ನವದೆಹಲಿ: ಮತ ಚಲಾವಣೆಗೆ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಬಳಿಕೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯತ್ತ ಪ್ರಧಾನಿ ನರೇಂದ್ರ ಮೋದಿ ಅವರು ಗಮನ ಹರಿಸಬೇಕು ಎಂದು ಕಾಂಗ್ರೆಸ್ ಹೇಳಿದೆ. ಎಕ್ಸ್ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ಬ್ಯಾಲೆಟ್ ಪೇಪರ್ ಹಾಗೂ ಅದೇ ದಿನ ಮತದಾನ ಕುರಿತು ತಮ್ಮ ಆತ್ಮೀಯ ಸ್ನೇಹಿತ ಡೊನಾಲ್ಡ್ ಟ್ರಂಪ್ ನೀಡಿರುವ ಸಂದೇಶಕ್ಕೆ ಪ್ರಧಾನಿ ಮೋದಿ ಗಮನ ಕೊಡುತ್ತಾರೆಯೇ? ಚುನಾವಣಾ ಪ್ರಕ್ರಿಯೆಯ ಸಮಗ್ರತೆ ಕುರಿತು ಇಡೀ ದೇಶದ ಕಳವಳವನ್ನು ಪರಿಹರಿಸುತ್ತಾರೆಯೇ ? ಎಂದು ಪ್ರಶ್ನಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಹೇಳಿಕೆ ಸಂಬಂಧ ‘ಎಕನಾಮಿಕ್ ಟೈಮ್ಸ್’ ವರದಿ ಹಂಚಿಕೊಂಡಿರುವ ವೇಣುಗೋಪಾಲ್, ‘ಮಹಾರಾಷ್ಟ್ರದಲ್ಲಿ ಲಕ್ಷಗಟ್ಟಲೆ ಮತದಾರರ ಅಸಹಜ ಹೆಚ್ಚಳ ಮತ್ತು ವಿರೋಧ ಪಕ್ಷಗಳ ಮತಗಳನ್ನು ಅಳಿಸಿ ಹಾಕಿರುವುದರ ಕುರಿತಾಗಿಯೂ ಅವರ ಆಪ್ತ ಮಿತ್ರ ದಿಗ್ಧಮೆ ವ್ಯಕ್ತಪಡಿಸಿರುವ ಕುರಿತು ನಮಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.
ಇಡೀ ಜಗತ್ತಿಗೆ ಸ್ಪಷ್ಟವಾಗಿ ಗೋಚರಿಸುವ ವಿಷಯವನ್ನು ಬಿಜೆಪಿ ಕಡೆಗಣಿಸುತ್ತಿರುವುದು ದುರಂತದ ಸಂಗತಿಯಾಗಿದೆ. ಚುನಾವಣಾ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಹಾಗೂ ಪಾರದರ್ಶಕತೆಯಿಂದ ಪಲಾಯನಗೈಯುವ ಬಿಜೆಪಿಯ ವರ್ತನೆಯು ನಮ್ಮ ಅನುಮಾನಗಳನ್ನು ದೃಢಪಡಿಸುತ್ತದೆ ಎಂದು ವೇಣುಗೋಪಾಲ್ ಹೇಳಿದ್ದಾರೆ