ನವದೆಹಲಿ: ಪಾಕಿಸ್ತಾನದಿಂದ ಭಾರತ ದೇಶದೊಳಗೆ ಬರುವ ಎಲ್ಲಾ ವರ್ಗದ ಮೇಲ್ ಗಳು ಮತ್ತು ಪಾರ್ಸೆಲ್ ಗಳ ವಿನಿಮಯವನ್ನು ಸ್ಥಗಿತಗೊಳಿಸಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದಕ್ಕೂ ಮುನ್ನ ಪಾಕಿಸ್ತಾನದಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಮದಾಗುವ ಎಲ್ಲಾ ಸರಕುಗಳ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಭಾರತ ನಿರ್ಬಂಧ ಹೇರಿರುವುದಾಗಿ ವಾಣಿಜ್ಯ ಸಚಿವಾಲಯವು ಇಂದು ಬೆಳಗ್ಗೆ ಅಧಿಸೂಚನೆ ಹೊರಡಿಸಿತ್ತು.
ವಿದೇಶಿ ವ್ಯಾಪಾರ ನೀತಿ 2023ರ ಅನ್ವಯ ಈ ಘೋಷಣೆ ಮಾಡಲಾಗಿದ್ದು, ಮುಂದಿನ ಆದೇಶ ಪ್ರಕಟಿಸುವವರೆಗೂ ಇದು ಜಾರಿಯಲ್ಲಿರಲಿದೆ. ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ನೀತಿಯ ಹಿತದೃಷ್ಠಿಯಿಂದ ಈ ನಿರ್ಬಂಧ ಹೇರಲಾಗಿದೆ ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶಕರು ತಿಳಿಸಿದ್ದಾರೆ.
ಈ ನಿಷೇಧಕ್ಕೆ ಯಾವುದೇ ವಿನಾಯಿತಿ ಬೇಕಿದ್ದರೆ ಭಾರತ ಸರ್ಕಾರದ ಅನುಮೋದನೆ ಪಡೆಯಬೇಕಾಗಿರುತ್ತದೆ.
ಪಾಕಿಸ್ತಾನದಲ್ಲಿ ಉತ್ಪಾದಿಸಲಾಗುವ ರಫ್ತು ಮಾಡುವ ಎಲ್ಲಾ ಸರಕುಗಳ ನೇರ ಹಾಗೂ ಪರೋಕ್ಷ ಆಮದು ಅಥವಾ ಸಾಗಣೆ, ಮುಕ್ತ ಹಾಗೂ ಬೇರೆ ರೀತಿಯಲ್ಲಿ ಅನುಮತಿಸಿದ್ದರೂ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ತದನಂತರ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುತ್ತಾ ಬಂದಿದೆ. ಪಾಕಿಸ್ತಾನದ ಮೇಲೆ ಭಾರತ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಅದರ ಮುಂದುವರಿದ ಭಾಗವಾಗಿ ಈ ಘೋಷಣೆ ಹೊರಬಿದ್ದಿದೆ.