ಬೆಂಗಳೂರು, ಸೆ.10: ಕರ್ನಾಟಕ ಮತ್ತು ಕೆನಡಾ ನಡುವಿನ ಆರ್ಥಿಕ, ತಂತ್ರಜ್ಞಾನ ಹಾಗೂ ಕೈಗಾರಿಕಾ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕೆನಡಾದ ನೂತನ ಕಾನ್ಸುಲ್ ಜನರಲ್ ಆಗಿ ನೇಮಕಗೊಂಡಿರುವ ರಯಾನ್ ವಾರ್ಡ್ ಅವರನ್ನು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ಕರ್ನಾಟಕವು ತಂತ್ರಜ್ಞಾನ, ನವೋದ್ಯಮ, ಕೌಶಲ್ಯಾಭಿವೃದ್ಧಿ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದು, ಕೆನಡಾದೊಂದಿಗೆ ಇರುವ ಸಹಕಾರವನ್ನು ಈ ಕ್ಷೇತ್ರಗಳಲ್ಲಿ ಇನ್ನಷ್ಟು ಆಳಗೊಳಿಸುವ ಮೂಲಕ ಎರಡೂ ಕಡೆಗಳ ಉದ್ಯಮಗಳು ಮತ್ತು ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅಕ್ಟೋಬರ್ನಲ್ಲಿ ಭಾರತಕ್ಕೆ ಆಗಮಿಸಲಿರುವ ಟೀಮ್ ಕೆನಡಾ ಟ್ರೇಡ್ ಮಿಷನ್ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಕೆನಡಾ ನಡುವಿನ ವಾಣಿಜ್ಯ ಹಾಗೂ ಕೈಗಾರಿಕಾ ಸಂಬಂಧಗಳಿಗೆ ಹೊಸ ವೇಗ ನೀಡುವ ಸಾಧ್ಯತೆಗಳ ಕುರಿತು ವಿಶೇಷವಾಗಿ ಚರ್ಚೆ ನಡೆಸಲಾಯಿತು.
“ಕರ್ನಾಟಕವು ಜಾಗತಿಕ ತಂತ್ರಜ್ಞಾನ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಕೆನಡಾ ಕೂಡ ತಂತ್ರಜ್ಞಾನ, ನವೋದ್ಯಮ, ಸಂಶೋಧನೆ, ಕೌಶಲ್ಯ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅಪಾರ ಸಾಮರ್ಥ್ಯ ಹೊಂದಿದೆ. ಈ ಎರಡೂ ಪರಿಸರ ವ್ಯವಸ್ಥೆಗಳ ಬಲವನ್ನು ಪರಸ್ಪರ ಸಂಪರ್ಕಿಸುವ ಮೂಲಕ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ನಮ್ಮ ಉದ್ದೇಶ,” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

