ಬೇಕರಿಗೊಂದು  ಜಾತಿ ಇದೆಯೇ?

Most read

ಭಾರತೀಯ ಸಮಾಜದಲ್ಲಿ  ಒಬ್ಬ ವ್ಯಕ್ತಿಯ ಬೆಳವಣಿಗೆ, ಗೌರವ, ಸಾಮಾಜಿಕ  ಸ್ಥಾನಮಾನ, ಪ್ರಗತಿ  ಎಲ್ಲವೂ ಜಾತಿಯಲ್ಲಿ ಅಡಗಿದೆ ಎಂಬುದಕ್ಕೆ ಪ್ರತಿದಿನವೂ ಉದಾಹರಣೆಗಳು ಸಿಗುತ್ತವೆ. ನಮ್ಮ ಸಮಾಜದಲ್ಲಿರುವ ಈ ಅಸಾಮಾನ್ಯ ಅಸಮತೋಲನದಿಂದ  ನೊಂದು- ಬೆಂದು, ಬೆಂಡಾಗಿ ಕಡೆಗೆ ಈ ಅಸಮತೋಲನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡ ವ್ಯಕ್ತಿಯ ನೈಜ ಘಟನೆಯೊಂದಕ್ಕೆ ಅಕ್ಷರ ರೂಪ ನೀಡಿದ್ದಾರೆ ಗಂಗಾನಾಯ್ಕ್‌ಗೊಂದಿ ಯವರು . ಎರಡು ಕಂತುಗಳ ಈ ಬರಹದ ಮೊದಲ ಭಾಗ ಇಲ್ಲಿದೆ .

ಬಹು ವೈವಿಧ್ಯತೆ ಹೊಂದಿರುವ ಭಾರತದಲ್ಲಿ ವಿವಿಧ ಭಾಷೆ, ಜಾತಿಗಳಲ್ಲಿರುವ ಆಚಾರ – ವಿಚಾರ, ಉಡುಗೆ-ತೊಡುಗೆಗಳು, ಊಟೋಪಚಾರಗಳಲ್ಲಿ ಒಂದು ರಾಜ್ಯಕ್ಕೂ ಮತ್ತೊಂದು ರಾಜ್ಯಕ್ಕೂ  ಭಿನ್ನತೆ ಇರುವುದನ್ನು ನಾವು ಕಾಣಬಹುದು. ಹಲವು ಕಾರಣಗಳಿಗಾಗಿ ಚದುರಿ ಹೋಗಿರುವ ವಿಭಿನ್ನ ಅಭಿರುಚಿಯ ಜನರು ದೇಶದ ಎಲ್ಲಾ ರಾಜ್ಯಗಳಲ್ಲೂ ಕಾಣ ಸಿಗುತ್ತಾರೆ. ತಮಗಿಷ್ಟದ ಊಟ, ತಿನಿಸುಗಳು,  ಆಹಾರ ಪದಾರ್ಥಗಳು ಒಂದೇ ಸೂರಿನಡಿ  ಸವಿಯಲು  ಸಿಗುತ್ತವೆ ಎಂದರೆ ಆ ಸಂತೋಷಕ್ಕೆ ಪಾರವೇ ಇರುವುದಿಲ್ಲ, ಇಂತಹ ವಿಭಿನ್ನ ಅಭಿರುಚಿ ಹೊಂದಿರುವ ಜನರಿಗೆ ವೇದಿಕೆಗಳಾಗಿ  ಬೇಕರಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ.

ಉತ್ತರ ಭಾರತದ ಸಮೋಸ-ಕಚೋರಿಗಳು, ಮಹಾರಾಷ್ಟ್ರದ ವಡಾಪಾವ್, ಹರಿಯಾಣದ ಜಿಲೇಬಿ, ಕೇರಳದ ಹಲ್ವಾ, ಬೆಳಗಾಮ್ ಕುಂದ, ಧಾರವಾಡದ ಪೇಡ, ಮೈಸೂರಿನ ಮೈಸೂರುಪಾಕು ಹೀಗೆ ವಿಭಿನ್ನ ಶೈಲಿಯ ವಿವಿಧ ಆಕಾರದ ಸಿಹಿ ತಿನಿಸುಗಳೊಂದಿಗೆ ಸ್ಥಳೀಯವಾಗಿ ಬಿಸಿ ಬಿಸಿಯಾಗಿ ಸಿಗುವ ರಸ್ಕ್, ಬ್ರೆಡ್ಡು, ಬನ್ನು, ಖಾರ, ಚಕ್ಕುಲಿ, ಕೋಡುಬಳೆ ಹೀಗೆ ವೈವಿಧ್ಯಮಯವಾದ ತಿನಿಸುಗಳನ್ನು ಸಾಲಾಗಿ ಬೇಕರಿಯ ಶೋ ಕೇಸ್ ಗಳ ಬೆಳಕಿನಡಿಯಲ್ಲಿ ನೋಡುತ್ತಿದ್ದರೆ ಯಾರು ತಾನೆ  ತಮಗಿಷ್ಟವಾದ ತಿನಿಸು ತಿನ್ನದೇ ಹೋಗಲು ಸಾಧ್ಯ, ಅದರಲ್ಲೂ ಮಕ್ಕಳನ್ನು ಕರೆದುಕೊಂಡು ಹೋಗಿದ್ದರೆ ಮುಗಿದೇ ಹೋಯಿತು, ಇಷ್ಟದ ತಿನಿಸು ಕೊಡಿಸುವವರೆಗೆ ಅವರು ಬೇಕರಿ ಬಿಟ್ಟು ಕದಲುವುದೇ ಇಲ್ಲ.

ಪ್ರಸ್ತುತ ಉತ್ಕೃಷ್ಟ, ಸ್ವಾದಿಷ್ಟತೆ ಹೊಂದಿರುವ  ವಿವಿಧ ಮಾದರಿಯ ಕೇಕ್‌ಗಳು ಮತ್ತು ಸಿಹಿ ತಿನಿಸುಗಳ  ಪೇಟೆಂಟ್  ಪಡೆದುಕೊಂಡಿರುವ ಶೋ ರೂಮ್‌ಗಳು ನಗರಗಳಲ್ಲಿ ಕಾಣಸಿಗುತ್ತವೆ. ಈ ಶೋ ರೂಮ್ ಗಳಲ್ಲಿ ಈ ವಸ್ತುಗಳನ್ನು ಬಿಟ್ಟರೆ ಇತರೆ ತಿನಿಸುಗಳ ಮಾರಾಟ ಮಾಡುವುದೇ ಇಲ್ಲ. ಅವುಗಳು ಈಗ ಬ್ರಾಂಡ್‌ಗಳಾಗಿ ಮಾರ್ಪಟ್ಟಿವೆ. ಪ್ರಾಂಚೈಸಿಗಳ  ಮಟ್ಟಿಗೆ ಬೇಕರಿ ಉದ್ಯಮ ಉತ್ತುಂಗದ ಸ್ಥಿತಿ ತಲುಪಿದೆ ಎಂದರೆ ಸೋಜಿಗವಾಗುತ್ತದೆ.

ಇಷ್ಟೊಂದು ವೈವಿಧ್ಯತೆ, ವಿಶಿಷ್ಟತೆ ಹೊಂದಿರುವ ಬೇಕರಿ ತಿನಿಸುಗಳಿಗೆ ಒಂದು ಕಾಲದಲ್ಲಿ ಜಾತಿಯ ಲೇಪನ  ಅಂಟಿತ್ತು ಎಂದರೆ ಆಶ್ಚರ್ಯವಾಗಬಹುದು.

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಸಾಮೂಹಿಕ ಆಹಾರ ತಯಾರಿಸುವ, ಮದುವೆ – ಮುಂಜಿ, ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಯಾವುದೇ ಶುಭ ಕಾರ್ಯಗಳಲ್ಲಿ ಆಹಾರ ತಯಾರಿಸಿ, ಬಡಿಸುವ ಕೆಲಸ  ಜಾತಿ ಶ್ರೇಷ್ಠತೆಯ ಸಾಲಿನಲ್ಲಿ ಬರುವ  ಬ್ರಾಹ್ಮಣರಿಗೆ ಸೀಮಿತವಾಗಿತ್ತು ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಬ್ರಾಹ್ಮಣರ  ಪೌರೋಹಿತ್ಯಕ್ಕೆ  ಜಾತಿ – ಕುಲದ  ನಿರ್ಬಂಧವಿಲ್ಲ, ಅವರು ಭಾಗವಹಿಸುವ ಯಾವುದೇ ಶುಭ ಕಾರ್ಯಕ್ರಮಗಳಲ್ಲಿ ಪೌರೋಹಿತ್ಯದಿಂದ ಹಿಡಿದು ಉಟೋಪಚಾರದವರೆಗೂ ಅವರದೇ ಸಾರಥ್ಯ ಇದೆ ಎಂದರೆ  ಆ ಕಾರ್ಯಕ್ರಮಗಳು ಸಹಜವಾಗೇ ಶ್ರೇಷ್ಠತೆಯಿಂದ ಕೂಡಿರುತ್ತವೆ ಎಂಬ ಭಾವನೆ  ಜನಸಾಮಾನ್ಯರಲ್ಲಿದೆ. ಇದು ಸಮಾಜದಲ್ಲಿ  ರೂಢಿಗತವಾಗಿಯೂ ಬಿಟ್ಟಿದೆ. ಅದಕ್ಕೆ ಈಗಲೂ ಮಾನ್ಯತೆ ಸಿಗುತ್ತಿರುವುದು  ದುರ್ದೈವದ ಸಂಗತಿಯಾಗಿದೆ.

ನಮ್ಮೆಲ್ಲರ ಮಾನಸಿಕ ಗುಲಾಮಗಿರಿಗೆ ಪಂಚಾಂಗ ರೂಪದ ಪೌರೋಹಿತ್ಯವೇ ಕಾರಣ ಎಂದರೆ ಆಶ್ಚರ್ಯವಾಗಬಹುದು. ಮಗು ಹುಟ್ಟಿದ ಗಳಿಗೆಯಿಂದ ಪ್ರಾರಂಭವಾಗುವ ಈ ದಾಸ್ಯದ ಸಂಕೋಲೆಗೆ ಜಾತಕ ರೂಪದ ಬಲೆ ಹೆಣೆಯಲಾಗುತ್ತದೆ. ಆ ಮಗುವಿನ ನಾಮಕರಣ, ಮದುವೆ, ಗೃಹಪ್ರವೇಶ ಸೇರಿದಂತೆ  ಮನೆಯಲ್ಲಿ ನಡೆಸುವ ಎಲ್ಲಾ ಶುಭಕಾರ್ಯಗಳು ಪೌರೋಹಿತ್ಯದ ಅಪ್ಪಣೆ ಇಲ್ಲದೆ ಯಾವ ಕೆಲಸ ಕಾರ್ಯಗಳು ನಡೆಯುವುದೇ ಇಲ್ಲ (ಇತ್ತೀಚಿಗಂತೂ ಕಟ್ಟುವ ಮನೆ, ಕಟ್ಟಡ, ತಿನ್ನುವ ಊಟ, ಉಡುವ ಬಟ್ಟೆ, ಓಡಾಡುವ ಗಾಡಿ ಎಲ್ಲವೂ ವಾಸ್ತುಮಯ ಆಗಿ ಹೋಗಿದೆ ). ಹುಟ್ಟಿದ ವ್ಯಕ್ತಿ ಸತ್ತ ಎಂದರೂ ಮಣ್ಣಿನಲ್ಲಿ ಹೂಳಲಿಕ್ಕೆ ಅಥವಾ ಸುಡಲಿಕ್ಕೆ ಮುಹೂರ್ತ ಕೇಳುವ ಪರಿಪಾಠ  ರೂಢಿಗತವಾಗಿ ಬಿಟ್ಟಿದೆ. ಪೌರೋಹಿತ್ಯಕ್ಕೆ ಕುಲ, ಜಾತಿ, ಮೇಲು- ಕೀಳುಗಳಿಲ್ಲ, ಸ್ಪೃಶ್ಯ – ಅಸ್ಪೃಶ್ಯ ಎಂಬುದಿಲ್ಲ. ಜಾತಕ, ಪಂಚಾಂಗ, ಭವಿಷ್ಯ, ಮುಹೂರ್ತಗಳ ನೆಪದಲ್ಲಿ  ನಮ್ಮನ್ನು  ಕಟ್ಟಿ ಹಾಕಲಾಗಿದೆ, ಅವುಗಳ ಅಣತಿಯಂತೆ ನಾವೆಲ್ಲರೂ ನಡೆಯುತ್ತಿದ್ದೇವೆ, ಪೌರೋಹಿತ್ಯದ ಬೇರು ’ಬ್ರಾಹ್ಮಣ್ಯ’ದಲ್ಲಿ ಅಡಗಿದೆ. ಇವುಗಳ  ಸೂತ್ರದಾರರು ಬ್ರಾಹ್ಮಣರೇ ಆಗಿದ್ದಾರೆ.

ಈ ಮೇಲಿನ ಪೀಠಿಕೆಗೆ ಕಾರಣವೂ ಇದೆ, ಭಾರತೀಯ ಸಮಾಜದಲ್ಲಿ  ಒಬ್ಬ ವ್ಯಕ್ತಿಯ ಬೆಳವಣಿಗೆ, ಗೌರವ, ಸಾಮಾಜಿಕ  ಸ್ಥಾನಮಾನ, ಪ್ರಗತಿ  ಎಲ್ಲವೂ ಜಾತಿಯಲ್ಲಿ ಅಡಗಿದೆ ಎಂಬುದಕ್ಕೆ ಪ್ರತಿದಿನವೂ ಉದಾಹರಣೆಗಳು ಸಿಗುತ್ತವೆ.

ಶೂದ್ರ ವ್ಯಕ್ತಿಯೊಬ್ಬ   ನಿರ್ದಿಷ್ಟ  ವಿಷಯ ಅಥವಾ ವಿಚಾರಗಳಲ್ಲಿ ಎಷ್ಟೇ ಪ್ರಾವೀಣ್ಯತೆ ಪಡೆದಿದ್ದರೂ ಸಹ ಜಾತಿಯ ಕಾರಣಕ್ಕೆ ಆತ ಕುಬ್ಜನಾಗಿ  ಬಿಡುತ್ತಾನೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ಕೆಲಸಗಳು ಉತ್ಕೃಷ್ಟ ಜಾತಿಯವರೆನಿಸಿಕೊಂಡವರ  ಹಿಡಿತದಲ್ಲಿ ಇರುವುದರಿಂದ ಅಲ್ಲಿ ಯಾರಿಗೂ ಪ್ರವೇಶವಿರುವುದಿಲ್ಲ. ಹಾಗಾಗಿ ಕೀಳು ಜಾತಿಗಳೆಂದು ಕರೆಯಲ್ಪಡುವ  ವ್ಯಕ್ತಿಗಳು ರಾಜಕೀಯವಾಗಿ ಅಥವಾ ಆರ್ಥಿಕವಾಗಿ ಎಷ್ಟೇ ಪ್ರಬಲ ಹುದ್ದೆಯಲ್ಲಿದ್ದರೂ ಅವಮಾನಕ್ಕೆ ಒಳಗಾಗುತ್ತಿರುವುದು ಬಹುಶಃ ಭಾರತದಲ್ಲಿ ಕಾಣಲು ಮಾತ್ರ ಸಾಧ್ಯ. ಹಾಗಾಗಿ ಕೆಲವು ಶೂದ್ರ ಜಾತಿಯ ಅಥವಾ ಅನ್ಯಧರ್ಮೀಯರು ಈ ದೇಶದ  ರಾಷ್ಟ್ರಪತಿಗಳು, ಪ್ರಧಾನಿಗಳು, ಮಂತ್ರಿಗಳಾಗಿದ್ದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನ ಅಥವಾ ಗರ್ಭಗುಡಿ  ಪ್ರವೇಶಿಸಲು ಅವಕಾಶ ಇರುವುದಿಲ್ಲ, ಅವಕಾಶವಿದ್ದರೂ ಅವರು ಬಂದು ಹೋದ ನಂತರ ಗೋಮೂತ್ರ ಹಾಕಿ ಪವಿತ್ರಗೊಳಿಸುವ ಕೆಲಸ ನಡೆಯುತ್ತದೆ, ಇಂತಹ ಅನಿಷ್ಠ ವ್ಯವಸ್ಥೆಯನ್ನು ನಾಗರೀಕರೆನಿಸಿಕೊಂಡಿರುವ ನಾವು ಸಹಿಸಿಕೊಳ್ಳುತ್ತೇವೆ, ಆಡಳಿತ ನಡೆಸುವ ರಾಜಕಾರಣಿಗಳು, ಅಧಿಕಾರಿಗಳು  ಸಹಿಸಿಕೊಳ್ಳುತ್ತಾರೆ, ಇದುವೇ ಭಾರತ. ಈ ವ್ಯವಸ್ಥೆ ಇನ್ನೆಷ್ಟು ಕಾಲ ಮುಂದುವರಿಯುತ್ತದೆಯೋ ನೋಡೋಣ.

ವಿಷಯಕ್ಕೆ ಬರುವುದಾದರೆ ಆಹಾರದ ವಿಚಾರದಲ್ಲಿ ಈಗಾಗಲೇ ಶ್ರೇಷ್ಠತೆ – ಕನಿಷ್ಠತೆಯ ಬೇಧ- ಭಾವ ನಮ್ಮ ಸಮಾಜದಲ್ಲಿ ಬಂದುಬಿಟ್ಟಿದೆ. ಸಸ್ಯಾಹಾರಿಗಳು ಶ್ರೇಷ್ಠರು, ಮಾಂಸಾಹಾರಿಗಳೆಲ್ಲರೂ ಕನಿಷ್ಠರು ಎಂಬ ಮನೋಭಾವ ಬೆಳೆದು ನಿಂತಿದೆ.  ಆ ಕಾರಣಕ್ಕಾಗಿ ಶೂದ್ರ ವರ್ಗದಲ್ಲಿರುವ ಕೆಲವು ಕುಟುಂಬಗಳು ಸಸ್ಯಹಾರ ಹಾಗೂ ಮಾಂಸಾಹಾರ ಸೇವಿಸುತ್ತಿದ್ದವರು ಈಗ ಮಾಂಸಾಹಾರವನ್ನು ಸಂಪೂರ್ಣ ತ್ಯಜಿಸಿ ಸಸ್ಯಾಹಾರಿಗಳಾಗಿ ನವ ಬ್ರಾಹ್ಮಣರಾಗಲು ಹೊರಟಿದ್ದಾರೆ. ಬ್ರಾಹ್ಮಣರ ಆಚಾರ-ವಿಚಾರ ಪೂಜೆ, ಪುನಸ್ಕಾರಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಇಂಥವರು  ಎಷ್ಟೇ ಬ್ರಾಹ್ಮಣ್ಯವನ್ನು ಅನುಸರಿಸುತ್ತಿದರೂ ಬ್ರಾಹ್ಮಣರು ಇವರನ್ನು ತಮ್ಮವರೆಂದು  ಗರ್ಭಗುಡಿಯೊಳಗೆ ಸೇರಿಸಿಕೊಳ್ಳುತ್ತಾರೆಯೇ? ಈ ಸಣ್ಣ ತಿಳುವಳಿಕೆ ಇಲ್ಲದ ಅನಾಗರೀಕರು ಬ್ರಾಹ್ಮಣ್ಯವನ್ನು ಹಾಸಿ ಹೊದ್ದು ಮಲಗಲು ತವಕಿಸುತ್ತಲೆ ಇರುವುದು ವಿಪರ್ಯಾಸ.  ಅದು ಅವರ ಕರ್ಮ ಇರಲಿ, ನಮ್ಮ ಸಮಾಜದಲ್ಲಿರುವ ಈ ಅಸಾಮಾನ್ಯ ಅಸಮತೋಲನದಿಂದ  ನೊಂದು- ಬೆಂದು, ಬೆಂಡಾಗಿ ಕಡೆಗೆ ಈ ಅಸಮತೋಲನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡ ವ್ಯಕ್ತಿಯ ನೈಜ ಘಟನೆ ಈ ಜಾತಿ ಸಮಾಜದ ವೈರುಧ್ಯಗಳಿಗೆ ಕನ್ನಡಿ ಹಿಡಿಯುತ್ತದೆ ಎಂದು ಭಾವಿಸುತ್ತೇನೆ.

ಹಿಂದುಳಿದ ವರ್ಗದ ಸಣ್ಣ ಜಾತಿಯಲ್ಲಿ ಹುಟ್ಟಿದ ಶಾಮಣ್ಣ ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿ ಬೆಳೆದು ದೊಡ್ಡವರಾದವರು. ಅವರ ತಂದೆಯವರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಡೆಸುತ್ತಿದ್ದ ಬೇಕರಿಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಯಾರೋ ಹೇಳಿದ ಮಾತಿಗೆ ಶಾಮಣ್ಣ  ಅದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ತಮಿಳುನಾಡು, ಆಂಧ್ರ, ಕೇರಳ, ಕರ್ನಾಟಕ ಹೀಗೆ ಊರೂರು ಸುತ್ತಿದವರು. ಬೇಕರಿ ಕೆಲಸ ಕಲಿಯಲು ಅಗಾಧವಾದ ಆಸೆ ಇದ್ದರೂ ಕೆಲಸ ಕಲಿಸಲು ಯಾರು ಇಷ್ಟಪಡುತ್ತಿರಲಿಲ್ಲ, ಏಕೆಂದರೆ 50 – 60ರ ದಶಕದಲ್ಲಿ ಬಹುತೇಕ ಬೇಕರಿಗಳು ಅಯ್ಯಂಗಾರಿ ಬ್ರಾಹ್ಮಣರ ಸ್ವತ್ತಾಗಿದ್ದವು. (ಈಗಲೂ ಆ ಪಳೆಯುಳಿಕೆ ಮುಂದುವರೆದಿದೆ, ಶೂದ್ರ ಜಾತಿಯವನು ಬೇಕರಿ ನಡೆಸುತ್ತಿದ್ದರೂ ಅಯ್ಯಂಗಾರಿ ಬೇಕರಿ ಎಂದೇ ನಾಮಕರಣ ಮಾಡಿಕೊಂಡಿರುತ್ತಾರೆ). ಅಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಬೇರೆಯವರಿಗೆ ಅವಕಾಶವಿರಲಿಲ್ಲ. ಸಾಮಾಜಿಕ ಸ್ತರದ ಅರಿವಿಲ್ಲದ ಶಾಮಣ್ಣ  ಬೇಕರಿಯಿಂದ ಬೇಕರಿಗೆ  ಕೆಲಸಕ್ಕಾಗಿ ಸುತ್ತಾಡುತ್ತಿದ್ದರು. ಕೆಲಸ ಕೇಳಲು  ಹೋದಾಗ, ಬೇಕರಿ ಮಾಲೀಕರು ಬೆನ್ನು, ಹೆಗಲು ಸವರುತ್ತ ಜನಿವಾರಕ್ಕೆ ತಡಕಾಡುತ್ತಿದ್ದರು.

ಶಾಮಣ್ಣ ನೋಡುವುದಕ್ಕೆ ದಷ್ಟ-ಪುಷ್ಟವಾಗಿ ಅಂದವಾಗಿದ್ದರೂ ಯಾರೂ ಕೆಲಸ ಕೊಡುತ್ತಿರಲಿಲ್ಲ. ಹೋದ ಕಡೆಯಲೆಲ್ಲಾ ಇಂತಹ ಅನುಭವಗಳು ಸಾಕಷ್ಟು ಆಗುತ್ತಿದ್ದರೂ ಶಾಮಣ್ಣರಿಗೆ ಇದರ ಸತ್ಯ ಗೊತ್ತಾಗುತ್ತಿರಲಿಲ್ಲ,  ಬೇಕರಿಗೆ ಕೆಲಸ ಕೇಳಿಕೊಂಡು ಬರುವವವರನ್ನು ಬ್ರಾಹ್ಮಣನೋ ಅಥವಾ ಬೇರೆ ಜಾತಿಯವನೊ ಎಂಬುದನ್ನು ತಿಳಿದುಕೊಳ್ಳಲು ಬೇಕರಿ ಮಾಲೀಕರು ಹೆಗಲು ಮತ್ತು  ಬೆನ್ನು ಸವರಿ, ಮೈ ಮೇಲೆ  ಜನಿವಾರ ಇದಿಯಾ ಎಂದು ಖಾತರಿಪಡಿಸಿ ಕೊಳ್ಳುತ್ತಿದ್ದರು. ಬೇಕರಿ ಮಾಲೀಕರು ಹೀಗೆ ಮಾಡುತ್ತಿದ್ದರು  ಎಂಬ ಸತ್ಯ ಬಹಳ ವರ್ಷಗಳ ನಂತರ ಶಾಮಣ್ಣರ ಅರಿವಿಗೆ ಬಂದಿತ್ತು. ಅಷ್ಟೊತ್ತಿಗಾಗಲೇ  ಒಂದು ಬೇಕರಿಯಲ್ಲಿ ಕ್ಲೀನಿಂಗ್ ಮಾಡುವ ಕೆಲಸ ಗಿಟ್ಟಿಸಿಕೊಂಡಿದ್ದರು. ಬೇಕರಿಯ ಒಂದು ಮೂಲೆಯಲ್ಲಿ  ಮಲಗಲು ಮಾಲೀಕರು ಜಾಗ ಮಾಡಿಕೊಟ್ಟಿದ್ದರು. ಒಮ್ಮೊಮ್ಮೆ  ಸರಿರಾತ್ರಿವರೆಗೂ  ಕೆಲಸ ಮಾಡಿ  ಸುಸ್ತಾಗಿ ಮಲಗಿಕೊಂಡಿದ್ದರೆ ಬೆಳಿಗ್ಗೆಯೆ ಬೇಕರಿಗೆ ಬರುವ ಮಾಲೀಕ ಕಾಲಿನಿಂದ ಒದ್ದು ಶಾಮಣ್ಣರನ್ನು ಎಬ್ಬಿಸುತ್ತಿದ್ದರು, ಹಲವು ಕಷ್ಟಗಳ ನಡುವೆಯೂ ಬೇಕರಿಯಲ್ಲಿ ಬ್ರಾಹ್ಮಣರು ತಯಾರಿಸುವ  ತಿನಿಸುಗಳನ್ನು ಬಹಳ ವರ್ಷಗಳಿಂದ ನೋಡಿ ಕಲಿತುಕೊಂಡಿದ್ದ ಶಾಮಣ್ಣ ಸ್ವಂತ ಬೇಕರಿ ನಡೆಸುವ ಕೌಶಲ ಪಡೆದು ಬೇಕರಿಗಳಿಂದ ಹೊರಬಂದಿದ್ದರು.  

 ಉನ್ನತ ಜಾತಿಯ ಹೆಸರಿಲ್ಲದೆ ಕೇವಲ ಕೆಲಸದ ಅನುಭವದ ಮೇಲೆ ಕಡಿಮೆ ಬಂಡವಾಳದೊಂದಿಗೆ ತನಗೆ ತೋಚಿದ ಹೆಸರನ್ನು ಅಂಗಡಿಗೆ  ಇಟ್ಟುಕೊಂಡು  ತರೀಕೆರೆಯಲ್ಲಿ ಬೇಕರಿ ಪ್ರಾರಂಭಿಸಿದ ಶಾಮಣ್ಣ,  ತಕ್ಕಮಟ್ಟಿನ ಜೀವನಕ್ಕೆ ಸಾಕಾಗುವಷ್ಟು ದುಡಿಮೆ ಮಾಡುತ್ತಿದ್ದರು, ಇವರ ಕೈ ಕೆಲಸದ ನೈಪುಣ್ಯತೆ ಹಾಗೂ ಒಳ್ಳೆತನವನ್ನು ನೋಡಿ, ಬಸವಣ್ಣರವರ ಅನುಯಾಯಿಗಳು  ಹೆಣ್ಣು ಕೊಟ್ಟು ಮದುವೆ ಮಾಡಿದರು. ಈ ಕುಟುಂಬದಲ್ಲಿ ಹುಟ್ಟಿದ ಇಬ್ಬರು ಹೆಣ್ಣು ಮಕ್ಕಳಿಗೆ  ಶಾಲೆಗೆ ಸೇರಿಸುವಾಗ ಜಾತಿಯ ಕಾಲಂನಲ್ಲಿ ಹಿಂದುಳಿದ ಜಾತಿಯ ತನ್ನ ಮೂಲ ಜಾತಿಯ ಹೆಸರು ನಮೂದಿಸಿದ್ದರು. ಚೆನ್ನಾಗಿ ನಡೆಯುತ್ತಿದ್ದ ಬೇಕರಿ ವ್ಯವಹಾರ ಕೆಲವು ದಿನಗಳ ನಂತರ ಕುಸಿಯಲು ಪ್ರಾರಂಭವಾಯಿತುಇದರ ಬಗ್ಗೆ ಅಷ್ಟೇನೂ ತಲೆ ಕೆಡಿಸಿಕೊಳ್ಳದ ಶಾಮಣ್ಣ ಈ ಊರನ್ನು ಬಿಟ್ಟು ಬೇರೆ ಊರಿಗೆ  ಹೋಗಿ ಬೇಕರಿಗೆ ಬೇಕಾಗುವ ಕಚ್ಚಾ ಪದಾರ್ಥಗಳನ್ನು  ಖರೀದಿಸಿ ಬೇಕರಿಗಳಿಗೆ ಸಗಟಾಗಿ ನೀಡುವ ವ್ಯವಹಾರ ಶುರು ಮಾಡಿದರು. ಅಲ್ಲಿಯೂ ಹೇಳಿಕೊಳ್ಳುವಷ್ಟು ದುಡಿಮೆಯಾಗದೆ ಮೋಸ ಹೋಗಿದ್ದರಿಂದ ಮತ್ತೆ ಬೇರೆ ಪಟ್ಟಣಗಳಿಗೆ ವಲಸೆ ಹೊರಡುತ್ತಿದ್ದರು. ಹೀಗೆ ತಮ್ಮ ಜೀವಿತಾವಧಿಯಲ್ಲಿ  ಸುಮಾರು 19 ಊರು ಪಟ್ಟಣಗಳಲ್ಲಿ ಬೇಕರಿಯನ್ನು ನಡೆಸಿ ಕೈಸುಟ್ಟುಕೊಂಡಿದ್ದ ಶಾಮಣ್ಣರ  ನಿರಂತರ ವಲಸೆ ಹಾಗೂ ನಷ್ಟಕ್ಕೆ ಅವರ ಅರಿವಿಗೆ ಬಂದ ಕಾರಣ ಜಾತಿಯ ವಿಷ ವರ್ತುಲ.

ಗಂಗಾನಾಯ್ಕ್‌ ಗೊಂದಿ (ಜಿಎನ್ ಜಿ)
ಪತ್ರಕರ್ತರು

(ಮುಂದಿನ ಭಾಗ ನಾಳೆ ಪ್ರಕಟವಾಗಲಿದೆ. ಸಂ.)

ಇದನ್ನೂ ಓದಿ- ಜಗದ ಮೊದಲ ಕವಿಯ ಮೊದಲ ಯುದ್ಧ ವಿರೋಧಿ ಕವಿತೆ

More articles

Latest article