ಕರಾವಳಿ ರಾಜಕಾರಣ – 4 ಅನಾಥವಾದ ಜಿಲ್ಲಾ ಕಾಂಗ್ರೆಸ್!

Most read

ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಗಂಭೀರ ಸ್ಥಿತಿ ತಲಪಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ ಕೆ ಹರಿಪ್ರಸಾದ್ ಅವರನ್ನು ಜಿಲ್ಲೆಗೆ ಕಳುಹಿಸುವ ಘೋಷಣೆ ಮಾಡುತ್ತಲೇ ಸಂಘ ಪರಿವಾರಕ್ಕಿಂತ ಹೆಚ್ಚು ಬೆದರಿದ್ದು ಜಿಲ್ಲೆಯ ಕಾಂಗ್ರೆಸ್ ನಾಯಕರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಬಹಿರಂಗ ಮಾಡಿದ್ದಾರೆ ಎಸ್‌ ಕೆ ಸಿದ್ಧಾರ್ಥ, ರಾಜಕೀಯ ವಿಶ್ಲೇಷಕರು.

ಕಳೆದ ಕೆಲವು ದಿನಗಳ ಹಿಂದೆ ನಡೆದ ಭಯಾನಕ ಕೋಮು ಹಿಂಸೆಯ ಘಟನೆಗಳ ಆನಂತರ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯದಲ್ಲಿ ಸಾಕಷ್ಟು ಏರು ಪೇರಾಗಿದೆ. ದ ಕ ಜಿಲ್ಲೆಯ ಕಾಂಗ್ರೆಸ್ ನಾಯಕರ ಗುಂಪುಗಾರಿಕೆ, ಸಂಘ ಪರಿವಾರದ ಜೊತೆಗಿನ ಅವರ ಹೊಂದಾಣಿಕೆ ಸಹಿತ ಇಲ್ಲಿನ ರಾಜಕೀಯದ ಅನೇಕ ರಹಸ್ಯ ವಿಷಯಗಳು ಜನರ ಮುಂದೆ ಬಹಿರಂಗಗೊಂಡವು.

ವಿಶೇಷವಾಗಿ ಮಂಜುನಾಥ ಭಂಡಾರಿ ಹಾಗೂ ಹರೀಶ್ ಕುಮಾರ್, ಅವರ ನಾಯಕತ್ವ ವಿಫಲ ಆಗಿರುವ ವಿಷಯ ಕೆ ಪಿ ಸಿ ಸಿ  ಮಾತ್ರವಲ್ಲ, ಹೈ ಕಮಾಂಡ್ ಗೂ ತಿಳಿಯಿತು. ತಮ್ಮ ವಿರುದ್ಧದ ಯಾವುದೇ ವರದಿ ಹೈಕಮಾಂಡ್ ಗೆ ತಲುಪದಂತೆ ಲಾಬಿ ಮಾಡಿಕೊಂಡು, ಹಾಯಾಗಿ ತಮ್ಮ ವ್ಯವಹಾರ ಮಾಡಿಕೊಂಡು ಇದ್ದ ಇವರನ್ನು ಕುರಿತ ಪ್ರತಿಯೊಂದು ವರದಿಯೂ ಹೈ ಕಮಾಂಡ್ ಗೆ ತಲುಪಿತು. ಮಾತ್ರವಲ್ಲ, ಮೂಲಗಳ ಪ್ರಕಾರ  ಹೈ ಕಮಾಂಡ್ ಗೆ ಜಿಲ್ಲೆಯ ಪ್ರತಿಯೊಂದು ವರದಿ ಈಗಲೂ ತಲುಪುತ್ತಿದೆ ಮತ್ತು ಹೈ ಕಮಾಂಡ್ ಈ ಬಾರಿ ವಾಸ್ತವ ವರದಿ ಕೊಡುವ ಜನರನ್ನು ತನ್ನ ಹತ್ತಿರ ಇರಿಸಿ ಕೊಂಡಿದೆ ಎಂಬ ಸುದ್ದಿಯಿದೆ. ಇದು ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿದೆ.

 ಹರಿಪ್ರಸಾದ್‌  ಆಗಮನಕ್ಕೆ ಬೆದರಿದ ಕಾಂಗ್ರೆಸಿಗರು

ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಗಂಭೀರ ಸ್ಥಿತಿ ತಲಪಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ ಕೆ ಹರಿಪ್ರಸಾದ್ ಅವರನ್ನು ಜಿಲ್ಲೆಗೆ ಕಳುಹಿಸುವ ಘೋಷಣೆ ಮಾಡುತ್ತಲೇ ಸಂಘ ಪರಿವಾರಕ್ಕಿಂತ ಹೆಚ್ಚು ಬೆದರಿದ್ದು ಜಿಲ್ಲೆಯ ಕಾಂಗ್ರೆಸ್ ನಾಯಕರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಬಹಿರಂಗ ಮಾಡಿದ್ದಾರೆ.

ಕರಾವಳಿ ಕೋಮು ರಾಜಕಾರಣ ಭಾಗ ಒಂದು ಓದಿದ್ದೀರಾ?- ಮಿತಿಮೀರಿದ ಕಾಂಗ್ರೆಸ್ ಒಳಜಗಳ ಮತ್ತು ಗುಂಪುಗಾರಿಕೆ

ಭಂಡಾರಿ, ಖಾದರ್ ಹಾಗೂ ಮಿಥುನ್ ರೈ  ಅವರಿಗೆ,‌ ಜನ ತಮ್ಮ ವಿರುದ್ಧ, ಅದೂ ತಮ್ಮ ಹೆಸರು ಹಾಕಿ ಟ್ರೋಲ್ ಮಾಡಿ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಕಲ್ಪನೆ ಕೂಡಾ ಇರಲಿಲ್ಲ ಎಂದು ಕಾಣುತ್ತದೆ. ಯಾವಾಗ ಈ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪುಂಖಾನುಪುಂಖವಾಗಿ ಕಾಂಗ್ರೆಸ್ ಕಾರ್ಯಕರ್ತರೇ  ಪ್ರತಿರೋಧ ಮಾಡಿದರೋ, ಆ ನಾಯಕರ ಅಹಂಕಾರಕ್ಕೆ ಬಲವಾದ  ಪೆಟ್ಟು ಬಿತ್ತು. ಖಾದರ್ ವಿರುದ್ಧವಂತೂ ಜನಾಕ್ರೋಶ ವಿಪರೀತ ಆಗಿತ್ತು (ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವವರಿಗೆ ಕಾಂಗ್ರೆಸ್‌ ಕಾರ್ಯಕರ್ತರೇ ಈ ಕುರಿತು ಭರಪೂರ ಮಾಹಿತಿಗಳನ್ನು ನೀಡಿದ್ದರು).

ಬಿ ಕೆ ಹರಿಪ್ರಸಾದ್

ಇತ್ತ ಹೈಕಮಾಂಡ್ ಜಿಲ್ಲೆಗೆ,  ಬಿ ಕೆ ಹರಿಪ್ರಸಾದ್ ಅವರ ಹೆಸರು ಸೂಚಿಸಿತ್ತು. ಆಗ ಗಾಬರಿ ಬಿದ್ದ ನಾಯಕರು,  ಅದರಲ್ಲಿಯೂ ವಿಶೇಷವಾಗಿ ಭಂಡಾರಿ ಮತ್ತು ಖಾದರ್ ದೆಹಲಿ ನಾಯಕರ ಮೇಲೆ ತೀವ್ರ ಒತ್ತಡ ಹಾಕಿದರೆಂಬ  ಸುದ್ದಿ ರಾಜಕೀಯ ಪಡಸಾಲೆಯಲ್ಲಿ  ಹರಿದಾಡುತ್ತಿದೆ.

ಪೊಲೀಸ್ ಆಧಿಕಾರಿಗಳ ವರ್ಗಾವಣೆಯಂತೂ ಖಾದರ್ ಮತ್ತು ಅವರ ಸಹೋದರರಿಗೆ ದೊಡ್ಡ ಅಘಾತವನ್ನೇ ನೀಡಿದೆ ಎಂಬ ಗುಸು ಗುಸು ಸುದ್ದಿ ಓಡಾಡುತ್ತಿದೆ.

 ಹರಿಪ್ರಸಾದರನ್ನು ತಡೆಯಲು ಇನ್ನಿಲ್ಲದ ಯತ್ನ

ಜಿಲ್ಲೆಯ ನಿಯಂತ್ರಣ ಹರಿಪ್ರಸಾದ್‌ ಕೈಗೆ ಹೋಗುವ ವದಂತಿಯಿಂದ ಅತ್ತ ಪರಿವಾರ ಕಂಗಾಲಾದರೆ, ಇತ್ತ ಕಾಂಗ್ರೆಸ್ ನಾಯಕರೇ ದಿಗಿಲು ಬಿದ್ದರು. ‌ʼಹರಿಪ್ರಸಾದ್  ಜಿಲ್ಲೆಗೆ ಬಂದರೆ ನಾನು ಪಕ್ಷ ತೊರೆಯುತ್ತೇನೆʼ ಎಂದು ಖಾದರ್ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ದೆಹಲಿ ವಲಯದಲ್ಲಿ ಸುದ್ದಿ ಇದೆ.

ಇದಕ್ಕೆ ಪೂರಕವಾಗಿ ಡಿ ಕೆ ಶಿ ಅವರು, ಬಿ ಕೆ ಹರಿಪ್ರಸಾದ್ ಮಂತ್ರಿ ಆದರೆ ಸಿದ್ದರಾಮಯ್ಯ ಗಟ್ಟಿಯಾಗುತ್ತಾರೆ ಮತ್ತು ಅಹಿಂದ ಬೆಳೆಯುತ್ತದೆ ಎಂಬ ಭಯದಿಂದ ಹರಿಪ್ರಸಾದ್ ಬರದಂತೆ ತಡೆ ಮಾಡುತ್ತಿರುವುದು ಗುಟ್ಟಿನ ಸುದ್ದಿಯಲ್ಲ. ಇದೀಗ ಖಾದರ್ ಜಿಲ್ಲೆಯಲ್ಲಿ ತಮ್ಮ ಹಿಡಿತ ತಪ್ಪದಂತೆ ನೋಡಿಕೊಳ್ಳಲು ಬಾರೀ ಯತ್ನ ನಡೆಸಿದ್ದಾರಂತೆ. ಆದರೆ ಅವರ ನಿಯಂತ್ರಣ ಇದ್ದಾಗ ಅವರ ಸಹೋದರ ಮಾಡಿದ ಅನಾಹುತದ ಭೂತಗಳು ಮತ್ತೆ ಮತ್ತೆ ಎದ್ದು ಬರುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆಯಂತೆ.

ಖಾದರ್ ಮತ್ತು ಇಫ್ತಿ  ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ಅಪಾರ  ಆರೋಪ ಬಂದರೂ ಬಿ ಜೆ ಪಿ ನಾಯಕರು ಖಾದರ್ ವಿರುದ್ಧ ಒಂದೇ ಒಂದು ಮಾತು ಆಡುತ್ತಿಲ್ಲ ಎಂಬುದು ಗಮನಾರ್ಹ. ಅದೇ ರೀತಿ ಖಾದರ್ ಕೂಡಾ ಬಿಜೆಪಿ ವಿರುದ್ಧ ಖಡಕ್ ಮಾತು ಆಡುತ್ತಿಲ್ಲ. ಇದು ಮುಸ್ಲಿಂ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣ ಆಗಿರುವುದಂತೂ ಸ್ಪಷ್ಟ.

ಇದನ್ನೂ ಓದಿ- ಕರಾವಳಿ ಕೋಮು ರಾಜಕಾರಣ-2 | ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಅನ್ಯೋನ್ಯ ಸಂಬಂಧ

 ಸ್ಪಷ್ಟ ಸಿದ್ಧಾಂತ ಇಲ್ಲದ ಮಂದಿ ಯಾವತ್ತೂ ಅಪಾಯಕಾರಿಗಳು

 ʼತಾವು ಲೆಫ್ಟೂ (Left) ಅಲ್ಲ, ರೈಟೂ (Right) ಅಲ್ಲ, ತಮ್ಮದು ಸ್ಟ್ರೇಟ್‌ (straight)ʼ ಎಂಬ ಮಂದಿ ಯಾವುದೇ ಪಕ್ಷದಲ್ಲಿ ಇರಲಿ, ಅವರು ಪಕ್ಷಕ್ಕೆ ಅಪಾಯಕಾರಿಗಳು. ಒಂದು ಸ್ಪಷ್ಟ ಸಿದ್ಧಾಂತವೇ ಇಲ್ಲದ ಅಂತಹ  ನಾಜೂಕಯ್ಯಗಳು ಮತ್ತು ಅವಕಾಶವಾದಿಗಳು ಪಕ್ಷವನ್ನು ಹಳ್ಳ ಹಿಡಿಸುತ್ತಲೇ ಇರುತ್ತಾರೆ. ದಕ್ಷಿಣಕನ್ನಡ ಕಾಂಗ್ರೆಸ್‌ ನಲ್ಲಿ ಆಗಿರುವುದೂ ಇದೇ.

 ತಡವಾಗಿಯಾದರೂ, ಜಿಲ್ಲೆಯ ಆಡಳಿತದಲ್ಲಿ ತಕ್ಕಮಟ್ಟಿನ ಸುಧಾರಣೆ ಆಗುತ್ತಿರುವಂತೆ ಕಾಣುತ್ತಿದೆ. ಆದರೆ ಜಿಲ್ಲಾ ಕಾಂಗ್ರೆಸ್ ಮಾತ್ರ ʼಗತಿಗೋತ್ರ ಇಲ್ಲʼ ಎಂಬ ಆಡುಮಾತಿನಂತೆ ಹೇಳುವವರು ಕೇಳುವವರು ಯಾರೂ ಇಲ್ಲದೆ  ಅನಾಥವಾಗಿರುವುದೊಂದು ದುರಂತ.

ಇದನ್ನೂ ಓದಿ- ಕರಾವಳಿಯ ಕೋಮು ರಾಜಕಾರಣ 3- ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಕಾಲ ತೀವ್ರ ಗತಿಯಲ್ಲಿ ಓಡುತ್ತಿದೆ. ಇನ್ನೇನು ಕೇವಲ ಮೂರು ವರ್ಷಗಳಲ್ಲಿ ಮತ್ತೆ ಕರ್ನಾಟಕ ವಿಧಾನ ಸಭೆಗೆ ಚುನಾವಣೆ ನಡೆಯಲಿದೆ. ತನ್ನ ಒಳಜಗಳ, ಹಿಂದುತ್ವಕ್ಕೆ ಆದ ಹಿನ್ನಡೆ ಇವೆಲ್ಲದರ ನಡುವೆ ಬಿ ಜೆ ಪಿ ಮುಂದಿನ ಚುನಾವಣೆಗೆ ಹೊಸ ಉತ್ಸಾಹದಿಂದ ತಯಾರಾಗುತ್ತಿದೆ. ಸಿಕ್ಕಿದ್ದೇ ಚಾನ್ಸ್‌ ಎಂದು ಎಸ್ ಡಿ ಪಿ ಐ ಕೂಡಾ ತನ್ನ ಗೇಮ್ ಶುರು ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ದಿಕ್ಕು ಕಾಣದೆ ಕುಳಿತಿದ್ದಾರೆ.

ಎಸ್‌ ಕೆ ಸಿದ್ಧಾರ್ಥ

ರಾಜಕೀಯ ವಿಶ್ಲೇಷಕರು

More articles

Latest article