ದರ್ಶನ್ ಮಾಜಿ ಮ್ಯಾನೇಜರ್ ಕುಟುಂಬಕ್ಕೆ ಟೀವಿ ಚಾನಲ್ ಗಳ ಕಾಟ: ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದ ಪತ್ನಿ

Most read

ಕೊಪ್ಪಳ: ಚಿತ್ರನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ನಾಪತ್ತೆಯಾಗಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಮಾಧ್ಯಮಗಳು ಪದೇಪದೇ ಅವರ ಕುಟುಂಬದ ಬೆನ್ನು ಬಿದ್ದಿದ್ದು, ದಯವಿಟ್ಟು ನಮ್ಮ ಮನೆಗೆ ಬರಬೇಡಿ, ಬಂದರೆ ನಮಗೆ ತೊಂದರೆ ಆಗುತ್ತದೆ ಎಂದು ಮಲ್ಲಿಕಾರ್ಜುನ್ ಅವರ ಪತ್ನಿ ತೇಜಸ್ವಿನಿ ಹೇಳಿದ್ದಾರೆ.

ದರ್ಶನ್ ಅವರ ಸಿನಿಮಾ ನಿರ್ಮಾಣ ಮತ್ತು ವಿತರಣಾ ಸಂಸ್ಥೆ್ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ್ ಸಂಸ್ಥೆಯ ಹಣ ದುರುಪಯೋಗ ಪಡಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಕೋಟ್ಯಂತರ ರುಪಾಯಿ ಸಾಲವನ್ನೂ ಮಾಡಿದ ಕಾರಣಕ್ಕಾಗಿ ಬೆಂಗಳೂರು ತೊರೆದು ಹೋಗಿದ್ದರು. ಆರು ವರ್ಷಗಳಿಂದ ಅವರ ಕುರಿತು ಯಾವುದೇ ಮಾಹಿತಿ ಇರಲಿಲ್ಲ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಹೊರಗೆ ಬಂದ ನಂತರ ಮಲ್ಲಿಕಾರ್ಜುನ್ ನಾಪತ್ತೆಯಾಗಿರುವುದು ಮುನ್ನೆಲೆಗೆ ಬಂದಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಮಲ್ಲಿಕಾರ್ಜುನ್ ಸೋದರ ಅವರು ತಮ್ಮ ಸೋದರ ಸುರಕ್ಷಿತವಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ಕುರಿತು ಕೆಲ ಟಿವಿ ಚಾನಲ್ ಗಳು ಪದೇ ಪದೇ ಮಲ್ಲಿಕಾರ್ಜುನ್ ಅವರ ಪತ್ನಿ ವಾಸವಾಗಿರುವ ಕೊಪ್ಪಳ ತಾಲ್ಲೂಕಿನ ಹುಲಗಿ ಗ್ರಾಮಕ್ಕೆ ತೆರಳಿ ಪ್ರತಿಕ್ರಿಯೆಗಳನ್ನು ಕೇಳಿದ್ದಾರೆ. ಈ ಸಂಬಂಧ ಮಾತನಾಡಿರುವ ಮಲ್ಲಿಕಾರ್ಜುನ್ ಅವರ ಪತ್ನಿ ತೇಜಸ್ವಿನಿ, ನಟ ದರ್ಶನ್ ರಿಂದ ನಮಗೆ ಯಾವುದೇ ತೊಂದರೆ ಆಗಿಲ್ಲ. ನಟ ದರ್ಶನ್ ರಿಂದ ಒಂದೊತ್ತಿನ ಊಟ ಮಾಡಿದ್ದೇವೆ. ಏನೋ ಕಷ್ಟ ಬಂದು ಹೊರಗೆ ಹೋಗಿದ್ದಾರೆ. ನಮ್ಮ ಯಜಮಾನರು ಶೀಘ್ರವೇ ಬರುತ್ತಾರೆ ಎಂಬ ಭರವಸೆ ನಮಗೆ ಇದೆ. ದಯವಿಟ್ಟು ನಮ್ಮ ಮನೆಗೆ ಬರಬೇಡಿ, ಬಂದರೆ ನಮಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಮಲ್ಲಿಕಾರ್ಜುನ್ ಸೋದರ ಸಂಕನಗೌಡರ್ ಕೂಡ ರೀತಿಯ ಹೇಳಿಕೆ ನೀಡಿದ್ದು, ದರ್ಶನ್ ಅವರಿಂದಾಗಲಿ, ಅವರ ತಂಡದವರಿಂದಾಗಲಿ ಯಾವುದೇ ಸಮಸ್ಯೆಯಾಗಿಲ್ಲ. ವೈಯಕ್ತಿಕ ವಿಚಾರಕ್ಕೆ ಸಹೋದರ ನಾಪತ್ತೆಯಾಗಿದ್ದಾನೆ. ಕೆಲ ವರ್ಷದ ಹಿಂದೆ ಸುರಕ್ಷಿತವಾಗಿದ್ದಾನೆ ಎಂದು ಪತ್ರ ಬರೆದಿದ್ದ ಎಂದು ಹೇಳಿದ್ದಾರಲ್ಲದೆ, ಟೀವಿ ಕ್ಯಾಮೆರಾಗಳ ಮುಂದೆ ಮಾತನಾಡಲು ನಿರಾಕರಿಸಿದ್ದಾರೆ.

ಈ ನಡುವೆ ಮಲ್ಲಿಕಾರ್ಜುನ್ ಅವರು ಗೋವಾದಲ್ಲಿದ್ದಾರೆ ಎಂದು ಕೆಲವು ಸುದ್ದಿಮಾಧ್ಯಮಗಳು ವರದಿ ಮಾಡಿವೆ.

More articles

Latest article