ಬೆಂಗಳೂರು: ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯು ಕಾನೂನುಬಾಹಿರವಾಗಿದ್ದು, ಅಪಾಯಕಾರಿಯಾಗಿದೆ. ಇದು ಪ್ರಾದೇಶಿಕ ಶಾಂತಿಗೆ ಧಕ್ಕೆ ತರುವುದಲ್ಲದೇ ಭಾರತದ ಹಿತಾಸಕ್ತಿಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಲೇಖನವೊಂದನ್ನು ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.
ನಾಗರಿಕರ ಜೀವಕ್ಕೆ ಹಾನಿಯಾದಾಗ, ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ, ರಾಜತಾಂತ್ರಿಕತೆಯನ್ನು ತಿರಸ್ಕರಿಸಿದಾಗ ಭಾರತವು ಮೌನವಾಗಿರಲು ಸಾಧ್ಯವಿಲ್ಲ ಎಂಬ ಸೋನಿಯಾ ಗಾಂಧಿಯವರ ಅಭಿಪ್ರಾಯವು ಸರಿಯಿದೆ ಎಂದಿದ್ದಾರೆ.
ಕಾಶ್ಮೀರ ಸೇರಿದಂತೆ ಹಲವು ಕಠಿಣ ಪರಿಸ್ಥಿತಿಗಳಲ್ಲಿ ಇರಾನ್ ಭಾರತದ ಬೆಂಬಲಕ್ಕೆ ನಿಂತಿದ್ದರೂ ಇಂದು ನಾವು ಮೌನವಾಗಿದ್ದೇವೆ. ಮೊದಲು ಗಾಜಾ, ಈಗ ಇರಾನ್… ಶಾಂತಿ ಮತ್ತು ಸಮತೋಲನವನ್ನು ಪ್ರತಿಪಾದಿಸುವ ನಮ್ಮ ವಿದೇಶಾಂಗ ನೀತಿಯು ಇಂದು ಹಳಿತಪ್ಪಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಭಾರತ ದನಿ ಎತ್ತಬೇಕು. ನೈತಿಕ ಸ್ಪಷ್ಟತೆಗಾಗಿ ಮಾತ್ರವಲ್ಲ, ಮಧ್ಯಪ್ರಾಚ್ಯದಲ್ಲಿ ನಮ್ಮ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮಾತನಾಡಬೇಕು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.