ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಆರೋಪದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಗೆ (ಎನ್ಐಎ) ವಹಿಸುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಈ ಸಂಬಂಧ ಸ್ಪಷ್ಟನೆ ನೀಡಿದ ಅವರು ಧರ್ಮಸ್ಥಳ ಪ್ರಕರಣ ಕುರಿತು ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ತನಿಖೆ ಮುಂದುವರೆದಿದ್ದು, ಈ ಹಂತದಲ್ಲಿ ಪ್ರಕರಣವನ್ನು ಎನ್ಐಎಗೆ ನೀಡುವ ಚಿಂತನೆ ಸರ್ಕಾರಕ್ಕಿಲ್ಲ. ಎನ್ ಐಎ ತನಿಖೆ ಮಾಡಲೇಬೇಕು ಎಂದಾದರೆ ಅದರದ್ದೇ ವ್ಯಾಪ್ತಿಯಲ್ಲಿ ತನಿಖೆ ನಡೆಸಬಹುದು ಎಂದು ತಿಳಿಸಿದರು.
ಧರ್ಮಸ್ಥಳ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಪ್ರಯತ್ನ ನಡೆದಿದೆ. ಎಸ್ಐಟಿ ತನಿಖೆ ಮುಗಿಯುವ ಮೊದಲು ಯಾವುದೇ ಸಂಸ್ಥೆಗೆ ಪ್ರಕರಣ ನೀಡುವುದಿಲ್ಲ.
ತನಿಖೆಗೆ ಅಡ್ಡಿ ಪಡಿಸುವ ಉದ್ದೇಶದಿಂದಲೇ ಬಿಜೆಪಿ ಎನ್ ಐಎ ಗೆ ವಹಿಸುವ ಬೇಡಿಕೆ ಇಡುತ್ತಿದೆ. ಬಿಜೆಪಿಯವರ ಉದ್ದೇಶ ಬಹುಶಃ ತನಿಖೆಗೆ ಅಡ್ಡಿ ಮಾಡುವುದೇ ಆಗಿರಬಹುದು ಎಂದರು.
ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಧರ್ಮಸ್ಥಳ ಪ್ರಕರಣದ ತನಿಖೆಯಷ್ಟೇ ಅಲ್ಲದೆ ಹಲವು ವಿಷಯಗಳನ್ನು ಕುರಿತು ಚರ್ಚೆ ನಡೆಸಲು ಬೇಟಿ ಮಾಡುತ್ತಿರುತ್ತಾರೆ. ಇದರಲ್ಲಿ ವಿಶೇಷ ಏನೂ ಇಲ್ಲ. ಒಟ್ಟಾರೆ ಎಸ್ಐಟಿ ವರದಿ ನೀಡುವವರೆಗೂ ಮಾತನಾಡುವುದು ಸರಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.