ಕರಾವಳಿಯಲ್ಲಿ  ಕೋಮು ಗಲಭೆಗೆ ಧರ್ಮಾಧರಿತ ರಾಜಕೀಯ ಕಾರಣ: ಕೆಪಿಸಿಸಿ ಸತ್ಯಶೋಧನಾ ಸಮಿತಿ ಸಂಶೋಧನೆ

Most read

ಬೆಂಗಳೂರು: ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋಮು ಗಲಭೆ ಕುರಿತು ಅಧ್ಯಯನ ನಡೆಸಲು ಪ್ರದೇಶ ಕಾಂಗ್ರೆಸ್‌ ಸಮಿತಿ ನೇಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್ ನೇತೃತ್ವದ ಸತ್ಯಶೋಧನಾ ಸಮಿತಿಯು ತನ್ನ ವರದಿಯನ್ನು ಪಕ್ಷಕ್ಕೆ ಸಲ್ಲಿಸಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ.

ವರದಿ ಸ್ವೀಕರಿಸಿದ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್‌, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಘಟನೆಗಳು ಆತಂಕ ಮೂಡಿಸಿವೆ. ಸ್ಥಳೀಯರ ಭಾವನೆ, ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಅಲ್ಲಿಗೆ ಪಕ್ಷದಿಂದ ಸತ್ಯಶೋಧನಾ ಸಮಿತಿ ಕಳುಹಿಸಲಾಗಿತ್ತು. ಕೋಮು ದ್ವೇಷದ ಪರಿಣಾಮದಿಂದಾಗಿ ಸರಣಿ ಹತ್ಯೆಗಳು ನಡೆದಿವೆ. ಇಂತಹ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರ ಈಗಾಗಲೇ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಮಧ್ಯಂತರ ವರದಿಯಲ್ಲಿ ಏನಿದೆ: ಕರಾವಳಿ ಜಿಲ್ಲೆಗಳಲ್ಲಿ ನಡೆದ ಕೋಮು ಹತ್ಯೆಗಳಿಗೆ ಸತ್ಯಶೋಧನಾ ಸಮಿತಿ  ಕಾರಣಗಳನ್ನು ಪಟ್ಟಿ ಮಾಡಿದೆ. ರಾಜಕೀಯ, ಧರ್ಮ, ಮಾಫಿಯಾ, ಹೊರಗಿನ ಬೆಂಬಲ,‌ ಪೊಲೀಸ್ ನಿಷ್ಕ್ರಿಯತೆ, ವ್ಯಾಪಕ ಪ್ರಚಾರ ಕೋಮು ಘಟನೆಗಳಿಗೆ ಪ್ರಮುಖ‌ ಕಾರಣ ಎಂದು ಮಧ್ಯಂತರ ವರದಿಯಲ್ಲಿ ವಿವರಿಸಲಾಗಿದೆ.

ರಾಜಕೀಯ ಮುಖಂಡರು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದರಲ್ಲೂ ಬಿಜೆಪಿ ಮತ್ತು ಸಂಘ ಪರಿವಾರ ಧಾರ್ಮಿಕ ತಳಹದಿಯ ಮೇಲೆ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಮತ್ತು ಇತರೆ ಜಾತ್ಯತೀತ ರಾಜಕೀಯ ನಾಯಕರು ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿಲ್ಲ. ಅಲ್ಲದೆ, ಬಿಜೆಪಿ ವಿರೋಧಿ ಬಣದ ರಾಜಕೀಯ ಗೊಂದಲವೂ ಕೋಮುಸಂಘರ್ಷಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕರಾವಳಿ ಪ್ರದೇಶದಲ್ಲಿ ಧಾರ್ಮಿಕ ಪ್ರತ್ಯೇಕತೆಯ ಪ್ರಭಾವ ಹೆಚ್ಚಿದೆ. ವಿಶೇಷವಾಗಿ ಹಿಂದೂ– ಮುಸ್ಲಿಂ ಸಮುದಾಯದ ಯುವ ವರ್ಗ ಹಾಗೂ ಧಾರ್ಮಿಕ ಗುರುಗಳು ಇದಕ್ಕೆ ಬೆಂಬಲ ‌ನೀಡುತ್ತಿದ್ದಾರೆ. ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಒಂದು ಕೋಮು ಮತ್ತೊಂದು ಧರ್ಮದವರನ್ನು ಕೆರಳಿಸುವ ರೀತಿಯಲ್ಲಿ ಆಚರಣೆ ಮಾಡುತ್ತವೆ. ಧರ್ಮಾಂಧತೆಯ ಕಾರಣಕ್ಕೆ ಮತೀಯ ಗೂಂಡಾಗಿರಿ ಪದೇ ಪದೇ ನಡೆಯುತ್ತಿದೆ. ಇದರಿಂದ ಧಾರ್ಮಿಕ ಸಂಘರ್ಷ ಮತ್ತಷ್ಟು ಹೆಚ್ಚಿದೆ ಎಂದೂ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಡ್ರಗ್ಸ್, ಗಾಂಜಾ, ಮರಳು, ರೌಡಿಸಂ, ಜಾನುವಾರು ಸಾಗಣೆ ಮಾಫಿಯಾ ಕರಾವಳಿಯಲ್ಲಿ ಶಾಂತಿ ಕದಡಲು ಕಾರಣವಾಗಿದೆ. ವಿವಿಧ ಮಾಫಿಯಾಗಳು ಕರಾವಳಿಯನ್ನು ನಿಯಂತ್ರಿಸುತ್ತಿರುವುದೂ ಕೋಮು ದಳ್ಳುರಿ ಹೆಚ್ಚಲು ಕಾರಣವಾಗುತ್ತಿದೆ. ಹಿಂದೂ ಮುಸ್ಲಿಂ ಎರಡೂ ಧರ್ಮದ ಹೋರಾಟಗಾರರು ಮತ್ತು ಸಂಘಟನೆಗಳಿಗೆ ಸ್ಥಳೀಯರ ಮತ್ತು  ಹೊರಗಿನ ಬೆಂಬಲ ವ್ಯಾಪಕವಾಗಿ ದೊರೆಯುತ್ತಿದೆ. ವಿದೇಶಗಳಿಂದಲೂ ಆರ್ಥಿಕ ನೆರವು ಸಿಗುತ್ತಿದೆ. ಪೊಲೀಸರ ನಿಷ್ಕ್ರಿಯತೆಯೂ ಇಂತಹ ಘಟನೆಗಳು ಪದೇ ಪದೇ ನಡೆಯಲು ಕಾರಣವಾಗುತ್ತಿದೆ ಎಂದೂ ಸತ್ಯಶೋಧನಾ ಸಮಿತಿ ಅಭಿಪ್ರಾಯಪಟ್ಟಿದೆ. ಸಮಿತಿಯ ಸದಸ್ಯರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

More articles

Latest article