ಬೆಂಗಳೂರು : ಈ ಹೆಣ್ಣು ಮಕ್ಕಳ ಕಿವಿ ಎಲ್ಲೋ, ಕಣ್ಣುಗಳು ಇನ್ನೆಲ್ಲೋ. ಇವರ ಮುಖವನ್ನು ಹೆತ್ತ ಮಕ್ಕಳೂ ಕೂಡ ನೋಡಲು ಹಿಂಜರಿಯುತ್ತಾರೆ. ಅವರಿಗೆ ಬಾಡಿಗೆ ಮನೆ ಸಿಗುವುದಿಲ್ಲ ಇಂತ ಸ್ಥಿತಿಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗದ ಮಹಿಳೆಯರು ಅನುಭವಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ವಿಧಾನ ಪರಿಷತ್ ಮುಂದೆ ಅವರ ಕಷ್ಟಗಳನ್ನು ಗಮನ ಸೆಳೆಯುವ ಸೂಚನೆಯಲ್ಲಿ ತೆರೆದಿಟ್ಟರು.
ವಿಧಾನ ಪರಿಷತ್ ಕಲಾಪದಲ್ಲಿ ಅವರು ರಾಜ್ಯದಲ್ಲಿ ಆ್ಯಸಿಡ್ ದಾಳಿಗೆ ಒಳಗಾಗ 169 ಮಂದಿ ಮಹಿಳೆಯರ ಕಷ್ಟಗಳನ್ನು ವಿವರಿಸಿ ಸರ್ಕಾರ ಇವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಈ ಹೆಣ್ಣು ಮಕ್ಕಳು ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಶಿಕ್ಷೆ ಅನುಭವಿಸುತ್ತಿದ್ದಾರೆ. ದಾಳಿ ನಡೆಸಿದವರು ಇವರ ಕಣ್ಣ ಮುಂದೆಯೇ ಶಿಕ್ಷೆ ಇಲ್ಲದೆ ಓಡಾಡುತ್ತಿದ್ದಾರೆ. ದಾಳಿಗೆ ಒಳಗಾದವರು ಸ್ವಂತ ಮನೆಗಳಲ್ಲೇ ತೊಂದರೆ ಅನುಭವಿಸುತ್ತಿದ್ದಾರೆ. ಇವರನ್ನು ಮಕ್ಕಳು ಅಮ್ಮ ಎಂದು ಒಪ್ಪಿಕೊಳ್ಳುತ್ತಿಲ್ಲ. ಬೇರೆ ಕಡೆ ಹೋಗುವಂತೆ ಹೇಳುತ್ತಿದ್ದಾರೆ. ಮನೆಯಿಂದ ಹೊರ ಬಂದು ಸಮಾಜಕ್ಕೆ ತಮ್ಮ ಮುಖ ತೋರಿಸಲು ಆಗದೆ ನರಳುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಸುಂದರವಾಗಿದ್ದ ಹೆಣ್ಣು ಮಕ್ಕಳು ಈಗ ಕುರೂಪಿಯಾಗಿದ್ದಾರೆ. ನಿತ್ಯವೂ ಅವರು ಹೋರಾಟ ನಡೆಸಿ ಕಾಲ ದೂಡುತ್ತಿದ್ದಾರೆ. ಸಮಾಜ ಇವರನ್ನು ಕೆಟ್ಟದಾಗಿ ನೋಡುತ್ತಿದೆ. ಸರ್ಕಾರ ಇವರ ನೆರವಿಗೆ ಧಾವಿಸಬೇಕು ಎಂದರು.
ರಾಜ್ಯದಲ್ಲಿ ಈ ರೀತಿಯ ದಾಳಿಗೆ ಒಳಗಾದ 165 ಮಂದಿ ಇದ್ದಾರೆ. ಇವರಿಗೆ ಪ್ರತಿ ತಿಂಗಳು ಸರ್ಕಾರ 10 ಸಾವಿರ ರೂ. ಪೆನ್ಷನ್ ನೀಡುತ್ತಿದೆ. ಇದನ್ನು 15 ಸಾವಿರ ರೂ.ಗೆ ಏರಿಕೆ ಮಾಡಬೇಕು. ಸರ್ಕಾರ ಇವರಿಗೆ ಉಚಿತವಾಗಿ ಮನೆ ನೀಡಲು ಇದುವರೆಗೂ ಮೂರು ಬಾರಿ ಆದೇಶ ಹೊರಡಿಸಿದೆ. ಇನ್ನೂ ಅವರಿಗೆ ಮನೆ ಸಿಕ್ಕಿಲ್ಲ. ಹೀಗಾಗಿ ಸರ್ಕಾರ ಈ ಬಾರಿ ಆದೇಶ ಹೊರಡಿಸದೆ ಮನೆ ಹಂಚಿಕೆ ಪತ್ರವನ್ನು ಕೋಡಬೇಕು ಎಂದು ಆಗ್ರಹಿಸಿದರು.
ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರು ಬದುಕು ಕಟ್ಟಿಕೊಳ್ಳಲು ವ್ಯಾಪಾರ ಹಾಗೂ ವ್ಯವಹಾರ ನಡೆಸಲು ಸರ್ಕಾರ 5 ಲಕ್ಷ ರೂ. ನಿಡುವ ಕಾನೂನು ಇದೆ. ಆದರೆ ಎಲ್ಲರಿಗೂ ಪರಿಹಾರ ದೊರೆತಿಲ್ಲ. ಕೆಲವರಿಗೆ ಮಾತ್ರ ಪರಿಹಾರ ದೊರೆತಿದೆ. ಎಲ್ಲರಿಗೂ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ದಾಳಿಕೋರರಿಗೆ ಶಿಕ್ಷೆ ಆಗುತ್ತಿಲ್ಲ: ರಾಜ್ಯದಲ್ಲಿ ಆ್ಯಸಿಡ್ ದಾಳಿ ಕಡಿಮೆಯಾಗುತ್ತಿಲ್ಲ. ಏಕೆಂದರೆ ಅವರು ಕಾನೂನಿನ ಹಿಡಿತಕ್ಕೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿದ್ದಾರೆ. ದಾಳಿ ನಡೆಸಿದವರಿಗೆ 10 ವರ್ಷ ಕಳೆದರೂ ಶಿಕ್ಷೆಯಾಗಿಲ್ಲ. ಪೊಲೀಸರು ಆ್ಯಸಿಡ್ ದಾಳಿ ಕೋರರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಕೇವಲ ಮೂರು ವರ್ಷದಲ್ಲಿ ಶಿಕ್ಷೆಗೆ ಗುರಿಯಾದರೆ ಮುಂದೆ ಈ ರೀತಿಯ ದಾಳಿ ನಡೆಯುವುದಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದರು.
ಸದಸ್ಯರಾದ ಭಾರತೀಶೆಟ್ಟಿ, ಉಮಾಶ್ರೀ, ಹೇಮಲತಾ ನಾಯಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಬೆಂಬಲಿಸಿದರು.

