ಬಿಜೆಪಿ ಒಂದು ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ: ಮೂವರು ಮಾಜಿ ಸಿಎಂ ಕೋರ್ಟಿ‌ನಿಂದ ತಡೆ ತಂದಿದ್ದೇಕೆ?

Most read

ಬಿಜೆಪಿ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿಯಾಗಿದೆ. ಬಿಜೆಪಿಯ ಮೂವರು ಮಾಜಿ ಮುಖ್ಯಮಂತ್ರಿಗಳು ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಬಿ.ಎಸ್ ಯಡಿಯೂರಪ್ಪ ಮತ್ತು NDA ಮೈತ್ರಿ ಪಕ್ಷ ಜೆಡಿಎಸ್ ನ ಹೆಚ್ ಡಿ ಕುಮಾರಸ್ವಾಮಿ ಅವರು ಕೋರ್ಟ್‌ನಿಂದ ತಡೆ ತಂದಿದ್ದು ಏಕೆ ಅನ್ನೋದನ್ನು ಬಿಜೆಪಿ ಬಹಿರಂಗಪಡಿಸಲಿ ಎಂದು ಆಗ್ರಹಿಸಿರುವ ಕೆಪಿಸಿಸಿ ವಕ್ತಾರ, ಮಾಜಿ ಸಂಸದ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಪಕ್ಷ ಎಂದ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಆರೋಪಕ್ಕೆ ಸುದ್ದಿಗೋಷ್ಟಿ ನಡೆಸಿ ತಿರುಗೇಟು ನೀಡಿದ ಆಯನೂರು ಮಂಜುನಾಥ್, ಕಾಂಗ್ರೇಸ್ ಪಕ್ಷನ್ನು ಕರೆಪ್ಸನ್ ಪಾರ್ಟಿ ಎಂದು ಕರೆಯುವ ಸಂಸದರೆ, ನಿಮ್ಮ ಪಕ್ಷದ ಸ್ಥಿತಿ ಏನು? ಬಿಜೆಪಿ ಭಾರತೀಯ ಸೆಕ್ಸ್ ಸ್ಕ್ಯಾಂಡಲ್ ಪಾರ್ಟಿ ಆಗಿದೆ. ನಿಮ್ಮದೆ ಪಕ್ಷ ನಾಯಕರ ಮೇಲೆ ಪೋಕ್ಸೋ ಕೇಸುಗಳಿವೆ. ನಿಮ್ಮ ಪಕ್ಷ ಮೂರು ಮಾಜಿ ಸಿಎಂ ಗಳಾದ ಸದಾನಂದಗೌಡ, ಬಸವರಾಜಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಅನೇಕ ಮಾಜಿ ಸಚಿವರ ಮಕ್ಕಳು, ನಿಮ್ಮ NDA ಮೈತ್ರಿ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರೆಲ್ಲಾ ಯಾಕೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ. ಅಂತಹದ್ದೇನಿತ್ತು ಹೇಳುವಿರಾ? ಕೇವಲ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿಲ್ಲ, ಪುರುಷರ ಮೇಲೂ ನಡೆದಿದೆ. ನಿಮ್ಮ ಸರ್ಕಾರದಲ್ಲಿ ಸಚಿವನಾಗಿದ್ದ ಮುನಿರತ್ನನ ವಿರುದ್ದ ಬಿಜೆಪಿಯ ಯಾವ ನಾಯಕನೂ ಮಾತನಾಡುವುದಿಲ್ಲ. ಅವನು ಅತ್ಯಾಚಾರ ಮಾಡ್ತಾನೆ, ಏಡ್ಸ್ ಹಂಚುತ್ತಾನೆ. ಅವನ ಬಗ್ಗೆ ಯಾಕೆ ನೀವು ಮಾತನಾಡುತ್ತಿಲ್ಲ , ನಿಮಗೇನಾದರೂ ಭಯವಿದೆಯಾ?, ಭಾರತೀಯ ಸಂಸ್ಕೃತಿ ರಕ್ಷಣೆ ಮಾತನಾಡುತ್ತಲೆ ಅದೇ ಸಂಸ್ಕೃತಿಯ ಮೇಲೆ ಅತ್ಯಾಚಾರ ಎಸಗಲಾಗುತ್ತಿದೆ. ಅಲ್ಲದೆ ಭ್ರಷ್ಟಾಚಾರದ ಮೂಸೆಯಲ್ಲಿ ಮೂಡಿ ಬಂದ ನೀವು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಎರಡು ಬಾರಿ ಮುಖ್ಯಮಂತಿಯಾದ ಯಡಿಯೂರಪ್ಪನವರು ಭ್ರಷ್ಟಾಚಾರಗಳ ಕಾರಣದಿಂದಲೇ ಐದುವರ್ಷಗಳ ಅವಧಿ ಪೂರೈಸದೆ ರಾಜೀನಾಮೆ ನೀಡಬೇಕಾಯಿತು. ಅವರು ಕಣ್ಣೀರ ಧಾರೆಗೆ ಕಾರಣ ಯಾರು? ಜಿಲ್ಲೆಯಲ್ಲಿನ ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಯಾರಿಂದ ಎನ್ನುವ ಬಗ್ಗೆ ಬಹಿರಂಗ ಚರ್ಚೆ ಬನ್ನಿ ಎಂದು ಪಂಥಾಹ್ವಾನ ನೀಡಿದ್ದಾರೆ.

ಬಿ.ವೈ ರಾಘವೇಂದ್ರ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಕೋಟಿ ರೂ.ಗಳ ಬೇನಾಮಿ ಆಸ್ತಿಗಳನ್ನು ಟ್ರಸ್ಟ್‌ಗಳ ಹೆಸರಿನಲ್ಲಿ ರಿಜಿಸ್ಟ್ರಾರ್ ಮಾಡಿಕೊಂಡಿದ್ದೀರ. ಹಣದ ಮೂಲವನ್ನು ತಾವು ಪ್ರಕಟ ಮಾಡಬಹುದಾ? ಭ್ರಷ್ಟಾಚಾರದ ಆರೋಪದ ಮೇಲೆ ಒಬ್ಬ ಹೋರಾಟಗಾರನ ಅಂತ್ಯ ಆಗಿದೆ. ನಮ್ಮ ಜಿಲ್ಲೆಯ ರಾಜಕಾರಣಕ್ಕೆ ಕಪ್ಪುಚುಕ್ಕೆ ತರುವಂತೆ ಯಡಿಯೂರಪ್ಪ ಅವರನ್ನು ಬಲಿತೆಗೆದುಕೊಂಡಿದ್ದು ಬಿಜೆಪಿಯ ಭ್ರಷ್ಟಾಚಾರವೇ ಹೊರತು, ಬೇರಾವ ಜನಾಂದೋಲನಗಳಲ್ಲ. ತಮ್ಮ ಮತ್ತು ಕುಟುಂಬದ ಭ್ರಷ್ಟಾಚಾರದ ಕಾರಣದಿಂದ ಹೈಕಮಾಂಡ್ ಅನಿವಾರ್ಯವಾಗಿ ಅಧಿಕಾರದಿಂದ ಕೆಳಗಿಳಿಸಬೇಕಾದ ಪರಿಸ್ಥಿತಿ ನಿರ್ಮಾಣ ಮಾಡಿದವರ ಬಾಯಲ್ಲಿ ಭ್ರಷ್ಟಾಚಾರದ ವಿರುದ್ದ ಮಾತು ಬಂದಿರುವುದನ್ನು ಸ್ವಾಗತಿಸುತ್ತೇನೆ ಎಂದು ಲೇವಡಿ ಮಾಡಿದರು.

More articles

Latest article