ನವದೆಹಲಿ: ಎಲ್ಲಿಯವರೆಗೆ ಚುನಾವಣೆಗಳನ್ನು ಕಳವು ಮಾಡಲಾಗುತ್ತದೆಯೋ ಅದುವರೆಗೂ ದೇಶದಲ್ಲಿ ನಿರುದ್ಯೋಗ ಮತ್ತು ಭ್ರಷ್ಟಾಚಾರ ಹೆಚ್ಟುತ್ತಲೇ ಹೋಗುತ್ತದೆ. ಆದರೆ ದೇಶದ ಯುವ ಜನಾಂಗ ಉದ್ಯೋಗ ಕಳವು ಮತ್ತು ಮತಕಳವನ್ನು ಸಹಿಸುವುದಿಲ್ಲ ಎಂದು ಕಾಂಗ್ರೆಸ್ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮತ್ತೊಮ್ಮೆ ಮತಗಳವು ಕುರಿತು ಆಕ್ರೋಶ ಹೊರಹಾಕಿದ್ದಾರೆ.
ನಿರುದ್ಯೋಗ ದೇಶದ ಯುವಕರು ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದ್ದು, ಇದು ಮತ ಕಳವಿಗೆ ಸಂಬಂಧ ಹೊಂದಿದೆ. ಸರ್ಕಾರ ಬಹುಮತ ಪಡೆದು ಅಧಿಕಾರಕ್ಕೆ ಬಂದ ನಂತರ ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳನ್ನು ಒದಗಿಸುವುದು ಮುಖ್ಯ ಜವಬ್ದಾರಿಯಾಗಿರುತ್ತದೆ. ಆದರೆ ಬಿಜೆಪಿ ಚುನಾವಣೆಗಳನ್ನು ಪ್ರಾಮಾಣಿಕವಾಗಿ ಗೆಲ್ಲುತ್ತಿಲ್ಲ. ಆ ಪಕ್ಷದ ಮುಖಂಡರು ಮತಗಳನ್ನು ಕದ್ದು ಮತ್ತು ಸ್ವಾಯತ್ತ ಸಂಸ್ಥೆಗಳನ್ನು ನಿಯಂತ್ರಿಸುತ್ತಾ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ನಿರುದ್ಯೋಗ ಹೆಚ್ಚಳವಾಗುತ್ತದೆ ಎಂದು ಹೇಳಿದ್ದಾರೆ.
ಮತಗಳ್ಳತನದ ಕಾರಣಕ್ಕೆ ದೇಶದಲ್ಲಿ ಉದ್ಯೋಗಗಳು ಕಡಿಮೆಯಾಗುತ್ತಿದ್ದು, ನೇಮಕಾತಿ ಪ್ರಕ್ರಿಯೆಗಳು ಕುಸಿದಿವೆ ಮತ್ತು ಯುವಕರ ಭವಿಷ್ಯವು ಅಪಾಯಕ್ಕೆ ಸಿಲುಕುತ್ತಿದೆ. ಪ್ರತಿಯೊಂದು ಪರೀಕ್ಷಾ ಪತ್ರಿಕೆ ಸೋರಿಕೆಯಾಗುತ್ತಿದೆ ಮತ್ತು ಪ್ರತಿಯೊಂದು ನೇಮಕಾತಿಯು ಭ್ರಷ್ಟಾಚಾರದೊಂದಿಗೆ ಸಂಬಂಧ ಹೊಂದಿದೆ ಎಂದು ಟೀಕಿಸಿದ್ದಾರೆ.
ದೇಶದ ಯುವಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಕನಸು ಕಾಣುತ್ತಾರೆ ಮತ್ತು ತಮ್ಮ ಭವಿಷ್ಯಕ್ಕಾಗಿ ಹೋರಾಟ ನಡೆಸುತ್ತಾರೆ. ಆದರೆ, ಪ್ರಧಾನಿ ಮೋದಿ ಅವರು ಮಾತ್ರ ಪ್ರಚಾರ ಸಂಸ್ಥೆಗಳ ಮೂಲಕ ಪ್ರಚಾರ ಪಡೆಯುವಲ್ಲಿ, ಸೆಲೆಬ್ರಿಟಿಗಳಿಂದ ಹೊಗಳಿಸಿಕೊಳ್ಳುವಲ್ಲಿ ಮತ್ತು ಬಿಲೇನಿಯರ್ ಗಳು ಲಾಭ ಗಳಿಸುವಂತೆ ಮಾಡುವಲ್ಲಿ ನಿರತರಾಗಿದ್ದಾರೆ. ಈ ಮೂಲಕ ಯುವಕರ ಕನಸುಗಳು ಛಿದ್ರವಾಗುತ್ತಿವೆ ಮತ್ತು ಯುವಕರು ಹತಾಶರಾಗಿದ್ದಾರೆ ಎಂದಿದ್ದಾರೆ.
ದೇಶದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಯುವಕರು ಉದ್ಯೊಗಕ್ಕಾಗಿ ಹೋರಾಟ ನಡೆಸುವುದರ ಜತೆಗೆ ಮತ ಕಳವು ವಿರುದಧವೂ ಹೋರಾಟಕ್ಕೆ ಸಜ್ಜಾಗಿದ್ದಾರೆ. ಏಕೆಂದರೆ ಚುನಾವಣೆಗಳನ್ನು ಕಳವು ಮಾಡಿದರೆ ನಿರುದ್ಯೋಗ ಮತ್ತು ಭ್ರಷ್ಟಾಚಾರ ಮುಂದುವರೆಯುತ್ತದೆ ಎನ್ನುವುದು ಅರ್ಥ ಮಾಡಿಕೊಂಡಿದ್ದಾರೆ. ನಿಜವಾದ ದೇಶಭಕ್ತಿ ಭಾರತವನ್ನು ನಿರುದ್ಯೋಗ ಮತ್ತು ಮತ ಕಳ್ಳತನದಿಂದ ಮುಕ್ತಗೊಳಿಸುವುದರಲ್ಲಿದೆ ಎಂದು ತಿಳಿಸಿದ್ದಾರೆ.