ಫ್ಲಾರಿಡಾ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐ ಎಸ್ ಎಸ್) ಪ್ರಯಾಣ ಬೆಳೆಸಿರುವ ಎರಡನೇ ಭಾರತೀಯರಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಈ ಪ್ರಯಾಣವನ್ನು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.
‘ಆ್ಯಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಮಧ್ಯಾಹ್ನ ಭಾರತೀಯ ಕಾಲಮಾನದ ಪ್ರಕಾರ 12.01ಕ್ಕೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಆರಂಭಿಸಿದ್ದಾರೆ. ಆ ಮೂಲಕ 39 ವರ್ಷದ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಕೈಗೊಂಡಿರುವ ಭಾರತದ ಎರಡನೇ ಗಗನಯಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
1984ರಲ್ಲಿ ಭಾರತದ ರಾಕೇಶ್ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. 41 ವರ್ಷಗಳ ಬಳಿಕ, ಭಾರತದ ಮತ್ತೊಬ್ಬ ಗಗನಯಾನಿ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದ್ದಾರೆ.
ಸ್ಪೇಸ್ಎಕ್ಸ್ನ ‘ಫಾಲ್ಕನ್–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿತು. ಈ ಸಂದರ್ಭದಲ್ಲಿ ವಿಶೇಷ ಸಂದೇಶ ರವಾಣಿಸಿರುವ ಶುಭಾಂಶು, ‘ನಮಸ್ಕಾರ ದೇಶವಾಸಿಗಳೇ, 41 ವರ್ಷಗಳ ನಂತರ ನಾವು ಬಾಹ್ಯಾಕಾಶ ತಲುಪುತ್ತಿದ್ದೇವೆ’ ಎಂದು ಹೇಳಿದ್ದಾರೆ.
ನನ್ನ ಹೆಗಲ ಮೇಲೆ ತ್ರಿವರ್ಣ ಧ್ವಜವಿದೆ. ತ್ರಿವರ್ಣ ಧ್ವಜವು ನಾವು ನಿಮ್ಮೆಲ್ಲರೊಂದಿಗೆ ಇದ್ದೇನೆ ಎಂಬ ಸಂದೇಶವನ್ನು ಸಾರುತ್ತದೆ. ಇದು ಐ ಎಸ್ ಎಸ್ಗೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ. ಭಾರತದ ಮಾನವಸಹಿತ ಅಂತರಿಕ್ಷಯಾನದ ಪ್ರಾರಂಭವೂ ಆಗಿದೆ ಎಂದು ಶುಕ್ಲಾ ಹೇಳಿದ್ದಾರೆ. ನಾವು ಭೂಮಿಯ ಸುತ್ತ ಸೆಕೆಂಡಿಗೆ 7.5 ಕಿ.ಮೀ. ವೇಗದಲ್ಲಿ ಸುತ್ತುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.