ಸ್ವಾತಂತ್ರ್ಯ, ಚರಿತ್ರೆ ಮತ್ತು ವರ್ತಮಾನ

Most read

ಅಶೋಕ ಚಕ್ರ ಧ್ವಜಮಧ್ಯೆ ಉಳಿದಿದೆ. ಅಶೋಕ ಚಕ್ರವರ್ತಿಯ ಪಾಲಿಗೆ ಅದು ಹಿಂಸೆಯಿಂದ ಅಹಿಂಸೆಯ ಕಡೆಗೆ ತಿರುಗಿದ ಚಕ್ರ. ಭಾರತದ ಪಾಲಿಗೆ ಆ ಚಕ್ರ ಅಹಿಂಸೆಯಿಂದ ಹಿಂಸೆಯತ್ತ ಚಲಿಸುತ್ತಿದೆ ಅಂತ ಅನ್ನಿಸುತ್ತಿದೆ. ಹಾಗೆ ಯಾರಿಗೆ ಅನ್ನಿಸುತ್ತಿಲ್ಲವೋ ಅವರೆಲ್ಲಾ ಇಂದು ದೇಶ ಭಕ್ತರಾಗುತ್ತಿದ್ದಾರೆ ಎ ನಾರಾಯಣ, ಚಿಂತಕರು

ಆಗಸ್ಟ್‌ 15, 1947 ರಂದು ಪಾರ್ಲಿಮೆಂಟ್‌ ಲಿ ನೆಹರೂರವರ ಭಾಷಣ

ಹೌದು. ಆಗಸ್ಟ್ 15 ಯಾಕಾಗಬೇಕಿತ್ತು? ಹೇಳಿ ಕೇಳಿ ಆ ತನಕ ಸ್ವಾತಂತ್ರ್ಯ ಚಳವಳಿಗಾರರು ಸಾಂಕೇತಿಕವಾಗಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದದ್ದು ಜನವರಿ 26 ರಂದು. 1930 ರಿಂದಲೂ ಇದು ನಡೆದು ಬಂದಿತ್ತು. ಮತ್ತ್ಯಾಕೆ ಆಗಸ್ಟ್ 15 ? ಆ ಕ್ಷಣಕ್ಕೆ ತನ್ನ ಇಚ್ಛೆಯ ಪ್ರಕಾರವೇ ಎಲ್ಲವೂ ನಡೆಯ ಬೇಕು ಎಂದು ಕೊಂಡು ದಿಢೀರ್ ಆಗಿ ದಿನಾಂಕ ಪ್ರಕಟಿಸಿದೆ ಅಂತ ಬಹಳ ನಂತರ ಮೌಂಟ್ ಬೆಟನ್ ಹೇಳಿಕೊಂಡಿದ್ದಾರೆ. ಅವರೇ ನಿರ್ಧರಿಸಿದ್ದೇನೋ ಸರಿ. ಅವರು ಆ ದಿನಾಂಕವನ್ನೇ ಯಾಕೆ ಆಯ್ದುಕೊಳ್ಳಬೇಕಿತ್ತು? ಅದಕ್ಕೂ ಒಂದು ಹಿನ್ನೆಲೆ ಇದೆ. ಎರಡು ವರ್ಷಗಳ ಹಿಂದೆ ಅದೇ ದಿನ  ಅಂದರೆ ಆಗಸ್ಟ್ 15 1945 ರಂದು  ಅವರು ಲಂಡನ್ ನಲ್ಲಿ ಮಾಜಿ ಪ್ರಧಾನಿ  ವಿನ್‌ಸ್ಟನ್‌ ಚರ್ಚಿಲ್ ಅವರ ಕಚೇರಿಯಲ್ಲಿ ಕುಳಿತಿದ್ದಾಗ ರೇಡಿಯೋ ದಲ್ಲಿ ಸುದ್ದಿಯೊಂದು ತೇಲಿಬಂದಿತ್ತು. ಅದು ಎರಡನೆಯ ಜಾಗತಿಕ ಮಾಹಾಯುಧ್ಧದ ಕಾಲ. ಮೌಂಟ್ ಬೆಟನ್ ಆಗ್ನೇಯ ಏಷ್ಯಾ ಪ್ರದೇಶಕ್ಕೆ ಬ್ರಿಟಿಷ್ ಸೇನೆಯ ಮಹಾದಂಡನಾಯಕ ಆಗಿದ್ದರು. ಅಂದು ರೇಡಿಯೋ ಬಿತ್ತರಿಸಿದ್ದು ಯುದ್ಧದಲ್ಲಿ ಜಪಾನ್ ಸೋತು ಶರಣಾದ ಸುದ್ದಿಯನ್ನು. ಅದು ಮೌಂಟ್ ಬೆಟನ್ ಅವರ ದಂಡನಾಯಕತ್ವಕ್ಕೆ ಸಂದ ಜಯವೂ ಆಗಿತ್ತು. ಅದಕ್ಕಿಂತಲೂ ಹೆಚ್ಚಾಗಿ ಜಪಾನ್ ನಲ್ಲಿ ಅರಸೊತ್ತಿಗೆ ಅಂತ್ಯಗೊಂಡು ಪ್ರಜಾತಂತ್ರ ಹುಟ್ಟಿಕೊಳ್ಳಲು ಅನುವಾಗುವ ಸುದ್ದಿ ಅದು. ಒಬ್ಬ ಸೇನಾ ನಾಯಕನಾಗಿ ತನ್ನ ಜೀವನದ ವಿಶೇಷ ಸಾಧನೆಯ ಅದೇ ದಿನಾಂಕವನ್ನೇ ತನ್ನ ನೇತೃತ್ವದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ನೀಡುವ ಕೆಲಸಕ್ಕೂ ಮೌಂಟ್ ಬೆಟನ್ ಆಯ್ದುಕೊಂಡರು. ರೇಡಿಯೋ ದಲ್ಲಿ ಭಾರತದ ಸ್ವಾತಂತ್ರ್ಯ ದಿನಾಂಕ ಜಗತ್ತಿಗೆ ಬಿತ್ತರವಾಯಿತು.

ದೇಶದ ಜನ ಸಂಭ್ರಮ ಪಟ್ಟರು. ಆದರೆ ದೇಶದ ಜೋತಿಷಿಗಳು ಆತಂಕಕ್ಕೊಳಗಾಗಿದ್ದರು. ಎಷ್ಟು ಕವಡೆ ಎಸೆದು, ಎಷ್ಟು ರಾಶಿ ಹಾಕಿ ಏನೇನು ಗ್ರಹಗತಿ ಲೆಕ್ಕಾಚಾರ ಹಾಕಿದರೂ ಅವರ ಆತಂಕ, ದಿಗಿಲು ಕಡಿಮೆಯಾಗಲಿಲ್ಲ. ಜ್ಯೋತಿಷ್ಯದ ಪ್ರಕಾರ ಆ ವರ್ಷದ ಆಗಸ್ಟ್ 15, ಶುಕ್ರವಾರ, ಪರಮ ಅಶುಭ ದಿನವಾಗಿತ್ತು. ಮಕರ ರಾಶಿಯಲ್ಲಿ ಶನಿ ಪ್ರಭಾವ ದೇಶದ ಮೇಲೆ ದಟ್ಟವಾಗಿತ್ತು. ಆ ದಿನ ಅಧಿಕಾರ ಹಸ್ತಾಂತರ ಆದರೆ ದೇಶ ಘನಘೋರ ಭವಿಷ್ಯ ಎದುರಿಸಬೇಕಾಗುತ್ತದೆ ಅಂತ ಅವರೆಲ್ಲಾ ಎಚ್ಚರಿಸಿದರು. ಇಷ್ಟು ವರ್ಷ ಕಾದಿದ್ದಾಯಿತು. ಇನ್ನೊಂದು ದಿನ ಕಾಯಬಾರದೇ? ಜ್ಯೋತಿಷಿಗಳು ಕಂಡಕಂಡವರಲ್ಲಿ ವಿಷಯ ತಿಳಿಸಿದರು. ಕಲ್ಕತ್ತಾದಿಂದ ಸ್ವಾಮಿ ಮದನಾನಂದ ನೇರವಾಗಿ ವೈಸರಾಯ್ ಅವರಿಗೆ ಪತ್ರ ಬರೆದರು: “ದೇವರ ಪ್ರೀತಿಯಾಗಿ ಹೇಳುತ್ತೇನೆ. ದಯಮಾಡಿ ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ನೀಡಬೇಡಿ. ನಿಮ್ಮ ಈ ಒಂದು ನಿರ್ಧಾರದಿಂದ ಮುಂದೆ ದೇಶ ಕ್ಷಾಮ, ಡಾಮರ, ನೆರೆ, ಮಾರಣಹೋಮ ಇತ್ಯಾದಿಗಳನ್ನು ಯಥೇಚ್ಛವಾಗಿ ಕಾಣಬೇಕಾದೀತು.” ವೈಸರಾಯ್ ದಿನಾಂಕ ಬದಲಿಸಲು ಒಪ್ಪಲಿಲ್ಲ. ಜ್ಯೋತಿಷಿಗಳು ತಮ್ಮ ಹಠ ಬಿಡಲಿಲ್ಲ. ಕೊನೆಗೂ ಒಂದು ನಿರ್ಧಾರಕ್ಕೆ ಬರಲಾಯಿತು. ಬ್ರಿಟಿಷರಿಗೆ ದಿನ ಪ್ರಾರಂಭವಾಗುವುದು ರಾತ್ರಿ 12 ಕ್ಕೆ. ಭಾರತದಲ್ಲಿ ದಿನ ಪ್ರಾರಂಭವಾಗುವುದು ಸೂರ್ಯೋದಯಕ್ಕೆ. ಆಗಸ್ಟ್ 14 ರ ಮಧ್ಯರಾತ್ರಿಯ ವೇಳೆಗೆ ಎಲ್ಲವೂ ನಡೆದು ಹೋದರೆ ಎರಡೂ ಕಡೆಯವರಿಗೂ ಸಮಾಧಾನ ಆಗುತ್ತದೆ. ಆ ಕಾರಣಕ್ಕೆ ಆಗಸ್ಟ್ 15 ರಂದು ಹಗಲು ನಡೆಯಬೇಕಾಗಿದ್ದ ಧ್ವಜಾರೋಹಣ ಕೆಂಪುಕೋಟೆಯಲ್ಲಿ ಆಗಸ್ಟ್ 14 ರ ಮಧ್ಯರಾತ್ರಿಗೆ ನಡೆದುಹೋಯಿತು. ಜೋತಿಷಿಗಳು ನಿಟ್ಟುಸಿರಿಟ್ಟರು. ಎಲ್ಲವೂ ಕಳೆದ ಬಳಿಕ ಮೌಂಟ್ ಬೆಟನ್ (ಅವರು ಸ್ವಾತಂತ್ರ್ಯಾನಂತರ ಗವರ್ನರ್ ಜನರಲ್ ಆಗಿ ಒಂದು ವರ್ಷ ಮುಂದುವರಿಯುತ್ತಾರೆ) ತಮ್ಮ ಕಾರ್ಯದರ್ಶಿ ಅಲೆನ್ ಕಂಪ್ಬೆಲ್-ಜಾನ್ಸನ್ ಅವರನ್ನು ಕರೆದು ಹೀಗೆ ಹೇಳುತ್ತಾರೆ: “ಯಾವುದಕ್ಕಾದರೂ ಇರಲಿ, ನಮ್ಮ ಉನ್ನತ ಮಟ್ಟದ ಸಲಹಾಗಾರರ ಬಳಗದಲ್ಲಿ ಒಬ್ಬ ಜ್ಯೋತಿಷಿಯನ್ನು ಕೂಡಾ ಸೇರಿಸಿಕೊಂಡಿರಿ.”!

ಸ್ವಾತಂತ್ರ್ಯದ ಮುಹೂರ್ತ ನಿರ್ಣಯದ ವಿಷಯದಲ್ಲಿ ಈ ದೇಶದ ಜ್ಯೋತಿಷ್ಯ ಶಕ್ತಿಯನ್ನು ಯಾರಿಗೂ ನಿಲ್ಲಿಸಲಾಗಲಿಲ್ಲ. ಎಲ್ಲವೂ ಶುಭ ಮುಹೂರ್ತದಲ್ಲಿ ನಡೆಯಿತು ಎನ್ನುವ ಕಾರಣಕ್ಕೆ ದೇಶ ಕ್ಷಾಮ, ಡಾಮರ, ನೆರೆ, ಬರ, ಮಾರಣಹೋಮಗಳಿಂದ ಮುಕ್ತವಾಗಲಿಲ್ಲ ಎಂದು ಜ್ಯೋತಿಷ್ಯ ನಂಬದವರು ನಗಬಹುದು. ಜ್ಯೋತಿಷ್ಯ ನಂಬುವವರು ಮೌಂಟ್ ಬೆಟನ್ ನಿರ್ಧರಿಸಿದ್ದ ಅದೇ ಅಶುಭ ಮುಹೂರ್ತದಲ್ಲೇ ಎಲ್ಲವೂ ನಡೆದುಹೋಗಿದ್ದರೆ ಈ ಎಲ್ಲಾ ಸಂಕಷ್ಟಗಳೂ ಇನ್ನೂ ಹೆಚ್ಚಿಗೆ ನಡೆದು ದೇಶ ವಿನಾಶವಾಗುತ್ತಿತ್ತು ಅಂತ ವಾದಿಸುತ್ತಾ ಇರಬಹುದು. ಈ ಒಂದು ದ್ವಂದ್ವದಿಂದ ಈ ದೇಶಕ್ಕೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ. ಮುಂದೊಂದು ದಿನ ಬರಬಹುದೇ?

ಮೌಂಟ್‌ ಬ್ಯಾಟನ್

ಆಗಸ್ಟ್ 15 ರ ಮಧ್ಯರಾತ್ರಿ ಬ್ರಿಟಿಷ್ ಧ್ವಜ ಕೆಳಗಿಳಿಯುತ್ತಲೇ ಕೆಂಪು ಕೋಟೆಯಲ್ಲಿ ಮೇಲೇರಿದ್ದು ಭಾರತದ ತ್ರಿವರ್ಣ ಧ್ವಜ. ಈ ಧ್ವಜ ಸ್ವಾತಂತ್ರ್ಯಕ್ಕೆ ಮುನ್ನ ಭಾರತೀಯ ರಾಷ್ಟ್ರೀಯ ಚಳವಳಿಯ ಅರ್ಥಾತ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಧ್ವಜದ ಪರಿಷ್ಕೃತ ರೂಪ. ಮೂಲ ಧ್ವಜದಲ್ಲಿ ಆದ ಬಹುಮುಖ್ಯ ಪರಿಷ್ಕರಣೆ ಅಂತ ಅಂದರೆ ಅದರ ಮಧ್ಯಭಾಗದಲ್ಲಿ ಅಶೋಕ ಚಕ್ರವನ್ನು ಸೇರಿಸಿದ್ದು. ಮೂಲ ಧ್ವಜದಲ್ಲಿ ಇದ್ದದ್ದು ಚರಕದ ಚಿತ್ರ. ಮಹಾತ್ಮಾ ಗಾಂಧಿಯವರು ಇಡೀ ರಾಷ್ಟ್ರೀಯ ಚಳವಳಿಯಲ್ಲಿ ಬಳಸಿದ ಬಹುಮುಖ್ಯ ದೇಶೀಯ ಸಂಕೇತವಾಗಿದ್ದ ಚರಕವನ್ನು ರಾಷ್ಟ್ರ ಧ್ವಜದಲ್ಲಿ ಮುಂದುವರಿಸುವುದಕ್ಕೆ ಸಂವಿಧಾನ ಸಭೆಯಲ್ಲಿ ಹಲವಾರು ಸದಸ್ಯರು ಆಕ್ಷೇಪ ವ್ಯಕ್ತ ಪಡಿಸುತ್ತಾರೆ. ಅದಕ್ಕೆ ಒಂದು ಕಾರಣ ರಾಜಕೀಯ ಪಕ್ಷದ ಧ್ವಜವನ್ನು ಇದ್ದಕ್ಕಿದ್ದ ಹಾಗೆ ರಾಷ್ಟ್ರಧ್ವಜವನ್ನಾಗಿ ಒಪ್ಪಿಕೊಳ್ಳುವುದು ಸರಿಯಲ್ಲ ಎನ್ನುವುದು. ಅದಕ್ಕಿಂತಲೂ ಮುಖ್ಯವಾಗಿ, ಅಂದಿನ ಕಾಂಗ್ರೆಸ್ಸಿಗರೂ ಸೇರಿದಂತೆ ಹಲವರಿಗೆ ಚರಕ ಪ್ರಾಚೀನತೆಯ, ಅವೈಜ್ಞಾನಿಕತೆಯ, ಸ್ತ್ರೀಯರ ಕೆಲಸದ ಸಂಕೇತವಾಗಿ ಕಂಡಿತ್ತಂತೆ. ಸ್ವಾತಂತ್ರ್ಯಕ್ಕೆ ಮುಹೂರ್ತ ನಿರ್ಣಯದ ವೇಳೆ ಕಾಣಿಸದ ವೈಜ್ಞಾನಿಕತೆಯ ಪ್ರಶ್ನೆ ಚರಕದ ವಿಷಯದಲ್ಲಿ ಮೂಡುತ್ತದೆ ಎನ್ನುವುದು ಕುತೂಹಲದ ವಿಷಯ. ಕೊನೆಗೆ ಸಾರನಾಥದಲ್ಲಿದ್ದ ಅಶೋಕ ಸ್ಥಂಭದಲ್ಲಿ ಕೆತ್ತಲಾದ ಚಕ್ರವರ್ತಿ ಅಶೋಕನ ಧರ್ಮ ಚಕ್ರವನ್ನೇ ಧ್ವಜದಲ್ಲಿ ಸೇರಿಸುವುದು ಎಂದು ಸಂವಿಧಾನ ಸಭೆ 1947 ಜುಲೈ 22 ರಂದು ನಿರ್ಣಯಿಸುತ್ತದೆ. ಈ ವಿಷಯ ಗಾಂಧೀಜಿಯವರ ಗಮನಕ್ಕೆ ಬರುತ್ತಲೇ ಅವರ ಮುಖ ಬಾಡುತ್ತದೆ. ಚರಕವಿಲ್ಲದ ಧ್ವಜಕ್ಕೆ ನಾನು ವಂದಿಸಲಾರೆ ಎನ್ನುತ್ತಾರೆ. ಚರಕ ಅವರ ಪಾಲಿಗೆ ಕೇವಲ ನೂಲುವ ಸಾಧನವಾಗಿರಲಿಲ್ಲ. ಅವರ ಕಲ್ಪನೆಯ ಭಾರತದ ಅಸದೃಶ  ಸಂಕೇತವಾಗಿತ್ತು. ನೆಹರು ಗಾಂಧೀಜಿಯನ್ನು ಸಮಾಧಾನ ಪಡಿಸಲು ಯತ್ನಿಸುತ್ತಾರೆ. ಚರಕದ ಚಕ್ರವೂ ಚಕ್ರ, ಅಶೋಕ ಚಕ್ರವೂ ಚಕ್ರ. ಈ ಚಕ್ರವನ್ನೂ ಚರಕದ ಚಕ್ರ ಅಂತಲೇ ತಾವು ಭಾವಿಸಬೇಕು ಅಂತ ಗಾಂಧೀಜಿಯವರಲ್ಲಿ ಕೇಳಿಕೊಳ್ಳುತ್ತಾರೆ. ಒಲ್ಲದ ಮನಸ್ಸಿನಿಂದ ಗಾಂಧೀಜಿ ಒಪ್ಪಿಕೊಳ್ಳುತ್ತಾರೆ. ಧ್ವಜದ ವಿಷಯದಲ್ಲಿ ವಾದಿಸುವ ಸಮಯ ಅದಾಗಿರಲಿಲ್ಲ. ವಿಭಜನೆಯ ಕಾರ್ಮೋಡ ದೇಶವನ್ನು ಮತ್ತು ಅವರ ಮನಸ್ಸನ್ನು ಆವರಿಸಿತ್ತು. ಎಲ್ಲೆಡೆ ರಕ್ತ ಹರಿಯುತಿತ್ತು.

ಮುಂದಿನ ದಿನಗಳಲ್ಲಿ ಧ್ವಜ ವಿನ್ಯಾಸದ ಕುರಿತಾದ ತನ್ನ ಬಿಗಿ ನಿಲುವನ್ನು ಗಾಂಧೀಜಿ ಸಡಿಲಿಸುತ್ತಾರೆ. ಆಗಸ್ಟ್ 3, 1947 ರಂದು ಹರಿಜನ ಬಂಧು ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಗಾಂಧೀಜಿ ಧ್ವಜದ ಕುರಿತು ಹೀಗೆ ಬರೆಯುತ್ತಾರೆ: “…ಧ್ವಜದ ನಡುವಣ ಆ ಚಕ್ರ ವನ್ನು ನೋಡಿ ಕೆಲವರಾದರೂ ಅಶೋಕ ಚಕ್ರವರ್ತಿ ಅಧಿಕಾರ ತ್ಯಜಿಸಿ ಶಾಂತಿ ದೂತನಾದದ್ದನ್ನು ನೆನಪಿಸಿ ಕೊಳ್ಳಬಹುದು. ಕೆಲವರಾದರೂ ಅಶೋಕನ ದಯಾಮಯ ಹೃದಯವನ್ನು ನೆನಪಿಸಿ ಕೊಳ್ಳಬಹುದು. ಆ ಚಕ್ರದಲ್ಲಿ ಚರಕವನ್ನು ಕಾಣುತಿದ್ದರೆ ಚರಕದ ಮಹಿಮೆ ಇನ್ನೂ ಒಂದು ತೂಕ ಹೆಚ್ಚಿದೆ ಅಂತ ನಾನು ಭಾವಿಸುತ್ತೇನೆ.”

ಕೆಂಪು ಕೋಟೆಯಲ್ಲಿ ಮೊದಲ ಧ್ವಜಾರೋಹಣ

ಆದರೆ ಧ್ವಜಕ್ಕೆ ವಂದಿಸುವ ವಿಷಯದಲ್ಲಿ ಗಾಂಧೀಜಿ ಬಯಸಿದಂತೆಯೇ ಆಯಿತು. ಕೆಂಪುಕೋಟೆಯಲ್ಲಿ ಮೇಲೇರಿದ ತ್ರಿವರ್ಣ ಪತಾಕೆಗೆ ಧ್ವಜವಂದನೆ ಮಾಡುವ ಪ್ರಮೇಯ ಅವರಿಗೆ ಬರಲಿಲ್ಲ. ಆ ರಾತ್ರಿ ಅವರು ಕಲ್ಕತ್ತದಲ್ಲಿದ್ದರು. “ಇಡೀ ಜಗತ್ತು ಮಲಗಿ ನಿದ್ರಿಸುತ್ತಿರುವ ಈ ಹೊತ್ತು ಭಾರತದ ಜೀವ-ಸ್ವಾತಂತ್ರ್ಯ ಎಚ್ಚೆತ್ತುಕೊಳ್ಳುತ್ತಿದೆ” ಎಂದು ಧ್ವಜ ಹಾರಿಸಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ನೆಹರು ಭಾವಾವೇಶದಿಂದ ಹೇಳುತ್ತಾರೆ. ಆದರೆ ಅಷ್ಟೊತ್ತಿಗೆ ಜಗತ್ತು ಮಲಗಿರುವುದಿಲ್ಲ. ಆಗ ಇಂಗ್ಲೆಂಡ್ ನಲ್ಲಿ ಸಂಜೆ ಏಳುವರೆ ಘಂಟೆಯ ಸಮಯವಾದರೆ, ಅಮೇರಿಕಾದಲ್ಲಿ ಮಧ್ಯಾಹ್ನ ಎರಡು ಘಂಟೆಯಾಗಿತ್ತು, ಆಸ್ಟ್ರೇಲಿಯಾದಲ್ಲಿ ಬೆಳಗು ಹರಿದಿತ್ತು. ನಿಜಕ್ಕೂ ಆ ಹೊತ್ತಿಗೆ ಮಲಗಿ ನಿದ್ರಿಸುತಿದ್ದದ್ದು ಭಾರತ. ಜ್ಯೋತಿಷಿಗಳ ಶಕುನದ ನುಡಿ ಕೇಳಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಧಣಿದ ದೇಶಬಾಂಧವರು ಲಕ್ಷ ಲಕ್ಷ ಹಳ್ಳಿಗಳಲ್ಲಿ ಗಾಢ ನಿದ್ದೆಯಲ್ಲಿದ್ದಾಗ ನಾಯಕರ ಗಢಣ  ದೆಹಲಿಯಲ್ಲಿ ಸ್ವಾತಂತ್ರ್ಯ ಆಚರಿಸಿತು.  ದೇಶದ ಜನರೊಂದಿಗೆ ಗಾಂಧೀಜಿ ಕೂಡಾ ಮಲಗಿ ನಿದ್ರಿಸುತಿದ್ದರು.

ಆ ಚಾರಿತ್ರಿಕ ರಾತ್ರಿ ಗಾಂಧೀಜಿ ಮಾಮೂಲಿಗಿಂತ ಒಂದು ತಾಸು ಮುಂಚಿತವಾಗಿ ಅಂದರೆ ರಾತ್ರಿ ಸುಮಾರು ಎರಡು ಘಂಟೆಗೆ ಎದ್ದೇಳುತ್ತಾರೆ. ಅದೇನು ಕಾಕತಾಳೀಯವೋ. ಸ್ವಾತಂತ್ರ್ಯದ ಅದೇ ದಿನ ಗಾಂಧೀಜಿಯ ಪಾಲಿಗೆ ತನ್ನ ಪರಮಾಪ್ತರೊಬ್ಬರನ್ನು ಕಳೆದುಕೊಂಡ ದಿನವೂ ಆಗಿತ್ತು. ಅಂದಿಗೆ ಸರಿಯಾಗಿ ಐದು ವರ್ಷಗಳ ಹಿಂದೆ ಬಹುಕಾಲ ಗಾಂಧೀಜಿಯವರ ಕಾರ್ಯದರ್ಶಿ ಮತ್ತು ಹತ್ತಿರದ ಬೌದ್ಧಿಕ ಒಡನಾಡಿಯಾಗಿದ್ದ ಮಹಾದೇವ ದೇಸಾಯಿ ಅವರು ತೀರಿಕೊಂಡಿದ್ದರು. ಆ ರಾತ್ರಿ ಎದ್ದು ಗಾಂಧೀಜಿ ಅಗಲಿದ ಆಪ್ತ ಜೀವಕ್ಕಾಗಿ ಪ್ರಾರ್ಥಿಸುತ್ತಾರೆ. ಎಂದಿನಂತೆ ಚರಕದಿಂದ ನೂಲುತ್ತಾರೆ. ಆದರೆ ಬೆಳಗಾತ ಯಾವ ಧ್ವಜಾರೋಹಣ ಕಾರ್ಯಕ್ರಮದಲ್ಲೂ ಭಾಗವಹಿಸುವುದಿಲ್ಲ.

ಅಂತೂ ಅಶೋಕ ಚಕ್ರ ಧ್ವಜಮಧ್ಯೆ ಉಳಿದಿದೆ. ಅಶೋಕ ಚಕ್ರವರ್ತಿಯ ಪಾಲಿಗೆ ಅದು ಹಿಂಸೆಯಿಂದ ಅಹಿಂಸೆಯ ಕಡೆಗೆ ತಿರುಗಿದ ಚಕ್ರ. ಭಾರತದ ಪಾಲಿಗೆ ಆ ಚಕ್ರ ಅಹಿಂಸೆಯಿಂದ ಹಿಂಸೆಯತ್ತ ಚಲಿಸುತ್ತಿದೆ ಅಂತ ಅನ್ನಿಸುತ್ತಿದೆ. ಹಾಗೆ ಯಾರಿಗೆ ಅನ್ನಿಸುತ್ತಿಲ್ಲವೋ ಅವರೆಲ್ಲಾ ಇಂದು ದೇಶ ಭಕ್ತರಾಗುತ್ತಿದ್ದಾರೆ.

ಆಧಾರ: (ಲಾರಿ ಕಾಲಿನ್ಸ್ ಮತ್ತು ಡಾಮಿನಿಕ್ ಲ್ಯಾಪಿಯೆರ್ ಬರೆದ ಫ್ರೀಡಂ ಅಟ್ ಮಿಡ್ನೈಟ್ ಪುಸ್ತಕ)

ಎ. ನಾರಾಯಣ

ಚಿಂತಕರು

ಇದನ್ನೂ ಓದಿ- ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕಿಂತ, ಹುಳುಕುಗಳ ಬಗ್ಗೆ ಚರ್ಚೆ ಮಾಡಬೇಕಿದೆ

More articles

Latest article