ವಿಶೇಷ | ಗಾಂಧಿ ಪ್ರಸ್ತುತತೆ ಭಿನ್ನ ಆಯಾಮಗಳಲ್ಲಿ

Most read

ಧಾರ್ಮಿಕ ದಬ್ಬಾಳಿಕೆ, ಜಾತಿ ಶ್ರೇಷ್ಠತೆಯ ಯಜಮಾನಿಕೆ ಮತ್ತು ಆಡಳಿತಾತ್ಮಕ ದಮನವನ್ನು ನಿಂತ ನೆಲೆಯಿಂದಲೇ ವಿರೋಧಿಸುವುದಲ್ಲದೆ, ಜನಸಮೂಹಗಳ ನಡುವೆ ಬೆರೆತು ಅನ್ಯಾಯದ ವಿರುದ್ಧ ಜನದನಿಯನ್ನು ಕ್ರೋಢೀಕರಿಸಿ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮಾದರಿಗೆ ಗಾಂಧಿ ಇಂದಿಗೂ ಸಾಕ್ಷಿಯಾಗುತ್ತಾರೆ. ತಾತ್ವಿಕ ನೆಲೆಗಳಿಂದಾಚೆಗೆ ಗಾಂಧಿ ಸಮಾಜದ ಉನ್ನತಿಗೆ ಇಂದಿಗೂ ಪ್ರಸ್ತುತವಾಗುತ್ತಾರೆ ನಾ. ದಿವಾಕರ, ಚಿಂತಕರು.

ಮಹಾತ್ಮ ಗಾಂಧಿ ಭಾರತದ ಸಮಕಾಲೀನ ಇತಿಹಾಸದಲ್ಲಿ ಕುತೂಹಲಕಾರಿ (intriguing) ವ್ಯಕ್ತಿಯಾಗಿ ಕಾಣುತ್ತಾರೆ. ದ್ವೇಷ ರಾಜಕಾರಣದ ವಿಶಾಲ ಸಂತೆಯಲ್ಲಿ ತಮ್ಮ ಬೌದ್ಧಿಕ ಅರಿವನ್ನು ಮೂಡಿಸಿಕೊಂಡಿರುವ ಮಿಲೆನಿಯಂ ಯುವ ಸಮೂಹದ ಒಂದು ದೊಡ್ಡ ವರ್ಗದ ದೃಷ್ಟಿಯಲ್ಲಿ ಗಾಂಧಿ ನಿರಾಕರಿಸಬಹುದಾದ ಅಥವಾ ಒಂದು ರೀತಿಯಲ್ಲಿ ದ್ವೇಷಿಸಬಹುದಾದ ವ್ಯಕ್ತಿಯಾಗಿ ಕಾಣುತ್ತಾರೆ. ಬಲಪಂಥೀಯ ಸಾಂಸ್ಕೃತಿಕ ರಾಜಕಾರಣದಲ್ಲಿ ಈ ಅಹಿಂಸಾ ತತ್ವ ಪ್ರತಿಪಾದಕನನ್ನು ಸಾಕಷ್ಟು ವಿಕೃತಗೊಳಿಸಿ ಜನರ ನಡುವೆ ನಿಲ್ಲಿಸಲಾಗಿದೆ. ಇದಕ್ಕೆ ಪೂರಕವಾಗಿ ಸಕ್ರಿಯವಾಗಿರುವ ವಾಟ್ಸಾಪ್‌ ವಿಶ್ವವಿದ್ಯಾಲಯದ ಚಿಂತನಾ ವಲಯವು ಮಹಾತ್ಮ ಎಂಬ ಅತ್ಯುನ್ನತ ಬಿರುದನ್ನು, ಗಾಂಧಿ ಹಂತಕ ಗೋಡ್ಸೆಗೂ ರವಾನಿಸಿದೆ. ಈ ಗೊಂದಲಗಳ ನಡುವೆಯೇ ಗಾಂಧಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಂಪಾದಿಸಿದ್ದ ಜನಮನ್ನಣೆಯನ್ನು ವರ್ತಮಾನದಲ್ಲಿ ನಿಂತು ಅಲ್ಲಗಳೆಯುವ ಪ್ರಯತ್ನಗಳೂ ವ್ಯವಸ್ಥಿತವಾಗಿ ನಡೆಯುತ್ತಲೇ ಇದೆ. 75 ವರ್ಷಗಳ ನಂತರದ ಡಿಜಿಟಲ್‌ ಭಾರತದ ವಾತಾವರಣದಲ್ಲಿ ಮಹಾತ್ಮನನ್ನು ದ್ವೇಷದಿಂದ ನೋಡುವ ಅಥವಾ ಚರಿತ್ರೆಯ ಪುಟಗಳಿಂದಲೇ ಅಳಿಸಿಹಾಕಬಹುದಾದ ವ್ಯಕ್ತಿಯನ್ನಾಗಿ ನೋಡುತ್ತಿದ್ದಾರೆ. ಇದು ವ್ಯವಸ್ಥಿತವಾಗಿ ಪೋಷಿಸಲ್ಪಟ್ಟಿರುವ ಒಂದು ತಿಳುವಳಿಕೆಯ ಮಾದರಿ.

ಗಾಂಧಿ ರಾಜಕೀಯ ಅಂಗಳದಲ್ಲಿ

ಅಂಬೇಡ್ಕರ್‌ ಅವರಂತೆಯೇ, ಭಾರತದ ಸಂವಿಧಾನದಂತೆಯೇ, ಗಾಂಧಿ ಸಹ ಆಳುವ ಪಕ್ಷಗಳಿಗೆ ಮತ್ತು ರಾಜಕೀಯ ಪಕ್ಷಗಳಿಗೆ ರೂಪಕವಾಗಿ ಕಾಣತೊಡಗಿರುವುದು ವರ್ತಮಾನದ ದುರಂತ ವಾಸ್ತವ. ಆಳುವ ಕೇಂದ್ರಗಳಲ್ಲಿ ಕುಳಿತು ಅಲ್ಲಗಳೆಯಲಾಗದ ಗಾಂಧಿಯನ್ನು ಸಾರ್ವಜನಿಕ ಸಭೆಗಳಲ್ಲಿ ನಿರಾಕರಿಸುವ ಒಂದು ಮಾದರಿಯನ್ನು ರಾಜಕೀಯ ನಾಯಕರು ಅಳವಡಿಸಿಕೊಂಡಿದ್ದಾರೆ. ಅಕ್ಟೋಬರ್‌ 2ರಂದು ಸರ್ಕಾರಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಇದರ ಒಳಸೂಕ್ಷ್ಮಗಳನ್ನು ಗುರುತಿಸಬಹುದು. ಕಳೆದ 11 ವರ್ಷದಿಂದ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಮತ್ತು ಸಂಘಪರಿವಾರದ ದೃಷ್ಟಿಯಲ್ಲಿ ಗಾಂಧಿ ಬಿಟ್ಟೂ ಬಿಡಲಾಗದ ವ್ಯಕ್ತಿಯಾಗಿ ಕಾಣುತ್ತಾರೆ. 1998ರಲ್ಲಿ ಕೇಳಿಬರುತ್ತಿದ್ದ, ತದನಂತರ ಸದ್ದಿಲ್ಲದೆ ಮರೆಯಾಗಿದ್ದ, ಸ್ವದೇಶಿ ಆಂದೋಲನ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಸ್ವದೇಶಿ ವಸ್ತುಗಳನ್ನೇ ಬಳಸಿ ಎಂಬ ಘೋಷಣೆ ರಾಜಕೀಯವಾಗಿ ಮೊಳಗುತ್ತಿದೆ. ಖಾದಿ ನೂಲುವ ಚರಕ ಮತ್ತೊಮ್ಮೆ ಪ್ರದರ್ಶನ ವಸ್ತುವಾಗಿದೆ. ಈ ಹಾದಿಯಲ್ಲಿ ಗಾಂಧಿ ಆಡಳಿತಾತ್ಮಕವಾಗಿ ಬಳಕೆಯಾಗುತ್ತಾರೆಯೇ ಹೊರತು, ಅವರ ಮೂಲ ಕಲ್ಪನೆಯ ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಕೈಗಾರಿಕೆಗಳ ಉನ್ನತೀಕರಣ ಮತ್ತು ಗ್ರಾಮೀಣ ಭಾರತದ ಸಾಮಾಜಿಕ ಬದುಕಿನ ಉದಾತ್ತತೆಗಳ ನೆಲೆಯಲ್ಲಿ ಗಾಂಧಿ ತತ್ವಗಳು ಭಾಷಣಗಳಿಗೆ ಸೀಮಿತವಾಗಿಬಿಡುತ್ತವೆ.

ಮಹಾತ್ಮ ಗಾಂಧೀಜಿ

ಗಾಂಧಿ ಇಂದು ಚುನಾವಣೆಯಲ್ಲಿ ಮತ ಗಳಿಸುವ ಸೇತುವೆಯಾಗಿ ಉಳಿದಿಲ್ಲ. ಭಾವನಾತ್ಮಕವಾಗಿ ಇದನ್ನು ಆಗುಮಾಡುವ ಪ್ರಯತ್ನಗಳು ಅಕ್ಟೋಬರ್‌ 2 ಮತ್ತು ಜನವರಿ 30ರಂದು ನಡೆಯುತ್ತವೆ. ಗಾಂಧಿ ಪ್ರತಿಪಾದಿಸಿದ ಸರಳತೆ, ಸಂಯಮ, ಸಭ್ಯತೆ, ವ್ಯಕ್ತಿಗತ ನೈತಿಕತೆ, ಪ್ರಾಮಾಣಿಕತೆ ಇನ್ನೂ ಮೊದಲಾದ ಉದಾತ್ತ ಗುಣಗಳು ವರ್ತಮಾನದ ರಾಜಕಾರಣಿಗಳಿಗೆ ಆಲಂಕಾರಿಕ ಶೃಂಗಾರ ಸಾಧನಗಳಾಗಿ ಮಾತ್ರ ಕಾಣಲು ಸಾಧ್ಯ. ಗಾಂಧಿ ಕಂಡ ಗ್ರಾಮ ಸ್ವರಾಜ್ಯದ ಕನಸನ್ನು ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನೇ ಬಳಸಿ ನುಚ್ಚು ನೂರು ಮಾಡುತ್ತಿರುವುದನ್ನು ಕಾಣುತ್ತಲೇ ಬಂದಿದ್ದೇವೆ. ಇದಕ್ಕೆ ಕಾರಣ ಸಮಾಜದಲ್ಲಿ ಬಲಗೊಳ್ಳುತ್ತಿರುವ ಬಂಡವಾಳ-ಸಂಪತ್ತು ಮತ್ತು ಐಸಿರಿಗಳು ಹಾಗೂ ಔದ್ಯಮಿಕ ವಲಯದಲ್ಲಿ ಸೃಷ್ಟಿಯಾಗಿರುವ ಸಂಪತ್ತು ಕ್ರೋಢೀಕರಣದ ಹೊಸ ಮಾದರಿಗಳು.. ಈ ಔದ್ಯಮಿಕ ಜಗತ್ತಿನಿಂದ ಉಗಮಿಸುವ ನಾಯಕತ್ವಗಳೇ ಇಂದಿನ ಅಧಿಕಾರ ರಾಜಕಾರಣದ ವಾರಸುದಾರಿಕೆಯನ್ನೂ ವಹಿಸಿಕೊಂಡಿರುವುದು ವಾಸ್ತವ.

ಇಲ್ಲಿ ಗಾಂಧಿ ಏಕೆ ನೆನಪಾಗುತ್ತಾರೆ ?

ತತ್ಪರಿಣಾಮವಾಗಿ  ರಿಯಲ್‌ ಎಸ್ಟೇಟ್‌, ಗಣಿಗಾರಿಕೆ ಮತ್ತಿತರ ಲಾಭದಾಯಕ ಮಾರುಕಟ್ಟೆಯ ಜಗತ್ತಿನಿಂದ ಉಗಮಿಸುವ ವ್ಯಕ್ತಿಗಳೇ ಶಾಸನ ಸಭೆಗಳನ್ನೂ ಅಲಂಕರಿಸುತ್ತಿದ್ದಾರೆ. ಹಣ, ಶ್ರೀಮಂತಿಕೆ ಮತ್ತು ಪ್ರಭಾವಗಳ ಚೌಕಟ್ಟಿನಲ್ಲಿ ಉದ್ದೀಪನಗೊಳ್ಳುವ ಶೋಷಕ ಮನಸ್ಥಿತಿಯೇ ಸ್ವಾಭಾವಿಕವಾಗಿ ಅಪರಾಧಿಕ ಮನಸ್ಥಿತಿಯನ್ನೂ ಸೃಷ್ಟಿಸುತ್ತದೆ. ಹಾಗಾಗಿಯೇ ಸ್ವತಂತ್ರ ಭಾರತದಲ್ಲಿ ಎಂದೂ ಕಾಣದಷ್ಟು ಸಂಖ್ಯೆಯಲ್ಲಿ ಅಪರಾಧ ಹಿನ್ನೆಲೆಯಿರುವ ಜನಪ್ರತಿನಿಧಿಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾಣಬಹುದು. ನಾವೇ ಚುನಾಯಿಸುತ್ತಿದ್ದೇವೆ. ಗಾಂಧಿ ಇಲ್ಲಿ ಏಕೆ ಮುಖ್ಯವಾಗುತ್ತಾರೆ ಎಂದರೆ, ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ, ತಮ್ಮ ಕಾರ್ಯಕ್ಷೇತ್ರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು, ಸಂಭವಿಸಬಹುದಾದ ಪ್ರಮಾದಗಳಿಗೆ ಉತ್ತರದಾಯಿತ್ವವನ್ನು ಹೊರುವ ನೈತಿಕತೆ ಇಂದಿನ ರಾಜಕಾರಣದಲ್ಲಿ ವಸ್ತು ಸಂಗ್ರಹಾಲಯದ ವಸ್ತುವಾಗಿಯೂ ( Museum Piece) ಕಾಣಲಾಗುವುದಿಲ್ಲ. ಭಾರತ ಉತ್ತರದಾಯಿತ್ವ ಇಲ್ಲದ ಹಾದಿಯಲ್ಲಿ ಸಾಗುತ್ತಿದೆ.

ಹಾಗಾಗಿ ಗಾಂಧಿ ಪ್ರತಿಪಾದಿಸಿದ ಪ್ರಾಮಾಣಿಕತೆ ಮತ್ತು ವಿರೋಧಿಸಿದ ಭ್ರಷ್ಟಾಚಾರ ಇಂದು ಸಾಂದರ್ಭಿಕವಾಗಿರುವುದೇ ಅಲ್ಲದೆ, ರಾಜಕೀಯ ಅನುಕೂಲತೆಗಳಿಗೆ ಅನುಸಾರವಾಗಿ ಸ್ವೀಕೃತವಾಗುವ ಅಥವಾ ಸಮ್ಮತಿಸಬಹುದಾದ ವಿದ್ಯಮಾನಗಳಾಗಿವೆ. ಭ್ರಷ್ಟಾಚಾರವನ್ನು ತುಲನಾತ್ಮಕವಾಗಿ ನೋಡುವ ಹೊಸ ಮಾದರಿಯಲ್ಲಿ ಹೆಚ್ಚು ಅಥವಾ ಕಡಿಮೆ ಭ್ರಷ್ಟರನ್ನು ಗುರುತಿಸಬಹುದೇ ಹೊರತು, ಭ್ರಷ್ಟರಲ್ಲದವರನ್ನು ಗುರುತಿಸಲು ಸೂಕ್ಷ್ಮ ದರ್ಶಕ ಯಂತ್ರವೂ ನೆರವಾಗುವುದಿಲ್ಲ. ಗಾಂಧಿ ಕ್ರಾಂತಿಕಾರಿ ಚಿಂತನೆಗಳನ್ನು ಹುಟ್ಟುಹಾಕಲಿಲ್ಲ. ಆದರೆ ಸಮಾಜ ಸುಧಾರಣೆಯ ಮಾರ್ಗಗಳನ್ನು ರೂಪಿಸಿದರು. ಭಾರತದ ಜಾತಿ ವ್ಯವಸ್ಥೆಯನ್ನು ಅಂಬೇಡ್ಕರ್‌ ಅವರಂತೆ ವಿಮರ್ಶಾತ್ಮಕವಾಗಿ ನೋಡದೆ, ವರ್ಣಾಶ್ರಮ ಧರ್ಮವನ್ನು ಸಮರ್ಥಿಸಿದ್ದ, ಗಾಂಧಿ ಸನಾನತವಾದಿಯೂ ಆಗಿದ್ದುದು ವಾಸ್ತವ. ಆದರೆ ಈ ತಾತ್ವಿಕ ಚೌಕಟ್ಟುಗಳ ಒಳಗೇ ಸಮಾಜದಲ್ಲಿ ಜಾತಿ ದ್ವೇಷ, ಮಹಿಳಾ ದ್ವೇಷ, ಮಹಿಳೆಯನ್ನು ಅಧೀನಳಾಗಿ ನೋಡುವ ಪಿತೃಪ್ರಧಾನತೆ, ಜನರನ್ನು ಪಶುಗಳ ಹಾಗೆ ಕಾಣುವ ಊಳಿಗಮಾನ್ಯ ಅಹಮಿಕೆ ಮತ್ತು ಅಸ್ಪೃಶ್ಯತೆಯಂತಹ ಹೀನ ಪದ್ಧತಿಗಳನ್ನು ಸರಿಪಡಿಸುವ ಸುಧಾರಣಾ ಮಾರ್ಗಗಳನ್ನು ರೂಪಿಸಿದ್ದರು.

ಸಮಾಜದ ಸುಧಾರಕರಾಗಿ ಗಾಂಧಿ

ಅಂಬೇಡ್ಕರ್‌, ಗಾಂಧಿ

ವಸುದೈವ ಕುಟುಂಬಕಂ ಎಂಬ ಪುರಾತನ  ಕಲ್ಪನೆಯಲ್ಲಿ ನಂಬಿಕೆ ಇಟ್ಟಿದ್ದ ಗಾಂಧಿ ಬಯಸಿದ್ದ ಕೌಟುಂಬಿಕ ಕೂಡು ಬಾಳ್ವೆ ಇಂದು ಭಗ್ನವಾಗಿದೆ. ಮಹಿಳೆಯನ್ನು ಗೌರವಿಸುವ ಗಾಂಧಿಯವರ ಕಲ್ಪನೆಯನ್ನೂ ದಾಟಿ ನೋಡಿದಾಗ, ಮಹಿಳೆಯ ಘನತೆ ಮತ್ತು ಅಸ್ತಿತ್ವವನ್ನೇ ಇಲ್ಲವಾಗಿಸುವ ಜಾತಿ ದೌರ್ಜನ್ಯ ಮತ್ತು ಪುರುಷಾಧಿಪತ್ಯ ಭಾರತೀಯ ಸಮಾಜವನ್ನು ಆಳುತ್ತಿದೆ. ಇದರ ಪ್ರಾತ್ಯಕ್ಷಿಕೆಯನ್ನು ಕರ್ನಾಟಕದಲ್ಲಿ ವರದಿಯಾಗಿರುವ ಬಾಲವಿಧವೆಯರು, ಬಾಲ್ಯ ವಿವಾಹಗಳು, ಅಪ್ರಾಪ್ತರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ-ಅತ್ಯಾಚಾರಗಳು ಇವೇ ಮುಂತಾದ ಪಾತಕ ಕೃತ್ಯಗಳಲ್ಲಿ ಕಾಣಬಹುದು. ಸಮಾಜ ಸುಧಾರಣೆಯ ಚೌಕಟ್ಟಿನಲ್ಲಿ ಮಹಿಳಾ ಸಬಲೀಕರಣ ಮತ್ತು ಹೆಣ್ಣಿನ ಘನತೆಯ ರಕ್ಷಣೆ, ಮಹಿಳಾ ಪ್ರಾತಿನಿಧ್ಯದ ಕಲ್ಪನೆಗಳನ್ನು ಹೊಂದಿದ್ದ ಗಾಂಧಿ, ಆಧುನಿಕ ಸ್ತ್ರೀವಾದಿ ತಾತ್ವಿಕತೆಯಿಂದ ಭಿನ್ನವಾಗಿ ಕಂಡರೂ, ಜಾತಿ ವ್ಯವಸ್ಥೆ ಮತ್ತು ಪಿತೃಪ್ರಧಾನತೆಯನ್ನು ಆಳಕ್ಕಿಳಿದು ನೋಡದೆ ಹೋದರೂ, ಸಮಾಜದ ಮನಸ್ಥಿತಿಯನ್ನು ಪರಿವರ್ತಿಸುವ ಮೂಲಕ ಮಹಿಳಾ ಸಮಾನತೆಯನ್ನು ಸಾಧಿಸಲು ಬಯಸಿದ್ದವರು. ಈ ಹಿನ್ನೆಲೆಯಲ್ಲಿ ಗಾಂಧಿ ಪ್ರಸ್ತುತವಾಗಿ ಕಾಣುತ್ತಾರೆ.

ವ್ಯಕ್ತಿಗತ ಧಾರ್ಮಿಕ ನಂಬಿಕೆಗಳು ಎಂದಿಗೂ ಅಪಾಯಕಾರಿಯಾಗುವುದಿಲ್ಲ. ಈ ನಂಬಿಕೆಗಳನ್ನು ಸಾಂಘಿಕ ನೆಲೆಯಲ್ಲಿ ಸಮಾಜದ ನಡುವೆ ಪಸರಿಸಲು ಮುಂದಾದಾಗ, ಧರ್ಮ ಮತ್ತು ಧಾರ್ಮಿಕ ಆಚರಣಾ ವಿಧಾನಗಳನ್ನು ಸಾಂಸ್ಥೀಕರಣಕ್ಕೊಳಪಡಿಸಿ, ಸಮಾಜದ ಒಂದು ವರ್ಗ ಯಜಮಾನಿಕೆಯನ್ನು ಸ್ಥಾಪಿಸಿದಾಗ, ಧರ್ಮ ರೂಪಾಂತರಗೊಂಡು, ರಾಜಕೀಯ ಅಧಿಕಾರವಾಗಿ, ಸಾಂಸ್ಕೃತಿಕ ಆಯುಧವಾಗಿ, ಸಾಮಾಜಿಕ ಭದ್ರಕೋಟೆಯಾಗಿ, ಆರ್ಥಿಕ ಅಸ್ತ್ರವಾಗಿ ಪರಿಣಮಿಸುತ್ತದೆ. ಭಾರತ ಇಂತಹ ಒಂದು ಅಪಾಯವನ್ನು ಎದುರಿಸುತ್ತಿದೆ. ಗಾಂಧಿ ಎದೆಯೊಳಗಿದ್ದ ರಾಮನಿಗೂ 21ನೆ ಶತಮಾನದ ರಾಜಕೀಯ ಪರಿಸರದ ರಾಮನಿಗೂ ಇರುವ ಅಂತರವನ್ನು ಇಲ್ಲಿ ಗುರುತಿಸಬೇಕಿದೆ. ಈ ದೃಷ್ಟಿಯಿಂದ ನೋಡಿದಾಗ, ಗಾಂಧಿಯ ಧಾರ್ಮಿಕತೆ ಅಂಧಾನುಕರಣೆಯ ಮಾರ್ಗವಾಗಿರಲಿಲ್ಲ ಎನ್ನುವುದು ಮುಖ್ಯ.

ಧರ್ಮ-ಸಂಸ್ಕೃತಿಯ ತಾಕಲಾಟದಲ್ಲಿ ಗಾಂಧಿ

ಆದರೆ ಇಂದಿನ ಭಾರತೀಯ ಸಮಾಜದ ಒಂದು ವರ್ಗ,   ಧರ್ಮ ಮತ್ತು ಸಂಸ್ಕೃತಿಯನ್ನು ಸಮಾನಾಂತರವಾಗಿ ನೋಡದೆ, ಸಮೀಕರಿಸಿ ನೋಡುತ್ತಿರುವುದರಿಂದ, ಸಾಂಸ್ಕೃತಿಕ ಜಗತ್ತು ಎಂದರೆ ಧಾರ್ಮಿಕ ಅಂಧ ಶ್ರದ್ಧೆ, ಅಂಧಾನುಕರಣೆ ಮತ್ತು ಅದರ ಸುತ್ತಲಿನ ಮೌಢ್ಯಾಚರಣೆಗಳ ಸಂಕೋಲೆಗಳಲ್ಲಿ ಸಮಾಜ ಸಿಲುಕಿದೆ. ಗಾಂಧಿ ಪ್ರತಿಪಾದಿಸಿದ, ಮಾನವೀಯ ನೆಲೆಯಲ್ಲಿ ಧರ್ಮ ಮತ್ತು ಧಾರ್ಮಿಕ ಆಚರಣೆಗಳನ್ನು ಕಾಣುವ ಔದಾತ್ಯದಿಂದ ಭಾರತ ಬಹಳ ದೂರ ಸಾಗಿಬಂದಿದೆ. ಇಲ್ಲಿ ನಮಗೆ ಗಾಂಧಿ ಒಂದು ಹಂತದವರೆಗೆ ಪ್ರಸ್ತುತ ಎನಿಸುತ್ತಾರೆ. ಅನ್ಯಾಯದ ವಿರುದ್ಧ ದನಿ ಎತ್ತುವ ಒಂದು ಪ್ರಖರ ಶಕ್ತಿಯಾಗಿ ಗಾಂಧಿ ವರ್ತಮಾನದ ಭಾರತಕ್ಕೆ ನಿದರ್ಶನ ಪ್ರಾಯರಾಗುತ್ತಾರೆ. ಧಾರ್ಮಿಕ ದಬ್ಬಾಳಿಕೆ, ಜಾತಿ ಶ್ರೇಷ್ಠತೆಯ ಯಜಮಾನಿಕೆ ಮತ್ತು ಆಡಳಿತಾತ್ಮಕ ದಮನವನ್ನು ನಿಂತ ನೆಲೆಯಿಂದಲೇ ವಿರೋಧಿಸುವುದಲ್ಲದೆ, ಜನಸಮೂಹಗಳ ನಡುವೆ ಬೆರೆತು ಅನ್ಯಾಯದ ವಿರುದ್ಧ ಜನದನಿಯನ್ನು ಕ್ರೋಢೀಕರಿಸಿ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮಾದರಿಗೆ ಗಾಂಧಿ ಇಂದಿಗೂ ಸಾಕ್ಷಿಯಾಗುತ್ತಾರೆ.

ಅಕ್ಟೋಬರ್‌ 2ರಂದು ವೈಷ್ಣವ ಜನತೋ ಹಾಡುವುದರಿಂದಾಗಲೀ, ಗಾಂಧಿ ಸಮಾಧಿಯ ಮುಂದೆ ಕುಳಿತು ಭಜಿಸುವುದಾಗಲೀ, ದೇಶಾದ್ಯಂತ ಗಾಂಧಿ ಪ್ರತಿಮೆಗಳಿಗೆ ಹೂ ಹಾರ ಹಾಕಿ ವಿನಮ್ರತೆಯಿಂದ ವಂದಿಸುವುದಾಗಲೀ, ಸಾಂಕೇತಿಕ ಆಚರಣೆಗಳಷ್ಟೇ ಆಗುತ್ತವೆ. ಹಾಗೆಯೇ ಗಾಂಧಿ ಪ್ರತಿಮೆಯನ್ನು ಭಗ್ನಗೊಳಿಸುವ ದುಷ್ಟ ಪ್ರವೃತ್ತಿ , ಹೆಜ್ಜೆ ಹೆಜ್ಜೆಗೂ ಗಾಂಧಿಯನ್ನು ಅಪಮಾನಿಸುತ್ತಾ, 2025ರ ಅನಿಷ್ಟಗಳಿಗೆಲ್ಲ 1948ರ ಪೂರ್ವದ ಗಾಂಧಿಯನ್ನು ಕಾರಣೀಭೂತರನ್ನಾಗಿ ಮಾಡುವ ದುರುಳತನ ನಮ್ಮ ಸಮಾಜ ಹೊರಳು ಹಾದಿಯಲ್ಲಿರುವುದನ್ನು, ದಿಕ್ಕು ತಪ್ಪುತ್ತಿರುವುದನ್ನು ಸೂಚಿಸುವ ಮಾಪಕಗಳಾಗಿ ಕಾಣುತ್ತವೆ.

ಈ ಎಲ್ಲ ವೈರುಧ್ಯಗಳ ನಡುವೆಯೂ ಎಲ್ಲಿಯೂ ಸಲ್ಲದಂತೆ ಕಾಣುವ ಗಾಂಧಿ ಎಲ್ಲ ಕಡೆಯೂ ಸಲ್ಲುತ್ತಾರೆ. ಅವರ ಚಿಂತನೆಗಳು ಎಷ್ಟೇ ವೈರುಧ್ಯಗಳಿಂದ ಕೂಡಿದ್ದರೂ, ತಳಸಮಾಜದ ತಲ್ಲಣಗಳ ನಡುವೆ ನಿಂತಾಗ, ಗಾಂಧಿ ಕೇವಲ ಪ್ರತಿಮೆಯಾಗಿ, ರೂಪಕವಾಗಿ ಉಳಿದುಬಿಡುವುದಿಲ್ಲ. ಅನ್ಯಾಯಕ್ಕೊಳಗಾದ, ನೊಂದ ಜನರು, ವಿಶೇಷವಾಗಿ ಅಸ್ಪೃಶ್ಯರು, ಅಲೆಮಾರಿಗಳು, ಮಹಿಳೆಯರು ಆಕಾಶದತ್ತ ಮುಖಮಾಡಿ ನ್ಯಾಯಕ್ಕಾಗಿ ಆಗ್ರಹಿಸುವಾಗ, ಎಲ್ಲೋ ಒಂದು ಕಡೆ ಗಾಂಧಿ ನಮ್ಮ ಚಿಂತನೆಗಳಲ್ಲಿ ಹಾದು ಹೋಗುತ್ತಾರೆ. ಹಾಗಾಗಿಯೇ ಗಾಂಧಿ ನಮ್ಮ ನಡುವೆ ಉಳಿದಿದ್ದಾರೆ, ಶತಮಾನಗಳು ಕಳೆದರೂ ಉಳಿದಿರುತ್ತಾರೆ.

ನಾ. ದಿವಾಕರ

ಚಿಂತಕರು

More articles

Latest article