ಬಡ ಭಾರತಕ್ಕೆ ಒಂದು ಶಾಪದಂತಿರುವ ಕ್ರಿಕೆಟ್|ಭಾಗ 2

Most read

ಒಂದೆಡೆಯಲ್ಲಿ ವಾಸ್ತವವನ್ನು ಅರ್ಥಮಾಡಿಕೊಳ್ಳದೆ ವಿವೇಕ ಕಳೆದುಕೊಂಡು ಸಿನಿಮಾ ತಾರೆಯರು, ಕ್ರಿಕೆಟ್‌ ತಾರೆಯರನ್ನು ದೇವರೇನೋ ಎಂಬಂತೆ ಆರಾಧಿಸುವ ಯುವಜನ, ಆಧುನಿಕ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್‌ ನಲ್ಲೇ ಎಲ್ಲವನ್ನೂ ನೋಡುವ ಅವಕಾಶ ಇರುವಾಗ ಲಕ್ಷ ಜನ ಸೇರಿರುವ ಜಾಗಕ್ಕೆ ತಾವೂ ಹೋಗಿ ಅಲ್ಲಿ ಕಾಲಿನಡಿ ಬಿದ್ದು ಸಾಯುವ ʼವಿದ್ಯಾವಂತʼ ಜನ, ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಮೂರ್ಖ ಅಭಿಮಾನಿಗಳಂತೆ ತಾವೂ ವರ್ತಿಸಿ ಮೂರ್ಖತನ ಪ್ರದರ್ಶಿಸಿ ಟೀಕೆಗೆ ಮಾತ್ರವಲ್ಲ ನಗೆಪಾಟಲಿಗೀಡಾಗುವ ಸರಕಾರ… ಒಟ್ಟಿನಲ್ಲಿ ಈ ಸಲ ಕಪ್ಪು ನಮ್ದೇ ನಿಜ ಆದರೆ ತಪ್ಪು ಯಾರದ್ದು? – ಶ್ರೀನಿವಾಸ ಕಾರ್ಕಳ.

ಲಲಿತ್‌ ಮೋದಿ ಭಾರತದಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ಅಮೆರಿಕಾದಲ್ಲಿ ಓದಲು ಹೋದವರು ಓದಿನತ್ತ ಆಸಕ್ತಿ ತೋರಲಿಲ್ಲ. ಬದಲಿಗೆ ಕೊಕೇನ್‌ ಸಾಗಾಟಕ್ಕಾಗಿ ಎರಡು ವರ್ಷಗಳ ಶಿಕ್ಷೆಗೊಳಗಾಗಿ ಆ ಶಿಕ್ಷೆಯನ್ನು 100 ಗಂಟೆಗಳ ಕಮ್ಯುನಿಟಿ ಸರ್ವಿಸ್‌ ಗೆ ಇಳಿಸಿಕೊಂಡು, ಶಿಕ್ಷೆ ಅನುಭವಿಸಿ ಬಳಿಕ ಭಾರತಕ್ಕೆ ಮರಳಿದಾತ.

ಲಲಿತ್‌ ಮೋದಿ

ಹೀಗೆ ಅಕ್ರಮಗಳದ್ದೇ ಹಿನ್ನೆಲೆ ಹೊಂದಿರುವ ಈ ಮೋದಿ ತನ್ನ ರಾಜಕೀಯ ಸಂಪರ್ಕದ ಮೂಲಕ ಒಂದು ದಿನ ಬಿಸಿಸಿಐಯ ಉಪಾಧ್ಯಕ್ಷ ಕೂಡಾ ಆದ. ಇಂತಹ ಹೊತ್ತಿನಲ್ಲಿಯೇ ಆತನಿಗೆ ಕ್ರಿಕೆಟನ್ನು ಒಂದು ವಾಣಿಜ್ಯ ವ್ಯವಹಾರ ಮಾಡುವ ಯೋಚನೆ ಬಂತು. ಐಪಿಎಲ್‌ ಆರಂಭವಾಯಿತು. ಇಲ್ಲೂ ಹಣದ ಅಕ್ರಮ ಅವ್ಯವಹಾರದಲ್ಲಿ ತೊಡಗಿದ ಮೋದಿ, ಐಪಿಎಲ್‌ ಪ್ರಸಾರದ ಹಕ್ಕಿನ ವಿಷಯದಲ್ಲಿ ನೂರಾರು ಕೋಟಿ ಲಫಡಾ ಮಾಡಿ ದೇಶಬಿಟ್ಟು ಓಡಿ ಹೋದ. ಇದು ಐಪಿಎಲ್‌ ಪಿತಾಮಹನ ಹಿನ್ನೆಲೆ.

ಆರ್‌ ಸಿ ಬಿ ಮೂಲ ಮಾಲಕ ವಿಜಯಮಲ್ಯ

ಇನ್ನು ಆರ್‌ ಸಿ ಬಿಯ ಮೊದಲ ಮಾಲಕ ವಿಜಯ ಮಲ್ಯನದ್ದು ಇನ್ನೂ ರೋಚಕ ಕತೆ. ಐಪಿಎಲ್‌ ದೇಶದಲ್ಲಿ ಆರಂಭವಾಗುತ್ತಲೇ ಈ ಮದ್ಯದ ದೊರೆ ಕೂಡಾ ಒಂದು ತಂಡ ಖರೀದಿಸಿ ಅದಕ್ಕೆ ತನ್ನ ಮದ್ಯದ ಬ್ರಾಂಡ್‌ ನ ಅರ್ಧ ಹೆಸರನ್ನೂ, ಬೆಂಗಳೂರನ್ನೂ ಸೇರಿಸಿ ʼರಾಯಲ್‌ ಚಾಲೆಂಜರ್ಸ್‌ ಬೆಂಗಳೂರುʼ ಕಟ್ಟಿದ. ಈ ತಂಡಕ್ಕೆ ಪ್ರಾದೇಶಿಕ ಅಥವಾ ಇನ್ಯಾವುದೇ ರೀತಿಯ ಐಡೆಂಟಿಟಿ ಇಲ್ಲ. ಮಲ್ಯನ ಬಳಿ ಮದ್ಯದ ಹಣ ಇತ್ತು. ಹರಾಜಾಗಲು ಆಟಗಾರರೂ ಸಿದ್ಧರಿದ್ದರು. ಬಿಡ್‌ ನಲ್ಲಿ ತಂಡವನ್ನು ಖರೀದಿಸಿದ (ಆ ತಂಡದಲ್ಲಿ ಕನ್ನಡಿಗರು ಮೂರು ನಾಲ್ಕು ಜನರು ಇದ್ದರೆ ಹೆಚ್ಚು). ಆರ್‌ ಸಿ ಬಿ ಎಂದು ಹೆಸರಿಟ್ಟ. ಈ ಆರ್‌ ಸಿ ಬಿಯ ಮೊದಲ ಮಾಲೀಕ ಮಲ್ಯ ಭಾರತದ ಬ್ಯಾಂಕುಗಳಿಗೆ 9000 ಕೋಟಿ ರುಪಾಯಿ ವಂಚಿಸಿ ದೇಶದಿಂದ ಪರಾರಿಯಾಗಿ ಈಗ ಇಂಗ್ಲೆಂಡ್‌ ನಲ್ಲಿದ್ದಾನೆ.

ಇಡೀ ದೇಶದ ಐಪಿಲ್‌ ತಂಡಗಳದ್ದು ಇದೇ ಕತೆ. ದುಡ್ಡುಳ್ಳ ಸಿನಿಮಾ ತಾರೆಯರು, ಉದ್ಯಮಿಗಳು ಆಟಗಾರರನ್ನು ಹರಾಜಿನಲ್ಲಿ ಕೊಂಡುಕೊಂಡು ತಂಡ ಕಟ್ಟಿಕೊಂಡರು. ಜನರು ಹುಚ್ಚುಗಟ್ಟಿಕೊಂಡು ಸಾವಿರಾರು ರುಪಾಯಿಯ ಟಿಕೆಟ್‌ ಖರೀದಿಸಿ, ಟಿವಿಯಲ್ಲಿ ಪಂದ್ಯ ವೀಕ್ಷಿಸಿ, ಬೆಟ್‌ ಕಟ್ಟಿ ಹಣ ಕಳೆದುಕೊಂಡರೆ ಐಪಿಎಲ್‌ ಒಡೆಯರು ಕೋಟಿ ಕೋಟಿ ಹಣ ಬಾಚುತ್ತ ಹೋದರು. ಆರ್‌ ಸಿ ಬಿ ಯ ಈಗಿನ ಮಾಲಕರ ಸಂಪತ್ತು 8600 ಕೋಟಿ ರುಪಾಯಿ ಮೌಲ್ಯದ್ದು ಎಂದು ವರದಿಯಾಗಿದೆ.

ಆರ್‌ ಸಿ ಬಿಯ ಮೊದಲ ಮಾಲಕ ವಿಜಯ ಮಲ್ಯ

ಜನರು ಎಂತಹ ಸಮೂಹ ಸನ್ನಿಗೆ ಒಳಗಾದರೆಂದರೆ. ಚೆನ್ನೈ ಸೂಪರ್‌ ಕಿಂಗ್ಸ್‌ ಗೂ ತಮಿಳುನಾಡಿಗೂ, ಮುಂಬೈ ಇಂಡಿಯನ್ಸ್‌ ಗೂ ಮಹಾರಾಷ್ಟ್ರಕ್ಕೂ, ಆರ್‌ ಸಿ ಬಿ ಗೂ ಕರ್ನಾಟಕ್ಕೂ ಯಾವ ಸಂಬಂಧವೂ ಇಲ್ಲದಿದ್ದರೂ, ಮತ್ತು ಅವು ಕೇವಲ ಹಣವಂತರ ಖಾಸಗಿ ತಂಡವೇ ಆಗಿದ್ದರೂ, ಚೆನ್ನೈ ಸೂಪರ್‌ ಕಿಂಗ್ಸ್‌ ಅನ್ನು ತಮಿಳುನಾಡಿನ ಮಂದಿ ತಮ್ಮದು ಅಂದುಕೊಂಡರು. ಮುಂಬೈ ಇಂಡಿಯನ್ಸ್‌ ಅನ್ನು ಮಹಾರಾಷ್ಟ್ರದವರು ತಮ್ಮದು ಅಂದುಕೊಂಡರು. ಆರ್‌ ಸಿ ಬಿ ಯನ್ನು ಕರ್ನಾಟಕದ ಮಂದಿ ತಮ್ಮದು ಅಂದುಕೊಂಡರು. ಜನರು ಯಾಕೆ ಹೀಗೆ ಉನ್ಮಾದಕ್ಕೊಳಗಾಗಿ ವಿವೇಕವನ್ನು ಕಳೆದುಕೊಂಡು ಹುಚ್ಚರಂತೆ ವರ್ತಿಸಿದರು, ಇವೆಲ್ಲ ಯಾಕಾಯಿತು ಎಂಬ ಬಗ್ಗೆ ಮನೋವಿಜ್ಞಾನಿಗಳು ಮತ್ತು ಸಮಾಜಶಾಸ್ತ್ರಜ್ಞರು ಅಧ್ಯಯನ ಮಾಡುವ ಅಗತ್ಯವಿದೆ.

ಅಭಿಮಾನದ ಅತಿರೇಕ

ಮುಂಬೈಯಲ್ಲಿ ನಡೆದ ಐಪಿಎಲ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಖ್ಯಾತ ಪತ್ರಕರ್ತ ಮತ್ತು ಕ್ರಿಕೆಟ್‌ ವಿಶ್ಲೇಷಕ ರಾಜದೀಪ್‌ ಸರ್ದೇಸಾಯಿ ʼಆಟ ನಡೆದುದು ಮುಂಬೈಯಲ್ಲಿ ಆದರೆ ಸ್ಟೇಡಿಯಂ ನಲ್ಲಿ ಇದ್ದುದು ಆರ್‌ ಸಿ ಬಿ ಅಭಿಮಾನಿಗಳು, ಎಲೆಲ್ಲೂ ಆರ್‌ ಸಿ ಬಿ ಅಭಿಮಾನಿಗಳು!..ʼ ಅಂದಿದ್ದರು. ಅಹಮದಾಬಾದ್‌ ನಲ್ಲಿ ಐಪಿಎಲ್‌ ಫೈನಲ್‌ ನಲ್ಲಿ ಕಿಂಗ್ಸ್‌ ಎಲೆವೆನ್‌ ಪಂಜಾಬ್‌ ಮತ್ತು ಆರ್‌ ಸಿ ಬೆಂಗಳೂರು ನಡುವೆ ಪಂದ್ಯ ನಡೆದು ಆರ್‌ ಸಿಬಿ ಗೆದ್ದುದೇ ತಡ ಆರ್‌ ಸಿ ಬಿ ಅಭಿಮಾನಿಗಳು ಅಲ್ಲಿದ್ದ ಸಿಖ್ಖರನ್ನು ಅಂಗಚೇಷ್ಟೆಗಳ ಮೂಲಕ, ಕೈಸನ್ನೆಗಳ ಮೂಲಕ ಛೇಡಿಸುತ್ತಾ ಅವಮಾನಿಸತೊಡಗಿದರು ಎಂದು ಪತ್ರಿಕಾವರದಿಗಾರರೊಬ್ಬರು ಹೇಳಿದ್ದಾರೆ. ನಮ್ಮದೇ ದೇಶವಾಸಿಗಳನ್ನು ಅವಮಾನಿಸುವ ಇದು ಯಾವ ರೀತಿಯ ದೇಶಪ್ರೇಮ, ಯಾವ ರೀತಿಯ ರಾಷ್ಟ್ರವಾದ, ಇದು ಯಾವ ಬಗೆಯ ಕ್ರಿಕೆಟ್‌ ಅಭಿಮಾನ?!

ಈಗಾಗಲೇ ಹೇಳಿದ ಹಾಗೆ ಆರ್‌ ಸಿ ಬಿ ಕರ್ನಾಟಕದ ಅಧಿಕೃತ ತಂಡವಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಭಾರತ ಕ್ರಿಕೆಟ್‌ ತಂಡ ನಮಗೆ ಗೊತ್ತು, ಅಂತಾರಾಜ್ಯ ಪಂದ್ಯಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ರಣಜಿ ತಂಡ ನಮಗೆ ಗೊತ್ತು. ಹಾಗೆಯೇ ಜಿಲ್ಲೆಗಳನ್ನು ತಾಲೂಕುಗಳನ್ನು ಪ್ರತಿನಿಧಿಸುವ ಕ್ರೀಡಾ ತಂಡಗಳೂ ಇರುತ್ತವೆ. ಇವುಗಳಿಗೆ ಒಂದು ಪ್ರಾದೇಶಿಕ ಐಡೆಂಟಿಟಿ ಇರುವುದರಿಂದ ಅವನ್ನು ನಮ್ಮ ತಂಡಗಳು ಎನ್ನಬಹುದು. ಆದರೆ ಆರ್‌ ಸಿ ಬಿ ಗೂ ಕರ್ನಾಟಕಕ್ಕೂ, ಕನ್ನಡಿಗರಿಗೂ ಯಾವ ಸಂಬಂಧವೂ ಇಲ್ಲ. ಈಗಂತೂ ಅಲ್ಲಿ ಇರುವುದು ಕೇವಲ ಮೂವರು ಕನ್ನಡಿಗ ಆಟಗಾರರು. ಉಳಿದವರು ಹೊರ ರಾಜ್ಯದವರು ಮತ್ತು ಹೊರ ದೇಶದವರು. ಆರ್‌ ಸಿ ಬಿ ಮಾಲಕರು (United Spirits) ಕರ್ನಾಟಕ ಸರಕಾರವಲ್ಲ. 8600 ಕೋಟಿ ರುಪಾಯಿ ಹೊಂದಿರುವ ಹಣವಂತ ಖಾಸಗಿ ಸಂಸ್ಥೆ.

ಸರಕಾರಕ್ಕೆ ಇದು ಬೇಕಿತ್ತೇ?

RCB ಗೆಲುವಿನ ಸಂಭ್ರಮಾಚರಣೆ

ಹೀಗಿರುವಾಗ, ಜನರೇನೋ ಹುಚ್ಚುಗಟ್ಟುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಒಂದು ಚುನಾಯಿತ ಸರಕಾರ ತನ್ನ ಘನತೆ, ಜವಾಬ್ದಾರಿ ಮರೆತು, ಜನರ ಭಾವನೆಗಳನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳಲು ಹೊರಟದ್ದನ್ನು ಏನನ್ನೋಣ?

ವರದಿಗಳ ಪ್ರಕಾರ, ಅಂತಿಮ ಪಂದ್ಯಕ್ಕೆ ಮೊದಲೇ ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳು ಆರ್‌ ಸಿ ಬಿ ವಿಜಯೋತ್ಸವ ಆಚರಿಸಲು ಅನುಮತಿ ನೀಡುತ್ತಾರೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಆರ್‌ ಸಿ ಬಿ ಎಂಬ ಖಾಸಗಿಯವರ ತಂಡವನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಧಾವಿಸುತ್ತಾರೆ. ವಾಪಸ್‌ ಬರುವಾಗ ವಾಹನದ ಹೊರಗೆ ಆರ್‌ ಸಿ ಬಿ ಬಾವುಟ ಬೀಸುತ್ತಾರೆ. ತಂಡದ ಕಪ್ತಾನನೋ ಏನೋ ಎಂಬಂತೆ ಟ್ರೋಫಿ ಎತ್ತಿ ಹಿಡಿದುಕೊಳ್ಳುತ್ತಾರೆ. ಪೊಲೀಸ್‌ ಅಧಿಕಾರಿಯೊಬ್ಬರ ಆಕ್ಷೇಪದ ಹೊರತಾಗಿಯೂ ಕಾರ್ಯಕ್ರಮವನ್ನು ವಿಧಾನ ಸೌಧದ ಮುಂಭಾಗದಲ್ಲಿಯೇ ಹಮ್ಮಿಕೊಳ್ಳಲಾಗುತ್ತದೆ.

ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಸನ್ಮಾನ ಕಾರ್ಯಕ್ರಮ ಘೋಷಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಬನ್ನಿ ಎಂದು ಸ್ವತಃ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜನರನ್ನು ಸ್ವಾಗತಿಸುತ್ತಾರೆ. ವೇದಿಕೆಯ ಮೇಲೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮಂತ್ರಿಗಳು ಶಾಸಕರು ಅವರ ಕುಟುಂಬದವರು ಎಲ್ಲರೂ ಕಾಣಿಸಿಕೊಳ್ಳಉತ್ತಾರೆ. 35 ಸಾವಿರ ವೀಕ್ಷಕರ ಸಾಮರ್ಥ್ಯದ ಸ್ಟೇಡಿಯಂ ಗೆ ಎರಡು ಮೂರು ಲಕ್ಷ ಜನ ಮುಗಿಬೀಳುತ್ತಾರೆ. ಕಾಲ್ತುಳಿತವಾಗಿ 11 ಮಂದಿ ಜೀವ ಕಳೆದುಕೊಳ್ಳುತ್ತಾರೆ. 75 ಕ್ಕೂ ಅಧಿಕ ಮಂದಿ ಗಾಯಗೊಳ್ಳುತ್ತಾರೆ.

8600 ಕೋಟಿ ಸಂಪತ್ತಿನ ಒಡೆಯರಾದ ಆರ್‌ ಸಿ ಬಿ ಸಂಸ್ಥೆ ಸತ್ತವರ ಕುಟುಂಬಕ್ಕೆ ಕೇವಲ ತಲಾ 10 ಲಕ್ಷ ಘೋಷಿಸಿ ಕೈ ತೊಳೆದುಕೊಳ್ಳುತ್ತದೆ. ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಮನೆಗೆ ಕರೆದುಕೊಂಡ ಸರಕಾರ ಭಾರೀ ಟೀಕೆಗೆ ಈಡಾಗಿ ಮುಜುಗರ ಅನುಭವಿಸಿದ್ದು ಮಾತ್ರವಲ್ಲ, ತಪ್ಪಿಗೆ ಪ್ರಾಯಶ್ಚಿತ್ತವಾಗಿ ಸತ್ತವರ ಕುಟುಂಬಕ್ಕೆ ತಲಾ 25 ಲಕ್ಷ ಘೋಷಿಸುತ್ತದೆ (ಇದು ಯಾರ ಹಣ?). ಅಲ್ಲದೆ ಅವಘಡದ ಹೊಣೆಯನ್ನು ಖಾಸಗಿ ಕಾರ್ಯಕ್ರಮದಲ್ಲಿ ಅನಗತ್ಯವಾಗಿ ಭಾಗಿಯಾದ ತಾನು ಹೊರುವುದರ ಬದಲು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿ ಕೈತೊಳೆದುಕೊಳ್ಳುತ್ತದೆ.ಆಸಕ್ತಿ, ಒಲವು, ಪ್ರೀತಿ, ಅಭಿಮಾನ ಇವು ವಿವೇಚನಾಶಕ್ತಿಯನ್ನು ಬಲಿತೆಗೆದುಕೊಂಡು ಹುಚ್ಚಿನ ಮಟ್ಟಕ್ಕೆ ಹೋಗಬಾರದು. ಹೀಗೆ ಹುಚ್ಚಿನ ಮಟ್ಟಕ್ಕೆ ಹೋಗುವಂತೆ ಮಾಡಿದ ಐಪಿಎಲ್‌ ಮಹಾಮಾರಿ ಅನೇಕ ಸಂಗತಿಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಒಂದೆಡೆಯಲ್ಲಿ ವಾಸ್ತವವನ್ನು ಅರ್ಥಮಾಡಿಕೊಳ್ಳದೆ ವಿವೇಕ ಕಳೆದುಕೊಂಡು ಸಿನಿಮಾ ತಾರೆಯರು, ಕ್ರಿಕೆಟ್‌ ತಾರೆಯರನ್ನು ದೇವರೇನೋ ಎಂಬಂತೆ ಆರಾಧಿಸುವ ಯುವಜನ, ಆಧುನಿಕ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್‌ ನಲ್ಲೇ ಎಲ್ಲವನ್ನೂ ನೋಡುವ ಅವಕಾಶ ಇರುವಾಗ ಲಕ್ಷ ಜನ ಸೇರಿರುವ ಜಾಗಕ್ಕೆ ತಾವೂ ಹೋಗಿ ಅಲ್ಲಿ ಕಾಲಿನಡಿ ಬಿದ್ದು ಸಾಯುವ ʼವಿದ್ಯಾವಂತʼ ಜನ, ವಾಸ್ತವವನ್ನು ಅರ್ಥಮಾಡಿಕೊಳ್ಳದೆ ಮೂರ್ಖ ಅಭಿಮಾನಿಗಳಂತೆ ತಾವೂ ವರ್ತಿಸಿ ಮೂರ್ಖತನ ಪ್ರದರ್ಶಿಸಿ ಟೀಕೆಗೆ ಮಾತ್ರವಲ್ಲ ನಗೆಪಾಟಲಿಗೀಡಾಗುವ ಸರಕಾರ… ಒಟ್ಟಿನಲ್ಲಿ ಈ ಸಲ ಕಪ್ಪು ನಮ್ದೇ ನಿಜ ಆದರೆ ತಪ್ಪು ಯಾರದ್ದು?

ಭಾಗ ಒಂದು ಓದಿದ್ದೀರಾ? ಬಡ ಭಾರತಕ್ಕೆ ಒಂದು ಶಾಪದಂತಿರುವ ಕ್ರಿಕೆಟ್ |ಭಾಗ- 1

More articles

Latest article