‘ಒಡಹುಟ್ಟಿದವರು’ ಸಿನಿಮಾದಲ್ಲಿ ಅಣ್ಣಾವ್ರ ಜೀವ ಕಾಪಾಡಿದವರು ಅಂಬರೀಶ್ : ನಿರ್ದೇಶಕ ಹೇಳಿದ್ದೇನು..?

Most read

ಇಂದು ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ಒಡಹುಟ್ಟಿದವರು ಸಿನಿಮಾದ ನಿರ್ದೇಶಕ ದಿವಂಗತ ಭಗವಾನ್ ಅವರು ಮಾತನಾಡಿದ ಸಂದರ್ಶನವೊಂದು ವೈರಲ್ ಆಗಿದೆ. ಒಡಹುಟ್ಟಿದವರು ಸಿನಿಮಾದ ಸಮಯದಲ್ಲಿ ಅಣ್ಣಾವ್ರ ಪ್ರಾಣಕ್ಕೇನೆ ಕುತ್ತು ಬಂದಿತ್ತು. ಆಗ ಅಂಬರೀಶ್ ಅವರು ಬಚಾವ್ ಮಾಡಿದ ರೀತಿಯನ್ನು ವಿವರಿಸಿದ್ದಾರೆ.

‘ಈ ಸಿನಿಮಾದ ಕಥೆಯನ್ನು ಹೇಳಿದ್ದಾಗ ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ಅವರು ಒಪ್ಪಿಕೊಂಡಿದ್ದರು. ಸಹೋದರ ಪಾತ್ರದಲ್ಲಿ ಯಾರು ನಟಿಸುವುದು ಎಂಬ ಪ್ರಶ್ನೆ ಎದುರಾಗಿತ್ತು. ಆ ಪಾತ್ರಕ್ಕೂ ಸಾಕಷ್ಟು ತೂಕವಿತ್ತು. ಅಂಬರೀಶ್ ಅವರಿಗೆ ಕರೆ ಮಾಡಿ ಕೇಳುವಂತೆ ಹೇಳಿದರು. ಅದರಂತೆ ಅಂಬರೀಶ್ ಅವರಿಗೆ ಕಾಲ್ ಮಾಡಿ, ಕಥೆ ಹೇಳಿದಾಗ ಅವರು ಒಪ್ಪಿದರು. ಅಣ್ಣಾವ್ರ ಜೊತೆಗೆ ಎಂದಾಗ ಖುಷಿಯಾಗಿಯೇ ಒಪ್ಪಿಕೊಂಡರು. ಈ ಸಿನಿಮಾದ ಶೂಟಿಂಗ್ ವೇಳೆ ಎತ್ತಿನ ಗಾಡಿ ರೇಸ್ ಇತ್ತು. ಆಗ ಅಣ್ಣಾವ್ರ ಜೀವಕ್ಕೆ ಅಪಾಯ ಎದುರಾಗಿತ್ತು.

ರಾಜ್ ಕುಮಾರ್ ಹಾಗೂ ಅಂಬರೀಶ್ ಒಂದು ಎತ್ತಿನ ಗಾಡಿಯಲ್ಲಿ ಹೋಗುತ್ತಿರುತ್ತಾರೆ. ಹಿಂದೆ ಮುಂದೆ ಎತ್ತಿನ ಗಾಡಿಗಳು ಹೋಗುತ್ತಿರುತ್ತವೆ. ಅದೇನಾಯ್ತೋ ಏನೋ ಅಣ್ಣಾವ್ರು ಓಡಿಸುತ್ತಿದ್ದ ಗಾಡಿಯ ಕಡಾಣಿ ಮುರಿದು ಬಿದ್ದಿತ್ತು. ಚಕ್ರ ಹೊರಬಂದು ಬಿಡ್ತು. ರಾಜ್‍ಕುಮಾರ್ ಬ್ಯಾಲೆನ್ಸ್ ಕಳೆದುಕೊಂಡು ಬಿಟ್ಟರು. ಆ ಸಮಯಕ್ಕೆ ತಲೆ ಓಡಿಸಿದ್ದು ಅಂಬರೀಶ್ ಅವರು. ರಾಜ್‍ಕುಮಾರ್ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡರು. ಇನ್ನೊಂದು ಕೈನಲ್ಲಿ ಎತ್ತುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅವತ್ತು ಅಣ್ಣಾವ್ರನ್ನು ಅಂಬರೀಶ್ ಹಿಡಿದುಕೊಂಡಿರಲಿಲ್ಲ ಎಂದರೆ ಅಣ್ಣಾವ್ರು ಕೆಳಗೆ ಬಿದ್ದು ಬಿಡುತ್ತಿದ್ದರು. ಹಿಂದೆ ಬರುತ್ತಿದ್ದ ಗಾಡಿಗಳು ಅಣ್ಣಾವ್ರ ಮೇಲೆ ಹತ್ತಿ ಬಿಡುತ್ತಿದ್ದವು’ ಎಂದು ಹಳೆಯ ದಿನಗಳನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ ಇಂದು ನಿರ್ದೇಶಕ ಭಗವಾನ್ ಅವರು ಇಲ್ಲ.

More articles

Latest article