ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ; ಜಖಂಗೊಂಡ ಕಾರು

Most read

ನವದೆಹಲಿ: ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಇಂದು ಶನಿವಾರ ಉತ್ತರಾಖಂಡದ ಸಿರ್ಸಿ ಹೆಲಿಪ್ಯಾಡ್‌ ನಿಂದ ಟೇಕ್ ಆಫ್ ಆಗಿದ್ದು, ನಂತರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ಪೈಲಟ್‌ ರುದ್ರಪ್ರಯಾಗ ಜಿಲ್ಲೆಯ ಹೆದ್ದಾರಿಯಲ್ಲೇ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಹೆಲಿಕಾಪ್ಟರ್ ನ ಒಂದು ಭಾಗ ಕೆಳಗೆ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ತಗುಲಿದ್ದು, ಕಾರು ಜಖಂಗೊಂಡಿದೆ. ಪೈಲಟ್ ಸೇರಿದಂತೆ ಹೆಲಿಕಾಪ್ಟರ್ ನಲ್ಲಿದ್ದ ಎಲ್ಲಾ ಆರು ಮಂದಿ ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಚಾರ್ ಧಾಮ್ ಮಾರ್ಗದಲ್ಲಿ ಹೆಲಿಕಾಪ್ಟರ್ ಅಪಘಾತಗಳು ಹೆಚ್ಚುತ್ತಿವೆ. ಮೇ 8 ರಂದು ಉತ್ತರಕಾಶಿಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಸೇರಿದಂತೆ 6 ಯಾತ್ರಿಕರು ಸಾವನ್ನಪ್ಪಿದ್ದರು.

ಕ್ರಿಸ್ಟಲ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಗೆ ಸೇರಿದ ಈ ಹೆಲಿಕಾಪ್ಟರ್ ರುದ್ರಪ್ರಯಾಗ ಜಿಲ್ಲೆಯ ಬಡಾಸು ಪ್ರದೇಶದ ಹೆಲಿಪ್ಯಾಡ್‌ನಿಂದ ಮಧ್ಯಾಹ್ನ 12.52 ಕ್ಕೆ ಹೊರಟಿತ್ತು. ಆದರೆ ಟೇಕ್ ಆಫ್ಆದ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಹೆದ್ದಾರಿಯಲ್ಲಿಯೇ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಹೀಗಾಗಿ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಹೆಲಿಕಾಪ್ಟರ್ ನ ತುದಿ ತಗುಲಿದೆ. ಇದರಿಂದ ಕಾರಿನ ಮುಂಬಾಗ ನಜ್ಜುಗುಜ್ಜಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article