ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ನಿವಾಸದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾದ ಆರೋಪ ಕುರಿತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿಯು ವರ್ಮಾ ಅವರ ಮೇಲಿನ ಆರೋಪಗಳು ಸತ್ಯ ಎಂದು ತಿಳಿಸಿದೆ.
ವರದಿಯಲ್ಲಿ ಇರುವ ಅಂಶಗಳನ್ನು ಉಲ್ಲೇಖಿಸಿ, ನ್ಯಾಯಮೂರ್ತಿ ಸ್ಥಾನದಿಂದ ಕೆಳಗಿಳಿಯುವಂತೆ ವರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಸಂಗತಿ ಖಚಿತವಾಗಿಲ್ಲ. ಸಹಜ ನ್ಯಾಯದ ತತ್ವವನ್ನು ಪಾಲಿಸಿರುವ ಸಿಜೆಐ, ವರದಿಯ ಪ್ರತಿಯನ್ನು ನ್ಯಾಯಮೂರ್ತಿ ವರ್ಮಾ ಅವರಿಗೆ ತಲುಪಿಸಿ ಪ್ರತಿಕ್ರಿಯೆ ಕೊಡುವಂತೆ ತಿಳಿಸಿದ್ದಾರೆ.
ಮೂವರು ಸದಸ್ಯರು ಇರುವ ಸಮಿತಿಯು ತನ್ನ ವರದಿಯನ್ನು ಸಿಜೆಐ ಅವರಿಗೆ ಇತ್ತೀಚೆಗೆ ಸಲ್ಲಿಸಿದೆ. ಸಾಕ್ಷ್ಯಗಳನ್ನು ಪರಿಶೀಲಿಸಿರುವ ಸಮಿತಿಯು, 50ಕ್ಕೂ ಹೆಚ್ಚು ಮಂದಿಯಿಂದ ಹೇಳಿಕೆ ಪಡೆದುಕೊಂಡಿದೆ. ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರ ಮತ್ತು ದೆಹಲಿ ಅಗ್ನಿಶಾಮಕ ದಳದ ಮುಖ್ಯಸ್ಥರ ಹೇಳಿಕೆಗಳನ್ನೂ ಸಮಿತಿ ದಾಖಲಿಸಿದೆ.
ವರ್ಮಾ ಅವರ ನಿವಾಸದಲ್ಲಿ ಮಾರ್ಚ್ 14ರ ರಾತ್ರಿ 11.35ರ ವೇಳೆಗೆ ಬೆಂಕಿ ಕಾಣಿಸಿಕೊಂಡಾಗ ಅಲ್ಲಿಗೆ ಮೊದಲು ಧಾವಿಸಿದ್ದವರಲ್ಲಿ ಈ ಇಬ್ಬರೂ ಸೇರಿದ್ದಾರೆ. ಆ ಸಂದರ್ಭದಲ್ಲಿ ವರ್ಮಾ ಅವರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಆಗಿದ್ದರು.
ಬೆಂಕಿ ಕಾಣಿಸಿಕೊಂಡಾಗ ವರ್ಮಾ ಅವರ ಅಧಿಕೃತ ನಿವಾಸದ ಕೊಠಡಿಯೊಂದರಲ್ಲಿ ಭಾರಿ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾಗಿದ್ದವು ಎಂಬ ಆರೋಪವನ್ನು ಖಚಿತಪಡಿಸುವ ಸ್ಪಷ್ಟ ಸಾಕ್ಷ್ಯಗಳು ಸಮಿತಿಗೆ ದೊರೆತಿವೆ ಎಂದು ಮೂಲಗಳು ತಿಳಿಸಿವೆ. ಆದರೆ ವರ್ಮಾ ಅವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
ಸಿಜೆಐ ಖನ್ನಾ ಅವರು ವರದಿಯಲ್ಲಿರುವ ಅಂಶಗಳನ್ನು ಕುರಿತು ಸುಪ್ರೀಂಕೋರ್ಟ್ ಕೊಲಿಜಿಯಂ ಸದಸ್ಯರ ಜತೆ ಚರ್ಚೆ ನಡೆಸಿದ್ದಾರೆ. ನಿವೃತ್ತಿಗೂ ಮುನ್ನ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಖನ್ನಾ ಅವರು ಮೇ 13 ರಂದು ನಿವೃತಿ ಹೊಂದುತ್ತಿದ್ದಾರೆ.