2 ವರ್ಷ ಪೂರೈಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರ; ಹೊಸಪೇಟೆಯಲ್ಲಿ ಸಾಧನಾ ಸಮಾವೇಶ; ಒಂದು ಲಕ್ಷ ಜನರಿಗೆ ಹಕ್ಕು ಪತ್ರ ವಿತರಣೆ: ಸಿಎಂ ಘೋಷಣೆ

Most read

ಕೊಪ್ಪಳ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದ್ದು ಹೊಸಪೇಟೆಯಲ್ಲಿ‌ ಹಮ್ಮಿಕೊಂಡಿರುವ ಸಾಧನಾ ಸಮಾವೇಶದಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿಗೆ ಸಮೀಪದ ಬಸಾಪುರದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ನಮ್ಮ ಸರ್ಕಾರ‌ ಅಧಿಕಾರಕ್ಕೆ ಬಂದು ಮೇ 20ಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತವೆ. ಸರ್ಕಾರದ ಸಾಧನೆ ತಿಳಿಸಲು ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಮೂರು ಲಕ್ಷ‌ ಜನ ಸೇರುವ ನಿರೀಕ್ಷೆ ಇದೆ. ಬೇರೆ ಇಲಾಖೆಗಳ ಕಾರ್ಯಕ್ರಮಗಳೂ ಇರಲಿವೆ ಎಂದರು.

ಆಪರೇಷನ್ ಸಿಂಧೂರ ವಿಷಯವಾಗಿ ಮಾತನಾಡಿ, ಕಾಂಗ್ರೆಸ್ ಶಾಸಕರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ತಮ್ಮದೇ ಆದ ಹೇಳಿಕೆ ನೀಡಿದ್ದಾರೆ. ಅಮೆರಿಕ ಅಧ್ಯಕ್ಷ‌ ಡೊನಾಲ್ಡ್ ಟ್ರಂಪ್ ಮೊದಲು ಕದನ ವಿರಾಮ ಬಗ್ಗೆ ಹೇಳಿಕೆ ನೀಡಿದರು. ಗುರುವಾರ ಮತ್ತೊಂದು ಹೇಳಿಕೆ ನೀಡಿದ್ದಾರೆ. ನನ್ನ ಪ್ರಕಾರ ಮೊದಲು ನೀಡಿದ ಹೇಳಿಕೆ ಸರಿ ಇರಬಹುದು ಎಂದರು.

ಕದನ ವಿರಾಮದಿಂದ ಉಗ್ರರಿಗೆ ನೆಲೆ ನೀಡಿರುವ ಪಾಕಿಸ್ತಾನದವರಿಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ. ಇದಕ್ಕೆಲ್ಲ ಅವಕಾಶ ನೀಡದೇ ಭಯೋತ್ಪಾದನೆ ನಾಶ ಮಾಡಬೇಕು. ಈ ಹಿಂದೆ ನಾನು ಯುದ್ಧದ ಅಗತ್ಯ ಇಲ್ಲ.‌ ಅನಿವಾರ್ಯ ಇದ್ದರೆ ಮಾತ್ರ ಮಾಡಲಿ ಎಂದಿದ್ದೆ. ನೀವು (ಮಾಧ್ಯಮದವರು) ಕೇವಲ ಯುದ್ಧ ಬೇಡ ಎಂಬುದನ್ನು ತೋರಿಸಿದಿರಿ. ನಾನು ಯುದ್ಧ ಬೇಡವೇ ಬೇಡ ಎಂದು ಹೇಳಿಲ್ಲ. ದೇಶದ ಜನರನ್ನು ರಕ್ಷಿಸಲು ಯುದ್ಧ ಮಾಡಬೇಕಾಗುತ್ತದೆ. ಸಾರ್ವಭೌಮತ್ವ, ಒಗ್ಗಟ್ಟು ಉಳಿಸಿಕೊಳ್ಳಲು ಈ ಕೆಲಸ ಮಾಡಬೇಕು. ಪಾಕಿಸ್ತಾನದ ವಿರುದ್ಧ ತೋರಿದ ಪ್ರತಿರೋಧಕ್ಕೆ ಇಡೀ ಭಾರತ ಬೆಂಬಲ‌ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಆರ್. ಅಶೋಕ್ ಗೆ ಕ್ವಾರ್ಟರ್ ಅಭ್ಯಾಸ ಇದೆ:

ವಿಪಕ್ಷ ನಾಯಕ ಆರ್. ಅಶೋಕ್ ಗ್ರೇಟರ್ ಬೆಂಗಳೂರು ಅಲ್ಲ ಕ್ವಾರ್ಟರ್ ಬೆಂಗಳೂರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಗೆ ಕ್ವಾರ್ಟರ್ ಅಷ್ಟೇ ಅಭ್ಯಾಸ ಇರೋದು. ಅದಕ್ಕೆ ಅದನ್ನೇ ಹೇಳುತ್ತಾರೆ. ಬೆಂಗಳೂರು ವಿಭಜನೆ ಮಾಡುವ ಯೋಜನೆ ರೂಪಿಸಿದ್ದೇ ಬಿಜೆಪಿ. ಒಂದೂವರೆ ಕೋಟಿ‌‌ ಜನಸಂಖ್ಯೆ ಇರುವ ಬೆಂಗಳೂರಿಗೆ ಒಂದೇ ಮಹಾನಗರ ಪಾಲಿಕೆಯಡಿ ನಿರ್ವಹಣೆ ಮಾಡುವುದು ಕಷ್ಟ. ಹೀಗಾಗಿ ವಿಭಜನೆ ಮಾಡಲಾಗುವುದು. ಆಡಳಿತಾತ್ಮಕ ದೃಷ್ಟಿಯಿಂದ ಮೂರು ಅಥವಾ ಅದಕ್ಕಿಂತ ಹೆಚ್ಚು ಭಾಗವಾಗಿ ವಿಭಜಿಸಲಾಗುವುದು ಎಂದರು.

ಕೊಪ್ಪಳ ಸಮೀಪ ಬಲ್ಡೋಟಾ ಕಂಪನಿ ಉಕ್ಕಿನ ಕಾರ್ಖಾನೆ ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು ಸದ್ಯ ಕಾಮಗಾರಿ ನಿಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ. ಕಂಪನಿ ಭೂಮಿ ಖರೀದಿ ಮಾಡಿದೆ. ನಾನು ಕಂಪನಿಗೆ ಅನುಮತಿ ನೀಡಿದ್ದೂ ನಿಜ. ಪರಿಸ್ಥಿತಿ ಅವಲೋಕಿಸಿ ವರದಿ ನೀಡಲು ಹೇಳಿರುವೆ. ವರದಿ ಪಡೆದು ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜನಾರ್ದನ ರೆಡ್ಡಿ ಅನರ್ಹ ಪ್ರಕರಣ‌ ಬಗ್ಗೆ ಮಾತನಾಡಿ, ಚುನಾವಣಾ ಆಯೋಗ ಗಂಗಾವತಿ ಕ್ಷೇತ್ರಕ್ಕೆ ಉಪ‌ ಚುನಾವಣೆ ಘೋಷಿಸಿದಲ್ಲಿ ನಾವು ಗೆಲ್ಲುತ್ತೇವೆ. ಯಾರು ಅಭ್ಯರ್ಥಿ ಎಂದು ಪಕ್ಷ ತೀರ್ಮಾನಿಸಲಿದೆ. ನಾನು ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದೇ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲಾಗುವುದೆಂದು ಹೇಳಿದ್ದೆ. ಅದರಂತೆ ಕೋರ್ಟ್ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿಗೆ ನಾನು ಬೆಂಬಲಿಸಿದ್ದೇ ಎಂಬುದು ಸುಳ್ಳು. ನಾನು 50 ವರ್ಷದ‌ ರಾಜಕೀಯ ಜೀವನದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ಅನ್ನು ವಿರೋಧಿಸಿದಷ್ಟು ಬೇರೆ ಯಾರನ್ನೂ ವಿರೋಧಿಸಿಲ್ಲ. ಬಿಜೆಪಿಯಲ್ಲಿರುವ ರೆಡ್ಡಿಯನ್ನು ಬೆಂಬಲಿಸುವ ಅಗತ್ಯವಿಲ್ಲ ಎಂದು ಹೇಳಿದರು.

More articles

Latest article