಂಭದಲ್ಲಿ ತೋರಿಸುವುದನ್ನು ನೋಡಬಹುದು) ತಮಿಳು ಅವರಿಗೆ ’ಅನ್ಯ’ ಅಲ್ಲ. ಇಂತಹ ಶಿವರಾಜ್ ಕುಮಾರರನ್ನು ಕನ್ನಡದ ಹೆಸರಲ್ಲಿ ಕೆಣಕಿ ಕಮಲಹಾಸನ್ ರಿಗೆ ಆಗಬೇಕಾದದ್ದು ಏನೂ ಇದ್ದಿರಲಿಲ್ಲ. ಅವರು ತಾನು ನಂಬಿಕೊಂಡಿದ್ದ ಅಭಿಪ್ರಾಯವನ್ನು ಮಾತಿನೊಂದಿಗೆ ಬೆರೆಸಿ ಪ್ರೀತಿಯಿಂದಲೇ ಹೇಳಿದ್ದರೇ ವಿನಹ ಕೆಣಕುವಂತಹ ಸಂದರ್ಭ ಖಂಡಿತ  ಅದಾಗಿರಲಿಲ್ಲ.

ಸ್ವತಹ ಕಮಲಹಾಸನ್ ರಿಗೆ ಕನ್ನಡಕ್ಕಿಂತ ತಮಿಳು ಭಾಷೆಯೇ ಪ್ರಾಚೀನದ್ದೆಂಬ ಕಲ್ಪನೆ ಇದ್ದಿರಲೂ ಬಹುದು. ಬಹುತೇಕ ತಮಿಳರಿಗೆ ನಮ್ಮದು ಪ್ರಾಚೀನ ಭಾಷೆ ಮತ್ತು ನಮ್ಮತನವನ್ನು ಆದಷ್ಟು ಈತನಕ ಕಲುಷಿತವಾಗದಂತೆ ಉಳಿಸಿಕೊಂಡಿರುವ ಭಾಷೆ ಎಂಬ ಅಭಿಮಾನ ಮತ್ತು ನಂಬಿಕೆಯಿದೆ.  ಉದಾಹರಣೆಗೆ ಅರ್ಜುನ್ ಸರ್ಜಾರ ಜಂಟಲ್ ಮ್ಯಾನ್ ಚಲನ ಚಿತ್ರದ ಹೀರೋವಿನ ಹೆಸರು ಪುಗಳೇಂದಿ. ಎಂದಿರನ್ ಸಿನಿಮಾದ ಹೀರೋ ವಸೀಗರನ್.  ಇದೇ ಚಲನ ಚಿತ್ರ ಕನ್ನಡ ಅಥವಾ ಇನ್ಯಾವುದೇ ಭಾರತೀಯ ಭಾಷೆಯಲ್ಲಿ ಬಂದಿದ್ದರೆ ಅದರ ಹೀರೋ ಹೆಸರು ಉಮೇಶನೋ ರಮೇಶನೋ ಸತೀಶನೋ ಅಂತ ಇರುತ್ತಿತ್ತು. ಬಹುತೇಕ ಹಿಂದೀವಾಲಾ ಭಾಷಿಕರೂ ಸಹ ದ್ರಾವಿಡ ಭಾಷೆ ಎಂದಾಕ್ಷಣ ತಮಿಳನ್ನು ಗುರಿಯಿಟ್ಟುಕೊಂಡೇ ಮಾತನಾಡುತ್ತಾರೆ (ದಕ್ಷಿಣ ಭಾರತೀಯರನ್ನು ಹೋಲ್ ಸೇಲಾಗಿ ’ಮದ್ರಾಸಿ”ಗಳು ಎಂದು ಕರೆಯುವಂತೆ) ಅವರ ಚಲನ ಚಿತ್ರಗಳಲ್ಲಿನ ದಕ್ಷಿಣ ಭಾರತೀಯ ಪಾತ್ರ ಆಡುವ ಹಿಂದಿ “ಅಯ್ಯೊ ತುಮಕೋ.. “ ಅಂತ ಅದು ತಮಿಳು ಭಾಷಾ ಛಾಯೆಯಿಂದಲೇ ತೋರಿಸಲ್ಪಡುತ್ತದೆ. ಅಷ್ಟೇ ಅಲ್ಲದೇ ತಮಿಳು ಹೊರತು ಪಡಿಸಿ ತೆಲುಗು, ಮಲಯಾಳಂ, ನಮ್ಮ ಕನ್ನಡದಂತಹ ಇನ್ನಿತರ ದ್ರಾವಿಡ ಭಾಷಾ ಪದಬಳಕೆಯಲ್ಲಿ ನಮ್ಮ ಹಿಂದಿನವರು ಶಿಷ್ಟ, ಪರಿಪೂರ್ಣ ಅಥವಾ ಶುದ್ಧ ಎನ್ನುವ ಭ್ರಮೆಯಿಂದ ಸಂಸ್ಕೃತ ಪದಗಳ ಧಾರಾಳ ಒಳನುಸುಳುವಿಕೆಗೆ ಅವಕಾಶ ಮಾಡಿಕೊಟ್ಟದ್ದೂ ಕೂಡ ಈ ಗೊಂದಲಗಳಿಗೆ ಒಂದು ಕಾರಣ.

ಸಂಸ್ಕೃತ

ಬಿಳಿಚರ್ಮದ ಇಂಗ್ಲಿಷರು ನಮ್ಮನ್ನಾಳುವಾಗ ಮತ್ತು ಬಿಟ್ಟು ಹೋದ ಬಳಿಕವೂ ಸಹ ಹಿಂದಿ ಸಮೇತ ಭಾರತೀಯ ಭಾಷೆಗಳಲ್ಲಿ ಮಾತು ಮತ್ತು ಬರವಣಿಗೆಯ ನಡುವೆ ಇಂಗ್ಲಿಷ್ ಪದ -ವಾಕ್ಯಗಳನ್ನು ತುರುಕಿಸಿ ಶ್ರೇಷ್ಠತೆಯನ್ನು ತೋರ್ಪಡಿಸಿ ಕೊಳ್ಳುವಂತಹ ಗೀಳಿನ ರೀತಿಯಲ್ಲೇ (ಕನ್ನಡದಲ್ಲೂ ಸೂಕ್ತ ಪದಗಳಿದ್ದರೂ ಸಹ ಅರ್ಜೆಂಟು, ಸ್ಪೀಡು, ಬಿಲ್ಡಿಂಗು ಇದೀಗ ಒಳ ನುಸುಳಿಕೊಂಡು ಕನ್ನಡದ ಪದಗಳೇ ಆಗಿರುವಂತೆ) ಆಗಿನ ಮೇಲ್ಜಾತಿಯವರು, ವಿದ್ಯಾವಂತರು ದೊರೆಗಳ ಆಸ್ಥಾನದ ಪಂಡಿತೋತ್ತಮರು ಬಳಸುವ ಸಂಸ್ಕೃತದ ಪದಗಳನ್ನು ದೈನಂದಿನ ವ್ಯವಹಾರಗಳಲ್ಲಿ ಅಳವಡಿಸಿಕೊಳ್ಳುವುದೂ ಸಹ ಸಮಾಜದಲ್ಲಿ ಪ್ರತಿಷ್ಠೆ ಅಥವಾ ಮುಂದುವರೆಯುವಿಕೆಯ ಸಂಕೇತವೆಂಬಂತೆ ಇತ್ತು. ಇಲ್ಲವಾದಲ್ಲಿ ಅನಾಗರಿಕ, ಹಳೆಕಾಲದವನೆಂದು ಗುರುತಿಸಲ್ಪಡುವ ಭಯ. ಉದಾಹರಣೆಗೆ ತಮ್ಮ ಹಳೆಯ ದ್ರಾವಿಡ ಮೂಲದ ಹೆಸರುಗಳನ್ನು ಬಿಟ್ಟು ಸಾರ್ವತ್ರಿಕವಾಗಿ ನಾವು  ಬಳಸುವ ಸಂಸ್ಕೃತ ಮೂಲದ ರವಿ, ಆನಂದ, ಸರಸ್ವತಿ ಸಂಗೀತಾ ಇತ್ಯಾದಿ ಹೆಸರುಗಳು. ಊರ ಹೆಸರುಗಳಂತೂ ದ್ರಾವಿಡ ಮೂಲ ಕಳೆದು ಹೋಗಿ ಯಾವತ್ತೋ ಅಪ್ಪಟ ಸಂಸ್ಕೃತಮಯವಾಗಿವೆ. 

ಈ ರೀತಿಯಲ್ಲಿ ತಮ್ಮತನವನ್ನು ಬಿಟ್ಟುಕೊಳ್ಳದೇ ಇಂತವುಗಳಿಂದ ಕೆಲ ಮಟ್ಟಿಗಾದರೂ ಹೊರತಾಗಿ ನಿಂತ ಪ್ರತ್ಯೇಕತೆಗಳ ಕಾರಣಕ್ಕೆ ಇಂದಿಗೂ ಸಹ ಇನ್ನಿತರ ದ್ರಾವಿಡ ಭಾಷೆಗಳಿಗಿಂತ ಮೇಲ್ನೋಟಕ್ಕೆ ತಮಿಳು ಭಿನ್ನವಾಗಿಯೇ ತೋರುತ್ತದೆ. ಹಾಗು ದ್ರಾವಿಡ ಭಾಷೆಗಳಲ್ಲಿ ತಮಿಳೇ ಪುರಾತನ ಹಾಗು ಮೂಲವೆಂದೆಣಿಸಿ ಅದೇ ದೊಡ್ಡಣ್ಣ  ಅಥವಾ ಅದೇ ತಾಯಿ ಎಂಬಂತಹ ಭಾವವನ್ನು  ಮತ್ತಷ್ಟು ಗಟ್ಟಿಗೊಳಿಸಿದೆ.

ತಮಿಳು ಭಾಷೆ

ಭಾಷೆ ಎನ್ನುವುದೊಂದು ಸಂವಹನ ಪ್ರಕ್ರಿಯೆಗೆ ಸಂಬಂಧ ಪಟ್ಟಂತಹ ವಿಚಾರ. ಪ್ರಾಣಿ ವರ್ಗಕ್ಕೆ ಸೇರಿದ ಮಾನವ ಲಕ್ಷಾಂತರ ವರ್ಷಗಳ ಹಿಂದೆ ಕಾಡುಮೇಡು ಅಲೆದು ಸ್ಥಿರವಾಗಿ ನೆಲೆ ನಿಲ್ಲದೇ ಅಲೆಮಾರಿ ಬದುಕು ನಡೆಸುತ್ತಿದ್ದಾಗ ಆಹಾರ ವಸತಿ ಶತ್ರು ಭಯ ಇತ್ಯಾದಿಗಳನ್ನು ಬಿಟ್ಟರೆ ಬೇರೆ ಜರೂರತ್ತುಗಳ ಗಮನಗಳು ಅಷ್ಟಾಗಿ ಇದ್ದಿರದ ಕಾರಣ ತನ್ನವರ ಅಥವಾ ಸಮುದಾಯದೊಳಗಿನ ಸಂವಹನ ಪ್ರಕ್ರಿಯೆಯಲ್ಲಿ ಕೆಲ ಮಿತಿಗಳಿದ್ದವು. ಆದರೆ ಆತ ನೆಲೆನಿಂತು ನಾಗರೀಕತೆಯ ಹಂತಕ್ಕೆ ತಲುಪಿದ ಮೇಲೆ ಮಾನವ ತನ್ನದಲ್ಲದ ವಿಚಾರಗಳಿಗೂ ಸ್ಪಂದಿಸುವ ಅವಶ್ಯಗಳಿರುವ ಕಾರಣ ಸಂವಹನಕ್ಕಾಗಿ ತಾನು ಹೊರಡಿಸ ಬಹುದಾದ ಪ್ರಕೃತಿದತ್ತ ಶಬ್ದಗಳ ಮೂಲಕ ಆಯಾ ಪರಿಸರ ಅವಶ್ಯಗಳಿಗನುಸಾರವಾಗಿ ಭಾಷೆ ಎಂಬುದನ್ನು ಹುಟ್ಟು ಹಾಕಿದ ಬಳಿಕ ಅವಶ್ಯಕತೆಗಳು ಮತ್ತು ಅನುಕೂಲತೆಗಳು ಹೆಚ್ಚಿದಂತೆಲ್ಲ ಬಳಸುವಂತಹ ಭಾಷೆಯೂ ಕೂಡ ತನ್ನದೇ ರೀತಿಯಲ್ಲಿ ವಿಕಸನಗೊಳ್ಳುತ್ತಾ ಸಾಗಿತು. ಇದೇ ಭಾಷೆಯ ಹುಟ್ಟಿನ ಮೂಲವೇ ಹೊರತು ಸನಾತನ ಕನ್ನಡಕ ಹೊತ್ತ ಭೈರಪ್ಪನವರು ಹೇಳುವಂತೆ ಯಾವುದೋ ಅನ್ಯಭಾಷೆ ಮತ್ತೊಂದು ಭಾಷೆಯನ್ನು ಹುಟ್ಟು ಹಾಕಿದೆ ಎಂಬುದೆಲ್ಲ ಅರ್ಥವಿಲ್ಲದ  ದೊಡ್ಡಸ್ತಿಕೆ ತೋರೋ ಮಾತಷ್ಟೆ.

ಕಾಗೆಗಳು ಹೊರಡಿಸುವ ಶಬ್ದ ನಮಗೆ ಕೇಳಿಸುವುದು ಕಾ.. ಕಾ.. ಎಂದಷ್ಟೇ. ಆದರೆ ಈ ಕಾ.. ಕಾ.. ಎಂಬ ಶಬ್ದದ ಏರಿಳಿತಗಳಲ್ಲೇ ಇಲ್ಲಿ ಆಹಾರವಿದೆ, ಇಲ್ಲಿ ನಮ್ಮವರು ಸತ್ತಿದ್ದಾರೆ ಬನ್ನಿ, ಪ್ರೀತಿ, ಭಯ, ಎಚ್ಚರಿಕೆ ಎಲ್ಲವನ್ನೂ ನೀಡುವ ಸಂವಹನ ಪ್ರಕ್ರಿಯೆ ಇದೆ. ಸಂಶೋಧಕರು, ಹುಲಿಬಂದಾಗ ಮಂಗಗಳು ತನ್ನವರಿಗೆ ಎಚ್ಚರಿಕೆ ಹೇಳುವ ಧ್ವನಿಯನ್ನು  ನಂತರ ಹುಲಿ ಹೋದ ಬಳಿಕ ತೊಂದರೆ ಇಲ್ಲ ಎನ್ನುವ ಧ್ವನಿಯನ್ನು ಪ್ರತ್ಯೇಕವಾಗಿ ಧ್ವನಿ ಮುದ್ರಣ ಮಾಡಿ ಮತ್ತೊಂದೆಡೆ ಪ್ಲೇ ಮಾಡಿದಾಗ ಮಂಗಗಳು ಆ ಧ್ವನಿಗೆ ತಕ್ಕಂತೆ ಮರ ಏರುವುದು ಮತ್ತು ಇಳಿಯುವುದನ್ನು ಮಾಡಿದವಂತೆ. ನಮ್ಮದೇ ಮನೆಯಲ್ಲಿ ಆಹಾರ ಸಿಕ್ಕಿದಾಗ ಸಾಕಿದ ಕೋಳಿ ತನ್ನ ಮರಿಗಳನ್ನು ಕರೆಯುವುದು, ಕಾಗೆ ಗಿಡುಗಗಳ ಅಪಾಯ ಎದುರಾದಾಗ ತನ್ನದೇ ಭಾಷೆಯಲ್ಲಿ ಎಚ್ಚರಿಸುವುದನ್ನು ಗಮನಿಸಿಯೇ ಇರುತ್ತೇವೆ.

ಆನೆಗಳು ಎಲ್ಲೆಲ್ಲೋ ಹೋಗಿ ಮೇಯುತ್ತಿದ್ದರೆ ನೀರು ಕುಡಿಯಲು ಒಂದಾಗಿ ಜೊತೆ ಸೇರುತ್ತವಂತೆ. ಇದಕ್ಕೆ ಅವುಗಳ ಶಬ್ದಾತೀತ ಧ್ವನಿಯ ಸಂವಹನವೇ ಕಾರಣವಂತೆ. ಆಫ್ರಿಕಾದ ಕಾಡುಗಳಲ್ಲಿ ಹನಿ ಗೈಡ್ ಎನ್ನುವ ಹಕ್ಕಿಯಿದೆ ಅಲ್ಲಿನ ಆದಿವಾಸಿಗಳು ಒಂದು ವಿಶಿಷ್ಟ ಧ್ವನಿ ಮಾಡಿ ಕರೆದರೆ ಅವು ಬರುತ್ತವೆ. ಬಂದು ಜೇನುಗೂಡುಗಳಿದ್ದ ಜಾಗವನ್ನು ತೋರಿಸುತ್ತವೆ. ಜೇನು ಮಾನವನಿಗಾದರೆ ಆ ಗೂಡಿನಲ್ಲಿರುವ ಹುಳದ ಮೊಟ್ಟೆ ಮರಿ ಮತ್ತು ಮೇಣ ಆ ಹಕ್ಕಿಗೆ. ಅಂದ ಹಾಗೆ, ಇದು ಟ್ರೈನಿಂಗ್ ಕೊಟ್ಟು ಸಾಕಿದ ಹಕ್ಕಿಗಳಲ್ಲ. ಎಷ್ಟೋ ಕಾಲದಿಂದ ಪರಂಪರಾಗತವಾಗಿ ಬೆಳೆದು ಬಂದ ಮಾನವ ಮತ್ತು ಹಕ್ಕಿಯ ವ್ಯವಹಾರ. ಈ ವ್ಯವಹಾರಕ್ಕೂ ಸಹ ಅದರದೇ ಆದ ಭಾಷೆ ಇದೆ.  ಪ್ರಾಣಿಗಳು ಅವುಗಳ ಸೀಮಿತ ಧ್ವನಿಯ ಮಿತಿಯಲ್ಲೇ ತಮ್ಮದೇ ಭಾಷೆಗಳ ಮೂಲಕ ಪರಿಣಾಮಕಾರಿಯಾಗಿ ವ್ಯವಹರಿಸುವಾಗ ಐವತ್ತಕ್ಕೂ ಮೀರಿ ಶಬ್ದ ಹೊರಡಿಸುವ ಮಾನವನ ಭಾಷೆಯನ್ನು ಮತ್ಯಾವನೋ ದೊಡ್ಡಸ್ತಿಕೆಯವನು ಕೊಟ್ಟ ಬಳುವಳಿ ಎನ್ನುವುದು ಶತ ಮೂರ್ಖತನವಷ್ಟೆ.

ವೈವಿಧ್ಯಮಯ ಲಿಪಿಗಳನ್ನು ಬದಿಗಿಟ್ಟು ಹಿಂದೀ ಸಮೇತ ಭಾರತದ ಎಲ್ಲಾ ಭಾಷೆಗಳನ್ನು ಒಟ್ಟು ಹಾಕಿ ಗಮನಿಸಿದರೆ ದ್ರಾವಿಡ ವರ್ಗದ ಭಾಷೆಗಳಿಗಿಂತ ಉತ್ತರ ಭಾರತದ ಸಂಸ್ಕೃತ ಮೂಲದ ಭಾಷೆಗಳು ತೀರಾ ಭಿನ್ನವೆನ್ನುವುದು ತಿಳಿಯುವುದು ಕಷ್ಟವಲ್ಲ. ದ್ರಾವಿಡ ಸಮೂಹದ ತುಳು, ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿನ ಪದಗಳು ಒಂದಕ್ಕೊಂದು ನೇರ ಸಂಬಂಧವಿರುವುದನ್ನು ಸ್ಪಷ್ಟವಾಗಿ ಇಲ್ಲಿ ಕಾಣುತ್ತೇವೆ. ಉದಾಹರಣೆಗೆ ಮನೆಗೆ ಸಂಬಂಧಿಸಿದ ’ಇಲ್ಲು” ಎಂಬ ಪದ. ಈ ಪದ ಮೇಲ್ಕಾಣಿಸಿದ ನಾಲ್ಕೂ ದ್ರಾವಿಡ ಭಾಷೆಗಳಲ್ಲಿ ಇವೆ. ತೆಲುಗು, ತುಳು, ತಮಿಳುಗಳಲ್ಲಿ ಇಂದಿಗೂ ಈ ಪದ ಚಾಲ್ತಿಯಲ್ಲಿದ್ದರೆ ಕನ್ನಡದಲ್ಲಿ ಕಾಲನ ಹೊಡೆತಕ್ಕೆ (ಕನ್ನಡದ ಕೂಳು ಈಗ ಸಂಸ್ಕೃತದ ಅನ್ನ ಆದಂತೆ. ೬೦ ರ ದಶಕದಲ್ಲಿ ಕುಂದಾಪುರ ಪರಿಸರದ ಕನ್ನಡದಲ್ಲಿ ಈ ಕೂಳು ಎನ್ನುವ ಪದ ಸಾಮಾನ್ಯವಿತ್ತು. ಇಂದು ತಮಾಷೆಗಾಗಿ ಬಳಸಲ್ಪಡುತ್ತಿದೆ)  ಇದೀಗ ಮನೆ ಎಂಬ ಪದವೇ ಹೆಚ್ಚು ಪ್ರಚಲಿತ.  ಆದರೂ ಹಿತ್ತಿಲು (ಪಿಂತಿಲ್ಲು ಮನೆಯ ಹಿಂಭಾಗ) ಬಾಗಿಲು (ಬಾಯಿ ಇಲ್ಲು ಮನೆಯ ಬಾಯಂತಿರುವ ಭಾಗ) ರೂಪದಲ್ಲಿ ಅಥವಾ ಹಳೆಗನ್ನಡದಲ್ಲಿ ಈ ಇಲ್ಲನ್ನು ಇಂದೂ ಗಮನಿಸಬಹುದಾಗಿದೆ. ಇದೊಂದು ಸಣ್ಣ ಉದಾಹರಣೆಯಷ್ಟೇ  ಹೊರತು ಇಂತಹ ಸಾಕಷ್ಟು ದ್ರಾವಿಡ ಭಾಷೆಗಳ ಸಹೋದರತ್ವದ ಕುರಿತ ನಿದರ್ಶನಗಳು ಲೆಕ್ಕವಿಲ್ಲದಷ್ಟಿವೆ. ಹೀಗೆ ಕಮಲ್ ದ್ರಾವಿಡ ಭಾಷೆಗಳ ಸಹೋದರತ್ವದ ಬಗ್ಗೆ ಹೇಳುವ ಬದಲು ತಾಯಿ ಎಂಬ ಅಹಮ್ಮಿನ ಮಾತನ್ನಾಡಿ ಇಲ್ಲಿ ಪೇಚಿಗೀಡಾಗಿದ್ದರಷ್ಟೆ.

ಒಟ್ಟಾರೆಯಾಗಿ, ತಮಿಳು ಮತ್ತು ಕನ್ನಡಕ್ಕೆ ಸಂಬಂಧಿಸಿ ಹೇಳುವುದಾದಲ್ಲಿ ಐತಿಹಾಸಿಕ ದಾಖಲೆಗಳ ಮತ್ತು ಭಾಷಾ ತಜ್ಞರ ಶೋಧನೆಗಳ  ಪ್ರಕಾರ  ಒಂದು ನಿರ್ದಿಷ್ಟ ಪ್ರಾಚೀನ ಸಾಮುದಾಯಿಕ ಭಾಷಾ ಪದ್ಧತಿಯೊಂದು ಕ್ರಮೇಣ ಅವುಗಳಲ್ಲೇ ಟಿಸಿಲೊಡೆದು ಹಲವು ಪ್ರಬೇಧಗಳಾಗಿ ಇಲ್ಲಿ ಸಹೋದರ ಭಾಷೆಗಳೆನಿಸಿವೆಯೇ ವಿನಃ (ಕರ್ನಾಟಕದ ಪ್ರತಿ ಐವತ್ತು ಕೀಮೀ ಗೆ ಕನ್ನಡದಲ್ಲೇ ನಾವು ವೈವಿಧ್ಯಗಳನ್ನು ಕಾಣಬಹುದು. ಈ ಪ್ರಾದೇಶಿಕ ಬೇಧ ತಮಿಳು, ಮಲಯಾಳಮ್, ತೆಲುಗಿನಲ್ಲೂ ಇವೆ) ಒಂದೇ ಭಾಷೆಯಿಂದ ಉತ್ಪತ್ತಿಗೊಂಡಂತವಲ್ಲ. ಅದರಲ್ಲೂ ಸಂಸ್ಕೃತವೆಂಬ ಪರಕೀಯ ಭಾಷೆ ಈ ದ್ರಾವಿಡ ಕುಟುಂಬ ಜಗಳದಲ್ಲಿ ಮೂಗು ತೂರಿಸಿ ನಾನೇ ನಿಮ್ಮೆಲ್ಲರ ನಿಜವಾದ ತಾಯಿ ಎಂದು ತಿಣುಕುತ್ತಿರುವುದು ಮಾತ್ರ ನಿಜಕ್ಕೂ ಹಾಸ್ಯಾಸ್ಪದ.    

ಶಂಕರ್ ಸೂರ್ನಳ್ಳಿ

ಇದನ್ನೂ ಓದಿ-ತೆರೆಯ ಮುಂದೆ ಕಮಲ್ ಹಾಸನ್ ಪ್ರಕರಣ, ತೆರೆಯ ಹಿಂದೆ ???

More articles

Latest article