ಬೆಂಗಳೂರು : ಸಾಲ ತೀರಿಸಲು ಪಕ್ಕದ ಮನೆಯ 13 ವರ್ಷದ ಬಾಲಕನನ್ನು ಅಪಹರಿಸಿ ಬರ್ಬರವಾಗಿ ಕೊಲೆ ಮಾಡಿ ಮೃತದೇಹ ಸಾಗಿಸುವಾಗ ಕಾರು ಅಪಘಾತ ಎಸಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಯಲಹಂಕದ ವಿನಾಯಕ ಲೇಔಟ್ನ ವಾಲಾ ಭಾಸ್ಕರ್ ರೆಡ್ಡಿ (26) ಬಂಧಿತ. ಗಣೇಶ ಹಬ್ಬಕ್ಕೆ ಪಟಾಕಿ ಕೊಡಿಸುವುದಾಗಿ ಹೇಳಿ, ಸೆ.13ರ ರಾತ್ರಿ ಬಾಲಕ ಪ್ರಜ್ವಲ್ನನ್ನು ಕಾರಿನಲ್ಲಿ ಅಪಹರಿಸಿದ್ದ. ನಂತರ ಬಾಗಲೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಪ್ರಜ್ವಲ್ ತಲೆ ಮೇಲೆ ಹಾಲೋಬ್ರಿಕ್ಸ್ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಆರೋಪಿಗಳು ಪ್ರಜ್ವಲ್ನ ಪೋಷಕರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ. ಕೊಲೆಗೂ ಮುನ್ನ ಪ್ರಜ್ವಲ್, ತನ್ನ ಪೋಷಕರಿಗೆ ಹಣ ಕೊಡುವಂತೆ ಮನವಿ ಮಾಡುವ ವಿಡಿಯೋ ಮಾಡಿಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿನಾಯಕ ನಗರದಲ್ಲಿ ಗಣೇಶೋತ್ಸವದ ಕಾರಣಕ್ಕೆ ಸೆ.16ರಂದು ಇಡೀ ಬಡಾವಣೆಯಲ್ಲಿ ಜನರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಈ ಉತ್ಸವದಲ್ಲಿ ಭಾಸ್ಕರ್ ಮತ್ತು ಬಾಲಕ ಕೂಡ ಭಾಗಿಯಾಗಿದ್ದರು. ರಾತ್ರಿ 8 ಗಂಟೆ ವೇಳೆಗೆ ಭಾಸ್ಕರ್, ಪ್ರಜ್ವಲ್ನನ್ನು ಅಪಹರಿಸಲು ನಿರ್ಧರಿಸಿ ಏಡುಕೊಂಡಲುನನ್ನು ಕರೆಸಿಕೊಂಡಿದ್ದ. ಬಳಿಕ ಪಟಾಕಿ ತರಲು ಕಿಯಾ ಕಾರಿನಲ್ಲಿ ಹೋಗೋಣವೆಂದು ನಂಬಿಸಿ ಬಾಲಕನನ್ನು ಕರೆದೊಯ್ದಿದ್ದರು.
ಕಾರನ್ನು ಬಾಗಲೂರಿನ ಬಂಡಿಕೊಡಿಗೇಹಳ್ಳಿ ಸಮೀಪ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದ ದುರುಳರು ಕಂಠಪೂರ್ತಿ ಮದ್ಯ ಸೇವಿಸಿದ್ದರು. ಬಳಿಕ ಪ್ರಜ್ವಲ್ನನ್ನು ಅಪಹರಿಸುವುದಾಗಿ ತಿಳಿಸಿ ಬೆದರಿಸಿದ್ದರು. ಬಾಲಕ ಪ್ರತಿರೋಧ ತೋರಿದಾಗ ಮನಸೋ ಇಚ್ಛೆ ಥಳಿಸಿ, ತಾವು ಹೇಳಿದಂತೆ ವಿಡಿಯೋ ಮಾಡಿಕೊಟ್ಟರೆ ಜೀವಂತವಾಗಿ ಬಿಡುವುದಾಗಿ ಹೇಳಿದ್ದರು.
ಪ್ರಜ್ವಲ್ನ ಕೈಕಾಲುಗಳನ್ನು ಸೆಲ್ಲೋ ಟೇಪ್ನಿಂದ ಕಟ್ಟಿ ಹಾಕಿದ ದುರುಳರು, ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದರು. ಬಳಿಕ ವರಸೆ ಬದಲಿಸಿದ ದುಷ್ಟರು ನಿರ್ಮಾಣ ಹಂತದ ಮನೆಯ ಬಳಿ ಕರೆದೊಯ್ದು, ಬಾಲಕನ ತಲೆಯನ್ನು ಸಾರ್ವೆ ಮರಕ್ಕೆ ಗುದ್ದಿಸಿದ್ದರು. ಇದರಿಂದ ಪ್ರಜ್ವಲ್, ಪ್ರಜ್ಞೆ ಕಳೆದುಕೊಂಡಿದ್ದ. ಸ್ವಲ್ಪ ಸಮಯದ ಬಳಿಕ ಪ್ರಜ್ವಲ್ ಮತ್ತೆ ಉಸಿರಾಡುತ್ತಿರುವುದನ್ನು ಗಮನಿಸಿ, ತಲೆ ಮೇಲೆ ಹಾಲೋ ಬ್ರಿಕ್ಸ್ ಎತ್ತಿ ಹಾಕಿದ್ದರು. ಪರಿಣಾಮ ಪ್ರಜ್ವಲ್ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಐಐಟಿ ಪದವೀಧರ ಭಾಸ್ಕರ್ ರೆಡ್ಡಿಯಿಂದ ಹೀನ ಕೃತ್ಯ
ಲಂಡನ್ನಲ್ಲಿ ಎಂಟೆಕ್ ಓದಿದ್ದ ಭಾಸ್ಕರ್ ರೆಡ್ಡಿ, ಐದು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಮರಳಿ ಪೋಷಕರೊಂದಿಗೆ ವಿನಾಯಕ ನಗರದಲ್ಲಿ ನೆಲೆಸಿದ್ದ. ವೈಟ್ಫೀಲ್ಡ್ನ ಪ್ರತಿಷ್ಠಿತ ಕಂಪೆನಿಯಲ್ಲಿ ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ. ಈತನ ಮನೆಯ ಪಕ್ಕದಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಮನೋಹರ್, ಪುತ್ರ ಪ್ರಜ್ವಲ್ ಸೇರಿದಂತೆ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಾಸವಿದ್ದರು.
ಆನ್ಲೈನ್ ಬೆಟ್ಟಿಂಗ್ ಸಾಲ ತೀರಿಸಲು ಭಾಸ್ಕರ್, ಆರ್ಥಿಕವಾಗಿ ಸ್ಥಿತಿವಂತರಾಗಿರುವ ಮನೋಹರ್ ಅವರಿಂದ ಹಣ ಸುಲಿಗೆ ಮಾಡಲು ಭಾಸ್ಕರ್ ರೆಡ್ಡಿ, ಪ್ರಜ್ವಲ್ನ ಅಪಹರಣಕ್ಕೆ ಸಂಚು ರೂಪಿಸಿದ್ದ. ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಪ್ರಜ್ವಲ್ಗೆ ಕಾರುಗಳ ಬಗ್ಗೆ ವಿಪರೀತ ಆಸಕ್ತಿಯಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಭಾಸ್ಕರ್, ಕಾರು ಚಾಲನೆಗೆ ಪ್ರಜ್ವಲ್ನನ್ನು ಕರೆದೊಯ್ದು ವಿಶ್ವಾಸ ಗಳಿಸಿದ್ದ. ಅಲ್ಲದೆ, ಬಾಲಕನ ಕುಟುಂಬಕ್ಕೆ ಹತ್ತಿರವಾಗಿದ್ದ.

