ಬಿಜೆಪಿ ನಾಯಕರು HIV ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ: ಕುಣಿಗಲ್ ಶಾಸಕ ಸಲಹೆ

Most read

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರು ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಕಾಂಗ್ರೆಸ್ ಶಾಸಕ ಡಾ.ಎಚ್.ಸಿ.ರಂಗನಾಥ್ ಅವರು ಸೋಮವಾರ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್‍ಐವಿ ಪೀಡಿತ ಮಹಿಳೆಯನ್ನು ಬಳಸಿಕೊಂಡು ತನ್ನ ರಾಜಕೀಯ ವಿರೋಧಿಗಳನ್ನು ಹಣಿಯಲು ಬಿಜೆಪಿ ಶಾಸಕ ಮುನಿರತ್ನ ಯತ್ನಿಸಿದ್ದರು ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ದರಿಂದ, ಬಿಜೆಪಿ ನಾಯಕರು ಹೆಚ್ಐವಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

ಹೆಚ್ಚೆಚ್ಚು ಜನರು ಸೇರುವ ಕಾರ್ಯಕ್ರಮಗಳಲ್ಲಿ ಜನರು ಶತ್ರುಗಳಿಗೆ ಸೋಂಕು ತಗುಲಿಸುತ್ತಾರೆಂಬುದು ಯಾರಿಗೂ ತಿಳಿದಿರುವುದಿಲ್ಲ. ವಿರೋಧ ಪಕ್ಷದ ನಾಯಕ ಆರ್ ಅಶೋಕ ಕೂಡ ಮುನಿರತ್ನ ಅವರ ಟಾರ್ಗೆಟ್ ಆಗಿದ್ದರು ಎಂದು ನಾನು ಕೇಳಿದ್ದೇನೆ. ಸಿರಿಯಾದಂತಹ ಯುದ್ಧ ಪೀಡಿತ ದೇಶಗಳಲ್ಲಿ ಜೈವಿಕ ಯುದ್ಧ ನಡೆದಿತ್ತು. ಅದನ್ನು ಬಿಜೆಪಿ ಶಾಸಕ ಮುನಿರತ್ನ ಅವರು ಕರ್ನಾಟಕಕ್ಕೆ ತಂದಿದ್ದಾರೆ.

ಸೋಂಕು ಹರಡಿಸುವವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮುನಿರತ್ನ ನಮ್ಮ ಒಡನಾಡಿಯಾಗಿರಲಿಲ್ಲ. ಅವರು ಅಧಿಕಾರದ ಹಸಿವಿನ ವ್ಯಕ್ತಿ, ತಮ್ಮ ನಿಷ್ಠೆಯನ್ನು ಬದಲಾಯಿಸುತ್ತಲೇ ಇರುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಕಾಂಪೌಂಡ್ ನಿರ್ಮಾಣದಿಂದ ವಿದ್ಯಾರ್ಥಿ ಸಾವು, ವೋಟರ್ ಐಡಿ ಹಗರಣ, ಕಾಮಗಾರಿ ನಡೆಸದೆ ಬಿಲ್ ಪಡೆಯುವ ಹಗರಣ ಸೇರಿದಂತೆ ಮುನಿರತ್ನ ವಿರುದ್ಧದ ಹಲವು ಆರೋಪಗಳನ್ನು ಪಟ್ಟಿ ಮಾಡಿದರು.

ಸೋಂಕಿತರನ್ನು ಬಳಸಿಕೊಂಡು ಮುನಿರತ್ನ ಮಾಡಿದ ದುಷ್ಕೃತ್ಯಗಳು ಮನ ಕಲಕುವಂತಿವೆ. ಆರು ವರ್ಷಗಳ ಹಿಂದೆ ಬಿಜೆಪಿ ನಾಯಕರೊಬ್ಬರ ಮೇಲೆ ಇದೇ ರೀತಿಯ ಸೋಂಕು ತಗುಲಿಸಲಾಗಿತ್ತು ಎಂಬುದನ್ನು ಕೇಳಿದ್ದೆ, ಮುನಿರತ್ನ ಎಚ್‌ಐವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ತಮ್ಮ ಪ್ರತಿಸ್ಪರ್ಧಿಗಳನ್ನು ಹನಿಟ್ರ್ಯಾಪ್ ಮಾಡಿ ಅವರ ರಕ್ತ ಸಂಗ್ರಹಿಸಿದ್ದರು. ಮುನಿರತ್ನ ಅವರ ಈ ಕೃತ್ಯ ಬಾಂಬ್ ದಾಳಿಯಷ್ಟೇ ಹೇಯ ಮತ್ತು ಭಯೋತ್ಪಾದನೆಗೆ ಸಮಾನವಾಗಿದೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವೈದ್ಯರ ವಿಭಾಗದ ಅಧ್ಯಕ್ಷ ಡಾ.ಮಧುಸೂದನ್, ಕೆಪಿಸಿಸಿ ಮಾಧ್ಯಮ ಮತ್ತು ಸಂಪರ್ಕ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಡಾ.ಶ್ರೀನಿವಾಸ್ ಉಪಸ್ಥಿತರಿದ್ದರು

More articles

Latest article