ಬೆಂಗಳೂರು: ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಮರು ಸಮೀಕ್ಷೆ(ಜಾತಿಗಣತಿ) ಕುರಿತು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಯಲಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರು ಹಾಗೂ ಮುಖ್ಯಮಂತ್ರಿಗಳು ಹೇಳಿದ್ದನ್ನು ಪಾಲನೆ ಮಾಡಬೇಕು. ಕಾಂತರಾಜು ಅವರ ವರದಿಯ ಬಗ್ಗೆಯೂ ಚರ್ಚೆ ನಡೆಯಲಿದೆ. ವರದಿ ಕುರಿತು ಈ ಹಿಂದಿನ ಮೂರು ಸಚಿವ ಸಂಪುಟ ಸಭೆಗಳಲ್ಲಿ ಸಚಿವರು ಸಲಹೆಗಳನ್ನು ನೀಡಿದ್ದಾರೆ. ನಾಳೆ ಕೂಲಂಕಷವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಯಾರ ಮನಸ್ಸಿಗೂ ನೋವುಂಟು ಮಾಡುವುದಿಲ್ಲ. ರಾಜ್ಯದ ಜನರಿಗೆ ಅನುಕೂಲ ಆಗಬೇಕು ಅಷ್ಟೇ ಎಂದರು.
ಇಡಿ ದಾಳಿ ವಿರುದ್ಧ ಆಕ್ರೋಶ:
ಕಾಂಗ್ರೆಸ್ ಶಾಸಕರ ಮನೆಗಳ ಮೇಲೆ ಇಡಿ ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿ ಇಡಿಯವರು ವ್ಯವಸ್ಥಿತವಾಗಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಈ ದಾಳಿಗೆ ನಾವು ಹೆದರಲ್ಲ ಎಂದಿದ್ದಾರೆ. ಕಾಂಗ್ರೆಸ್ ನಾಯಕರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಸಾವಿರಾರು ಕೋಟಿಯ ಚುನಾವಣಾ ಬಾಂಡ್ ಹಗರಣದ ಬಗ್ಗೆ ಇಡಿ ಅಧಿಕಾರಿಗಳು ಏಕೆ ಯಾವುದೇ ಪ್ರಕರಣ ದಾಖಲಿಸಿಲ್ಲ? ಕೇಂದ್ರದ ಹಗರಣ ಏಕೆ ಇವರ ಕಣ್ಣಿಗೆ ಕಾಣುತ್ತಿಲ್ಲವೇ ? ವಾಲ್ಮೀಕಿ ಮತ್ತು ಮುಡಾ ಪ್ರಕರಣಗಳು ಮಾತ್ರ ಕಣ್ಣಿಗೆ ಕಾಣುತ್ತವೆಯೇ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ. ಬ್ರಿಟೀಷರನ್ನೇ ಓಡಿಸಿದ್ದು ಕಾಂಗ್ರೆಸ್ ಪಕ್ಷ. ಇನ್ನು ಬಿಜೆಪಿಯವರಿಗೆ ನಾವು ಮಣಿಯುತ್ತೇವೆಯೇ ಎಂದು ವಾಗ್ದಾಳಿ ನಡೆಸಿದರು. ಮಾಜಿ ಸಚಿವ ಶ್ರೀರಾಮುಲು ಅವರು, ತಮ್ಮ ಸ್ನೇಹಿತ ಜನಾರ್ದನ ರೆಡ್ಡಿ ಅವರ ಬಗ್ಗೆ ಮೊದಲು ಮಾತನಾಡಲಿ. ಅವರ ಗೆಳೆಯ ಎಲ್ಲಿದ್ದಾರೆ ಎಂದು ಹೇಳಲಿ. ಆ ಬಳಿಕ ಯಾರ ಮನೆ ಮುಂದೆ ಬೃಂದಾವನ ಇದೆ ಎಂಬುದು ತಿಳಿಯಲಿದೆ ಎಂದು ಛೇಡಿಸಿದರು.