ಉನ್ನತ ಕಾನೂನು ಶಿಕ್ಷಣದಲ್ಲಿ ಕನ್ನಡ ಬೋಧನೆಯನ್ನು ಅಳವಡಿಸಿ: ಯುಜಿಸಿಗೆ ಡಾ.ಪುರುಷೋತ್ತಮ ಬಿಳಿಮಲೆ ಪತ್ರ

Most read

ಬೆಂಗಳೂರು: ನ್ಯಾಯವಾದಿಗಳಾಗಲು ಅಸಂಖ್ಯ ಗ್ರಾಮೀಣ ಪ್ರತಿಭೆಗಳು ಕಾನೂನು ಶಿಕ್ಷಣವನ್ನು ಕನ್ನಡದಲ್ಲಿ ಕಲಿಯಲು ಸಾಧ್ಯತೆಗಳಿಲ್ಲದಿರುವುದರಿಂದ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಅವಕಾಶದಿಂದ ವಂಚಿತರಾಗುತ್ತಿದ್ದು, ವಿಶ್ವವಿದ್ಯಾಲಯ ಅನುದಾನ ಆಯೋಗವು ಉನ್ನತ ಕಾನೂನು ಶಿಕ್ಷಣವನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ನೀಡುವ ವ್ಯವಸ್ಥೆ ಜಾರಿಗೆ ತರಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ ಪಡಿಸಿದ್ದಾರೆ.

ಈ ಕುರಿತಂತೆ ಯುಜಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವ ಬಿಳಿಮಲೆ, ಪ್ರಸ್ತುತ ಎಲ್ ಎಲ್ ಎಂ, ಎಲ್ ಎಲ್ ಬಿ ಮತ್ತು ಪಿಎಚ್‌ ಡಿ ಗಳನ್ನು ಕೇವಲ ಆಂಗ್ಲ ಭಾಷೆಯಲ್ಲಿ ಅಭ್ಯಸಿಸುವ ಅವಕಾಶವಿದ್ದು, ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಉಲ್ಲೇಖಿಸಿ ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಹೊಂದದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅವಕಾಶ ವಂಚಿತರಾಗಿಸುತ್ತಿದ್ದಾರೆ. ಯುಜಿಸಿ ತನ್ನ ನಿಯಮಗಳಲ್ಲಿ ತಿದ್ದುಪಡಿಯನ್ನು ತರುವ ಮೂಲಕ ಇಂತಹ ಅಸಂಖ್ಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ ಎಂದು ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಗ್ರಹದ ಮೇಲೆ ರಾಜ್ಯದ ಹಲವು ವಿಶ್ವವಿದ್ಯಾಲಯಗಳ ತಾಂತ್ರಿಕ ಶಿಕ್ಷಣ ಬೋಧನೆಯಲ್ಲಿ ಕನ್ನಡ ಪಠ್ಯವನ್ನು ಅಳವಡಿಸಿಕೊಳ್ಳಲಾಗಿದ್ದು, ಇದೇ ಮಾದರಿಯ ಕ್ರಮವನ್ನು ಯುಜಿಸಿ ಅನುಸರಿಸಬಹುದಾಗಿದೆ ಎಂದಿರುವ ಬಿಳಿಮಲೆ, ಕೂಡಲೇ ಆಯೋಗವು ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯವನ್ನು ತಯಾರಿಸಲು ಮುಂದಾಗಬೇಕೆಂದಿದ್ದಾರೆ. ಈ ಕುರಿತಂತೆ ಸಮಿತಿಯೊಂದನ್ನು ರಚಿಸಿ ಉನ್ನತ ಕಾನೂನು ಶಿಕ್ಷಣಕ್ಕೆ ನಿಗದಿಪಡಿಸಲಾಗಿರುವ ಆಂಗ್ಲ ಭಾಷೆಯ ಪಠ್ಯಕ್ರಮದ ಭಾಷಾಂತರಣೆಗೆ ಕ್ರಮವಹಿಸಬೇಕಿರುತ್ತದೆ.

ಆಸಕ್ತ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಯಲ್ಲಿ ಉನ್ನತ ಕಾನೂನು ಶಿಕ್ಷಣವನ್ನು ಮುಂದುವರೆಸುವ ಅವಕಾಶ ದೊರೆತಲ್ಲಿ ಉತ್ತಮ ನ್ಯಾಯದಾನ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಲಿದೆ. ಈ ರೀತಿಯ ತೀರ್ಮಾನದಿಂದ ಯುಜಿಸಿಯ ದೇಶಸೇವೆ ಶಾಶ್ವತವಾಗಿ ಉಳಿಯಲಿದೆ ಎಂದು ಬಿಳಿಮಲೆ ಹೇಳಿದ್ದಾರೆ.

More articles

Latest article