ಬೆಂಗಳೂರು: ನಾಳೆ, ಭಾನುವಾರ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯಾಗುತ್ತಿದೆ. ಆದರ ನಿನ್ನೆ ಬಿಜೆಪಿ ನಾಯಕರಾದ ವಿಜಯೇಂದ್ರ, ತೇಜಸ್ವಿ ಸೂರ್ಯ ಸೇರಿದಂತೆ ಅನೇಕ ಸಂಸದರು ಇಡೀ ಮೆಟ್ರೋ ಯೋಜನೆಯನ್ನು ಕೇಂದ್ರ ಸರ್ಕಾರವೇ ಮಾಡಿದೆ ಎಂದು ಪ್ರಚಾರ ಪಡೆಯುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇವರಿಗೆ ಮೆಟ್ರೋ ಆರಂಭವಾಗಿದ್ದು ಯಾವಾಗ ಎಂಬ ಇತಿಹಾಸವೇ ಗೊತ್ತಿಲ್ಲ. 2006ರಲ್ಲಿ ಧರಂಸಿಂಗ್ ಅವರು ಸಿಎಂ ಆಗಿದ್ದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಶಂಕುಸ್ಥಾಪನೆ ಮಾಡಿದ್ದರು. ಮೆಟ್ರೋ ಸಂಸ್ಥೆ ಜನರ ಸಂಸ್ಥೆ ಯಾವುದೇ ಪಕ್ಷದ ಸ್ವತ್ತಲ್ಲ. ಬಿಜೆಪಿಯವರಿಗೆ ಕೆಲಸಕ್ಕಿಂತ ಪ್ರಚಾರದ ಹುಚ್ಚು ಜಾಸ್ತಿ. ಏನೂ ಮಾಡದಿದ್ದರೂ ಪ್ರಚಾರ ಪಡೆಯುತ್ತಾರೆ. ಬೇರೆಯವರ ಕೆಲಸವನ್ನು ನಾವೇ ಮಾಡಿದ್ದಾಗಿ ಹೇಳುತ್ತಾರೆ ಎಂದು ಟೀಕಿಸಿದರು.
ಈ ಯೋಜನೆಯಲ್ಲಿ ರಾಜ್ಯ ಸರ್ಕಾರವೇ ದೊಡ್ಡ ಪಾಲುದಾರ. ಮೆಟ್ರೋ ಯೋಜನೆಯ ಫೇಸ್ 1ನಲ್ಲಿ ಕರ್ನಾಟಕ ಸರ್ಕಾರ – 30% (ಜಮೀನೂ ಸೇರಿ), ಕೇಂದ್ರ- 25%, ಉಳಿದ 45% ಸಾಲದ ರೂಪದಲ್ಲಿ ಮೆಟ್ರೋ ಸಂಸ್ಥೆ ಪಡೆಯಲಾಗಿತ್ತು. ಫೇಸ್ 2ನಲ್ಲಿ ಕರ್ನಾಟಕ 30% + ಜಮೀನು ಮತ್ತು ಮಿತಿಮೀರಿದ ವೆಚ್ಚದ ಬಹುತೇಕ ಭಾಗ ರಾಜ್ಯ ಸರ್ಕಾರದ್ದಾಗಿದೆ. ಇಲ್ಲಿ ಕೇಂದ್ರದ ಪಾಲು ಕೇವಲ 20% ಮಾತ್ರ. ಉಳಿದ 50% ಮೊತ್ತವನ್ನು ಮೆಟ್ರೋ ಸಂಸ್ಥೆ ಸಾಲ ಪಡೆದಿದೆ. ಫೇಸ್ 3ರಲ್ಲಿ ಕರ್ನಾಟಕ 20% ಅನುದಾನ ಹಾಗೂ ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ ಸರ್ಕಾರ 20% ಹಾಗೂ ಉಳಿದ 60% ಅನುದಾನವನ್ನು ಸಂಸ್ಥೆ ಸಾಲವಾಗಿ ಪಡೆದಿದೆ. ಮೆಟ್ರೋ ಸಂಸ್ಥೆ ಪಡೆದಿರುವ ಸಾಲಕ್ಕೆ ಗ್ಯಾರಂಟಿ ಹಾಕಿರುವುದು ರಾಜ್ಯ ಸರ್ಕಾರ. ಮೆಟ್ರೋ ಸಂಸ್ಥೆ ಇದನ್ನು ಪಾವತಿಸದಿದ್ದರೆ ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಎಂದು ವಿವರಿಸಿದರು.
ಇತ್ತೀಚೆಗೆ ತೇಜಸ್ವಿ ಸೂರ್ಯ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇವಲ 6 ಕಿ.ಮೀ ಮಾತ್ರ ಮೆಟ್ರೋ ಆಗಿತ್ತು ಎಂದು ಹೇಳಿದ್ದರು ಆದರೆ ಮೊದಲ ಹಂತದ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ 42 ಕಿ.ಮೀ ಯೋಜನೆ ಮಾಡಲಾಯಿತು. ಆರಂಭದಲ್ಲಿ 6,395 ಕೋಟಿ ಅಂದಾಜು ಮಾಡಲಾಗಿತ್ತಾದರೂ ನಂತರ ಅದು 14,405 ಕೋಟಿಗೆ ಏರಿಕೆಯಾಯಿತು. ಮೆಟ್ರೋ ಒಟ್ಟಾರೆ ಕಾಮಗಾರಿಯಲ್ಲಿ ರಾಜ್ಯ ಸರ್ಕಾರ 24064.30 ಕೋಟಿ ನೀಡಿದರೆ, ಕೇಂದ್ರ ಸರ್ಕಾರ ನೀಡಿರುವುದು 17803.85 ಕೋಟಿ, 43,5498.53 ಕೋಟಿ ಸಾಲ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ವಿಳಂಬ ಎಂದು ಆರೋಪ ಮಾಡುವ ಬಿಜೆಪಿ ನಾಯಕರು ಎಂದಾದರೂ ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂದು ವಿಚಾರಿಸಿದ್ದಾರಾ? ಸಭೆ ಮಾಡಿದ್ದಾರಾ?, ಚರ್ಚೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಇನ್ನು 15ನೇ ಹಣಕಾಸು ಆಯೋಗವು ಫೆರಿಪೆರಲ್ ರಿಂಗ್ ರೋಡ್ ಅಭಿವೃದ್ಧಿಗೆ, ಕೆರೆಗಳ ಅಭಿವೃದ್ಧಿ ಹಾಗೂ ಇತರೆ ವಿಶೇಷ ಅನುದಾನಕ್ಕೆ ಮೀಸಲಿರಿಸಿದ್ದ 11,495 ಕೋಟಿ ಹಣವನ್ನು ರಾಜ್ಯಕ್ಕೆ ನೀಡದೆ ಮೋಸ ಮಾಡಲಾಗಿದೆ. ಇದರ ಬಗ್ಗೆ ರಾಜ್ಯದ ಸಂಸದರು ಸಂಸತ್ತಿನಲ್ಲಿ ಮಾತನಾಡುವುದಿಲ್ಲ. ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲು ಕೊಡಿ ಎಂದು ಹೇಳಲು ಇವರಿಗೆ ಬಾಯಿ ಬರುವುದಿಲ್ಲ. ಇಲ್ಲಿ ಬಂದು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುತ್ತಾರೆ ಎಂದರು.
ಮೆಟ್ರೋ ವಿಳಂಬದಿಂದಾಗಿ 1 ಕಿ.ಮೀ 400 ಕೋಟಿ ನಷ್ಟವಾಗಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದ ಜವಾಬ್ದಾರಿ ಇದೆಯೋ ಇಲ್ಲವೋ? ಬೋಗಿಗಳು ಬರುವುದು ತಡವಾಗಿರುವುದು ಯಾರಿಂದ? ಪರಿಸರ ಇಲಾಖೆ ಅನುಮತಿ ನೀಡುವವರು ಯಾರು? ಎಲ್ಲ ಅನುಮತಿ ಕೇಂದ್ರ ಸರ್ಕಾರವಲ್ಲವೇ? ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ನಂತರ ಈ ಅನುಮತಿಗಳನ್ನು ಪಡೆಯಬೇಕು. ಇನ್ನು ಮಾರ್ಗ ಸುರಕ್ಷತೆ ಪ್ರಮಾಣ ಪತ್ರ ನೀಡುವವರು ಕೇಂದ್ರ ಸರ್ಕಾರ. ಹೀಗಾಗಿ ಈ ವಿಳಂಬಕ್ಕೆ ಕಾರಣ ಕೇಂದ್ರ ಸರ್ಕಾರ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಬೇಕಂತಲೇ ತಡ ಮಾಡಿ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಇವರು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಅನುಮತಿ ಕೊಡಿಸಬೇಕಿತ್ತು. ನಮ್ಮ ಮುಖ್ಯಮಂತ್ರಿಗಳು ಸಂಬಂಧಪಟ್ಟ ಸಚಿವರಿಗೆ ಒತ್ತಡ ಹಾಕಿದ್ದಾರೆ” ಎಂದು ತಿಳಿಸಿದರು.
ತಾಂತ್ರಿಕ ಸಮಸ್ಯೆಯನ್ನು ನಾನೇ ಖುದ್ದಾಗಿ ಬಗೆಹರಿಸಿದ್ದೇನೆ ಎಂದು ತೇಜಸ್ವಿ ಸೂರ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇವರೇ ಖುದ್ದಾಗಿ ಬಗೆಹರಿಸಿದ್ದರೆ ಈ ಯೋಜನೆ ತಡವಾಗಿದ್ದು ಯಾಕೆ? ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಕೇಂದ್ರದ ತಪ್ಪು ಇಟ್ಟುಕೊಂಡು ನಮ್ಮ ಮೇಲೆ ಹೇಳುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜೊತೆಯಾಗಿ ಸಾಗಬೇಕು. ಅದನ್ನು ಬಿಟ್ಟು ಎಲ್ಲವನ್ನೂ ನಾವೇ ಮಾಡಿದ್ದೇವೆ, ರಾಜ್ಯ ಸರ್ಕಾರ ಏನೂ ಮಾಡಿಲ್ಲ ಎಂದು ಹೇಳುವುದು ಸರಿಯೇ? 17 ಸಾವಿರ ಕೋಟಿ ಕೊಟ್ಟು ಎಲ್ಲವೂ ನಮ್ಮದೇ ಎಂದು ಹೇಳುತ್ತಾರೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಕಾಂಗ್ರೆಸ್ ಮುಖಂಡ ಕೃಷ್ಣಂ ರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್, ಮನೋಹರ್, ರಾಮಚಂದ್ರಪ್ಪ ಅವರು ಉಪಸ್ಥಿತರಿದ್ದರು.