ನವದೆಹಲಿ: ವಾಲ್ಮೀಕಿ ನಿಗಮ ಮಂಡಳಿಯಲ್ಲಿ ಭ್ರಷ್ಟಚಾರ ನಡೆದಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಜರುಗಿಸಲು ಯಾವುದೇ ಅಭ್ಯಂತರ ಇಲ್ಲ. ಆದರೆ ಅದು ರಾಜಕೀಯ ಪ್ರೇರಿತ ದಾಳಿಯಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಾಲ್ಮಿಕಿ ಹಗರಣದಲ್ಲಿ ತಪ್ಪುಗಳು ನಡೆದಿವೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಈ ಹಗರಣದಲ್ಲಿ ಅಂದಿನ ಸಚಿವರ ಪಾತ್ರ ಇಲ್ಲ ಎನ್ನುವುದೂ ಸಾಬೀತಾಗಿದೆ. ಆದರೂ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಇಡಿ ಸಾಂವಿಧಾನಿಕ ಸಂಸ್ಥೆ ಅಲ್ಲ, ಬಿಜೆಪಿ ಅಂಗಸಂಸ್ಥೆಯಾಗಿ ಮಾರ್ಪಟ್ಟಿದೆ. ರಾಜಕೀಯ ಕಾರಣಗಳಿಗೆ ದಾಳಿ ನಡೆದಿದೆ ಎಂದು ಆರೋಪಿಸಿದರು.
ಜಾತಿಗಣತಿ ವರದಿ ಹತ್ತು ವರ್ಷಗಳಷ್ಟು ಹಳೆಯದಾಗಿದೆ. ಮರು ಸಮೀಕ್ಷೆಗೆ ಹೈಕಮಾಂಡ್ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಸಮೀಕ್ಷೆ ವರದಿ ಹೇಗಿರಲಿದೆ ಎಂದು ಜನರು ಎದುರು ನೋಡುತ್ತಿದ್ದಾರೆ. ಇಂತಹದೇ ಆರೋಪಗಳು ಮುಂದೆಯೂ ಬರಬಹುದು. ಅವೈಜ್ಞಾನಿಕ ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸಬೇಕು, ಅದನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಸಮೀಕ್ಷೆ ಮಾಡಬೇಕು. ತೆಲಂಗಾಣದಲ್ಲಿ ಸಮೀಕ್ಷೆ ನಡೆದಿದ್ದು ಉತ್ತಮವಾಗಿದೆ. ರಾಜ್ಯದಲ್ಲೂ ಇದೇ ರೀತಿ ಮಾಡುತ್ತೇವೆ. ಈಗಾಗಲೇ ಸಮೀಕ್ಷೆಯಿಂದ 187 ಕೊಟಿ ನಷ್ಟವಾಗಿದೆ. ಮುಂದೆ ಹೀಗೆ ಆಗಬಾರದು. ಬಲಾಢ್ಯರಿಗೆ ಮಾತ್ರ ಅನುಕೂಲವಾಗಬಾರದು. ಹಿಂದುಳಿದ ಜನರಿಗೂ ಸಂವಿಧಾನದ ಆಶಯ ತಲುಪಬೇಕು ಎಂದು ಹೇಳಿದರು.