ಬೆಳಗಾವಿ: ಕಳಸಾ–ಬಂಡೂರಿ ನಾಲೆ ತಿರುವು ಯೋಜನೆಯನ್ನು ವಿರೋಧಿಸಿ ಬೆಳಗಾವಿಯಲ್ಲಿ ಇಂದು ಪರಿಸರವಾದಿಗಳು ಬೃಹತ್ ಪ್ರತಿಭಟನೆ ನಡೆಸಿದರು. ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಿಂದ ರಾಣಿ ಚನ್ನಮ್ಮನ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ನೂರಾರು ಜನರು ಭಾಗವಹಿಸಿದ್ದರು.
ಪ್ರತಿಭಟನಾಕಾರರು ನಮ್ಮ ನೀರು ನಮ್ಮ ಹಕ್ಕು. ಮಹದಾಯಿ ನದಿ ತಿರುವು ಯೋಜನೆ ನಮಗೆ ಬೇಡವೇ ಬೇಡ ಎಂದು ಘೋಷಣೆ ಕೂಗಿದರು. ನಾವು ಪರಿಸರಕ್ಕಾಗಿ ಹೋರಾಡುತ್ತಿದ್ದೇವೆಯೇ ಹೊರತು, ಗೋವಾ ಸರ್ಕಾರದ ಏಜೆಂಟರಾಗಿ ಅಲ್ಲ ಎಂದು ಒತ್ತಿ ಹೇಳಿದರು.
ಖಾನಾಪುರ ತಾಲ್ಲೂಕಿನ ಭೀಮಗಡ ಅಭಯಾರಣ್ಯವು ಸಾಮಾನ್ಯ ಅರಣ್ಯವಲ್ಲ. ಇದು ಜಾಗತಿಕವಾಗಿ ಗುರುತಿಸಲ್ಪಟ್ಟ ತಾಣ. ಹುಲಿ, ಕರಡಿ, ಇರತೆ ಮತ್ತಿತರ ವನ್ಯಜೀವಿಗಳಿಗೆ ಇದು ನೆಲೆಯಾಗಿದೆ. ಈ ಭಾಗಕ್ಕೆ ಮಾರಕವಾಗಿರುವ ಕಳಸಾ–ಬಂಡೂರಿ ನಾಲೆ ತಿರುವು ಯೋಜನೆ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.
ಪರಿಸರವಾದ ಸುರೇಶ ಹೆಬ್ಳಿಕರ್ ಮಾತನಾಡಿ, ಪಶ್ಚಿಮಘಟ್ಟ ಪ್ರದೇಶ ದಕ್ಷಿಣ ಭಾರತಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅಲ್ಲಿರುವ ಅನೇಕ ಪ್ರಭೇದಗಳ ಮರಗಳು, ವನ್ಯಜೀವಿಗಳಿಂದ ನಮಗೆ ಅನುಕೂಲವಾಗಿದೆ. ಹೀಗಿರುವಾಗ ನಾಲೆ ತಿರುವು ಯೋಜನೆ ಅನುಷ್ಠಾನಗೊಳಿಸಿದರೆ ಪಶ್ಚಿಮಘಟ್ಟಕ್ಕೆ ಧಕ್ಕೆ ಬರಲಿದ್ದು, ಮಳೆ ಪ್ರಮಾಣವೂ ಕುಸಿಯಲಿದೆ. ಇದು ಕೃಷಿ ರಂಗಕ್ಕೆ ಪೆಟ್ಟು ಬೀಳಲಿದ್ದು, ನಾವೆಲ್ಲ ಆಹಾರಕ್ಕಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬರಲಿದೆ. ಹಾಗಾಗಿ ಈ ಯೋಜನೆ ಅನುಷ್ಠಾನಗೊಳಿಸುವುದು ಬೇಡ ಎಂದರು.
ಪರಿಸರವಾದಿ ದಿಲೀಪ ಕಾಮತ್ ಮಾತನಾಡಿ ಮಲಪ್ರಭಾ ನದಿಗೆ ನಿರ್ಮಿಸಿರುವ ನವಿಲುತೀರ್ಥ ಜಲಾಶಯ ಕಳೆದ 40 ವರ್ಷಗಳಲ್ಲಿ ನಾಲ್ಕೇ ಬಾರಿ ತುಂಬಿದೆ. ಖಾನಾಪುರ ತಾಲ್ಲೂಕಿನಲ್ಲಿ ಅರಣ್ಯ ನಾಶಪಡಿಸಿದ ಕಾರಣ, ಮಳೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ. ಪಶ್ಚಿಮಘಟ್ಟದಲ್ಲಿ ನದಿಗಳೆಲ್ಲ ಹುಟ್ಟುತ್ತವೆ. ಅಂಥ ಕಡೆಗಳಲ್ಲೆಲ್ಲ ಪರಿಸರಕ್ಕೆ ಮಾರಕವಾದ ಯೋಜನೆ ಅನುಷ್ಠಾನವಾದರೆ, ನದಿಗಳು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಪರಿಸರ ಉಳಿಯಬೇಕೆಂಬ ಒಂದೇ ಕಾರಣಕ್ಕೆ ಈ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ ಎಂದರು. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಆಸಿಫ್ ಸೇಠ್ ಅವರೂ, ಪರಿಸರವಾದಿಗಳ ಬೇಡಿಕೆ ಆಲಿಸಿದರು. ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ಕೊಟ್ಟರು.