ನವದೆಹಲಿ : ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಅಣ್ಣಾಮಲೈ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಐದು ಪುಟಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಆದರೆ ಅವರ ರಾಜೀನಾಮೆಯನ್ನು ಪಕ್ಷದ ನಾಯಕತ್ವ ಅಂಗೀಕರಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಮುಂದಿನ ಕೆಲವು ತಿಂಗಳಲ್ಲಿ ತಮ್ಮದೇ ಆದ ಜನಾಂದೋಲನ ಅಥವಾ ಹೊಸ ರಾಜಕೀಯ ಪಕ್ಷವನ್ನು ಆರಂಭಿಸುವ ಸಾಧ್ಯತೆ ಇದೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸ್ಥಾಪನೆಯ ಬಳಿಕ ತಮಿಳುನಾಡಿನಲ್ಲಿ ಇದು ಮತ್ತೊಂದು ಪ್ರಮುಖ ರಾಜಕೀಯ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಬಿಜೆಪಿ ನಾಯಕತ್ವದೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ಅಣ್ಣಾಮಲೈ ಅವರ ಸಂಬಂಧ ಅಷ್ಟಾಗಿ ಸೌಹಾರ್ದಯುತವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಯಶಸ್ಸಿನ ಬಳಿಕ ರಾಜ್ಯದಲ್ಲಿ ಮತ್ತೊಂದು ಹೊಸ ರಾಜಕೀಯ ಪಕ್ಷಕ್ಕೆ ಅವಕಾಶವಿದೆ ಎಂಬ ವಿಶ್ವಾಸ ಅಣ್ಣಾಮಲೈ ಅವರಿಗೆ ಮೂಡಿತ್ತು ಎನ್ನಲಾಗಿದೆ.
ರಾಜೀನಾಮಗೆ ಕಾರಣಗಳು :
- ಅಣ್ಣಾಮಲೈ ಅವರಿಗೆ ಬಿಜೆಪಿಯಲ್ಲಿ ತಮ್ಮ ಭವಿಷ್ಯ ಇಲ್ಲ ಎಂದು ಭಾವನೆಯಾಗಿದೆ ಎಂದು ಮೂಲಗಳು ಹೇಳಿವೆ.
- ರಾಜ್ಯಸಭಾ ಸ್ಥಾನವನ್ನು ನೀಡುವ ಪ್ರಸ್ತಾಪ ಮಾಡಲಾಗಿತ್ತು ಎನ್ನಲಾಗಿದ್ದು, ಅದನ್ನು ಅವರು ನಿರಾಕರಿಸಿದ್ದಾರೆ.
- ಮುಂದಿನ 6–8 ತಿಂಗಳಲ್ಲಿ ಹೊಸ ರಾಜಕೀಯ ಪಕ್ಷ ಅಥವಾ ಜನಾಂದೋಲನ ಆರಂಭಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
- ಬಿಜೆಪಿ–AIADMK ಮೈತ್ರಿ ಹಾಗೂ ಚುನಾವಣಾ ತಂತ್ರಗಳ ಬಗ್ಗೆ ಭಿನ್ನಾಭಿಪ್ರಾಯಗಳು ಈ ನಿರ್ಧಾರಕ್ಕೆ ಕಾರಣವಾಗಿರಬಹುದು.

