ಬೆಂಗಳೂರು : ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳ ವಿಚಾರವನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಂಸದರು, ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಎಚ್ಚರಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆ ಎದುರು ಸಮಾಜದ ಮುಖಂಡರ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಇಂದು ಎಸ್ಟಿ, ಎಸ್ಸಿ, ಒಬಿಸಿ ಸಮುದಾಯದ ಸಂಘಟಕರ ತುರ್ತು ಸಭೆ ನಡೆಸಿದ್ದೇವೆ. ನಾವು ಈಗಾಗಲೇ 22 ಜಿಲ್ಲೆಗಳ ಪ್ರವಾಸ ಮಾಡಿ ಎಲ್ಲ ಕಡೆ ಸುದ್ದಿಗೋಷ್ಠಿ ನಡೆಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮುಂದೆ ಪ್ರವಾಸ ಮಾಡುತ್ತೇವೆ. ರಾಜ್ಯದಲ್ಲಿ 1.20 ಕೋಟಿ ಎಸ್ಸಿ, 50 ಲಕ್ಷ ಎಸ್ಟಿ, 32% ಒಬಿಸಿ ಜನರಿದ್ದಾರೆ. 243 ಕಲಂ ಪ್ರಕಾರ ಎಲ್ಲ ಕಡೆ ಮೀಸಲಾತಿ ಇದೆ. ಆದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇಲ್ಲದಾಗಿದೆ ಎಂದರು.
ಹೈಕೋರ್ಟ್ ನಲ್ಲಿ 2022ರಲ್ಲಿ (16852/2015) ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಹಾಕಲಾಗಿತ್ತು. ಹೈಕೋರ್ಟ್ ನಿರ್ದೇಶನದ ಮೇಲೆ ನ್ಯಾ. ನಾಗಮೋಹನ್ ದಾಸ್ ಆಯೋಗ ರಚನೆ ಆಯ್ತು. ನಂತರ ನ್ಯಾ. ಸುಭಾಷ್ ಅಡಿ ನೇತೃತ್ವದಲ್ಲಿ ಮತ್ತೊಂದು ಆಯೋಗ ಆಯ್ತು. ಅವುಗಳ ವರದಿ ಆದಾರದ ಮೇಲೆ ಹಿಂದಿನ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡ್ತು. ಆದರೆ ಇಲ್ಲಿವರೆಗೆ ಆ ಮೀಸಲಾತಿ ಕಾನೂನನ್ನು ಶೆಡ್ಯೂಲ್ 9 ಗೆ ಸೇರಿಸಿಲ್ಲ. ಇದು ವಿಪರ್ಯಾಸ. ಆದರೆ ಈಗ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಬಂದಿದೆ! ಅದಾದ ಬಳಿಕ ಯಾವ ಪಕ್ಷದ ನಾಯಕರೂ ಮಾತಾಡ್ತಿಲ್ಲ. ನಿಮಗೆ ಬದ್ದತೆ ಇದ್ರೆ ದಯಮಾಡಿ ಬಾಯಿ ಬಿಡಿ, ಇದನ್ನು ಶೆಡ್ಯೂಲ್ 9ಗೆ ಸೇರಿಸಲು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.
ನಾಳೆ ಸಿಎಂಗೆ ಭೇಟಿ ಮಾಡಿ ಮನವಿ ಮಾಡುತ್ತೇವೆ. ತಕ್ಷಣ ಸರ್ವ ಪಕ್ಷ ಸಭೆ ಕರೆಯಬೇಕು. ಸರ್ವ ಪಕ್ಷದ ನಾಯಕರನ್ನು ಕರೆದುಕೊಂಡು ಹೋಗಿ ಪ್ರಧಾನಿಯನ್ನು ಭೇಟಿ ಮಾಡಬೇಕು. ನಂತರ ಮೀಸಲಾತಿ ಬಗ್ಗೆ ಹೈಕೋರ್ಟ್ ನಲ್ಲಿರುವ ಪ್ರಕರಣವನ್ನು ಸರ್ಕಾರ ತೆರವು ಮಾಡಿಸಬೇಕು. ಇಲ್ಲದಿದ್ದರೆ ಉತ್ತಮ ನ್ಯಾಯವಾದಿಗಳನ್ನು ಇಟ್ಟು ಕೇಸ್ ಪರ ವಾದ ಮಾಡಿಸಬೇಕು. ರಾಜ್ಯದಲ್ಲಿ ಈಗಾಗಲೇ ಸುಳ್ಳು ಜಾತಿ ಪ್ರಮಾಣ ಪತ್ರ ಹೆಚ್ಚಾಗ್ತಿದೆ. ಈ ಸುಳ್ಳು ಜಾತಿ ಪ್ರಮಾಣಪತ್ರ ನೀಡಬಾರದು ಎಂದು ಆದೇಶ ಇದ್ರೂ ಸುಳ್ಳು ಜಾತಿ ಪ್ರಮಾಣ ಪತ್ರ ವಿತರಣೆ ಯಾಗ್ತಿದೆ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸುಳ್ಳು ಪ್ರಮಾಣ ಪತ್ರ ಪಡೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.
ಮೀಸಲಾತಿ ವಿಚಾರದಲ್ಲಿ ನಮ್ಮ ನಾಯಕರು ಮೌನಿ ಬಾಬಾಗಳಾಗಬೇಡಿ, ಆತ್ಮ ವಂಚನೆ ಮಾಡಿಕೊಳ್ಳಬೇಡಿ. ಇದು ಕೇಂದ್ರ ಸರ್ಕಾರದ ಜವಾಬ್ದಾರಿ. ಆದರೆ ಜವಾಬ್ದಾರಿ ತೆಗೆದುಕೊಳ್ತಿಲ್ಲ. ಈ ಬಗ್ಗೆ ನೀವೆಲ್ಲ ತುಟಿ ಬಿಚ್ಚಬೇಕು. RSSನ ದತ್ತಾತ್ರೇಯ ಹೊಸಬಾಳೆ ಅವರು ನಾವೆಲ್ಲರೂ ಹಿಂದೂ ಎನ್ನುತ್ತೀರಿ. ಎಲ್ಲಿದೆ ನಾವೆಲ್ಲ ಒಂದು? ಎಂದು ಪ್ರಶ್ನಿಸಿದರು.
ಸಿಎಂಗೆ ಈ ಬಗ್ಗೆ ಮನವಿ ಕೊಡ್ತೀವಿ. ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಎಚ್ಚೆತ್ತುಕೊಂಡು ಮೀಸಲಾತಿಯನ್ನು ಶೆಡ್ಯೂಲ್ 9ಗೆ ಸೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡ್ತೀವಿ. ಎಸ್ಸಿ, ಎಸ್ಟಿ, ಒಬಿಸಿ ಒಟ್ಟುಗೂಡಿ ಅಹಿಂಸಾತ್ಮಕ ಹೋರಾಟ ಮಾಡ್ತೀವಿ. ಶೇ. 56℅ ಮೀಸಲಾತಿ ಅಡಿಯಲ್ಲೇ ಸರ್ಕಾರಿ ನೌಕರರ ನೇಮಕಾತಿ ಆಗಬೇಕು. ಈ ಚಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ರಾಜ್ಯದ ಸಂಸದರೆಲ್ಲ ಏನ್ ಮಾಡ್ತಿದ್ದಾರೆ? ಆರ್ಥಿಕ ಮೀಸಲಾತಿ ಜಾರಿಗೆ ತರುವಾಗ ಮೀಸಲಾತಿ ವಿಚಾರ ಗೊತ್ತಾಗಲಿಲ್ವಾ? ಆದರೆ ಪರಿಶಿಷ್ಟ ಜಾತಿ, ಪತಿಶಿಷ್ಟ ಪಂಗಡದ ಮೀಸಲಾತಿ ವಿಚಾರ ಬಂದಾಗ ಮಾತ್ರ ಮೀಸಲಾತಿಯ ಗಡಿ ಅಡ್ಡ ಬರುತ್ತದೆ ಅಲ್ವಾ ಎಂದು ಪ್ರಶ್ನಿಸಿದರು.

