ಹೈದರಾಬಾದ್: ಆನ್ ಲೈನ್ ಬೆಟ್ಟಿಂಗ್ ಆ್ಯಪ್ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಇಂದು ಜಾರಿ ನಿರ್ದೇಶನಾಲಯ (ಇ.ಡಿ) ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ 30ರಂದು ನಟ ಪ್ರಕಾಶ್ ರಾಜ್ ಅವರು ಇ.ಡಿ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದರು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನಟ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್ ಸೇರಿ 29 ಖ್ಯಾತ ನಟ ನಟಿಯರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ಒಂದೊಂದು ದಿನ ಒಬಬೊಬಬ್ರಿಗೂ ಪ್ರತ್ಯೇಕ ವಿಚಾರಣೆಗೆ ಹಾಜರಾಗುವಂತೆ ಜುಲೈ 10ರಂದು ಸಮನ್ಸ್ ಜಾರಿ ಮಾಡಿತ್ತು.
ನಟಿ ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್, ಪ್ರಣೀತಾ ಸುಭಾಶ್, ಅನನ್ಯಾ ನಾಗಲ್ಲಾ, ಟಿ.ವಿ ನಿರೂಪಕಿ ಶ್ರೀಮುಖಿ ಹಾಗೂ ತೆಲಂಗಾಣದ ಸಾಮಾಜಿಕ ಜಾಲತಾಣಗಳ ಇನ್ ಫ್ಲುಯೆನ್ಸರ್ ಗಳು, ಯೂಟ್ಯೂಬರ್ ಗಳ ಹೆಸರುಗಳೂ ಪ್ರಕರಣದಲ್ಲಿ ಇರುವುದಾಗಿ ತಿಳಿದು ಬಂದಿದೆ. ಈ ಆ್ಯಪ್ಗಳು ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟದಿಂದ ಕಾನೂನು ಬಾಹಿರವಾಗಿ ಕೋಟ್ಯಂತರ ರೂಪಾಯಿ ಗಳಿಸಿವೆ ಎಂಬ ಆರೋಪವಿದೆ.