ಬೆಂಗಳೂರು: ಭಾಷೆ ಭಾಷೆಗಳ ನಡುವೆ ವೈಮನಸ್ಸು ಮೂಡುತ್ತಿದ್ದು ಚಿತ್ರನಟ ಕಮಲ್ ಹಾಸನ್ ಕೂಡಲೇ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಬೇಕು ಎಂದು ಖ್ಯಾತ ನಿರ್ದೇಶಕ, ಉಪನ್ಯಾಸಕ ನಾಗತಿಹಳ್ಳಿ ಚಂದ್ರಶೇಖರ್ ಆಗ್ರಹಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಅವರು ಕಮಲ್ ಹಾಸನ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಮತ್ತು ತುಳು ಸೋದರ ಸಂಬಂಧ ಹೊಂದಿರುವ ಭಾಷೆಗಳು. ಯಾವುದೇ ಭಾಷೆಯಿಂದ ಮತ್ತೊಂದು ಭಾಷೆ ಹುಟ್ಟಿಲ್ಲ. ಭಾಷೆಯ ಹುಟ್ಟು ಎನ್ನುವುದು ವಿಜ್ಞಾನ. ಅಂತಹ ವಿಜ್ಞಾನದ ಅರಿವು ಇಲ್ಲದಿದ್ದರೆ ಪ್ರತಿಕ್ರಿಯೆ ನೀಡಬಾರದು. ಗೊತ್ತಿಲ್ಲದಿರುವುದನ್ನು ಗೊತ್ತಿಲ್ಲ ಎನ್ನುವುದು ಗೌರವ ಮೂಡಿಸುತ್ತದೆ. ಕನ್ನಡ ವರನಟ ರಾಜಕುಮಾರ್ ಅವರು ಇದೇ ರೀತಿ ನಡೆದುಕೊಳ್ಳುತ್ತಿದ್ದರು ಎಂದರು.
ಒಂದು ಭಾಷೆಯಿಂದ ಮತ್ತೊಂದು ಭಾಷೆ ಹುಟ್ಟಿದೆ ಎನ್ನವುದೂ ಅವಮಾನ ಮಾಡಿದ ಹಾಗೆ. ಕಮಲ್ ಅವರೇ ನಿಮ್ಮ ಭಾಷೆಯ ಹೆಚ್ಚುಗಾರಿಕೆಯನ್ನು ನೀವು ಹೇಳಿಕೊಳ್ಳುವುದು ತಪ್ಪಲ್ಲ. ಹಾಗೆಂದು ಮತ್ತೊಂದು ಮತ್ತೊಂದು ಭಾಷೆಯನ್ನು ಹೀಗೆಳಯುವುದು ತಪ್ಪಾಗುತ್ತದೆ. ನೀವು ಗೊತ್ತಿದ್ದೋ ಗೊತ್ತಿಲ್ಲದೆಯೋ ಅಥವಾ ತುಟಿ ಮೀರಿ ಮಾತನಾಡಿರಬಹುದು. ಆದ್ದರಿಂದ ಆಗಿರುವ ಲೋಪವನ್ನು ನೀವೇ ಸರಿಪಡಿಸಿ ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಿ ಎಂದು ನಾಗತಿಹಳ್ಳಿ ಸಲಹೆ ನೀಡಿದರು.
ಕನ್ನಡ ಭಾಷೆಗೆ 3000 ವರ್ಷಗಳ ಇತಿಹಾಸವಿದೆ. ಗ್ರೀಕ್ ನಾಟಕದಲ್ಲಿ ಕನ್ನಡದ ಸಾಲುಗಳನ್ನು ಕಾಣಬಹುದಾಗಿದೆ. ಇತ್ತೀಚೆಗೆ ಬೂಕರ್ ಬಹುಮಾನ ಕೂಡ ಲಭಿಸಿದೆ ಎಂದರು.
ಸೋನು ನಿಗಂ ಇಂತಹುದೇ ಹೇಳಿಕೆ ನೀಡಿ ಕ್ಷಮೆ ಯಾಚಿಸಿದ್ದಾರೆ. ಅವರು ಕ್ಷಮೆ ಯಾಚಿಸಲು ಕನ್ನಡ ಹೋರಾಟಗಾರರೇ ಕಾರಣ. ನಾವು ಈಗಾಗಲೇ ಅಲ್ಪಸಂಖ್ಯಾತರಾಗಿದ್ದೇವೆ. ಕನ್ನಡ ಪರ ಹೋರಾಟಗಾರರು ಬೀದಿಗಳಲ್ಲಿ ಹೋರಾಟ ಮಾಡಿದ್ದರಿಂದಲೇ ಕನ್ನಡ ಉಳಿದಿದೆ ಎಂದರೆ ತಪ್ಪೇನಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.