ನವದೆಹಲಿ ಸೆ 11: ನಾಯಿ ವಾಕಿಂಗ್ಗಾಗಿ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ಖಾಲಿ ಮಾಡಿಸಿದ್ದ ವಿವಾದಕ್ಕೆ ಒಳಗಾಗಿದ್ದ IAS ಅಧಿಕಾರಿ ರಿಂಕು ದುಗ್ಗಾ ಅವರ ಮರುನೇಮಕಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ರಿಂಕು ದುಗ್ಗಾ ಹಾಗೂ ಅವರ ಪತಿ, ಅವರೂ IAS ಅಧಿಕಾರಿಯಾಗಿದ್ದು, ರಿಂಕು ದುಗ್ಗಾ ಅವರು ತಮ್ಮ ನಾಯಿಯನ್ನು ಕ್ರೀಡಾಂಗಣದಲ್ಲಿ ವಾಕಿಂಗ್ಗೆ ಕರೆದೊಯ್ಯಲು ಕ್ರೀಡಾಂಗಣವನ್ನು ಖಾಲಿ ಮಾಡಿಸಿದ್ದರು ಎಂಬ ಆರೋಪ 2022ರಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ರಿಂಕು ದುಗ್ಗಾ ಅವರನ್ನು ಕಡ್ಡಾಯ ನಿವೃತ್ತಿಗೊಳಿಸಿತ್ತು.
ಸರ್ಕಾರದ ಕ್ರಮವನ್ನು ರಿಂಕು ದುಗ್ಗಾ ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ಮುಂದೆ ಪ್ರಶ್ನಿಸಿದ್ದರು. CAT ಅವರನ್ನು ಮರುನೇಮಕ ಮಾಡುವಂತೆ ಆದೇಶಿಸಿತ್ತು. ಬಳಿಕ ದೆಹಲಿ ಹೈಕೋರ್ಟ್ ಕೂಡ ಏಪ್ರಿಲ್ 15ರಂದು CAT ಆದೇಶವನ್ನು ಎತ್ತಿಹಿಡಿದಿತ್ತು.
ಹೈಕೋರ್ಟ್ ಪ್ರಕಾರ, ನಾಯಿ ವಿವಾದಕ್ಕೆ ಸಂಬಂಧಿಸಿದಂತೆ ಅವರಿಗೆ ಈಗಾಗಲೇ ಸಣ್ಣ ಪ್ರಮಾಣದ ಶಿಕ್ಷೆ ನೀಡಲಾಗಿತ್ತು. ಜೊತೆಗೆ ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರಾಗಿದ್ದ ಆರೋಪವೂ ಇತ್ತು. ಆದರೆ ಕಡ್ಡಾಯ ನಿವೃತ್ತಿಗೆ ಶಿಫಾರಸು ಮಾಡಿದ ಪರಿಶೀಲನಾ ಸಮಿತಿ, ಅವರ ಸೇವಾ ದಾಖಲೆಗಳಲ್ಲಿದ್ದ ಹಲವು ಪ್ರಮುಖ ಅಂಶಗಳನ್ನು ಪರಿಗಣಿಸಿರಲಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.
ರಿಂಕು ದುಗ್ಗಾ ಅವರ APARಗಳಲ್ಲಿ ಯಾವುದೇ ಪ್ರತಿಕೂಲ ಟಿಪ್ಪಣಿ ಇರಲಿಲ್ಲ. ಹಿಂದಿನ ವರ್ಷಗಳಲ್ಲಿ ಅವರ ಕಾರ್ಯಕ್ಷಮತೆಯ ಗ್ರೇಡಿಂಗ್ ಉತ್ತಮವಾಗಿತ್ತು. ಹೀಗಾಗಿ ಬಡ್ತಿಗೂ ಅವರು ಪರಿಗಣನೆಯಲ್ಲಿದ್ದರು. ಹೀಗಾಗಿ ಅವರನ್ನು ‘ಡೆಡ್ವುಡ್’ ಎಂದು ಪರಿಗಣಿಸಿ ಕಡ್ಡಾಯ ನಿವೃತ್ತಿಗೊಳಿಸುವ ನಿರ್ಧಾರ ಸಮರ್ಥನೀಯವಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ರಿಂಕು ದುಗ್ಗಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಅಷ್ಟೇ ಅಲ್ಲ, ಮಧ್ಯಂತರ ಆದೇಶದಲ್ಲಿ, ಹೈಕೋರ್ಟ್ ಆದೇಶದ ಆಧಾರದ ಮೇಲೆ ನಡೆಯಬೇಕಿದ್ದ ಅವರ ಮರುನೇಮಕವನ್ನು ತಡೆಹಿಡಿದಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 13ರಂದು ನಡೆಯಲಿದೆ.

