ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಗೌರವ ಕಾರ್ಯದರ್ಶಿ ಹುದ್ದೆಗೆ ನೇ.ಭ. ರಾಮಲಿಂಗ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ಎಂಅವರ ಕಾರ್ಯವೈಖರಿಗೆ ಬೇಸತ್ತು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೋಷಿ ಅವರಿಗೆ ಅಹಂಕಾರ ಮಾತ್ರವಲ್ಲ, ದುರಂಹಕಾರವೂ ಇದೆ. ಜತೆಗೆ ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
2017 ರಿಂದ ನನ್ನ ವೈಯಕ್ತಿಕ ಬದುಕು ಮತ್ತು ಉದ್ಯಮವನ್ನು ಬದಿಗಿಟ್ಟು ಮಹೇಶ್ ಜೋಷಿ ಅವರ ಗೆಲುವಿಗಾಗಿ ಶ್ರಮಿಸಿದ್ದೇನೆ. ಅವರ ಜತೆ ಕೆಲಸ ಮಾಡಿದ್ದೇನೆ. 2021 ರಲ್ಲಿ ನಡೆದ ಕಸಾಪ ಚುನಾವಣೆಯಲ್ಲಿ ಜೋಶಿ ಅವರಿಗೆ ಸಾವಿರಾರು ಮತಗಳನ್ನು ಕೊಡಿಸಿದ್ದೇನೆ ಎಂದೂ ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ರಾಮಲಿಂಗ ಶೆಟ್ಟಿ ಅವರು 15 ಕೃತಿಗಳನ್ನು ರಚಿಸಿದ್ದಾರೆ. ಶ್ರೀ ಸಿದ್ದಗಂಗ ಮಠದ ಶ್ರೀ ಶಿವಕುಮಾರ ಸ್ವಾಮಿಗಳನ್ನು ಕುರಿತ “ಶತಮಾನದ ಸಂತ” ಮತ್ತು ಮಾಜಿ ಪ್ರಧಾನಿ ಎಚ್ ಡಿ. ದೇವೇಗೌಡರನ್ನು ಕುರಿತ “ಮಣ್ಣಿನ ಮಗ” ಪ್ರಮುಖವಾದವು. ಇವರ ಅನೇಕ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್. ಎಲ್. ಮಲ್ಲೇಶ್ ಗೌಡ ಅವರನ್ನು ನೇಮಿಸಲಾಗಿದೆ.
ಕೆಲವು ದಿನಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಪದ್ಮಿನಿ ನಾಗರಾಜ್ ಅವರು ರಾಜೀನಾಮೆ ನೀಡಿದ್ದರು. ತಮ್ಮ ತಾಯಿಯ ಅನಾರೋಗ್ಯದ ಕಾರಣ ರಾಜೀನಾಮೆ ನೀಡುತ್ತಿರುವದಾಗಿ ಸ್ಪಷ್ಟನೆ ನೀಡಿದ್ದರಾದರೂ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅವರ ನಡವಳಿಕೆಯನ್ನು ವಿರೋಧಿಸಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಹಲವು ತಿಂಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಜೋಷಿ ಅವರ ಕಾರ್ಯವೈಖರಿ ಕುರಿತು ಸಾಕಷ್ಟು ಅಸಮಾಧಾನ ಕೇಳಿ ಬರುತ್ತಿದೆ. ಅವರ ರಾಜೀನಾಮೆಗೂ ಒತ್ತಾಯ ಹೆಚ್ಚುತ್ತಿದೆ. ಅನೇಕ ಸಾಹಿತಿಗಳು ಅವರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪದ್ಮಿನಿ ಅವರು ಮೊದಲಿಗೆ ರಾಜೀನಾಮೆ ನೀಡಿದ್ದರೆ ಎರಡನೆಯದಾಗಿ ರಾಮಲಿಂಗ ಶೆಟ್ಟಿ ಅವರು ರಾಜೀನಾಮೆ ನೀಡಿದ್ದಾರೆ.