ಅಗ್ನಿಪಥ ಕಾದಂಬರಿಯು ಅಲ್ಪಸಂಖ್ಯಾತರು, ದಮನಿತರು, ತಳ ಸಮುದಾಯದವರು, ದಲಿತರು, ಮಹಿಳೆಯರು ರಾಜಕಾರಣದ ಒಳ ಪಿತೂರಿಯಲ್ಲಿ ಹೇಗೆ ಧೂಳೀಪಟವಾಗುತ್ತಾರೆ ಎನ್ನುವ ವಾಸ್ತವವನ್ನು ವಸ್ತುನಿಷ್ಠವಾಗಿ ತೆರೆದಿಡುತ್ತದೆ. ಜಾತಿ, ಮತ, ಧರ್ಮ, ವರ್ಗ, ಲಿಂಗ ಎನ್ನುವ ತಾರತಮ್ಯಗಳನ್ನು ಹೊತ್ತ ಕುಲಗೆಟ್ಟ ಮನಸ್ಸುಗಳಿಗೆ ಅಂಟಿದ ರಕ್ತದ ಕಲೆಗಳನ್ನು ತೊಳೆಯುವ ಕೆಲಸವನ್ನು ಇಂತಹ ಸಾಹಿತ್ಯ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ- ದೇವಿಕಾ ನಾಗೇಶ್, ಕವಯಿತ್ರಿ.
“ವರ್ಣಾಶ್ರಮ ಧರ್ಮ, ಜಾತಿ ಪದ್ಧತಿ, ಮೇಲು ಕೀಳು ಭಾವನೆ ಮುಂತಾದ ಮಧ್ಯ ಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಚಾರಿಕ ದೃಷ್ಟಿಯ ಅಗ್ನಿ ಕುಂಡದಲ್ಲಿ ಭಸ್ಮವಾಗಬೇಕು “ ವಿಶ್ವಮಾನವ ತತ್ವವನ್ನು ಪ್ರತಿಪಾದಿಸಿದ ರಾಷ್ಟ್ರ ಕವಿ ಕುವೆಂಪುರವರ ಮಾತಿದು.`ಇಂದಿನ ಚರಿತ್ರೆ ನಾಳೆ ಎಂತಹ ಸಂಸ್ಕೃತಿಯಾಗಿ ರೂಪುಗೊಳ್ಳುತ್ತದೆ ಎಂಬುದನ್ನು ಗಮನಿಸಲು ಒಂದು ಕೃತಿ ಸಮರ್ಥವಾದರೆ ಮನುಷ್ಯ ತನ್ನ ಬದುಕನ್ನು ಅದಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಬಹುದು ಎಂದನ್ನಿಸುತ್ತದೆ. ‘ಬಿ.ಎಂ.ಬಶೀರ್ ಅವರ” ಅಗ್ನಿಪಥ” ಕಾದಂಬರಿಯ ಮುನ್ನುಡಿಯಲ್ಲಿ ಬಾಲಕೃಷ್ಣ ಕಂಜರ್ಪಣೆಯವರು ಬರೆದ ಮಾತಿದು. ಲೋಕದ ದಂದುಗಗಳಲ್ಲಿ ಯುದ್ಧವೂ ಒಂದು. ಈ ಯುದ್ಧ ಸಮೂಹ ಸನ್ನಿಯ ಹಾಗೆ ಕ್ಷಣಮಾತ್ರದಲ್ಲಿ ವ್ಯಾಪಿಸುವಂತಹದ್ದು. ಜಗತ್ತಿನ ಎರಡು ಮಹಾಯುದ್ಧಗಳ ನಡುವಿನ ಅವಧಿಯನ್ನು ಪಠ್ಯಪುಸ್ತಕಗಳಲ್ಲಿ ನಾವು ಶೀತಲ ಯುದ್ಧದ ಅವಧಿ ಎಂದು ಓದಿಕೊಂಡ ನೆನಪು. ಬೂದಿ ಮುಚ್ಚಿದ ಕೆಂಡದಂತಿರುವ ಸಮಯ ಇದು. ಈ ಹೊತ್ತಿನಲ್ಲಿ ಮಾತಿರಬಹುದು, ಕೃತಿ ಇರಬಹುದು.. ಎಚ್ಚರ ತಪ್ಪಿದರೆ ಯುದ್ಧ ಆಗಿಯೇ ಬಿಡಬಹುದು. ಈ ಸಮಾಜದಲ್ಲಿ ಯುದ್ಧವಾಗಬೇಕು ಎಂದು ಬಯಸುವಷ್ಟೇ ಮಂದಿ ಯುದ್ಧದ ಭೀಕರ ಅನುಭವಗಳನ್ನು ಕಂಡು ಅನುಭವಿಸಿ ಯುದ್ಧ ಬೇಡ ಶಾಂತಿ ಬೇಕು ಎಂದು ಬಯಸುತ್ತಿರುತ್ತಾರೆ. ನೋವಿನ ಹಲ್ಲಿಗೆ ಹೊರಳುವ ನಾಲಿಗೆಯ ಹಾಗೆ ಯುದ್ಧ ಬೇಕು ಎನ್ನುವುದು ಒಂದು ಚಪಲ. ಈ ಚಪಲ ಚೆನ್ನಿಗರಾಯರಿಂದಲೇ ಯುದ್ಧಗಳಿರಲಿ, ಕೋಮು ಗಲಭೆಗಳಿರಲಿ ಸಂಭವಿಸುವುದು. ಕಿಡಿ ಹಚ್ಚುವವರು ಒಬ್ಬರಾದರೆ ಬಿದ್ದ ಬೆಂಕಿಗೆ ಚಳಿ ಕಾಯಿಸಿಕೊಳ್ಳುವವರು ಇನ್ನೊಬ್ಬರು. ಇಂತಹವರು ಎಲ್ಲಾ ಕಾಲದಲ್ಲೂ ಎಲ್ಲಾ ದೇಶಗಳಲ್ಲೂ ಇದ್ದೇ ಇರುವವರು. ಇವರು ಹಚ್ಚಿದ ಕಿಡಿಯಿಂದ ಹಬ್ಬಿದ ಬೆಂಕಿ ಕ್ಷಣ ಮಾತ್ರದಲ್ಲಿ ಹರಡಿ ಪ್ರತಿಕೂಲ ಪರಿಸ್ಥಿತಿ ಉದ್ಭವವಾಗುತ್ತದೆ. ಗಲಭೆಗಳು ಹುಟ್ಟಿಕೊಳ್ಳುತ್ತವೆ. ಇದರ ಪರಿಣಾಮಗಳನ್ನು ಅನುಭವಿಸುವವರು ಜನಸಾಮಾನ್ಯರು, ಮಹಿಳೆಯರು, ಮಕ್ಕಳು. ಜಗತ್ತಿನ ಯಾವ ಮೂಲೆಯಲ್ಲಾದರೂ ಯುದ್ಧ ಸಂಭವಿಸಬಹುದು. ಆಗ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತವೆ ದಿನನಿತ್ಯದ ದಿನಸಿ ಸಾಮಾನುಗಳಿಂದ ತೊಡಗಿ ಹಾಲು, ಹಣ್ಣು, ತರಕಾರಿಗಳ ಬೆಲೆಯೂ ದುಬಾರಿಯಾಗುತ್ತದೆ. ಹೀಗೆ ಏರಿದ ಬೆಲೆ ಮತ್ತೆ ಯಾವತ್ತಾದರೂ ಇಳಿದಿತ್ತೆ ಎಂದರೆ ಇಲ್ಲ. ಸಹಬಾಳ್ವೆಯ ಸಾಮರಸ್ಯದ ಬದುಕು ನಡೆಸುತ್ತಿದ್ದ ಸಮಾಜದಲ್ಲಿ ಒಡಕನ್ನು ಬಿತ್ತಿದ ಬೀಜ ಯಾವುದು ಎನ್ನುವ ಶೋಧಕ್ಕಿಳಿಸುವ ಕಾದಂಬರಿ ಅಗ್ನಿಪಥ.
“ಯುದ್ಧವನ್ನು ಕೇಂದ್ರವಾಗಿಟ್ಟುಕೊಂಡ ಈ ಕೃತಿ ತನ್ನೊಳಗೆ ಯಾವುದೇ ಭೌತಿಕ ಯುದ್ಧವನ್ನು ತುಂಬಿಕೊಂಡಿಲ್ಲ “ ಎನ್ನುವ ಮುನ್ನುಡಿಯ ಮಾತು ಸತ್ಯ. ಜೀವನ ಪ್ರೀತಿಯನ್ನು ಸಾರುವ ಇಲ್ಲಿನ ಕಥಾ ಪಾತ್ರಗಳು ಸಹ ಬಾಳ್ವೆಯ ಸಾಮರಸ್ಯದ ಬದುಕು ನಡೆಸುತ್ತಿದ್ದವರು. ಉಳ್ಳವರ ರಾಜಕಾರಣದ ಚದುರಂಗದಾಟದಲ್ಲಿ ಮುಗ್ಧರು, ಅಮಾಯಕರು, ನಿರ್ಗತಿಕರು, ಮಹಿಳೆಯರು, ಮಕ್ಕಳು ದಾಳಗಳಾಗುವುದನ್ನು ಕಾದಂಬರಿಯು ಸರಳವಾದ ಭಾಷೆಯಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ನಿರೂಪಿಸುತ್ತ ಸಾಗುತ್ತದೆ.
ಶಾಲಾ ದಿನಗಳಲ್ಲಿ ಸ್ನೇಹಿತರಾಗಿದ್ದ ಕಬೀರ, ಪಪ್ಪು ಯಾನೆ ಪ್ರತಾಪ ಸಿಂಹ ಕಾಲಕ್ರಮೇಣ ದೂರವಾಗುತ್ತಾರೆ. ತೆರೆಯ ಮರೆಯಲ್ಲಿ ನಡೆಯುತ್ತಿದ್ದ ಘಟನೆಗಳು ಇದಕ್ಕೆ ಕಾರಣವಾಗಿದ್ದರೂ ಇದನ್ನು ಯಾರೂ ಹೆಚ್ಚು ಗಮನಿಸುತ್ತಿರಲಿಲ್ಲ. ಗುರೂಜಿ ಮತ್ತವರ ಮಗಳು ಜಾನಕಿಯ ಪ್ರಭಾವದಿಂದ ದೇಶದ ಗಡಿ ಕಾಯುವ ಯೋಧನಾಗಬೇಕು ಎನ್ನುವ ಕನಸು ಹೊತ್ತವ ಪಪ್ಪು. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಎನ್ನಲಾದ ತನ್ನ ಊರಿನ ವೆಂಕಟ ಪಪ್ಪುವಿಗೆ ಸ್ಪೂರ್ತಿ. ಪಪ್ಪುವಿನ ತಂದೆ ಅಪ್ಪು ಭಟ್ಟರು ಹಳ್ಳಿ ಶಾಲೆಯ ಲೆಕ್ಕದ ಮೇಷ್ಟ್ರು ಗುರೂಜಿಯ ಅಭಿಮಾನಿ. ಜಾನಕಿಯೂ ತಾನೂ ಪ್ರೀತಿಸುತ್ತಿದ್ದೇವೆ ಆಕೆಯನ್ನು ಮೆಚ್ಚಿಸಬೇಕೆಂದರೆ ತಾನು ಸೈನಿಕನಾಗಬೇಕು ಎಂಬ ಭ್ರಮೆಗೆ ಬಿದ್ದು ಸೈನಿಕನಾಗುವ ಕನಸು ಕಾಣುತ್ತಿದ್ದವ ಪಪ್ಪು. ಯುದ್ಧದಿಂದ ಆಗುವ ದುರಂತಗಳನ್ನೆಲ್ಲ ಬಲ್ಲವರಾಗಿದ್ದರೂ ದೇಶಪ್ರೇಮದ ಭ್ರಮೆ ಹೊಕ್ಕಿದ್ದ ಗುರೂಜಿಯ ಅಭಿಮಾನಿಯಾಗಿದ್ದ ಪಪ್ಪುವಿನ ತಂದೆ ಅಪ್ಪು ಭಟ್ಟರು ಮಗನ ಸೈನಿಕನಾಗುವ ಆಸೆಯನ್ನು ಯಾವತ್ತೂ ವಿರೋಧಿಸಲಿಲ್ಲ. ಮಾತ್ರವಲ್ಲ ಈ ಮರುಳಿಗೆ ಬಿದ್ದು ಮತಿ ಭ್ರಮಣೆಗೆ ಒಳಗಾದ ಕಾದಂಬರಿಯ ದುರಂತ ನಾಯಕ ಪಪ್ಪುವಿನ ಸಾವಿಗೂ ಸಾಕ್ಷಿಯಾಗಿ ಶಿಲುಬೆ ಹೊತ್ತ ಯೇಸುವಿನ ಸ್ಥಿತಿಯಲ್ಲಿ ಇವರು ತಮ್ಮ ಇಳಿ ವಯಸ್ಸು ಕಳೆಯುವಂತಾಗುತ್ತದೆ.
“ ಯೋಧನ ಕೈಯಲ್ಲಿರುವ ಅತಿ ದೊಡ್ಡ ಅಸ್ತ್ರ ತಾಳ್ಮೆ. ಆ ಅಸ್ತ್ರವನ್ನು ಯೋಧ ಯಾವತ್ತೂ ಕಳೆದುಕೊಳ್ಳಬಾರದು.” ಸೇನೆ ಸೇರಲು ಆಯ್ಕೆಯಾಗಿ ತರಬೇತಿ ನೀಡುವ ಶಿಬಿರದಲ್ಲಿ ಪಪ್ಪುವಿಗೆ ಗೆಳೆಯನಾದ ಅಪ್ಪಯ್ಯನ ಮಾತಿದು. ಯುದ್ಧ ಎಂದು ಯಾವಾಗಲೂ ಬಡಬಡಿಸುತ್ತಿದ್ದ ಪಪ್ಪುವಿಗೆ ಇದು ಪಥ್ಯವಾಗುತ್ತಿರಲಿಲ್ಲ. ಸೇನಾ ತರಬೇತು ಮುಗಿಸಿ ಸುಬೇದಾರನಾಗಿ ಆಯ್ಕೆಯಾದ ಪಪ್ಪುವಿಗೆ ಅಲ್ಲಿರುವ ಉಳಿಗಮಾನ್ಯ ಮನಸ್ಥಿತಿ, ಶ್ರೇಣೀಕರಣ ವ್ಯವಸ್ಥೆ ಮೇಲಾಧಿಕಾರಿಗಳಿಗೆ ಅವರ ಮನೆಯವರಿಗೆ ಆಳಾಗಿ ಕೆಲಸ ಮಾಡಬೇಕಾಗಿದ್ದ ಸೈನಿಕರ ಪರಿಸ್ಥಿತಿ ಹೀಗೆ ಕ್ರಮೇಣ
ಎಲ್ಲವೂ ನಿಧಾನವಾಗಿ ಅರ್ಥವಾಗತೊಡಗಿತ್ತು. ಈ ಎಲ್ಲವನ್ನು ಸಹಿಸಿ ಕೊಂಡಿದ್ದ ಪಪ್ಪು ಇದೇ ಸುಮಾರಿಗೆ ಮೇಲಾಧಿಕಾರಿಯ ಪತ್ನಿ ತನ್ನನ್ನು ರತಿಕ್ರೀಡೆಗೆ ಒತ್ತಾಯ ಮಾಡಿದ್ದನ್ನು ತಿರಸ್ಕರಿಸಿ ಬಿಟ್ಟಿದ್ದ. ಇದರಿಂದ ಮೇಲಾಧಿಕಾರಿಗಳ ವೈರ ಕಟ್ಟಿಕೊಂಡ. ದೇಶದ ಗಡಿಪ್ರದೇಶಕ್ಕೆ ವರ್ಗವಾಯಿತು. ಮೇಲಾಧಿಕಾರಿಗಳನ್ನು ಅವರ ಕುಟುಂಬವನ್ನು ಒಲೈಸಿದವರಿಗೆ ಮಾತ್ರ ಸೈನ್ಯದಲ್ಲಿ ಸುರಕ್ಷಿತ ಸ್ಥಳ ಎನ್ನುವುದನ್ನು ಮನಗಂಡ. ಸೇನೆಯಲ್ಲಿ ಆಹಾರದಿಂದ ತೊಡಗಿ ಈ ಯಾವುದು ಇಷ್ಟವಾಗದಿದ್ದಾಗಲೂ ಪಪ್ಪು ಇದನ್ನೆಲ್ಲಾ ಸಹಿಸಿಕೊಂಡದ್ದು ತಾನು ಪ್ರೇಮಿಸಿದ ಜಾನಕಿಯನ್ನು ಒಲಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ. ಆದರೆ ಒಂದು ಹಂತದಲ್ಲಿ ಜಾನಕಿ ತನ್ನ ಕೈಗೆ ಸಿಗುವವಳಲ್ಲ ಎಂಬ ಸತ್ಯ ಮನವರಿಕೆಯಾದಾಗ ಆತ ಮಾನಸಿಕವಾಗಿ ಕುಗ್ಗುತ್ತಾನೆ. ಸೈನಿಕನಾಗಿ ವೀರ ಮರಣವನ್ನು ಅಪ್ಪಿದ್ದ ಎನ್ನುವ ಬ್ರಾಂತು ತನಗೆ ಮೂಡಿಸಿದ್ದ ವೆಂಕಟನ ಬಗ್ಗೆ ಸೇನೆಯ ಮಂದಿ ಹೇಳುವ ಕಥೆ ಬೇರೆಯೇ ಇತ್ತು. ಪಪ್ಪು ಊರಿಗೆ ಹೋಗಿದ್ದವ ಒಮ್ಮೆ ವೆಂಕಟನ ಮನೆಗೆ ಹೋಗಿ ಆತನ ಪತ್ನಿ ಹಾಗೂ ಮಗಳ ಗತಿ ಕೆಟ್ಟ ಸ್ಥಿತಿಯನ್ನು ಕಂಡುಬರುತ್ತಾನೆ. ನಂತರ ಭ್ರಮನಿರಸನದ ಸ್ಥಿತಿಯಲ್ಲಿ ಸೇನಾ ಪಾಳಯಕ್ಕೆ ಹಿಂತಿರುಗುತ್ತಾನೆ. ಅಲ್ಲಿ ಒಂದು ಸನ್ನಿವೇಶದಲ್ಲಿ ಮೇಲಾಧಿಕಾರಿಯ ಮೇಲೆ ಕೈ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಊರಿಗೆ ಹಿಂತಿರುಗುತ್ತಾನೆ.
ಕಾದಂಬರಿಯಲ್ಲಿ ಬರುವ ಇನ್ನೆರಡು ಪಾತ್ರಗಳು ಮುಸ್ತಫ ಮತ್ತು ಜಾನಕಿಯರದ್ದು. ಹದಿಹರೆಯದ ಮನಸ್ಸುಗಳ ಕೋಮಲಭಾವ ಇವರನ್ನು ಹತ್ತಿರವಾಗಿಸಿತ್ತು. ಪರಸ್ಪರ ಸಹಪಾಠಿಗಳಾಗಿದ್ದ ಇವರು ಭಾಷಣ ಕ್ವಿಜ್ ಚಟುವಟಿಕೆಗಳಲ್ಲೂ ಸ್ಪರ್ಧಿಗಳು. ಇವರ ಆರೋಗ್ಯಕರ ಸ್ಪರ್ಧೆ ಸಹಜವಾಗಿಯೇ ಇವರ ಸ್ನೇಹವನ್ನು ಬೆಸೆಯಿತು. ಭಿನ್ನ ಕೋಮಿನವರಾದ ಇವರ ಪ್ರಾಮಾಣಿಕ ಸ್ನೇಹವನ್ನೇ ಅಪಾರ್ಥ ಮಾಡಿಕೊಂಡ ಮೂಲಭೂತವಾದಿ ಪಟ್ಟ ಭದ್ರ ಹಿತಾಸಕ್ತಿಗಳು ಹೂಡಿದ ತಂತ್ರಗಾರಿಕೆ ಇಡೀ ಸಮಾಜದಲ್ಲಿ ಕೋಮು ಸಂಘರ್ಷದ
ಕೊಚ್ಚೆ ಕೊಳೆ ಹರಡುವುದಕ್ಕೆ ಕಾರಣವಾಯಿತು. ಪ್ರತಿಭಾವಂತ ಹುಡುಗ ಮುಸ್ತಫನ ಶಿಕ್ಷಣ ಅರ್ಧದಲ್ಲಿ
ಸ್ಥಗಿತವಾಯಿತು. ಈತನ ತಂದೆ ಇದಿನಬ್ಬರ ಬಟ್ಟೆ ಅಂಗಡಿ ಅಗ್ನಿಗೆ ಆಹುತಿಯಾಯಿತು. ಕೋಮು ಸೌಹಾರ್ದದ ಪ್ರತೀಕವಾಗಿದ್ದ ಬಾಲ್ಯಸ್ನೇಹಿತರಾಗಿದ್ದ ಇದಿನಬ್ಬ ಮತ್ತು ಕನ್ನಡ ಪಂಡಿತರ ಸ್ನೇಹವೂ ಈ ದುರಂತಕ್ಕೆ ಸಾಕ್ಷಿಯಾಗಿ ಅಂಡು ಸುಟ್ಟುಕೊಂಡಂತೆ ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಕೂತಿತ್ತು. ಜಾಣೆ ಜಾನಕಿ ಸೂಕ್ಷ್ಮ ಮನಸ್ಸಿನವಳಾಗಿ ವ್ಯವಸ್ಥೆಯ ಈ ಎಲ್ಲಾ ನಖರಾಗಳನ್ನು ಗಮನಿಸುತ್ತಾ ಬಂದವಳು. ಪ್ರತಿಭಾವಂತ ಸಹಪಾಠಿ ಎನ್ನುವ ಕಾರಣಕ್ಕೆ ಮುಸ್ತಾಫನನ್ನು ಪ್ರೀತಿಸಿದವಳು ಕೂಡ. ಗುರೂಜಿ ತಂದೆಯ ಮೂಲಕ ಬದುಕುವ ತಂತ್ರಗಾರಿಕೆ ಕಲಿತುಕೊಂಡವಳು ವರ್ತಮಾನದ ವೈರುಧ್ಯಗಳೊಂದಿಗೆ ರಾಜಿ ಮಾಡಿಕೊಂಡವಳು. ವಿಜ್ಞಾನ ಕಲಿಯಲೆಂದು ಪುತ್ತೂರಿಗೆ ಹೋದವಳು ಪರೀಕ್ಷೆಯಲ್ಲಿ ಫೈಲ್ ಆದರೂ ಜೀವನ ಪರೀಕ್ಷೆಯಲ್ಲಿ ಗೆದ್ದವಳು.
ಸಮಾಜ ಕಾರ್ಯದಲ್ಲಿ ಪದವಿ ಪಡೆದು, ಸ್ನಾತಕೋತ್ತರ ಪದವಿ ಪಡೆದು ತನ್ನ ಥಿಸೀಸ್ಗಾಗಿ ವೆಂಕಟನ ಮನೆಯನ್ನು ಅಧ್ಯಯನ ಮಾಡಲೆಂದು ಆತನ ಮನೆ ಹುಡುಕಿ ಹೋಗುತ್ತಾಳೆ. ನಂತರ ಪಿ. ಹೆಚ್. ಡಿ. ಪಡೆಯಲು ಅಮೆರಿಕ ಸೇರಿಕೊಂಡವಳು. ಅಲ್ಲಿ ಅನ್ಯ ಕೋಮಿನ ಸಹಪಾಠಿಗೆ ಒಲಿದು ಮದುವೆಯಾಗಲು ಹಿಂದೂ ಮೂಲಭೂತವಾದಿ ಕಿರೀಟ ಹೊತ್ತು ಪಳಗಿದ ಭಾಷಣಕಾರರಾಗಿದ್ದ ತಂದೆ ಗುರೂಜಿಯನ್ನೇ ಒಪ್ಪಿಸಿದವಳು.
ವರ್ತಮಾನದ ವಿದ್ಯಮಾನಗಳಿಗೆ ಕನ್ನಡಿಯಂತಿರುವ “ಅಗ್ನಿಪಥ” ಕಾದಂಬರಿಯಲ್ಲಿ ಸೈನಿಕನಾದ ಪಪ್ಪುವಿಗೆ ವಿವಾಹವಾಗಲು ಬ್ರಾಹ್ಮಣ ಕುಟುಂಬದಲ್ಲಿ ಹೆಣ್ಣು ನೀಡಲು ನಿರಾಕರಿಸುವ ಪ್ರಸಂಗ ಬರುತ್ತದೆ. ಬ್ರಾಹ್ಮಣ ಕುಟುಂಬದಿಂದ ತೊಡಗಿ ಬಡ ಮಧ್ಯಮ ವರ್ಗಗಳಲ್ಲೂ ವಿವಾಹ ಯೋಗ್ಯ ಪುರುಷರಿಗೆ ವಿವಾಹವಾಗ ಬೇಕೆಂದರೆ ಹೆಣ್ಣು ಮಕ್ಕಳ ಕೊರತೆ ಕಾಡುತ್ತಿದೆ. ರೈತ, ಸಣ್ಣ ವ್ಯಾಪಾರಿ, ಸೈನಿಕ, ಪುರೋಹಿತ, ಅಡುಗೆ ಭಟ್ಟ…ಹೀಗೆ ಜೀವನ ನಿರ್ವಹಣೆಗೆ ಸಣ್ಣಪುಟ್ಟ ಕೆಲಸ ದಲ್ಲಿರುವ ಅವಿವಾಹಿತ ಯುವಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅವರು ಯೋಗ್ಯ ವಿವಾಹ ವಧುವಿಗಾಗಿ ಆಶ್ರಮಗಳಿಗೆ ಎಡ ತಾಕುತ್ತಿರುವುದು ಸಾಮಾನ್ಯ ಸಂಗತಿ ಆಗಿದೆ. ಇದರಿಂದ ಪಪ್ಪುವಿಗೆ ವಿವಾಹ ಯೋಗ್ಯ ವಧುವನ್ನು ಅನ್ವೇಷಣೆ ಮಾಡುವ ಪ್ರಯತ್ನ ವಿಫಲ ವಾಗುತ್ತದೆ. ಒಂದು ಹಂತದಲ್ಲಿ ಪಪ್ಪು ವೆಂಕಟನ ಮಗಳನ್ನು ವಿವಾಹವಾಗುವ ತನ್ನ ಆಶಯವನ್ನು ವ್ಯಕ್ತಪಡಿಸುತ್ತಾನೆ. ಆದರೆ ಪಪ್ಪುವಿನ ತಂದೆ ಅಪ್ಪಣ್ಣ ಭಟ್ಟರಿಗೆ ಈ ಪ್ರಸ್ತಾಪ ಒಪ್ಪಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಬದಲಾದ ಪರಿಸ್ಥಿತಿಯಲ್ಲೂ ಸಮುದಾಯಗಳ ಒಳಗಿನ ದ್ವಂದ್ವವನ್ನು ಕಾದಂಬರಿಯಲ್ಲಿ ಈ ಪ್ರಕರಣ ಪ್ರತಿಬಿಂಬಿಸುತ್ತದೆ.
ಕುಟುಂಬವಿರಲಿ, ನೆರೆಕರೆ ಇರಲಿ, ಹಳ್ಳಿ, ಪಟ್ಟಣ ಕೊನೆಗೆ ದೇಶ ಯಾವುದೇ ಇರಲಿ ಯುದ್ಧ ಅಂತಿಮವಾಗಿ ಯಾರದ್ದು? ಯಾರೊಡನೆ? ಯಾಕೆ? ಎನ್ನುವ ಪ್ರಶ್ನೆ ಕಾದಂಬರಿಯ ಓದಿನ ಉದ್ದಕ್ಕೂ ಕಾಡುತ್ತಿರುತ್ತದೆ.. ಸಮಾಜದಲ್ಲಿರುವ ಶ್ರೇಣೀಕರಣ ವ್ಯವಸ್ಥೆಯಲ್ಲಿ ಉಳ್ಳವರ ತಂತ್ರಗಾರಿಕೆಯಲ್ಲಿ ಬಲಿ ಪಶುಗಳಾಗುವ ಜನಸಾಮಾನ್ಯರ ಚಿತ್ರಣವನ್ನು ಹಂತ ಹಂತವಾಗಿ ಕೃತಿ ತೆರೆದಿಡುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿರುವ ಇಲ್ಲಿನ ಎಷ್ಟೋ ಸಂಗತಿಗಳು ಈ ಜಗತ್ತಿನಲ್ಲಿ ಅನಾದಿಯಿಂದಲೂ ನಡೆದುಕೊಂಡು ಬಂದಿರುವಂತಹದ್ದು ಎನ್ನುವುದನ್ನು ಕೃತಿಯು ಮನಗಾಣಿಸುತ್ತದೆ. ಧರ್ಮ ಯುದ್ಧದ ಹೆಸರಿನಲ್ಲಿ ಕೆಲವರು ಅಮಾಯಕರನ್ನು ಯಾಮಾರಿಸಿದರೆ, ಕರುಳು ಬಳ್ಳಿಗಳ ನಡುವಿನ ಈ ಯುದ್ಧವನ್ನು ದಾಯಾದಿ ಕಲಹ ಎಂದು ಸಿಹಿಯಾಗಿ ಕರೆದದ್ದು ನಾವು ಕಾಣುತ್ತೇವೆ. ನಮ್ಮ ಎಲ್ಲಾ ಮತ ಧರ್ಮಗಳ ಮಹಾ ಕಾವ್ಯಗಳು ನೀಡುವುದು ಈ ಕಲಹಗಳ ಪಕ್ಷಿನೋಟ. ಜಾತಿ, ವರ್ಗ, ಲಿಂಗ ತಾರತಮ್ಯಗಳ ಮೇಲು ಕೀಳಿನ ರಾಜಕಾರಣದ ವಿಭಿನ್ನ ಮಗ್ಗುಲುಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಕಥಾನಕ ಆಗಿ ಈ ಕಾದಂಬರಿ ಗಮನಾರ್ಹವಾಗಿದೆ.
ಅಗ್ನಿಪಥ ಕಾದಂಬರಿಯು ಅಲ್ಪಸಂಖ್ಯಾತರು, ದಮನಿತರು, ತಳ ಸಮುದಾಯದವರು, ದಲಿತರು, ಮಹಿಳೆಯರು ರಾಜಕಾರಣದ ಒಳ ಪಿತೂರಿಯಲ್ಲಿ ಹೇಗೆ ಧೂಳಿಪಟವಾಗುತ್ತಾರೆ ಎನ್ನುವ ವಾಸ್ತವವನ್ನು ವಸ್ತು ನಿಷ್ಠವಾಗಿ ತೆರೆದಿಡುತ್ತದೆ. ಕಾದಂಬರಿಯ ಮೊದಲ ಅರ್ಧವು ಯಾವುದೇ ಹಳ್ಳಿ ಪಟ್ಟಣದ ಕಥೆ ಎನ್ನುವಂತೆ ಓದಿಸಿಕೊಂಡು ಹೋಗುತ್ತದೆ. ಹಾಗೆ ಆಗೊಮ್ಮೆ ಈಗೊಮ್ಮೆ ಬಂದು ಹೋಗಿ ಮರೆಯಾಗುವ ಪಾತ್ರಗಳಾದ ಕಬೀರ, ಮೊಂಟ ನಂತಹವರು ತಮ್ಮ ಎದೆಯಾಳದಲ್ಲಿ ಬೆಚ್ಚಗೆ ಪೊರೆಯುವ ಪ್ರೀತಿಯ ಮಡಿಲು ಬದುಕಿನ ಅಸಹಾಯಕ ಕ್ಷಣಗಳಲ್ಲಿ ಎಷ್ಟು ಮುಖ್ಯ ಎನ್ನುವುದನ್ನು ತೆರೆದಿಡುತ್ತದೆ. ಒಟ್ಟಾರೆಯಾಗಿ ಜಾತಿ,ಮತ, ಧರ್ಮ, ವರ್ಗ, ಲಿಂಗ ಎನ್ನುವ ತಾರತಮ್ಯಗಳನ್ನು ಹೊತ್ತ ಕುಲಗೆಟ್ಟ ಮನಸ್ಸುಗಳಿಗೆ ಅಂಟಿದ ರಕ್ತದ ಕಲೆಗಳನ್ನು ತೊಳೆಯುವ ಕೆಲಸವನ್ನು ಇಂತಹ ಸಾಹಿತ್ಯ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ.
ದೇವಿಕಾ ನಾಗೇಶ್
ಸಾಮಾಜಿಕ ಕಾರ್ಯಕರ್ತೆ, ಕವಯಿತ್ರಿ.
ಇದನ್ನೂ ಓದಿ- ಗೂಗಿಯ ನೆನಪಲ್ಲಿ ಕನ್ನಡಕ್ಕೆ ಬಂದ ಗತಿಯ ಕುರಿತೊಂದು ಸ್ವಗತ