ವಿಶೇಷ | ಅಪರಾಧಿಕ ಪ್ರಪಂಚವೂ ಲಿಂಗತ್ವ ಸೂಕ್ಷ್ಮತೆಯೂ

Most read

ಇಂದು (ಆಗಸ್ಟ್‌ 26 ) ಮಹಿಳಾ ಸಮಾನತೆಯ ದಿನ.  ಈ ಹಿನ್ನೆಲೆಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಮೇಲೆ ಬೆಳಕು ಚೆಲ್ಲುತ್ತಾ ಸಮಾಜದಲ್ಲಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಲಿಂಗತ್ವ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯ ಬಗ್ಗೆ ಗಮನ ಹರಿಸಬೇಕಾದ ಅಗತ್ಯದ ಬಗ್ಗೆ  ಚಿಂತಕ ನಾ ದಿವಾಕರ ಅವರು ನಾಗರಿಕ ಪ್ರಪಂಚವನ್ನು ಎಚ್ಚರಿಸಿದ್ದಾರೆ.

ಸಮಕಾಲೀನ ಭಾರತ ಹಲವಾರು ದ್ವಂದ್ವಗಳ ನಡುವೆ ಬದುಕುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳ ನಡುವೆ ಸಮಾಜದ ವಸ್ತುಸ್ಥಿತಿಯನ್ನು, ನೆಲದ ವಾಸ್ತವವನ್ನು ಅರಿಯದ ಸಮಾಜ ಈ ದ್ವಂದ್ವಗಳಿಗೆ ಸಾಕ್ಷಿಯಾಗಿದೆ. ಸರ್ಕಾರಗಳು ವೇದಿಕೆಗಳ ಮೇಲೆ ನಿಂತು ಬೆನ್ನುತಟ್ಟಿಕೊಳ್ಳುತ್ತಿರುವಾಗಲೇ ಪರದೆಯ ತೆರೆಮರೆಯಲ್ಲಿ ಅತ್ಯಾಚಾರ, ದೌರ್ಜನ್ಯ, ಅಪರಾಧಗಳು ಅವ್ಯಾಹತವಾಗಿ ನಡೆಯುತ್ತಿವೆ. ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಮೆರವಣಿಗೆಯ ನಡುವೆಯೇ ದುರ್ಭರ ಜೀವನ ನಡೆಸುವ ಅಸಂಖ್ಯಾತ ಅವಕಾಶ ವಂಚಿತರ ಕೂಗು ಮುಗಿಲು ಮುಟ್ಟುವಂತಿದೆ.

ಮತ್ತೊಂದೆಡೆ ಭಾರತದ ಮಹಿಳಾ ಸಂಕುಲಕ್ಕೆ ಸಾಂತ್ವನ ನೀಡುವ ರಾಜಕೀಯ ಆಶ್ವಾಸನೆಗಳ ನಡುವೆಯೇ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರೈಟ್ಸ್‌ (ADR) ನಡೆಸಿರುವ ಸಮೀಕ್ಷೆಯೊಂದು, ಕಾನೂನು ನಿರೂಪಕರ ನೈತಿಕತೆಯನ್ನೇ ಪ್ರಶ್ನಿಸುವಂತಿದೆ. 2019 ರಿಂದ 2024ರ ಅವಧಿಯಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ ಶಾಸಕರು ಮತ್ತು ಸಂಸದರು ಸಲ್ಲಿಸಿರುವ ಪ್ರಮಾಣಪತ್ರಗಳ ಪರಿಶೀಲನೆಯಲ್ಲಿ, 16 ಸಂಸದರು 135 ಶಾಸಕರು ಮಹಿಳೆಯರ ವಿರುದ್ಧ ಅಪರಾಧ ಎಸಗಿರುವುದು ಕಂಡುಬಂದಿದೆ. ಇವರ ಪೈಕಿ ಇಬ್ಬರು ಸಂಸದರು 14 ಶಾಸಕರು ಐಪಿಸಿ ಸೆಕ್ಷನ್‌ 376ರ ಅಡಿ ಕನಿಷ್ಠ ಹತ್ತು ವರ್ಷ ಶಿಕ್ಷೆಗೊಳಗಾಗಬಹುದಾದ ಅಪರಾಧಗಳನ್ನು ಎಸಗಿರುವುದು ದಾಖಲಾಗಿದೆ.

ಈ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಮಹಿಳಾ ಸಮಾವೇಶದಲ್ಲಿ ಮಾತನಾಡುತ್ತಾ “ ಮಹಿಳೆಯರ ಮೇಲಿನ ದೌರ್ಜನ್ಯ ಕೃತ್ಯಗಳಲ್ಲಿ ತಪ್ಪಿತಸ್ಥರಿಗೆ ಕಠಿಣ ಸಜೆ ವಿಧಿಸಲು ಕಾಯ್ದೆಗಳನ್ನು ಇನ್ನಷ್ಟು ಬಲಪಡಿಸುತ್ತೇವೆ ” ಎಂದೂ ಹೇಳಿದ್ದಾರೆ. ಈ ಆಶಾದಾಯಕ ಭರವಸೆಗಳ ನಡುವೆಯೇ ಪ್ರಕಟವಾಗಿರುವ ಕರ್ನಾಟಕ ಸರ್ಕಾರದ ಪೊಲೀಸ್‌ ಇಲಾಖೆಯ ವರದಿಗಳ ಅನುಸಾರ ಪ್ರಸಕ್ತ ವರ್ಷ ಜುಲೈವರೆಗೆ ರಾಜ್ಯದಲ್ಲಿ 340 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2024ರ ಜುಲೈ ಮಾಸದವರೆಗೆ ರಾಜ್ಯದಲ್ಲಿ 2089 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಒಟ್ಟು 3643 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 3863, 2022ರಲ್ಲಿ 3194 ಪೋಕ್ಸೋ ಪ್ರಕರಣಗಳು, ಇದೇ ವರ್ಷಗಳಲ್ಲಿ ಕ್ರಮವಾಗಿ 607 ಮತ್ತು 537  ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು.

ಕಳೆದ ವಾರ ಕೊಲ್ಕತ್ತಾದ ಆರ್‌ಜಿ ಕಾರ್‌ ಆಸ್ಪತ್ರೆಯಲ್ಲಿ ನಡೆದ ಭೀಭತ್ಸ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳಾ ದೌರ್ಜನ್ಯ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ವಿಷಯವಾಗಿರುವಾಗಲೇ ಮಹಾರಾಷ್ಟ್ರದ ಧಾರಾಶಿವಾದಲ್ಲಿ 15 ವರ್ಷದ ಬಾಲಕಿ, ಪಾಲ್ಘಾರ್‌ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ, ಠಾಣೆ ಜಿಲ್ಲೆಯ ಕಲ್ಯಾಣ್‌ ಪಟ್ಟಣದಲ್ಲಿ 10 ವರ್ಷದ ಬಾಲಕಿ, ಅಸ್ಸಾಂನ ನಾಗಾಂವ್‌ ಜಿಲ್ಲೆಯಲ್ಲಿ 14 ವರ್ಷದ ಬಾಲಕಿ, ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಅತ್ಯಾಚಾರಕ್ಕೆ ಗುರಿಯಾಗಿರುವುದು ವರದಿಯಾಗಿದೆ. ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಯ ಆರೋಪದ ಮೇಲೆ ಸಂಜಯ್‌ ರಾಯ್‌ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ರಾಜಕೀಯ ವಾರೆನೋಟ ಮತ್ತು ವಕ್ರದೃಷ್ಟಿ

ದೇಶಾದ್ಯಂತ ಅವ್ಯಾಹತವಾಗಿ ನಿರ್ಭೀತಿಯಿಂದ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರಗಳು, ದೌರ್ಜನ್ಯ-ಹತ್ಯೆಗಳು ಏನನ್ನು ಸೂಚಿಸುತ್ತವೆ?. ರಾಜಕೀಯ ಪಕ್ಷಗಳು ಈ ಎಲ್ಲ ಘಟನೆಗಳನ್ನೂ ರಾಜಕೀಯ ಮಸೂರ ತೊಟ್ಟು ನೋಡುತ್ತವೆ. ಹಾಗಾಗಿ ಅತ್ಯಾಚಾರ-ದೌರ್ಜನ್ಯಕ್ಕೊಳಗಾದ ಬಾಲಕಿ ಅಥವಾ ಯುವತಿಯಲ್ಲಿ ಒಬ್ಬ ಸಂತ್ರಸ್ತೆ ಅಥವಾ ನೊಂದ ಹೆಣ್ಣು ಜೀವ ಕಾಣುವುದಿಲ್ಲ. ಅವರ ಕೂಗು ಇದೇ ಅಸ್ಮಿತೆಗಳ ಚೌಕಟ್ಟಿನಲ್ಲೇ ಕೇಳಿಸುತ್ತದೆ. ಸರ್ಕಾರಗಳು, ಪಕ್ಷಗಳು ಯಾವುದೇ ಇರಲಿ, ಮಹಿಳಾ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ ಎನ್ನುವ ವಾಸ್ತವವನ್ನು ಅರಿಯಲು ಇಷ್ಟು ಮಾಹಿತಿ ಸಾಕಲ್ಲವೇ ?  ವಿವೇಕ ಇದ್ದರೆ ಸಾಕು.

ಈ ನಡುವೆಯೇ ಪ್ರಧಾನಿ ಮೋದಿಯವರ ಭರವಸೆಯ ಮಾತುಗಳೂ ವ್ಯಕ್ತವಾಗಿವೆ. ಇದನ್ನು ಸ್ವಾಗತಿಸೋಣ. ಆದರೆ ಕಠಿಣ ಕಾಯ್ದೆ ಕಾನೂನುಗಳು ಯಾವುದೇ ಅಪರಾಧಗಳಿಗಾದರೂ ಪ್ರತಿಬಂಧಕವಾಗುತ್ತವೆಯೇ ಹೊರತು, ಮೇಲ್‌ ಸ್ತರದ ಸಮಾಜದಿಂದ ತಳಸ್ತರದವರೆಗೂ ದೌರ್ಜನ್ಯಗಳಿಗೆ ತುತ್ತಾಗುತ್ತಿರುವ ಮಹಿಳೆಯರಿಗೆ ರಕ್ಷಣೆ ನೀಡಲು ಸಾಧ್ಯವೇ ? ಸರ್ಕಾರಗಳು ಮಹಿಳಾ ರಕ್ಷಣೆಯ ಬಗ್ಗೆ ಹೆಚ್ಚು ಮಾತನಾಡುತ್ತವೆ. ಆದರೆ ಸಮಾಜದ ಎಲ್ಲ ಸ್ತರಗಳಲ್ಲೂ ಮಹಿಳಾ ದೌರ್ಜನ್ಯ ರಹಿತ ಸಾಮಾಜಿಕ ವಾತಾವರಣವನ್ನು  ರೂಪಿಸುವ ನಿಟ್ಟಿನಲ್ಲಿ ಯಾವ ಸರ್ಕಾರವೇ ಆದರೂ ಒಂದು ಕಾರ್ಯಸೂಚಿ-ಕಾರ್ಯಯೋಜನೆ ಸಿದ್ಧಪಡಿಸಿದೆಯೇ ? ಸಮಾಜದಲ್ಲಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಲಿಂಗತ್ವ ಸೂಕ್ಷ್ಮತೆ ಮತ್ತು ಮಹಿಳಾ ಸಂವೇದನೆಯ ಬಗ್ಗೆ ಗಮನಹರಿಸದೆ ಹೋದರೆ ಕೇವಲ ಪ್ರತಿಬಂಧಕ ಕಾಯ್ದೆಗಳಿಂದ ಮಹಿಳೆಯರ ರಕ್ಷಣೆ ಸಾಧ್ಯವೇ ?

ಎಡಿಆರ್‌ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಲಾಗಿರುವ 151 ಜನಪ್ರತಿನಿಧಿಗಳ ವಿರುದ್ಧ ಯಾವ ಪಕ್ಷ ಯಾವ ರೀತಿಯ ಶಿಸ್ತು ಕ್ರಮ ಕೈಗೊಂಡಿವೆ?. ಒಲಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗಳು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳ-ದೌರ್ಜನ್ಯಗಳಿಂದ ನೊಂದು ಇಡೀ ವಿಶ್ವಕ್ಕೆ ಕಾಣುವಂತೆ ಕಣ್ಣೀರುಗರೆದಾಗ ನಮ್ಮ ಸಮಾಜ ಅಥವಾ ಸರ್ಕಾರಗಳು ಆ ಹೆಣ್ಣು ಮಕ್ಕಳಿಗೆ ಹೇಗೆ ಸ್ಪಂದಿಸಿವೆ ? ಇದೇ ಸಮಾಜದ ಒಂದು ವರ್ಗ ಸಾಕ್ಷಿಮಲ್ಲಿಕ್‌, ವಿನೇಶ್‌ ಪೋಗಟ್‌ ಅವರನ್ನು ದೇಶದ್ರೋಹಿಗಳಂತೆ ಬಿಂಬಿಸಿದರೆ ಮತ್ತೊಂದು ವರ್ಗ ಬಿಲ್ಕಿಸ್‌ ಬಾನೋ ಪ್ರಕರಣದ ಅಪರಾಧಿಗಳನ್ನು ಹಾರ ತುರಾಯಿಗಳೊಂದಿಗೆ ಸನ್ಮಾನಿಸಿದೆ. ಕುಸ್ತಿಪಟುಗಳ ಕಂಬನಿ ಹನಿಗಳಿಗೆ ಮಾನ್ಯತೆಯೇ ನೀಡದ ಈ ಸಮಾಜದಲ್ಲಿ, ಆ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ರಾಜಕೀಯ ನಾಯಕ ಇಂದಿಗೂ ಪಕ್ಷದ ಸದಸ್ಯನಾಗಿಯೇ ಮುಂದುವರೆದಿದ್ದಾನೆ.

ಈ ಸಂದಿಗ್ಧತೆಯ ನಡುವೆಯೇ ಲಿಂಗತ್ವ ಸೂಕ್ಷ್ಮತೆಯ ಪ್ರಶ್ನೆ ಉದ್ಭವಿಸುತ್ತದೆ. ಸಮಾಜದ ಅತ್ಯಂತ ಕೆಳಸ್ತರದಿಂದ ಉನ್ನತ ಹಂತದವರೆಗೂ ವ್ಯಾಪಿಸಿರುವ ಪಿತೃಪ್ರಧಾನ ಧೋರಣೆ ಮತ್ತು ಇದನ್ನು ನಿರ್ದೇಶಿಸುವ ಗಂಡಾಳ್ವಿಕೆಯ ಕೇಂದ್ರಗಳಲ್ಲಿ ಲಿಂಗತ್ವ ಸೂಕ್ಷ್ಮತೆಯ ಬಗ್ಗೆ ಗಂಭೀರ ಆಲೋಚನೆಯಾದರೂ ನುಸುಳಿದೆಯೇ ? ಇಲ್ಲವೆಂದೇ ಕಾಣುತ್ತದೆ. ಏಕೆಂದರೆ ಭಾರತದ ಯಾವುದೇ ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು, ಸಾಮಾಜಿಕ ಚಳುವಳಿಗಳು ಸಾಂಸ್ಥಿಕ ನೆಲೆಯಲ್ಲಾಗಲೀ, ಸಾಂಘಿಕ ನೆಲೆಯಲ್ಲಾಗಲೀ ಸಮಾಜದಲ್ಲಿ ನೆಲಮಟ್ಟದಿಂದಲೇ ಲಿಂಗತ್ವ ಸೂಕ್ಷ್ಮತೆಯನ್ನು ಬೆಳೆಸುವ ಸಣ್ಣ ಯೋಚನೆಯನ್ನೂ ಮಾಡಿದಂತೆ ಕಾಣುವುದಿಲ್ಲ. ಮತ್ತೊಂದೆಡೆ ಇಂದಿಗೂ ಪುರುಷಾಧಿಪತ್ಯದಲ್ಲೇ ನಡೆಯುವ ಬಹುತೇಕ ಸಾಮಾಜಿಕ ಹೋರಾಟಗಳು ಮತ್ತು ಕಾರ್ಮಿಕ ಸಂಘಟನೆಗಳು, ಕಮ್ಯುನಿಸ್ಟ್‌ ಪಕ್ಷಗಳೂ ಸಹ ತಮ್ಮ ಆಂತರಿಕ ಚೌಕಟ್ಟಿನೊಳಗೇ ಕಾರ್ಯಕರ್ತರಲ್ಲಿ ಲಿಂಗತ್ವ ಸೂಕ್ಷ್ಮತೆ ಬೆಳೆಸಲು ಯಾವ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ಲಿಂಗತ್ವ ಸೂಕ್ಷ್ಮತೆ-ಉತ್ತರದಾಯಿತ್ವದ ಪ್ರಶ್ನೆ

ಈ ನೆಲೆಯಲ್ಲಿ ನಿಂತು ನೋಡಿದಾಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಮೊದಲನೆಯದು ಪ್ರತಿ 16 ನಿಮಿಷಕ್ಕೊಂದು ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳಿಗೆ ಉತ್ತರದಾಯಿ ಯಾರು ? ಎರಡನೆಯ ಪ್ರಶ್ನೆ ಸಮಾಜದಲ್ಲಿ ನೆಲಮಟ್ಟದಿಂದಲೂ ಲಿಂಗತ್ವ ಸೂಕ್ಷ್ಮತೆ-ಮಹಿಳಾ ಸಂವೇದನೆಯನ್ನು ಬೆಳೆಸದೆಯೇ ಈ ದೌರ್ಜನ್ಯಗಳನ್ನು ಕೇವಲ ಪ್ರತಿಬಂಧಕ ಕಾನೂನುಗಳಿಂದ ತಡೆಗಟ್ಟಲು ಸಾಧ್ಯವೇ ? ಈ ಎರಡೂ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿರುವುದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗುವ ಸರ್ಕಾರಗಳು ಮತ್ತು ಈ ಸರ್ಕಾರಗಳನ್ನು ನಿರ್ವಹಿಸುವ ಅಥವಾ ವಿರೋಧಿಸುವ ರಾಜಕೀಯ ಪಕ್ಷಗಳು. ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿರುವ ಸಂಘಸಂಸ್ಥೆಗಳು, ಸಂಘಟನೆಗಳು ಆದ್ಯತೆಯ ಮೇಲೆ ಲಿಂಗತ್ವ ಸೂಕ್ಷ್ಮತೆಯ ಬಗ್ಗೆ ಯೋಚಿಸಬೇಕಿದೆ. ಮಹಿಳಾ ಸಂಕುಲಕ್ಕೆ ಅದರ ನೈಸರ್ಗಿಕ-ಸಾಂವಿಧಾನಿಕ ಹಕ್ಕು ಎಂದೇ ಹೇಳಬಹುದಾದ ಸಮಾನ ಪ್ರಾತಿನಿಧ್ಯವನ್ನೇ ನೀಡಲೊಪ್ಪದ ಒಂದು ರಾಜಕೀಯ-ಸಾಂಸ್ಕೃತಿಕ ವ್ಯವಸ್ಥೆ ಸಮಾಜವನ್ನು ನಿರ್ವಹಿಸಿ, ನಿರ್ದೇಶಿಸುತ್ತಿರುವ ಹೊತ್ತಿನಲ್ಲಿ ಈ ಸವಾಲು ನಾಗರಿಕ ಎನಿಸಿಕೊಳ್ಳುವ ಜನತೆಯ ಹೆಗಲೇರುತ್ತದೆ. ದೇಶದ ಭವಿಷ್ಯವನ್ನು ನಿರ್ಧರಿಸುವ ಶೈಕ್ಷಣಿಕ ವಲಯವೂ ಪುರುಷಾಹಮಿಕೆಯ ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿಯಾಗುತ್ತಿರುವ ಹೊತ್ತಿನಲ್ಲಿ ಅಬಾಲವೃದ್ಧೆಯರಾದಿಯಾಗಿ ಮಹಿಳೆಯರು ಯಾರಿಂದ ರಕ್ಷಣೆ ಅಪೇಕ್ಷಿಸಬಹುದು ?

ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಲೈಂಗಿಕ ಶಿಕ್ಷಣ ನೀಡುವುದರ ಮೂಲಕ, ಎಳೆಯರಲ್ಲಿ ಲಿಂಗತ್ವದ ಅರಿವು ಮೂಡಿಸುವ ಹಾಗೂ ಬೆಳವಣಿಗೆಯ ಹಂತದಲ್ಲೇ ಲಿಂಗತ್ವ ಸೂಕ್ಷ್ಮತೆಯನ್ನು ಬೋಧಿಸುವ ನಿಟ್ಟಿನಲ್ಲಿ ಸಮಾಜ ಮತ್ತು ಸರ್ಕಾರ ಕ್ರಿಯಾಶೀಲವಾಗಿ ಯೋಚಿಸಬೇಕಿದೆ. ಪ್ರತಿಯೊಂದು ಸಂಸ್ಥೆಯಲ್ಲಿ, ಸಾಮಾಜಿಕ-ರಾಜಕೀಯ ಸಂಘಟನೆಯಲ್ಲಿ, ಚಳುವಳಿಗಳಲ್ಲಿ, ಹೋರಾಟ ಕೇಂದ್ರಗಳಲ್ಲಿ, ಸೇವಾ ವಲಯಗಳಲ್ಲಿ ಲಿಂಗತ್ವ ಸೂಕ್ಷ್ಮತೆಯನ್ನು ಬೋಧಿಸುವ ಮಾರ್ಗೋಪಾಯಗಳನ್ನು ರೂಪಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ. ಈ ಜವಾಬ್ದಾರಿ ಇರುವುದು ಕೇವಲ ಮಹಿಳಾ ಸಂಘಟನೆಗಳ ಮೇಲಲ್ಲ. ಆ ಕೆಲಸ ನಡೆಯುತ್ತಲೇ ಇದೆ.  ಬದಲಾಗಿ ಪುರುಷ ಸಮಾಜದ ಮೇಲೆ, ಇಡೀ ಸಾಮಾಜಿಕ-ಸಾಂಸ್ಕೃತಿಕ ಜಗತ್ತಿನ ಮೇಲೆ ಈ ಜವಾಬ್ದಾರಿ ಇದೆ. ಈ ನೈತಿಕ ಜವಾಬ್ದಾರಿ ನಮ್ಮ ಹೆಗಲ ಮೇಲಿರುವುದನ್ನು ಅರಿತು ಮುನ್ನಡೆಯುವ ಪ್ರಾಮಾಣಿಕತೆ ನಮ್ಮಲ್ಲಿ ಅವಶ್ಯವಾಗಿ ಇರಲೇಬೇಕಲ್ಲವೇ ? ಇದೆಯೇ ?????

ನಾ ದಿವಾಕರ

ಚಿಂತಕರು


ಇದನ್ನೂ ಓದಿ- ಕೌಟುಂಬಿಕ ದೌರ್ಜನ್ಯ ಹೇಳಿಕೆಗಳು : ವಾಸ್ತವ ಏನು?

More articles

Latest article