ಮೆಕ್ಯಾನಿಕ್‌ ಗಳನ್ನು ಕೊಚ್ಚೆ ಎಂದ ಜೀ ವಾಹಿನಿ ಮೇಲೆ ರಾಜ್ಯದ ನಾನಾ ಭಾಗಗಳಲ್ಲಿ ಪ್ರಕರಣ ದಾಖಲು

Most read

ಬೆಂಗಳೂರು: ಜೀ ವಾಹಿನಿಯ ಮಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ಮೆಕ್ಯಾನಿಕ್ ವೃತ್ತಿಯನ್ನು ಕೊಚ್ಚೆ ಗುಂಡಿ ಎಂದೂ, ಮೆಕ್ಯಾನಿಕ್ ಕೆಲಸ ಮಾಡುವವರ ಮನೆಯವರು ಗ್ರೀಸ್ ತಂದು ಬದುಕಬೇಕಾಗುತ್ತೆ ಎಂದು ಹೀಯಾಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಮೆಕ್ಯಾನಿಕ್‌ ಸಮುದಾಯ ಆಕ್ರೋಶಗೊಂಡಿದ್ದು, ಹಲವಾರು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಿಸಿದೆ.

ಚಿಕ್ಕಮಗಳೂರಿನ ಎನ್.ಆರ್.ಪುರ, ರಾಮನಗರದ ಹಾರೋಹಳ್ಳಿ, ಕನಕಪುರ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ದೂರಿನ ಪ್ರತಿಗಳು ಕನ್ನಡ ಪ್ಲಾನೆಟ್‌ ಗೆ ಲಭ್ಯವಾಗಿದ್ದು, ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ನಾನಾ ಭಾಗಗಳಲ್ಲಿ ದೂರುಗಳು ದಾಖಲಾಗುವ ಸಂಭವವಿದೆ.

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಮಹಾನಟಿ ಎಂಬ ರಿಯಾಲಿಟಿ ಶೋನ ಸ್ಪರ್ಧಿಯೊಬ್ಬಳಿಗೆ ಶೋನ ಜಡ್ಜ್‌ ಹಾಗು ನಟ ರಮೇಶ್‌ ಅರವಿಂದ್, ಟಾಸ್ಕ್ ಒಂದನ್ನು ಕೊಟ್ಟು ʻʻನಿನ್ನ ತಂಗಿ ಮೆಕ್ಯಾನಿಕ್ ಒಬ್ಬಾತನ ಜೊತೆ ಓಡಾಡುವುದನ್ನು ನೀನು ನೋಡುತ್ತೀಯ. ನೀನು ಅವಳಿಗೆ ಏನು ಹೇಳುತ್ತೀಯʼʼ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಆಕೆ ಹೇಳಿದ ಮಾತುಗಳು ಹೀಗಿವೆ: ʻʻನೋಡು ಐಶು, ನೀನು ಅವನ ಜೊತೆ ಓಡಾಡ್ತಾ ಇರೋದು ನನಗೆ ಗೊತ್ತು. ಬಿದ್ದರೆ ತುಪ್ಪದ ಗುಂಡಿಯಲ್ಲಿ ಬೀಳಬೇಕು, ಕೊಚ್ಚೆ ಗುಂಡಿಯಲ್ಲಲ್ಲ. ಪ್ರೀತಿನೇ ಮುಖ್ಯ, ದುಡ್ಡು ಮುಖ್ಯವಲ್ಲ ಅಂತ ನೀನು ಅಂದುಕೊಂಡಿರಬಹುದು. ಆದರೆ ದುಡ್ಡೇ ಮುಖ್ಯ. ಪ್ರೀತಿನೇ ಮುಖ್ಯ ಅಂತ ಗ್ರೀಸ್ ತಿಂದುಕೊಂಡು ಬದುಕೋದಕ್ಕೆ ಆಗಲ್ಲʼʼ

ಹೀಗೆ ಸ್ಪರ್ಧಿಯೊಬ್ಬಳು ಸಾರಾಸಗಟಾಗಿ ಮೆಕಾನಿಕ್ ವೃತ್ತಿ ಮಾಡುವ ಶ್ರಮಿಕ ವರ್ಗದ ಜನರನ್ನು ಹೀಯಾಳಿಸುವಾಗ ಶೋನ ಜಡ್ಜ್ ಗಳಾದ ನಟ ರಮೇಶ್ ಅರವಿಂದ್, ನಟಿ ಪ್ರೇಮ, ಆಂಕರ್ ಅನುಶ್ರೀ, ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ದ ನಿರ್ದೇಶಕ ತರುಣ್ ಸುಧೀರ್ ಮೊದಲಾದವರು ಆ ಹೇಳಿಕೆಗಳನ್ನು ಖಂಡಿಸಿ, ಬುದ್ಧಿ ಹೇಳುವ ಬದಲು ಕೇಕೆ ಹಾಕಿ, ಚಪ್ಪಾಳೆ ಹೊಡೆದು ಅಭಿನಂದಿಸಿರುವ ದೃಶ್ಯಗಳು ವೈರಲ್ ಆಗಿವೆ.

ಈಗಾಗಲೇ ಈ ಕುತ್ಸಿತ ಮನಸ್ಥಿತಿಯ ಸ್ಕಿಟ್‌ ಪ್ರದರ್ಶಿಸಿದ್ದಕ್ಕೆ ಜೀ ವಾಹಿನಿ ಮೇಲೆ, ಈ ಮಾತುಗಳನ್ನು ಕೇಳಿ ಸಂಭ್ರಮದಿಂದ ಕೇಕೆ ಹೊಡೆದ ಜಡ್ಜ್‌ ಗಳಾದ ರಮೇಶ್‌ ಅರವಿಂದ್‌, ಪ್ರೇಮಾ, ಆಂಕರ್‌ ಅನುಶ್ರೀ ಮತ್ತಿತರರ ವಿರುದ್ಧ ಆಕ್ರೋಶದ ನುಡಿಗಳು ಕೇಳಿಬರುತ್ತಿವೆ.

More articles

Latest article