ಶರಣ ಪರಂಪರೆಯ ಮೂಲತತ್ವಗಳನ್ನೆಲ್ಲಾ ಒಳಗೊಂಡ ಕಡಕೋಳರ ತತ್ವಪದ ಸರ್ವವ್ಯಾಪಿ ಭಗವಂತ ಎಂಬ ತತ್ತ್ವವನ್ನು ವಿಸ್ತರಿಸುತ್ತಲೇ ಭಕ್ತಿಗೆ ಜಾತಿ, ಲಿಂಗ, ವಯಸ್ಸು, ವೃತ್ತಿ, ಧನದೊಂದಿಗೆ ಯಾವುದೇ ಸಂಬಂಧವಿಲ್ಲ. ದೇವರು ಕೇವಲ ಬ್ರಾಹ್ಮಣರಿಗೆ ಅಥವಾ ಶಾಸ್ತ್ರಜ್ಞರಿಗೆ ಮಾತ್ರವಲ್ಲ, ಚೋರ, ಬೀಕರ, ಜೋಗಿ, ಯೋಗಿ- ಎಲ್ಲರಿಗೂ ಸಮಾನ ಎಂಬುದನ್ನು ಸಾರುತ್ತದೆ. ಈ ಎಲ್ಲವನ್ನೂ ‘ಬಾಯಲಿ ಕಲಿತೋದಿದವರು’ ಅಳವಡಿಸಿಕೊಳ್ಳುವರೆ? – ಡಾ. ರವಿ ಎಂ ಸಿದ್ಲಿಪುರ.
ಭಾರತೀಯ ಸಮಾಜವು ಬಹುತ್ವದ ನೆಲೆಗಟ್ಟಿನ ಮೇಲೆ ನಿಂತಿದೆ. ಇಲ್ಲಿ ಭಾಷೆ, ಧರ್ಮ, ಜಾತಿ, ಸಂಸ್ಕೃತಿ ಹೀಗೆ ಅನೇಕ ವೈವಿಧ್ಯತೆಗಳು ಹಾಸುಹೊಕ್ಕಾಗಿದ್ದು, ಪ್ರತಿಯೊಂದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ವೈವಿಧ್ಯತೆಯೇ ಭಾರತದ ಸೌಂದರ್ಯ ಮತ್ತು ಶಕ್ತಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಧರ್ಮ, ಜಾತಿ ಮತ್ತು ಭಾಷೆಗಳ ಹೆಸರಿನಲ್ಲಿ ಹೆಚ್ಚಾಗಿರುವ ದ್ವೇಷ ಮತ್ತು ಹಿಂಸಾಚಾರಗಳು ಸಮಾಜದಲ್ಲಿ ಬಿರುಕುಗಳನ್ನು ಸೃಷ್ಟಿಸುತ್ತಿವೆ. ಹಾಗೆಯೇ ಸಾಮರಸ್ಯ, ಸಹಬಾಳ್ವೆ, ಧರ್ಮನಿರಪೇಕ್ಷತೆ ಮತ್ತು ಭ್ರಾತೃತ್ವ- ಈ ಪದಗಳು ಭಾಷಣದ ಸರಕುಗಳಾಗಿ ಉಳಿಯುತ್ತಿವೆ!
ಕನ್ನಡ ಸಾಹಿತ್ಯವು ಭಾರತದ ಸಾಮಾಜಿಕ-ಸಾಂಸ್ಕೃತಿಕ ಜಗತ್ತನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳುತ್ತಾ ಬಂದಿದೆ. ಅನೇಕ ಬರಹಗಾರರು ತಮ್ಮ ಕೃತಿಗಳ ಮೂಲಕ ಕೋಮುಸೌಹಾರ್ದತೆಯ ಮಹತ್ವವನ್ನು ಎತ್ತಿ ಹಿಡಿದಿದ್ದಾರೆ. ಇಂಥವರ ಸಾಹಿತ್ಯವು ಸಮಾಜಕ್ಕೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲೂ ಕನ್ನಡ ಕಾವ್ಯ ಬಹುತ್ವ, ಕೋಮು ಸೌಹಾರ್ದತೆ ಮತ್ತು ಭಿನ್ನಾಭಿಪ್ರಾಯಗಳ ಕುರಿತಾದ ಚರ್ಚೆಗಳಿಗೆ ಸದಾ ಮುಂಚೂಣಿಯಲ್ಲಿದ್ದು ಪ್ರತಿಕ್ರಿಯಿಸುತ್ತಿದೆ. ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗದಲ್ಲಿ ‘ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ, ಧರ್ಮಮುಮಂ’ ಎಂಬುದರಿಂದ ಆರಂಭವಾದ ಈ ಪ್ರತಿಕ್ರಿಯೆ, ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಲೇ ಕೋಮುಸೌಹಾರ್ದತೆ ಮತ್ತು ಬಹುತ್ವದ ಮಹತ್ವವನ್ನು ಅರ್ಥಮಾಡಿಕೊಳ್ಳುವ ಮೂಲಕ, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು, ಸೌಹಾರ್ದಯುತ ಸಮಾಜವನ್ನು ನಿರ್ಮಿಸಲೆತ್ನಿಸುವುದು ಇಂದಿನ ಆದ್ಯತೆಯಾಗಿದೆ ಎಂಬ ಸಾರವನ್ನು ಒಳಗೊಂಡಿವೆ. ನಾವೆಲ್ಲರೂ ‘ಸೈರಿಸುವ’ ತಾಳ್ಮೆಯನ್ನೇ ಕಳೆದುಕೊಂಡಿರುವಾಗ, ಕನ್ನಡ ಕಾವ್ಯಗಳು ಧರ್ಮ, ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಬಂಧಗಳ ಸಂಕೀರ್ಣತೆಗಳನ್ನು ಮಾನವೀಯತೆಯ, ಏಕತೆಯ ಲೆನ್ಸ್ ಮೂಲಕ ನೋಡುವಂತಹ ಸಂವೇದನೆಗಳನ್ನು ರೂಪಿಸಬಲ್ಲವಾಗಿವೆ. ಭಾರತದ ಧರ್ಮನಿರಪೇಕ್ಷತೆ ಮತ್ತು ಭ್ರಾತೃತ್ವದ ತತ್ವಗಳಿಗೆ ಕಾವ್ಯಾತ್ಮಕ ಆಧಾರಗಳಾಗಿವೆ.
ಇಂತಹ ಆಧಾರಗಳಲ್ಲಿ ತತ್ವಪದಕಾರ ಕಡಕೋಳ ಮಡಿವಾಳಪ್ಪನ ‘ಶರಣಾರ್ಥಿ’ ತತ್ವಪದ, ಚೆನ್ನೂರು ಜಲಾಲ್ ಸಾಬರ ‘ಸಬ್ ಕಹತೆ’ ತತ್ವಪದ, ಸವಿತಾ ನಾಗಭೂಷಣರ ‘ಮತ್ತೇನೂ ಅಲ್ಲ’, ಚ. ಸರ್ವಮಂಗಳರ ‘ಹಿಂಗೊಂದು ಕಥೆ’, ಮುಡ್ನಾಕೂಡು ಚಿನ್ನಸ್ವಾಮಿಯವರ ‘ನಾನೊಂದು ಮರವಾಗಿದ್ದರೆ’ ಮತ್ತು ರಾಜು ಹೆಗಡೆಯವರ ‘ಇಂಡಿಯಾ ಮತ್ತು ಈರುಳ್ಳಿ,’ ಕವಿತೆಗಳನ್ನು ಹೆಸರಿಸಿಕೊಳ್ಳಬಹುದು. ಇವುಗಳಿಂದ ನಮ್ಮ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯನ್ನು ಕಾವ್ಯದ ರೂಪಕಗಳು, ನಿರೂಪಣೆಗಳು ಹೇಗೆ ಪ್ರತಿಬಿಂಬಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು. ಕೋಮು ಸೌಹಾರ್ದತೆ, ವೈವಿಧ್ಯತೆ ಮತ್ತು ಸಾಮಾಜಿಕ-ರಾಜಕೀಯ ವಿಭಜನೆಯ ಪ್ರಮುಖ ಅಂಶಗಳನ್ನು ಪರಿಶೀಲಿಸುವುದು. ಜಾತಿ, ಧರ್ಮ, ಭಾಷೆ ಮತ್ತು ಲಿಂಗದ ಆಧಾರದ ಮೇಲೆ ಸಮಾಜದಲ್ಲಿ ತಾರತಮ್ಯವನ್ನು ಸೃಷ್ಟಿಸುವ ಶಕ್ತಿಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬಹುದಾಗಿದೆ.
ಕಡಕೋಳ ಮಡಿವಾಳಪ್ಪನವರು ‘ಎಲ್ಲ ಸ್ವರೂಪ ವಲ್ಲಭನೆಂಬುದು ಬಲ್ಲೆನಲ್ಲದೆನ್ನ ಗೆರಡಿಲ್ಲ’ ಎನ್ನುವ ಮೂಲಕ ಎಲ್ಲವೂ ಆ ದೈವ ಸ್ವರೂಪವೇ ಎಂದು ಒಪ್ಪಿಕೊಳ್ಳುವ ವಿಶಾಲ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ. ‘ಹುಲ್ಲು ಕಲ್ಲು ಹೌದಲ್ಲಿ ಇಲ್ಲಿ’ ಎಂಬಲ್ಲಿ ದೇವಾಲಯ-ಕೇಂದ್ರಿತ ಭಕ್ತಿಯನ್ನು ತಿರಸ್ಕರಿಸಿ, ಪ್ರಕೃತಿ ಮತ್ತು ದೈನಂದಿನ ಜೀವನದಲ್ಲಿ ದಿವ್ಯತೆಯನ್ನು ಹುಡುಕುವ ಸಂದೇಶ ನೀಡುವ ಮೂಲಕ ದ್ವೇಷವನ್ನು ತೊರೆದು ಎಲ್ಲವನ್ನೂ ಸಮಾನವಾಗಿ ಕಾಣುವ ದೃಷ್ಟಿಯನ್ನು ಹೊಂದಲು ಕರೆ ನೀಡಿದ್ದಾರೆ.
ಈ ತತ್ವಪದದಲ್ಲಿ ದೇವತೆಗಳು, ಋಷಿಗಳು, ಪ್ರಾಣಿಗಳು, ಸಮಾಜದ ಹೊರಗಿನವರು ಮತ್ತು ಅಮೂರ್ತ ಅಂಶಗಳು ಎಲ್ಲವನ್ನೂ ಪಟ್ಟಿಮಾಡಿ, ದೈವಿಕತೆಯ ಸಾರ್ವತ್ರಿಕತೆಯನ್ನು ತೋರಿಸಲಾಗಿದೆ. ಯಾವುದೋ ಒಂದಕ್ಕೆ ಸೀಮಿತವಾಗದ ‘ಶರಣಾರ್ಥಿ’ಯ ಸಂಸ್ಕೃತಿ ವ್ಯಕ್ತವಾಗಿದೆ. ‘ಮರಣರಿಗೆ’ ಮತ್ತು ‘ರೋಗಿಗೆ’ ಶರಣಾಗುವ ಮೂಲಕ, ಪವಿತ್ರ-ಅಪವಿತ್ರ, ಉತ್ತಮ-ಕೀಳು ಎಂಬ ದ್ವಂದ್ವಗಳನ್ನು ತಿರಸ್ಕರಿಸಿ, ಎಲ್ಲ ಅನುಭವಗಳಲ್ಲೂ ಶಿವನಿದ್ದಾನೆ ಎಂದು ಸಾರುತ್ತದೆ. ಸಮಾಜದ ವಿವಿಧ ಸ್ತರಗಳಲ್ಲಿರುವ ಜನರಿಗೆ ಶರಣಾರ್ಥಿ ಹೇಳುವ ಮೂಲಕ, ಎಲ್ಲ ಬಗೆಯ ವ್ಯಕ್ತಿಗಳನ್ನೂ ಗೌರವಿಸುವ ಮತ್ತು ಒಪ್ಪಿಕೊಳ್ಳುವ ಮನೋಭಾವ ವ್ಯಕ್ತವಾಗಿದೆ. ಹೀಗೆ ಭಾರತೀಯ ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ನಾನಾ ವಿಭಜನೆಗಳನ್ನು ತಿರಸ್ಕರಿಸಿ ಸರ್ವಸಮಾನತೆಯ ಸಂದೇಶ ನೀಡುತ್ತದೆ.
ಸಮಾಜದಲ್ಲಿ ಒಳ್ಳೆಯವರು, ಕೆಟ್ಟವರು, ಬಡವರು, ಶ್ರೀಮಂತರು ಹೀಗೆ ಎಲ್ಲರೂ ಇರುತ್ತಾರೆ. ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರೀತಿಸುವ ಸಾವಿರಾರು ವರ್ಷಗಳ ಸಾರವನ್ನು ಇದು ಎತ್ತಿ ಹಿಡಿಯುತ್ತದೆ. ವಿಭಿನ್ನ ವೃತ್ತಿಗಳನ್ನು ಮಾಡುವವರನ್ನು ಹೆಸರಿಸುವ ಮೂಲಕ ಸಮಾಜದಲ್ಲಿ ಯಾವುದೇ ಕೆಲಸವನ್ನು ಕೀಳಾಗಿ ಕಾಣಬಾರದು ಎನ್ನುವ ಸಂದೇಶವನ್ನು ನೀಡುತ್ತದೆ. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಮಹತ್ವವಿದೆ ಮತ್ತು ಎಲ್ಲರೂ ಸಮಾಜಕ್ಕೆ ಅವಶ್ಯಕ ಎನ್ನುವುದು ಸೂಚಿತವಾಗಿದೆ.
ಹಲವು ನಾಮ, ಹಲವು ರೂಪ, ಹಲವು ಕ್ರಿಯೆ ಎಂದು ಹೇಳುವ ಮೂಲಕ ದೇವರು ಹಲವು ಹೆಸರು ಮತ್ತು ರೂಪಗಳಲ್ಲಿ ಇರಬಹುದು ಎಂಬುದನ್ನು ತಿಳಿಸಿದ್ದಾರೆ. ಭಾರತದಲ್ಲಿ ವಿವಿಧ ಧರ್ಮಗಳು ಮತ್ತು ಪಂಥಗಳಿವೆ. ಪ್ರತಿಯೊಂದು ಧರ್ಮವು ದೇವರನ್ನು ತನ್ನದೇ ಆದ ರೀತಿಯಲ್ಲಿ ಆರಾಧಿಸುತ್ತದೆ. ಈ ವೈವಿಧ್ಯತೆಯನ್ನು ಗೌರವಿಸಬೇಕಾಗುವುದು ಪ್ರತಿಯೊಬ್ಬರ ಕರ್ತವ್ಯ ಎನ್ನುತ್ತದೆ. ಜಾಣ, ಮುಗ್ಧ, ಛಲಗಾರ ಹೀಗೆ ವಿಭಿನ್ನ ಗುಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಒಪ್ಪಿಕೊಳ್ಳುವ ಮೂಲಕ, ಸಮಾಜದಲ್ಲಿ ಎಲ್ಲ ಬಗೆಯ ವ್ಯಕ್ತಿತ್ವಗಳಿಗೂ ಸ್ಥಾನವಿದೆ ಎಂಬುದನ್ನು ತೋರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುತ್ತಾನೆ ಮತ್ತು ಆತನನ್ನು ಆತನಂತೆಯೇ ಸ್ವೀಕರಿಸಬೇಕು ಎನ್ನುವುದು ಇದರ ಆಶಯವಾಗಿದೆ. ಕೊನೆಯಲ್ಲಿ, ಸರ್ವ ಶರಣರು, ಸರ್ವ ಹರಣರು, ಸರ್ವ ವರಣರು, ಸರ್ವ ಭರಣರು, ಸರ್ವ ಮರಣರು, ಸರ್ವ ಜೀವರು, ಸರ್ವ ಭಾವರು, ಸರ್ವ ದೇವರು ಹೀಗೆ ಎಲ್ಲವನ್ನೂ ಒಳಗೊಂಡ ದೃಷ್ಟಿಯನ್ನು ನೀಡುವ ಮೂಲಕ, ಇಡೀ ಜಗತ್ತೇ ಆ ದೈವದ ಒಂದು ಭಾಗವೆನ್ನುತ್ತದೆ.
ತತ್ವಪದದಲ್ಲಿ ‘ಶರಣಾರ್ಥಿ’(ಶರಣು ಎಂಬುದು ನಾನು) ಎಂಬ ಪದಪುನರಾವರ್ತನೆ ಎಲ್ಲ ರೂಪಗಳಿಗೂ ಶರಣಾಗತಿಯ ಸಾರವನ್ನು ತಿಳಿಸುತ್ತದೆ. ಇಲ್ಲಿ ಎಲ್ಲವೂ ಆ ಪರಮಾತ್ಮನ ಸ್ವರೂಪವೇ ಎಂದು ಹೇಳುತ್ತಾ, ಜಗತ್ತಿನಲ್ಲಿರುವ ಪ್ರತಿಯೊಂದು ಅಂಶಕ್ಕೂ ಶರಣಾಗತಿಯನ್ನು ವ್ಯಕ್ತಪಡಿಸುತ್ತಾ ಅದ್ವೈತ ತತ್ವವನ್ನು ಪ್ರತಿಪಾದಿಸುತ್ತದೆ. ಶರಣ ಪರಂಪರೆಯ ಮೂಲತತ್ವಗಳನ್ನೆಲ್ಲಾ ಒಳಗೊಂಡ ಕಡಕೋಳರ ತತ್ವಪದ ಸಮಾಜದಲ್ಲಿ ಹೇರಲಾಗಿದ್ದ ಜಾತಿ, ವರ್ಣ, ಧಾರ್ಮಿಕ ಗಡಿಗಳನ್ನು ವಿರೋಧಿಸಿ, ಎಲ್ಲರೂ ಪರಮಾತ್ಮನಿಗೆ ಸಮಾನ ಎಂಬ ಶರಣ ಸಂಪ್ರದಾಯದ ಕಲ್ಪನೆಯನ್ನು ಒತ್ತಿಹೇಳುತ್ತದೆ. ಸರ್ವವ್ಯಾಪಿ ಭಗವಂತ ಎಂಬ ತತ್ತ್ವವನ್ನು ವಿಸ್ತರಿಸುತ್ತಲೇ ಭಕ್ತಿಗೆ ಜಾತಿ, ಲಿಂಗ, ವಯಸ್ಸು, ವೃತ್ತಿ, ಧನದೊಂದಿಗೆ ಯಾವುದೇ ಸಂಬಂಧವಿಲ್ಲ. ದೇವರು ಕೇವಲ ಬ್ರಾಹ್ಮಣರಿಗೆ ಅಥವಾ ಶಾಸ್ತ್ರಜ್ಞರಿಗೆ ಮಾತ್ರವಲ್ಲ, ಚೋರ, ಬೀಕರ, ಜೋಗಿ, ಯೋಗಿ- ಎಲ್ಲರಿಗೂ ಸಮಾನ ಎಂಬುದನ್ನು ಸಾರುತ್ತದೆ. ಈ ಎಲ್ಲವನ್ನೂ ‘ಬಾಯಲಿ ಕಲಿತೋದಿದವರು’ ಅಳವಡಿಸಿಕೊಳ್ಳುವರೆ?
ಇವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ’ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ಎಂಬ ವಿಷಯ ಕುರಿತು ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ವಿವಿಧ ಮಾಸ ಪತ್ರಿಕೆಗಳಲ್ಲಿ ಸಂಶೋಧನಾ ಲೇಖನಗಳು ಪ್ರಕಟಗೊಂಡಿವೆ. ’ಪರ್ಯಾಯ’ ಎಂಬ ವಿಮರ್ಶಾ ಲೇಖನಗಳ ಸಂಕಲನ, ’ಪಿ. ಲಂಕೇಶ’ಎಂಬ ಕಿರು ಹೊತ್ತಿಗೆ, ‘ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಹಳಗನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರ.