ಗೂಗಿಯಂತಹ ಮಹಾನ್ ಚಿಂತಕ ನಮಗೆ ಪ್ರೇರಣೆ ನೀಡಬೇಕಾದ್ದು ಕನ್ನಡಿಗರನ್ನು ಕುಯ್ಯುತ್ತಿರುವ ಈ ಇಬ್ಬಾಯಿಯ ವಸಾಹತುಶಾಹಿಯ ದಬ್ಬಾಳಿಕೆಯಿಂದ ಕನ್ನಡದ ಕಂದಮ್ಮಗಳನ್ನು ಬಿಡುಗಡೆಗೊಳಿಸಲು ಎಂಬುದನ್ನು ನಾಡಿನ ವಿದ್ವಾಂಸರು, ಬುದ್ದಿಜೀವಿಗಳು, ಹೋರಾಟಗಾರರು ಸರಿಯಾಗಿ ಮನವರಿಕೆ ಮಾಡಿಕೊಂಡ ದಿನ ಏನಾದರೂ ಆಶಾವಾದ ಮೂಡಬಹುದು– ಹರ್ಷಕುಮಾರ್ ಕುಗ್ವೆ.
ಇಂಗ್ಲಿಷ್, ಹಿಂದಿ, ಸಂಸ್ಕೃತ ಯಾವುದೇ ಇರಲಿ, ʼವಸಾಹತುಶಾಹಿʼಯ ವಾಹಕವಾಗಿ ಬರುವ ಭಾಷೆಗಳಿಗೆ ಒಮ್ಮೆ ತಲೆಬಾಗಿಸಿದರೆ ಸಾಕು ಅಂತಿಮವಾಗಿ ನಮ್ಮನ್ನು ನಮ್ಮ ಬೇರುಗಳಿಂದಲೇ ಪರಕೀಯಗೊಳಿಸಿ, ನಮ್ಮ ನಡೆನುಡಿ ಸಂಸ್ಕೃತಿಗಳ ಕುರಿತು ಕೀಳರಿಮೆ ಸೃಷ್ಟಿಸಿ ನಮ್ಮ ಮೇಲೆ ಸಾಂಸ್ಕೃತಿಕ ಗುಲಾಮಗಿರಿ ಹೇರತೊಡಗುತ್ತವೆ. ಭಾರತದಲ್ಲಿ ಇಂಗ್ಲಿಷ್ ಮೂಲಕ ತನ್ನ ವಸಾಹತು ದಬ್ಬಾಳಿಕೆಯನ್ನು ಸುಗಮಗೊಳಿಸಿಕೊಂಡ ಯೂರೋಪಿಯನ್ ವಸಾಹತುಶಾಹಿ ನೆಲೆಗೊಳ್ಳುವ ಎರಡು ಸಾವಿರ ವರ್ಷಗಳ ಹಿಂದೆಯೇ ಇಂಡೋ ಆರ್ಯನ್ ಭಾಷೆಗಳ ಮೂಲಕ ʼವೈದಿಕ ವಸಾಹತುಶಾಹಿʼ ನೆಲೆಗೊಂಡಿತ್ತು. ʼವಸಾಹತುಕರಣʼ ಎಂದಾಗ ಕೇವಲ ಇಂಗ್ಲಿಷ್ ವಸಾಹತುಶಾಹಿ ಕುರಿತು ಪುಂಕಾನುಪುಂಕವಾಗಿ ಮಾತಾಡುತ್ತಾ, ಸಂಸ್ಕೃತವೆಂಬ ಕೊಳೆರೋಗದಿಂದ ಕನ್ನಡ ಸಾಹಿತ್ಯದ ಸತ್ವವನ್ನೇ ನಿಸ್ಸಾರಗೊಳಿಸಿರುವ ಸಂಸ್ಕೃತವು ಕನ್ನಡ ಮತ್ತು ಕನ್ನಡಿಗರ ಮೇಲೆ ನಡೆಸಿದ ಭಾಷಾ ದಬ್ಬಾಳಿಕೆ ಮತ್ತು ಅದರ ಹಿಂದಿರುವ ವೈದಿಕ ವಸಾಹತುಶಾಹಿಯ ಹುನ್ನಾರ ಹೆಚ್ಚು ಚರ್ಚೆಗೊಳ್ಳದ ರೀತಿಯಲ್ಲಿ ದಿಕ್ಕು ತಪ್ಪಿಸುವುದು ಈ ಕಾಲದ ಸಾಂಸ್ಕೃತಿಕ ರಾಜಕಾರಣ.
ʼಆಫ್ರಿಕದಲ್ಲಿ ಬುಲೆಟ್ಟು ಬಂದೂಕುಗಳ ಹಿಂದೆಯೇ ಕಪ್ಪುಹಲಗೆ ಮತ್ತು ಬೈಬಲ್ ಗಳು ಬಂದವುʼ ಎಂದು ಗೂಗಿ ಹೇಳುತ್ತಾರೆ. ಭಾರತದ ಪರಿಸರದಲ್ಲಿ ಕತ್ತಿ, ಕುದುರೆ, ರಥಗಳ ಹಿಂದೆಯೇ ವೇದ, ಪುರಾಣಗಳು ಬಂದವು, ಉಪನಿಷತ್ತು, ಭಗವದ್ಗೀತೆ, ರಾಮಾಯಣ, ಮಹಾಭಾರತ ಬಂದವು. ಇವೆಲ್ಲವೂ ಚಾತುರ್ವರ್ಣ ಹೇರಿ ದಾಸ್ಯದ ಸಂಕೋಲೆಯನ್ನು ದೈಹಿಕವಾಗಿ ಮಾನಸಿಕವಾಗಿ ಶೂದ್ರರಿಗೆ ತೊಡಿಸಿದವು. ರಾಜಾಶ್ರಯದಲ್ಲಿ ಚನ್ನಾಗಿ ಕೊಬ್ಬಿದ ವೈದಿಕ ವಸಾಹತುಶಾಹಿ ಹೇರಿದ ಈ ಗುಲಾಮಗಿರಿಯಲ್ಲಿ ಶೂದ್ರ- ಪಂಚಮರು ಬೆಂದು ಬಸವಳಿದು, ಕರ್ಮ ಸಿದ್ದಾಂತದಲ್ಲಿ ಸುಟ್ಟು ಹೋಗಿದ್ದ ವೇಳೆಯಲ್ಲಿ ಬಹಳ ತಡವಾಗಿ ಯೂರೋಪಿಯನ್ ವಸಾಹತುಶಾಹಿ ಬಂತು. Of course, ಅದು ಬೈಬಲ್, ಬ್ಲಾಕ್ ಬೋರ್ಡ್ ಹಿಡಿದು ಬಂದಿತಲ್ಲದೆ, ಕೊನೆಯಲ್ಲಿ ಬಂದೂಕಿನ ಸಿಡಿಮದ್ದುಗಳನ್ನೂ ಪ್ರಯೋಗಿಸಿತು. ಆದರೆ, ಜಗತ್ತಿನ ಎಲ್ಲೂ ನಡೆಯದ ಪ್ರಹಸನ ಭಾರತದಲ್ಲಿ ನಡೆಯಿತು. ಅದೇನೆಂದರೆ ಈ ಬ್ರಿಟಿಷ್ ವಸಾಹತುಶಾಹಿ, ನಮ್ಮನ್ನು ವೈದಿಕ ವಸಾಹತುಶಾಹಿಯಿಂದ ಬಿಡುಗಡೆಗೊಳಿಸುತ್ತಿದೆ ಎಂಬ ಕಣ್ಕಟ್ಟು.
ಅದುವರೆಗೆ ವೈದಿಕ ವಸಾಹತುಶಾಹಿ ʼಜ್ಞಾನʼ ಎಂದರೆ ಇದು, ʼಅಕ್ಷರ ಜ್ಞಾನ ಎಂದರೆʼ ಇದು ಎಂದು ಯಾವುದನ್ನು ಕರೆದಿತ್ತೋ ಅದನ್ನು ಅಪ್ಪಿತಪ್ಪಿಯೂ ಶೂದ್ರರು ಗಳಿಸಬಾರದು ಎಂಬ ನಿಷೇಧ ಒಡ್ಡಿತ್ತಲ್ಲ, ಈ ನಿಷೇಧವನ್ನು ಶೂದ್ರರಿಗೂ ಸಡಿಲಿಸಿದ್ದು ಬ್ರಿಟಿಷ್ ವಸಾಹತುಶಾಹಿ. ಯಾಕೆಂದರೆ, ಬ್ರಿಟಿಷ್ ವಸಾಹತುಶಾಹಿಗೆ ತಾನು ತೆರೆದ ಕಲೊನಿಯಲ್ ಅಂಗಡಿಗೆ ಪಾಲುದಾರರು ಮತ್ತು ಗ್ರಾಹಕರು ಬೇಕಾಗಿತ್ತು. ಇದಕ್ಕಾಗಿ, ಅದು ತನ್ನ ಹಿಡಿತವನ್ನು ಸಾಧಿಸಲು ಬ್ರಾಹ್ಮಣರಿಂದ ಬಿಡುಗಡೆಗೊಳ್ಳಲು ನಮ್ಮ ಅಂಗಡಿಗೆ ಬನ್ನಿʼ ಎಂಬ ಬೋರ್ಡು ಹಾಕಿಕೊಂಡು ವ್ಯಾಪಾರ ಕುದುರಿಸುತ್ತಿತ್ತು. ಎರಡು ಸಾವಿರ ವರ್ಷಗಳ ಕಾಲ ಕತ್ತಲ ಕೂಪದಲ್ಲಿ ಬೆಳಕೇ ಕಾಣದಂತಿದ್ದ ಶೂದ್ರರಿಗೆ ಹೀಗೆ ಪಶ್ಚಿಮದ ʼಜ್ಞಾನʼದ ಬಾಗಿಲಿನಿ ಕಿಟಕಿಯನ್ನು ತೆಗೆದಿದ್ದು ʼಇದೇ ನಿಜವಾದ ಬಿಡುಗಡೆʼ ಎಂಬ ಬ್ರಮೆ ಮೂಡಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಆದರೆ ನಾವು ವೈದಿಕ ವಸಾಹತುಶಾಹಿಯ ಬೆಂಕಿಯಲ್ಲಿ ಸುಟ್ಟು ಸುಟ್ಟು ಕರಕಲಾಗಿದ್ದವರಿಗೆ ಬಾಣಲೆಯಲ್ಲಿ ಸುಟ್ಟರೆ ಇದ್ದಿಲಾಗುವುದಿಲ್ಲವಲ್ಲ ಎಂಬ ಆಸೆಯೇ ಸಾಕಾಯಿತು ಇಂಗ್ಲಿಷನ್ನು ಅಪ್ಪಿಕೊಳ್ಳಲು.
ಸ್ವಾತಂತ್ರ್ಯಾನಂತರ ಭಾರತದಲ್ಲಿ ಭಾರತವೆಂಬ ಒಕ್ಕೂಟದಲ್ಲಿ ಕನ್ನಡದಂತಹ, ತುಳು, ತೆಲುಗು ಇತ್ಯಾದಿ ಭಾಷೆಗಳ ಮಕ್ಕಳು ಇಂಗ್ಲಿಷ್ ಮತ್ತು ಸಂಸ್ಕೃತ ಪದಗಳ ಹೊರತಾಗಿ ತಮ್ಮದೇ ತಾಯ್ನುಡಿಯಲ್ಲಿ ಸರಿಯಾದ ಪ್ರಾಥಮಿಕ ಶಿಕ್ಷಣದ ಪಠ್ಯಗಳನ್ನೂ ಓದಲಾರದ ಪರಿಸ್ಥಿತಿ ಉಂಟಾಗಿರುವುದೇ ಈ ʼವಸಾಹತುಶಾಹಿʼಯ ಪರಿಣಾಮಕ್ಕೆ ಹಿಡಿದ ಕನ್ನಡಿ. ಇಂದು ವಿಜ್ಞಾನ, ಗಣಿತ, ಭೂಗೋಳ ಶಾಸ್ತ್ರ, ಪರಿಸರ ವಿಜ್ಞಾನ ಇತ್ಯಾದಿ ಯಾವುದೇ ಕಲಿಕೆಗಳು ಕನ್ನಡದಲ್ಲಿ ಇಲ್ಲವೇ ಇಲ್ಲ. ಕೇವಲ 5 ರಿಂದ 9 ನೇ ತರಗತಿಯವರೆಗಿನ ಕನ್ನಡ ಮೀಡಿಯಂ ಪಠ್ಯಪುಸ್ತಕಗಳಲ್ಲಿ 800 ಕ್ಕೂ ಹೆಚ್ಚು ಸಂಸ್ಕೃತ- ಇಂಗ್ಲಿಷ್ ಪದಗಳನ್ನು ವಿದ್ಯಾರ್ಥಿಗಳು ಅರ್ಥವಾಗದಿದ್ದರೂ ಉರುಹೊಡೆದು ಕಲಿಯಬೇಕಾಗಿದೆ. ಇದಲ್ಲವೇ ವಸಾಹತುಶಾಗಿ ಉಂಟುಮಾಡುವ ಪರಾಧೀನತೆ ಮತ್ತು ಪರಕೀಯತೆ? ಕನ್ನಡವನ್ನೇ ಗಟ್ಟಿಗಳಿಸಿಕೊಳ್ಳಬೇಕಾಗಿದ್ದ ನಮ್ಮ ರಾಜ್ಯದ ಸರ್ಕಾರ ಒಂದು ಕಡೆ ಕನ್ನಡ ಮೀಡಿಯಂ ಶಾಲೆಗಳನ್ನೇ ಮುಚ್ಚುತ್ತಾ ಇಂಗ್ಲಿಷ್ ಕಾನ್ವೆಂಟುಗಳನ್ನು ಸ್ಥಾಪಿಸತೊಡಗಿದೆ. ಇಂಗ್ಲಿಷ್ ಒಂದರ ಕಾರಣಕ್ಕೆ ಪ್ರತಿವರ್ಷ ಜಾಬ್ ಮಾರ್ಕೆಟ್ ನಿಂದ ಹೊರಕ್ಕುಳಿಯುತ್ತಿರುವ ಕನ್ನಡದ ಕಂದಮ್ಮಗಳು ಲೆಕ್ಕವಿಲ್ಲ. ಇದಕ್ಕೆ ಪರಿಹಾರ ಕನ್ನಡದ ಜಾಬ್ ಮಾರ್ಕೆಟ್ ಸೃಷ್ಟಿಸುವುದರ ಬದಲು, ಬಹುಪಾಲು ಕನ್ನಡಿಗರಿಗೆ ನಿಲುಕದ ಇಂಗ್ಲಿಷಿನ ಸಮವಸ್ತ್ರಕ್ಕೇ ಕನ್ನಡದ ಕಂದಮ್ಮಗಳ ಗಾತ್ರ ಹೊಂದಿಸುವ ಇರಾದೆಯಲ್ಲಿ ಆಳುವವರಿದ್ದಾರೆ. ಇದರೊಂದಿಗೆ ಹಿಂದಿಯೆಂಬ ಮುಸುಕು ಹೊದ್ದ ಸಂಸ್ಕೃತ ಮತ್ತೆ ಮತ್ತೆ ಕನ್ನಡಿಗರನ್ನು ಕುಟುಕುತ್ತಲೇ ಇರುತ್ತದೆ. ಸಂಸ್ಕೃತದ ದೆಸೆಯಿಂದ ಕನ್ನಡವನ್ನೇ ಕೈಬಿಡುವ ವಿದ್ಯಾರ್ಥಿಗಳ ಸಂಖ್ಯೆಯೂ ಲೆಕ್ಕವಿಲ್ಲ.
ಅತ್ತ ದರಿ ಇತ್ತ ಪುಲಿ ಎಂಬಂತೆ ಇಂಗ್ಲಿಷ್- ಸಂಸ್ಕೃತಗಳ ನಡುವೆ ಕನ್ನಡ ನುಡಿ ಸೊರಗುತ್ತಿರುವುದು ಯಾರಿಗೂ ಕಾಣುತ್ತಿಲ್ಲ. ಕನ್ನಡದ ಉಳಿವು ಕೇವಲ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ದೂರದೃಷ್ಟಿಯಾಗಲೀ, ಭಾಷಾ ಯೋಜನೆಯ ಯಾವುದೇ ಇಚ್ಚಾಶಕ್ತಿಯಾಗಲೀ ಇದ್ದಂತೆ ಕಾಣುವುದಿಲ್ಲ. ಕನ್ನಡ ಸಂಸ್ಕೃತಿ ಎಂದರೆ ಬರೀ ಪ್ರಶಸ್ತಿ ಪ್ರದಾನದ ಕೆಲಸವಾಗಿದೆ. ಪ್ರತಿವರ್ಷವೂ ಲಕ್ಷಾಂತರ ಮಕ್ಕಳು, ಪೋಷಕರು ಕನ್ನಡವನ್ನೇ ಕೈಬಿಡುತ್ತಿರುವಾಗ ಮುಂದೆ ಕನ್ನಡ ಏನಾದರೆ ಏನು ನಮಗೆ ಬರಬೇಕಾದ್ದು ಬಂದರೆ ಸಾಕು ಎಂಬ ಸಂತೃಪ್ತಿ ನಮಗೆ.
ಗೂಗಿಯಂತಹ ಮಹಾನ್ ಚಿಂತಕ ನಮಗೆ ಪ್ರೇರಣೆ ನೀಡಬೇಕಾದ್ದು ಕನ್ನಡಿಗರನ್ನು ಕುಯ್ಯುತ್ತಿರುವ ಈ ಇಬ್ಬಾಯಿಯ ವಸಾಹತುಶಾಹಿಯ ದಬ್ಬಾಳಿಕೆಯಿಂದ ಕನ್ನಡದ ಕಂದಮ್ಮಗಳನ್ನು ಬಿಡುಗಡೆಗೊಳಿಸಲು ಎಂಬುದನ್ನು ನಾಡಿನ ವಿದ್ವಾಂಸರು, ಬುದ್ದಿಜೀವಿಗಳು, ಹೋರಾಟಗಾರರು ಸರಿಯಾಗಿ ಮನವರಿಕೆ ಮಾಡಿಕೊಂಡ ದಿನ ಏನಾದರೂ ಆಶಾವಾದ ಮೂಡಬಹುದು.
ಹರ್ಷಕುಮಾರ್ ಕುಗ್ವೆ
ಇದನ್ನೂ ಓದಿ-ಕನ್ನಡಮ್ಮನಿಗೆ ಯಾರೂ ಅಮ್ಮ ಮಗಳಿಲ್ಲ