ಕಾಶಿ ವಿಶ್ವನಾಥ ದೇಗುಲದಲ್ಲಿ 21 ನಕಲಿ ಅರ್ಚಕರ ಬಂಧನ

Most read

ವಾರಾಣಸಿ: ಉತ್ತರಪ್ರದೇಶದ ಸುಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದಲ್ಲಿ ಅರ್ಚಕರಂತೆ ನಟಿಸಿ ದೇಗುಲದ ಆಚರಣೆಗಳನ್ನು ಸರಾಗವಾಗಿ ನಡೆಸಿಕೊಡುವುದಾಗಿ ನಂಬಿಸಿ ಭಕ್ತರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದ 21 ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ದೇವಸ್ಥಾನದ ಆವರಣದಲ್ಲಿ ನಕಲಿ ಅರ್ಚಕರು ಭಕ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಹಾಗೂ ಪೂಜೆ, ದರ್ಶನಕ್ಕೆ ವ್ಯವಸ್ಥೆ ಮಾಡಿಸಿ ಕೊಡುವ ಹೆಸರಿನಲ್ಲಿ ಭಕ್ತರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕೆಲವು ದಿನಗಳಿಂದ ದೂರಗಳು ಬರುತ್ತಿದ್ದವು. ಈ ಹಿನ್ನೆಲೆ ದಶಾಶ್ವಮೇಧ ಮತ್ತು ಚೌಕ ಪೊಲೀಸ್‌ ಠಾಣೆಯ ಪೊಲೀಸರನ್ನೊಳಗೊಂಡ ಜಂಟಿ ತಂಡ ರಚನೆ ಮಾಡಲಾಗಿತ್ತು. ತನಿಖೆ ನಡೆಸಿದ ಸಂದರ್ಭದಲ್ಲಿ ದಶಾಶ್ವಮೇಧ ಪೊಲೀಸರಿಗೆ 15 ಮಂದಿ ಹಾಗೂ ಚೌಕ ಠಾಣಾ ಪೊಲೀಸರಿಗೆ 6 ಜನ ನಕಲಿ ಅರ್ಚಕರು ಸಿಕ್ಕಿಬಿದ್ದಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಪ್ರಕ್ರಿಯೆ ನಡೆಸಲಾಗುತ್ತಿದೆ. ದೇಗುಲದ ಆವರಣದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಇನ್ನಷ್ಟು ನಕಲಿ ಅರ್ಚಕರನ್ನು ಬಂಧಿಸಲಾಗುವುದು ಎಂದು ಸ್ಥಳೀಯ ಎಸಿಪಿ ತಿಳಿಸಿದ್ದಾರೆ.

More articles

Latest article