ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ  ಹಾಕಿದರೆ ದಂಡ, ಜೈಲು ಖಚಿತ; ಆರೋಗ್ಯ ಇಲಾಖೆ ಸುತ್ತೋಲೆ

Most read

ಬೆಂಗಳೂರು: ಪಾರಿವಾಳಗಳ ಮಲ-ಮೂತ್ರದಿಂದ ಸೋಂಕು ಹರಡುವುದು, ಉಸಿರಾಟ ತೊಂದರೆ ಸೇರಿದಂತೆ ಶ್ವಾಸಕೋಶ ಸಂಬಂಧಿತ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ನಿಟ್ಟಿನಲ್ಲಿ ಸರ್ಕಾರ ಹೊಸ ನಿಯಂತ್ರಣ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ದಂಡ ಅಥವಾ ಜೈಲು ಶಿಕ್ಷೆಯನ್ನೂ ವಿಧಿಸಲಾಗುವುದು. ಹಾಗಾಗಿ ಈ ಕುರಿತು ನಿರ್ಲಕ್ಷ ಬೇಡ, ನಿಯಮ ಪಾಲಿಸಿ- ಶಿಕ್ಷೆಯಿಂದ ಪಾರಾಗಿ ಎಂದೂ ಅವರು ತಿಳಿಸಿದ್ದಾರೆ.

ಹೊಸ ನಿಯಮದ ಪ್ರಕಾರ ಪಾರಿವಾಳಗಳಿಗೆ ಆಹಾರ ನೀಡಿದವರ ವಿರುದ್ಧ ಸಾಂಕ್ರಾಮಿಕ ರೋಗ ಹರಡಿದ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗುತ್ತದೆ. ಜತೆಗೆ ದಂಡ ಹಾಗೂ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಗೊತ್ತುಪಡಿಸಿದ ಪ್ರದೇಶಗಳಲ್ಲಿ ಷರತ್ತುಗಳೊಂದಿಗೆ ಪಾರಿವಾಳಗಳಿಗೆ ಆಹಾರವನ್ನು ನೀಡಬಹುದಾಗಿದೆ. ನಿಗದಿಪಡಿಸಿದ ಪ್ರದೇಶಗಳ ನಿರ್ವಹಣೆ ಮತ್ತು ನಿರ್ದೇಶನಗಳ ಅನುಸರಣೆಯ ಜವಾಬ್ದಾರಿಯನ್ನು ಎನ್‌ಜಿಓ ಗಳು ವಹಿಸಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳಿಂದ ಶ್ವಾಸಕೋಶದ ಕಾಯಿಲೆಗಳಾದ ಅತಿಸಂವೇದನಾ ನ್ಯುಮೋನಿಟಿಸ್ ಮತ್ತು ಇತರ ಶ್ವಾಸಕೋಶದ ಕಾಯಿಲೆಗಳು ಹೆಚ್ಚುತ್ತಿವೆ ಎಂದು ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ.  ಪಾರಿವಾಳದ ಹಿಕ್ಕೆಗಳು ಮತ್ತು ಗರಿಗಳ ಸಂಪರ್ಕದಿಂದ ಶ್ವಾಸಕೋಶಕ್ಕೆ ಹಾನಿ ಸಂಭವಿಸುವ ಸಾಧ್ಯತೆಗಳಿರುತ್ತವೆ. ವಿಶೇಷವಾಗಿ ಮಕ್ಕಳು, ವೃದ್ಧರು ಮತ್ತು ಮೊದಲೇ ಉಸಿರಾಟದ ಸಮಸ್ಯೆ ಇರುವ ದುರ್ಬಲ ವ್ಯಕ್ತಿಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ನಗರ ಪಾಲಿಕೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

More articles

Latest article